Advertisement

ವಲಸೆಯ ಹಾದಿಯಲ್ಲಿ..

06:00 AM Dec 03, 2017 | |

ಹಾವೇರಿ, ಹುಬ್ಬಳ್ಳಿ ಭಾಗದಿಂದ  ಕಾಫಿ ಸೀಮೆಯತ್ತ ಹೊರಟಿದ್ದರವರು. ಆಗ ಕಾಫಿ ಕುಯ್ಯುವ ಕಾಲ. ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಇರುವ ಲಕ್ಷಾಂತರ ಎಕರೆ ಕಾಫಿ ತೋಟಗಳಲ್ಲಿ ಹಣ್ಣಾದ ಸಮಯಕ್ಕೆ ಕಾಫಿ ಕುಯ್ಯಲು ಜನ ಬೇಕಾಗುತ್ತದೆ. ಈ ವೇಳೆಯಲ್ಲಿ ಬಯಲು ನಾಡಿನಿಂದ ಅಸಂಖ್ಯಾತ ಜನ ಕಾಫಿ ಸೀಮೆಗೆ ವಲಸೆ ಹೊರಟು ಬಿಡುತ್ತಾರೆ. ಗುಂಪು ಗುಂಪಾಗಿ ಹೋಗುವ ಈ ವಲಸೆ ಕುಟುಂಬಗಳು ಕಾಫಿ ನಾಡಿನಲ್ಲಿಯೇ  4-5 ತಿಂಗಳು ಬೀಡು ಬಿಡುತ್ತಾರೆ.

Advertisement

ಹಲವು ವರ್ಷಗಳ ಹಿಂದೆ. ಅಂದು ಶಿವಮೊಗ್ಗದಿಂದ ನನ್ನೂರಿಗೆ ಬಸ್‌ನಲ್ಲಿ ಹೊರಟಿದ್ದೆ. ಸಾಮಾನ್ಯವಾಗಿ ಆ ಬಸ್ಸಿನಲ್ಲಿ ಅಷ್ಟೊಂದು ರಶ್‌ ಇರುವುದಿಲ್ಲ. ಇವತ್ತು ಕೂಡ ಖಾಲಿ ಇರಬಹುದೆಂದು ಖುಷಿಯಾಗಿಯೇ ಆಲೋಚಿಸುತ್ತಾ ಬಸ್ಸಿನ ಕಿಟಕಿಯಿಂದ ದೂರದಲ್ಲಿ ಕಣ್ಣು ಹಾಯಿಸಿದ್ದೆ. ಬಸ್‌ ನಿಲ್ದಾಣದಲ್ಲಿ ಕೊನೆ ಭಾಗದಲ್ಲಿ ಏಜೆಂಟರಿಬ್ಬರು ಒಂದೇ ಸಮನೆ ಜಗಳವಾಡುತ್ತಿದ್ದರು. ಸ್ವಲ್ಪ ಕಿವಿಗೊಟ್ಟು ಕೇಳಲು ಪ್ರಯತ್ನ ಪಟ್ಟೆನಾದರೂ ಪ್ರಯೋಜನವಾಗಲಿಲ್ಲ. ಸೌಂಡ್‌ ಬಾಕ್ಸ್‌ ಕೆಟ್ಟು ಹೋದಾಗ ನೋಡುತ್ತಿದ್ದ ಸಿನಿಮಾ ನೆನಪಾದಂತಾಯಿತು. ಅವರ ಬಾಯಿ ಚಲನೆ ಮತ್ತು ಹಾವಭಾವ ನೋಡಿ ಏನು ಮಾತನಾಡುತ್ತಿರಬಹುದೆಂದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಶಬ್ದ, ಕಿರುಚಾಟ ಎಲ್ಲವೂ ಶುರುವಾಯಿತು. 

