Advertisement

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌.ಒನ್‌ ಲೋಕಾರ್ಪಣೆ

07:07 PM Mar 31, 2023 | Team Udayavani |

ಪುತ್ತೂರು: ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ನಗರದ ಹೃದಯ ಭಾಗದಲ್ಲಿ ನಿರ್ಮಾಣಗೊಂಡಿರುವ ಜಿ.ಎಲ್‌. ಪ್ರಾಪರ್ಟಿಸ್‌ ಪ್ರವರ್ತಿತ ಜಿ.ಎಲ್‌. ಒನ್‌ ಶಾಪಿಂಗ್‌ ಮಾಲ್‌ ಎ. 2ರಂದು ಲೋರ್ಕಾಪಣೆಗೊಳ್ಳಲಿದ್ದು, ಜಿಲ್ಲಾ ಕೇಂದ್ರದ ನಿರೀಕ್ಷೆಯಲ್ಲಿರುವ ಪುತ್ತೂರಿಗೆ ಇದು ಮಹತ್ವದ ಕೊಡುಗೆಯಾಗಿದೆ.

Advertisement

ಏನಿದು ಜಿ.ಎಲ್‌. ಒನ್‌ ಮಾಲ್‌?
ಆಭರಣ ಸೇರಿದಂತೆ ವ್ಯವಹಾರ ಕ್ಷೇತ್ರದಲ್ಲಿ ಗುಣಮಟ್ಟ, ವಿಶ್ವಾರ್ಹತೆಯೊಂದಿಗೆ ಜಿ.ಎಲ್‌. ತನ್ನದೇ ಆದ ಬ್ರ್ಯಾಂಡ್‌ ಸೃಷ್ಟಿಸಿದೆ. ಈ ಸಂಸ್ಥೆಯ ಹೊಸ ಕೊಡುಗೆ ವಿನೂತನ ಸೌಲಭ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಈ ಮಾಲ್‌ನಲ್ಲಿ 5 ಅಂತಸ್ತುಗಳಿವೆ. ಬೇಸ್‌ಮೆಂಟ್‌ನಲ್ಲಿ ವಿಶಾಲ ಪಾರ್ಕಿಂಗ್‌, ನೆಲ ಮತ್ತು ಪ್ರಥಮ ಮಹಡಿಯಲ್ಲಿ ಶಾಪಿಂಗ್‌ ಮಳಿಗೆ, ಎರಡನೇ ಮಹಡಿಯಲ್ಲಿ 3 ಸಿನೆಮಾ ಥಿಯೇಟರ್‌, ಮಕ್ಕಳ ಮನೋರಂಜನೆಗಾಗಿ ಗೇಮಿಂಗ್‌ ವಲಯ, 6 ಫುಡ್‌ ಕೋರ್ಟ್‌ ಇದೆ. 3ನೇ ಮಹಡಿಯಲ್ಲಿ ಕೆಲವು ಕಚೇರಿಗಳು ಇರಲಿವೆ.

ಅತ್ಯಾಧುನಿಕ ಸೌಲಭ್ಯ ಹೊಂದಿರುವ ಮಾಲ್‌ ಪುತ್ತೂರಿಗೆ ಮೊದಲನೆಯದು. ಇಲ್ಲಿ ಸೆಂಟ್ರಲ್‌ ಎಸಿ, ಎಸ್ಕಲೇಟರ್‌, ಲಿಫ್ಟ್‌, ಅಗತ್ಯಕ್ಕೆ ತಕ್ಕಷ್ಟೇ ವಿದ್ಯುತ್‌ ಬಳಸುವ ಹೊಸ ಸಾಧನ ಸಹಿತ ಸೌಲಭ್ಯಗಳಿವೆ.

ಬ್ರ್ಯಾಂಡೆಡ್‌ ಜತೆಗೆ
ಕಡಿಮೆ ದರದ ಐಟಂ ಲಭ್ಯ
ಬ್ರ್ಯಾಂಡೆಡ್‌ ವಸ್ತುಗಳ ಮಾರಾಟ ಮಳಿಗೆಯ ಜತೆಗೆ ಕಡಿಮೆ ದರದ ವಸ್ತುಗಳ ಅಂಗಡಿಗಳೂ ಇರಲಿವೆ. ಒಂದೇ ಸೂರಿನೊಳಗೆ ಇಡೀ ಕುಟುಂಬದ ಆವಶ್ಯಕತೆಗಳನ್ನು ಪೂರೈಸಲಿದೆ.

ಸೋಲಾರ್‌ ಆಧಾರಿತ
ಇಡೀ ಮಾಲ್‌ಗೆ ಬೇಕಾದ ವಿದ್ಯುತ್‌ನ ಶೇ. 70ರಷ್ಟನ್ನು ಸೋಲಾರ್‌ನಿಂದ ಪಡೆಯಲು ಯೋಜನೆ ರೂಪಿಸಲಾಗಿದ್ದು, ಪರಿಸರಸ್ನೇಹಿಯಾಗಲು ಜಿ.ಎಲ್‌. ಮುಂದಡಿ ಇಟ್ಟಿದೆ. ತ್ಯಾಜ್ಯ ನೀರನ್ನು ಸಂಸ್ಕರಿಸಿ ಉದ್ಯಾನಕ್ಕೆ ಮರುಬಳಸುವ ಯೋಜನೆ ಇದೆ. ಸ್ಥಳೀಯಾಡಳಿತದ ನಿಯಮಗಳಂತೆ ಮಾಲ್‌ ನಿರ್ಮಿಸಲಾಗಿದೆ.