ಏನೆಂದು ಹಿಂತಿರುಗಿ ನೋಡುತ್ತಿದ್ದಂತೆ ಹಿಂಬಾಗಿಲ ಮೂಲಕ ಹತ್ತಾರು ಜನ ಒಳಗೆ ನುಗ್ಗುತ್ತಿದ್ದರು. ಕೆಲವರು ಮೂಟೆಗಳನ್ನು ಬಸ್ಸಿನ ಮೇಲೆ ಹಾಕುತ್ತಿದ್ದರು. ಚಿಳ್ಳೆಪಿಳ್ಳೆಗಳು ಸೇರಿದಂತೆ ಅವರು ನುಗ್ಗುತ್ತಿದ್ದ ಪರಿ ನೋಡಿಯೇ ನನಗೆ ಖಚಿತವಾಯಿತು, ಒಳ್ಳೆಯ ನಿದ್ದೆ ಮಾಡುತ್ತಾ ಪ್ರಯಾಣಿಸಬೇಕೆಂಬ ನನ್ನ ಆಸೆಗೆ ಎಳ್ಳು ನೀರು ಬಿಡುವುದು ಗ್ಯಾರಂಟಿ ಎಂದು. ಆದರೆ ಬೆನ್ನಲ್ಲೆ ಹೊಸತೊಂದು ಪ್ರಪಂಚ  ನನ್ನೆದುರು ತೆರೆದುಕೊಳ್ಳುವುದು ಕೂಡ ಖಚಿತವಾಯಿತು. ಜೊತೆಗೆ ಆ ಜಗತ್ತಿನೆಡೆ ನೋಡುವ ನನ್ನ ಆಸೆ ಚಿಗಿತುಕೊಂಡಿತು.

ಸಾಮಾನ್ಯವಾಗಿ ಮಲೆನಾಡಿನ ಕಡೆಗೆ ಹೋಗುವ ಜನರನ್ನು ನೋಡುತ್ತಿದ್ದಂತೆ ಗೊತ್ತಾಗಿ ಹೋಗುತ್ತದೆ. ಅವರ ಹಾವಭಾವ, ವರ್ತನೆ ಎಲ್ಲವೂ ಗೊತ್ತಿರುವಂತಹದೇ. ಆದರೆ ಕಾಫಿ ಕುಯ್ಲಿನ ಸಂದರ್ಭದಲ್ಲಿ  ಮಾತ್ರ ಈ ಹೊಸ ಅತಿಥಿಗಳು ಬಸ್ಸಿನಲ್ಲಿ ತುಂಬಿಕೊಳ್ಳುತ್ತಾರೆ. ಮುಂಡಾಸು ಬಿಗಿದ ಗಂಡಸರು, ಕಂಕುಳಲ್ಲಿ ದೊಡ್ಡ ಸೀರೆ ಗಂಟಿನೊಂದಿಗೆ ಹೆಂಗಸರು,  ಬಾಯಿತುಂಬ ಎಲೆಯಡಿಕೆ. ಸಿಂಬಳ ಸುರಿಸುತ್ತಿದ್ದ  ಪುಟ್ಟ ಹುಡುಗರು. ಪುಟ್ಟದೊಂದು ಕೂಸು. ಅದರ ಕಂಕುಳಲ್ಲಿ ಇನ್ನೊಂದು ಕೂಸು.. ದೊಡ್ಡ ದೊಡ್ಡ  ಮೂಟೆಗಳು. ಬಟ್ಟೆ, ಪಾತ್ರೆಗಳು.. ಇನ್ನೂ ಏನೇನೋ. ಇವರಿಗೆ ಮೆಲ್ಲಗೆ ಮಾತನಾಡಿಯೇ ಗೊತ್ತಿದ್ದಂತಿ ರಲಿಲ್ಲ. ಜೋರು ಜೋರಾಗಿ ಕಿರುಚಿ ಮಾತನಾಡುತ್ತಿದ್ದರು. ಯಾವ ಪರಿವೆಯೂ ಇಲ್ಲದೆ ಅವರು ನಡೆಸುತ್ತಿದ್ದ ಸಂಭಾ ಷಣೆಗಳು ಬಸ್ಸಿನಲ್ಲಿದ್ದ ಎಲ್ಲರಿಗೂ ಕಿರಿ ಕಿರಿ ಉಂಟು ಮಾಡು ವಂತಿತ್ತು. ಬಸ್ಸಿನ ಹಿಂದೆ ನಿಂತ ವ್ಯಕ್ತಿ ಮುಂದಿನ ಭಾಗದಲ್ಲಿ ನಿಂತ ವ್ಯಕ್ತಿಯ ಜೊತೆ ಸಂಭಾಷಿಸುತ್ತಿದ್ದ. ವಾಸ್ತವವಾಗಿ ಅದು ಸಂಭಾಷಣೆ ಎಂದು ನನಗನ್ನಿಸಲಿಲ್ಲ. ಕಿರುಚುವುದಷ್ಟೇ. ಬಸ್ಸಿನ ಕಂಡಕ್ಟರಿಗಂತೂ ತಲೆಕೆಟ್ಟು ಹೋಗಿತ್ತು. ಯಾರು ಟಿಕೆಟ್‌ ತಗೊಂಡಿದ್ದಾರೆ, ಯಾರು ತಗೊಂಡಿಲ್ಲ ಎಂದು ಗೊತ್ತೇ ಆಗದ ಪರಿಸ್ಥಿತಿ. ಹಿಂದಿನಿಂದ ಟಿಕೆಟ್‌ ಎಂದು ಬಂದರೆ ಮುಂದಿನ ಕಡೆಯವರ ಕಡೆ ಕೈತೋರಿಸುತ್ತಿದ್ದರು. ಅಲ್ಲಿಗೆ ಹೋದಾಗ ಹಿಂದಿನ ಜನರ ಕಡೆ ಕೈತೋರಿಸಿಬಿಡುತ್ತಿದ್ದರು. ಇಲ್ಲಿ ಸತ್ಯ ಸುಳ್ಳಿನ ಪ್ರಶ್ನೆಯಲ್ಲ. ಆದರೆ ನಾನು ಕಂಡದ್ದು ಮಾತ್ರ ಅದೇ.

ಸಿಂಬಳ ಸುರಿಸುತ್ತಿದ್ದ ಈ ಪುಟ್ಟ ಮಕ್ಕಳ ಮೂಗನ್ನು ಸ್ವಚ್ಚ ಮಾಡಿಯೇ ಗೊತ್ತಿರಲಿಲ್ಲ ಎಂದು ಕಾಣುತ್ತದೆ. ಮೂಗಿನಿಂದ ಇಳಿದು ಇನ್ನೇನು ಕೆಳಗೆ ಬೀಳುತ್ತದೆ ಎನ್ನುವಾಗ ನಾಲಿಗೆ ಯಿಂದಲೇ ಒರೆಸಿ ಬಿಡುತ್ತಿದ್ದವು ಆ ಪುಟ್ಟ ಮಕ್ಕಳು. ಇನ್ನೇನು ನೆಲಕ್ಕೆ ಸಿಂಬಳದ ಬಾಲ ಬೀಳುತ್ತದೆ ಎಂದು ನೋಡುತ್ತಿದ್ದ ನನ್ನನ್ನು ನಿರಾಶೆಗೊಳಿಸುವಂತೆ ಅದು ಮಾಯವಾಗುತ್ತಿತ್ತು. ಅಮ್ಮ ಮಾಡದ ಕರ್ತವ್ಯವನ್ನು ತಾವೇ ಯಶಸ್ವಿಯಾಗಿ ನಿಭಾಯಿ ಸುತ್ತಿದ್ದವೇನೋ! ಇನ್ನೂ ನೆಲದಿಂದ ಮೇಲೇಳದ ಹೆಣ್ಣು ಮಕ್ಕಳಿಗೆ ಆಗಲೇ ಇನ್ನೊಂದು ಕೂಸು ಸೊಂಟದಲ್ಲಿ ಕೂತು ಬಿಟ್ಟಿತ್ತು. ಬಹುಶಃ ಬಾಲ್ಯ ವಿವಾಹ ಜಾಸ್ತಿ ಇದ್ದಿರಬೇಕು. ವಲಸೆ ಬಂದ ಯಾವ ವ್ಯಕ್ತಿಯೂ ಸ್ನಾನ ಮಾಡಿದಂತೆ ಅನಿಸುತ್ತಿರಲಿಲ್ಲ. ಮಾಸಲು ಬಟ್ಟೆ ಮಾತ್ರವಲ್ಲ, ದೇಹದ ವಾಸನೆಯೂ ಮೂಗು ಮುಚ್ಚಿಕೊಳ್ಳುವಂತೆ ಮಾಡುತ್ತಿತ್ತು. ಗುಂಪು ಗುಂಪಾಗಿ ಬರುತ್ತಿದ್ದ ಇವರಲ್ಲಿನ  ಬಡತನ ಅವರ ಎಲ್ಲ ವರ್ತನೆಯಲ್ಲಿಯೂ ಢಾಳಾಗಿ ಕಾಣಿಸುತ್ತಿತ್ತು. 