Advertisement

ಉದ್ಯೋಗ ಸೃಷ್ಟಿ
ಭವಿಷ್ಯದ ಪುತ್ತೂರು ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ 1 ಲಕ್ಷ ಚದರಡಿಯ ಮಾಲ್‌ ಇದು. ಇಲ್ಲಿ 250ರಿಂದ 300 ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಇಲ್ಲಿನ ತರುಣ ತರುಣಿಯರು ಉದ್ಯೋಗಕ್ಕಾಗಿ ಬೇರೆ ಕಡೆ ಹೋಗುವ ಅನಿವಾರ್ಯಕ್ಕೆ ಕಡಿವಾಣ ಹಾಕಲು ಈ ಮಾಲ್‌ನಂತಹ ಯೋಜನೆ ಅನುಷ್ಠಾನಿಸಲಾಗಿದೆ ಅನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ, ನಿರ್ದೇಶಕರಾದ ಲಕ್ಷ್ಮೀಕಾಂತ್‌ ಆಚಾರ್ಯ, ಸುಧನ್ವ ಆಚಾರ್ಯ.

ಪುತ್ತೂರಿನ ಪ್ರಗತಿಗೆ ಜಿ.ಎಲ್‌. ಕೊಡುಗೆ
66 ವರ್ಷಗಳ ಹಿಂದೆ ಆಭರಣ ಕ್ಷೇತ್ರಕ್ಕೆ ಕಾಲಿಟ್ಟ ಜಿ.ಎಲ್‌. ಆಚಾರ್ಯ ಸಂಸ್ಥೆ ಅದ್ಭುತ ಎಂಬಂತೆ ಬೆಳೆದು ಪುತ್ತೂರಿಗೆ ಬಂಗಾರದ ಹೊಳಪು ನೀಡಿದೆ. 1957ರಲ್ಲಿ ಕೋರ್ಟ್‌ ರಸ್ತೆಯ ಪುಟ್ಟ ಮಳಿಗೆಯಲ್ಲಿ ಗುಂಡಿಬೈಲು ಲಕ್ಷ್ಮೀನಾರಾಯಣ ಆಚಾರ್ಯರ ಕನಸಿನಂತೆ ಪ್ರಾರಂಭಗೊಂಡ ಸಂಸ್ಥೆ ವರ್ಷದಿಂದ ವರ್ಷಕ್ಕೆ ಹೆಮ್ಮರವಾಗಿ ಬೆಳೆಯಿತು. ಈಗ 3ನೇ ತಲೆಮಾರು ಮುನ್ನಡೆಸುತ್ತಿದೆ. ಪುತ್ತೂರಿಗೆ ಸುಸಜ್ಜಿತ ವಸತಿಗೃಹದ ಅಗತ್ಯವನ್ನು ಮನಗಂಡು, “ಹೋಟೆಲ್‌ ರಾಮ’ ಆರಂಭಿಸಿದ್ದು ಜಿ.ಎಲ್‌. ಆಚಾರ್ಯರು. ಬಳಿಕ ಬಲರಾಮ ಆಚಾರ್ಯರು ತಂದೆಯ ಆಶಯವನ್ನು ಮತ್ತಷ್ಟು ವಿಸ್ತರಿಸಿದರು. ಜಿ. ರಾಧಾಕೃಷ್ಣ ಬಿಲ್ಡಿಂಗ್‌, ಜಿ.ಎಲ್‌. ಟ್ರೇಡ್‌ ಸೆಂಟರ್‌ ಮೂಲಕವೂ ವಿಸ್ತರಣೆಯಾಯಿತು. ರಿಯಲ್‌ ಎಸ್ಟೇಟ್‌, ಶೇರು ಮಾರುಕಟ್ಟೆ ವಿಸ್ತರಿಸಿ ಜನವಿಶ್ವಾಸ ಗಳಿಸಿತು.

ಜಿ.ಎಲ್‌. ಒನ್‌ ಶಾಪಿಂಗ್‌ ಮಾಲ್‌ ಅನ್ನು ಎ. 2ರಂದು ಸಂಜೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಲಾಂಛನವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಅನಾವರಣಗೊಳಿಸಲಿದ್ದಾರೆ.

ಕಟ್ಟಡವನ್ನು ಶ್ರೀ ಧರ್ಮಸ್ಥಳ ಕ್ಷೇತ್ರದ ಡಿ. ಹರ್ಷೇಂದ್ರ ಕುಮಾರ್‌ ಲೋಕಾರ್ಪಣೆಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌, ಪುತ್ತೂರು ಎಸ್‌ಜಿ ಕಾರ್ಪೋರೇಟ್ಸ್‌ ಚೇರ್‌ಮನ್‌ ಕೆ. ಸತ್ಯಶಂಕರ್‌, ಪುತ್ತೂರು ಛೇಂಬರ್‌ ಆಫ್‌ ಕಾಮರ್ಸ್‌ ಮತ್ತು ಇಂಡಸ್ಟ್ರೀಸ್‌ ಅಧ್ಯಕ್ಷ ಜಾನ್‌ ಕುಟಿನ್ಹಾ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಂಗಳೂರು ಭಾರತ್‌ ಸಮೂಹ ಸಂಸ್ಥೆಯ ನಿರ್ದೇಶಕ ಆನಂದ್‌ ಪೈ, ಪುತ್ತೂರು ಅನ್ಸಾರುದ್ದಿನ್‌ ಜಮಾತ್‌ ಸಮಿತಿ ಅಧ್ಯಕ್ಷ ಎಲ್‌.ಟಿ. ಅಬ್ದುಲ್‌ ರಝಾಕ್‌ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಮ್ಯೂಸಿಕ್‌ ಪರ್ಬ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next