Advertisement

ಹೀಗಾಗಿಯೇ ಒಂದೊಂದು ಪೈಸೆಯನ್ನೂ ಉಳಿಸುವ ಪ್ರಯತ್ನ ಮಾಡುತ್ತಿದ್ದರೇನೋ. ಬಸ್ಸಿಗೆ ಹತ್ತಿದಾಕ್ಷಣ ಬಸ್ಸಿನ ಕಂಡಕ್ಟರ್‌ನಲ್ಲಿ ಇನ್ನಿಲ್ಲದ ಕಾರಣ ತೆಗೆದು ಜಗಳ ಶುರು ಮಾಡಿ ಬಿಡುತ್ತಿದ್ದರು. ಕೆಲವರು ಲಗ್ಗೇಜ್‌ ಮೇಲೆ ಹಾಕುವಲ್ಲಿ ಕಂಡಕ್ಟರ್‌ನನ್ನು ಗೊಂದಲಕ್ಕೆ ಈಡು ಮಾಡಿದರೆ, ಇನ್ನು ಕೆಲವರು ಗೊತ್ತೇ ಆಗದಂತೆ ಬಸ್ಸಿನ ಒಳಗೆ ಸೀಟಿನ ಕೆಳಗೆ ಮೂಟೆ ಸೇರಿಸಿ ಇದು ಯಾರದೋ ನನಗೆ ಗೊತ್ತೇ ಇಲ್ಲ ಎನ್ನುತ್ತಿದ್ದರು. ಇವರನ್ನು ನಿಭಾಯಿಸಲು ಸಾಧ್ಯವೇ ಆಗದ ಕಂಡಕ್ಟರ್‌ ಗೊಣಗುತ್ತಲೇ ಬಸ್ಸಿಗೆ ರೈಟ್‌ ಹೇಳುತ್ತಿದ್ದರು. ಇಡೀ ಬಸ್ಸಿನಲ್ಲಿ ತುಂಬಿರುತ್ತಿದ್ದ ಕಮಟು ವಾಸನೆಯನ್ನು ಅಲ್ಲಿ ಕೂತವರು ಅಸಹ್ಯದಿಂದಲೇ ಸಹಿಸುತ್ತಿದ್ದರು. ಇದ್ದಕ್ಕಿದ್ದಂತೆ ಮುಂದಿನ ಕಿಟಕಿಯಿಂದ ಮಾಡಿದ ವಾಂತಿ ಹಿಂಬದಿಯಲ್ಲಿ  ಕುಳಿತ ಪ್ರಯಾಣಿಕರ ಮೇಲೆ ಸಿಂಪರಣೆಗೊಂಡು ಇನ್ನಷ್ಟು ಜಗಳಕ್ಕೆ ಕಾರಣವಾಗುತ್ತಿದ್ದ ಇವರ ವರ್ತನೆ ಬಗ್ಗೆ ಈಗ ಬೇರೆಯದೇ ಭಾವ ಸು#ರಿಸುತ್ತಿದೆ. ನಾಗರೀಕತೆಯ ಸ್ಪರ್ಷ ಪಡೆಯದ ಇವರ ಬದುಕು ಅನಿವಾರ್ಯವಾಗಿ ಇಂತಹ ವ್ಯವಸ್ಥೆಯಲ್ಲಿ ಸಿಲುಕಿ ಹಾಕಿ ಕೊಂಡಿರಬೇಕು. ಸ್ವಚ್ಚತೆಯನ್ನು ಯಾರೂ ಕಲಿಸಿಕೊಡಲೇ ಇಲ್ಲ. ಹೊಟ್ಟೆ ತುಂಬಿಸಿಕೊಳ್ಳುವುದರ ಹೊರತಾದ ಇನ್ನೊಂದು ಯೋಚನೆ ಅವರಲ್ಲಿ ಹುಟ್ಟುವುದಾದರೂ ಹೇಗೆ?

16 ಕೆಲಸಗಾರರು ಎಂದೇ ಮಲೆನಾಡು ಸೀಮೆಯಲ್ಲಿ ಪ್ರತೀತಿ ಹೊಂದಿದ ಬಯಲುನಾಡಿನವರು. ಇವರಿಗೆ 16 ಕೆಲಸಗಾರರು ಎಂದು ಯಾಕೆ ಹೇಳುತ್ತಾರೆ ಎಂದು ಬಳಿಕ ನಾನು ತನಿಖೆ ಮಾಡಿದೆ. ಆಗಲೇ ಗೊತ್ತಾಗಿದ್ದು, ಸ್ಥಳೀಯ ಕಾಫಿ ತೋಟದ ಕೆಲಸಗಾರರಿಗೆ ವಾರಕ್ಕೆ ಒಮ್ಮೆ ಬಟವಾಡೆ ಮಾಡಲಾಗುತ್ತಿದ್ದರೆ, ಇವರಿಗೆ ಮಾತ್ರ 16 ದಿನದ ಕೆಲಸಕ್ಕೆ ಒಮ್ಮೆ  ಬಟವಾಡೆ ಮಾಡಲಾಗುತ್ತಿತ್ತಂತೆ. ಹೀಗಾಗಿ ಇವರಿಗೆ 16 ಕೆಲಸಗಾರರು ಎನ್ನುತ್ತಿದ್ದರಂತೆ ಎಂದು. 
 
ಹಾವೇರಿ, ಹುಬ್ಬಳ್ಳಿ ಭಾಗದಿಂದ  ಕಾಫಿ ಸೀಮೆಯತ್ತ ಹೊರಟಿದ್ದರವರು. ಆಗ ಕಾಫಿ ಕುಯ್ಯುವ ಕಾಲ. ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಇರುವ ಲಕ್ಷಾಂತರ ಎಕರೆ ಕಾಫಿ ತೋಟಗಳಲ್ಲಿ ಹಣ್ಣಾದ ಸಮಯಕ್ಕೆ ಕಾಫಿ ಕುಯ್ಯಲು ಜನ ಬೇಕಾಗುತ್ತದೆ. ಈ ವೇಳೆಯಲ್ಲಿ ಬಯಲು ನಾಡಿನಿಂದ ಅಸಂಖ್ಯಾತ ಜನ ಕಾಫಿ ಸೀಮೆಗೆ ವಲಸೆ ಹೊರಟು ಬಿಡುತ್ತಾರೆ. ಗುಂಪು ಗುಂಪಾಗಿ ಹೋಗುವ ಈ ವಲಸೆ ಕುಟುಂಬಗಳು ಕಾಫಿ ನಾಡಿನಲ್ಲಿಯೇ  4-5 ತಿಂಗಳು ಬೀಡು ಬಿಡುತ್ತಾರೆ. ಇತ್ತ ಬಾಳೆಹೊನ್ನೂರು, ಕೊಪ್ಪ, ಕಳಸ, ಚಿಕ್ಕಮಗಳೂರು, ಮೂಡಿಗೆರೆಯಿಂದ ಹಿಡಿದು ಕೊಡಗಿನವರೆಗಗೂ ಕಾಫಿ ನಾಡು ಹರಡಿಕೊಂಡಿದೆ. ಬಯಲುಸೀಮೆಯಲ್ಲಿ ಬರ ಬಂದ ವರ್ಷಗಳಲ್ಲಿ ಈ ವಲಸೆ ಪ್ರಮಾಣ ಜೋರಾಗಿರುತ್ತದೆ. ಈ ವಲಸೆ ಕೂಡ ಸರಿ ಸುಮಾರು ತಿಂಗಳ ಕಾಲ ಇರುತ್ತದೆ.ಆ ವಲಸೆ ಶುರುವಾಯಿತು ಎಂದರೆ ಶಿವಮೊಗ್ಗದಿಂದ ಕಾಫಿನಾಡಿಗೆ ಹೋಗುವ ಯಾವ ಬಸ್ಸು ಹತ್ತಿದರೂ ಇದೇ ದೃಶ್ಯ.

ಅವರೆಲ್ಲರ ವರ್ತನೆಗೂ ಒಂದು ಕಾರಣವಿರಬಹುದು. ಅಜ್ಞಾನ, ಅನಕ್ಷರಸ್ಥತೆ, ಬಡತನ ಎಲ್ಲವೂ… ಆದರೆ ದುಡಿಯುವ ಪ್ರವೃತ್ತಿ ಮಾತ್ರ ಅವರಲ್ಲಿ ಎಲ್ಲರಿಗಿಂತ ಹೆಚ್ಚಾಗಿತ್ತು. ಆಗೊಮ್ಮೆ ಸಿಕ್ಕ ಈ ಕೆಲಸಗಾರರ ಪೈಕಿಯ ವ್ಯಕ್ತಿಯೊಬ್ಬ ಹೇಳಿದ್ದ “ಮಲೆನಾಡಿನ ಗುಡ್ಡ, ಬೆಟ್ಟಗಳು ಎತ್ತರದಲ್ಲಿರುತ್ತದೆ. ದೇವರಿಗೆ ಹತ್ತಿರ ವಾಗಿರು ತ್ತಿದೆಯಾದ್ದರಿಂದ ದೇವರು ಎಲ್ಲವನ್ನೂ ಇಲ್ಲಿಯೇ ನೀಡಿದ್ದಾನೆ. ಕೊನೆಗೆ ಏನೂ ನೀಡಲು ಉಳಿದಿಲ್ಲ ಎಂದು ನಮಗೆ ಬರೀ ಕೈ ತೋರಿಸಿದ್ದಾನೆ’ ಎಂದು ಕ್ಷೀಣವಾಗಿ ನಕ್ಕ ನಗೆಯನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ಎಷ್ಟೇ ಕಷ್ಟಪಟ್ಟರೂ ಅಲ್ಲಿ ಏನೂ ಸಿಗುತ್ತಿಲ್ಲ ಎಂಬುದು ಆತನ  ಮಾತಿನ ತಾತ್ಪರ್ಯವಾಗಿತ್ತು. ಹಾಗೆಂದು ಮಲೆನಾಡಿನಲ್ಲಿ ಬಡತನ ಇಲ್ಲವೆಂದಲ್ಲ. ಇಲ್ಲಿಯೂ ಅದು ಢಾಳಾಗಿಯೇ ಇದೆ. ಆದರೆ ಇಲ್ಲೊಂದು ಪ್ರತ್ಯೇಕ ಸಂಸ್ಕೃತಿಯಿದೆ.

ಆಗ ಅವರ ವಾಸನೆಗೆ ಅಸಹ್ಯ ಪಟ್ಟದ್ದುಂಟು. ಅವರ ಗಲಾಟೆಗೆ ವ್ಯಂಗ್ಯವಾಗಿ ನಕ್ಕದ್ದುಂಟು. ಆದರೆ ಕೇವಲ ಹೊಟ್ಟೆಪಾಡಿಗಾಗಿ ದೂರದ ನಾಡಿಗೆ ವಲಸೆ ಬರುವ, ತಮ್ಮದೆಲ್ಲವನ್ನೂ ತೊರೆದು ಬೇರೆಯದೇ ನಾಡಿನಲ್ಲಿ ಬದುಕು ಕಟ್ಟಿಕೊಳ್ಳುವ  ಅವರ ಅನಿವಾರ್ಯತೆಯ ಪರಿಸ್ಥಿತಿಯನ್ನು ಈಗ ನೆನೆದಾಗ ವಿಷಾದವೆನಿಸುತ್ತದೆ. ನೋವೆನಿಸುತ್ತದೆ. ಹಣ ಉಳಿಸುವ ಆ ಸುಳ್ಳಿನಲ್ಲಿಯೂ ಒಂದು ಅನಿವಾರ್ಯತೆಯಿತ್ತು. ಪ್ರತಿ ಪೈಸೆಯನ್ನೂ ಕೂಡಿಟ್ಟುಕೊಳ್ಳುವ ಧಾವಂತವಿತ್ತು. ಅಸ್ವತ್ಛತೆಯ ಬದುಕಿಗೆ ಬೇರೆಯದೇ ಕಾರಣವಿದ್ದೀತು. ಗೊತ್ತಿಲ್ಲದ ಊರಿನಲ್ಲಿ, ಗೊತ್ತಿಲ್ಲದ ಜನರ ನಡುವೆ, ಗೊತ್ತಿಲ್ಲದ ಪರಿಸರದಲ್ಲಿ  ಬದುಕಿಗಾಗಿ ಹೋರಾಡುವ ಅವರ ದೈನೇಸಿ ಸ್ಥಿತಿಯನ್ನು ಅರಿಯದೇ ನಕ್ಕ, ಅಸಹಿÂಸಿದ ಮನಃಸ್ಥಿತಿ ಕಂಡು ನಾಚಿಕೆಯಾಗುತ್ತಿದೆ. ಇಸ್ರೇಲ್‌ನ ಸಂತ್ರಸ್ಥರ ವಲಸೆ, ಯುರೋಪಿನತ್ತ ಹೊರಟ ಮಹಾವಲಸೆ ಇವೆಲ್ಲವನ್ನೂ ನೆನೆಯುತ್ತಾ ಇಲ್ಲಿಯೇ ನಮ್ಮ ಜಿಲ್ಲೆಗಳ ನಡುವೆ ನಡೆದ ವಲಸೆ ಕೂಡ ಒಂದು ಬದುಕಿನ ಮಹಾನ್‌ ವಲಸೆಯೇ ಸರಿ. ಅಲ್ಲಿ ಜೀವವುಳಿಸಿಕೊಳ್ಳುವ ಅನಿವಾರ್ಯ ವಲಸೆಯಾದರೆ, ಇಲ್ಲಿ ಬದುಕು ಕಟ್ಟುವ ಅನಿವಾರ್ಯತೆಯ ವಲಸೆ. ಅವರು ಎಷ್ಟೇ ಗಲಾಟೆ ಮಾಡಿಕೊಂಡರೂ ಅವರ ನಡುವೆಯೇ ಆಗಿತ್ತೇ ಹೊರತು ಇಲ್ಲಿನ ಜನರ ನಡುವೆಯಲ್ಲ. ಎಂದೂ ಕಳ್ಳತನದ ಆರೋಪ ಹೊರೆಸಿಕೊಂಡವರಲ್ಲ. ಯಾವುದೇ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿರಲಿಲ್ಲ. ನಿಯತ್ತಿಗೆ ಇನ್ನೊಂದು ಹೆಸರಾಗಿದ್ದವರು. ಈಗ ಈ ವಲಸೆಗಾರರು ಕಡಿಮೆಯಾಗಿದ್ದಾರೆ. ಆಗಾಗ್ಗೆ ಬಂದರೂ ಬದಲಾಗಿ ಹೋಗಿದ್ದಾರೆ. ಸ್ವತ್ಛವಾಗಿ ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಪುಟ್ಟ ಮಕ್ಕಳು ಕಾಣುತ್ತಲೇ ಇಲ್ಲ. ಎಂದರೆ ಅವರೆಲ್ಲ ಶಾಲೆಯತ್ತ ಮುಖ ಮಾಡಿರಬೇಕು.ಈಗ ಇವರ ಜಾಗದಲ್ಲಿ ಬಂಗಾಲ, ಅಸ್ಸಾಂನ ಜನ ಕಾಣಿಸುತ್ತಿ ದ್ದಾರೆ. ವಲಸೆಯ ಜಾಡು ಬದಲಾಗಿದೆ. ಹಾದಿ ಹೊಸದಾಗಿದೆ.

– ಗೋಪಾಲ್‌ ಯಡಗೆರೆ

Advertisement

Udayavani is now on Telegram. Click here to join our channel and stay updated with the latest news.

Next