Advertisement

ಒಮಿಕ್ರಾನ್‌: ಫೆಬ್ರವರಿ ಅಂತ್ಯಕ್ಕೆ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಳ ಸಾಧ್ಯತೆ?

09:24 PM Dec 31, 2021 | Team Udayavani |

ಬೆಂಗಳೂರು: ರಾಜದಲ್ಲಿ ಒಮಿಕ್ರಾನ್‌ ಭೀತಿಯ ನಡುವೆ ಹಂತ- ಹಂತವಾಗಿ ಕೋವಿಡ್‌ ಪಾಸಿಟಿವಿಟಿ ದರ ಹೆಚ್ಚಾಗುತ್ತಿದ್ದು ಸೋಂಕಿನ ಪ್ರಮಾಣ ಫೆಬ್ರವರಿ ಅಂತ್ಯಕ್ಕೆ ಭಾರಿ ಏರಿಕೆಯಾಗುವ ಸಾಧ್ಯತೆಗಳು ಕಂಡು ಬರುತ್ತಿವೆ.

Advertisement

ಜನವರಿ ಅಂತ್ಯದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಈಗಿನದಕ್ಕಿಂತ ಹತ್ತು ಪಟ್ಟು ಅಧಿಕವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದ್ದು, ಇದು ಮೂರನೇ ಅಲೆಯ ಮುನ್ಸೂಚನೆ ಎಂದು ಹೇಳಲಾಗುತ್ತಿದೆ
ಮತ್ತೊಂದೆಡೆ, ಕೇಂದ್ರ ಸರ್ಕಾರದ ಕೊರೊನಾ ಪಾಸಿಟಿವ್‌ ಅಪಾಯಕಾರಿ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿಕೊಂಡಿರುವುದು ಮತ್ತಷ್ಟು ಆತಂಕವನ್ನು ಮೂಡಿಸಿದೆ. ವಾರದ ಹಿಂದೆ 100ರಿಂದ 150 ಪ್ರಕರಣಗಳು ಪತ್ತೆಯಾಗುತ್ತಿರುವ ಬೆಂಗಳೂರಿನಲ್ಲಿ ಇದೀಗ ಏಕಾಏಕಿ 600ಕ್ಕೂ ಅಧಿಕ ಪಾಸಿಟಿವ್‌ ಪತ್ತೆಯಾಗುತ್ತಿರುವುದು ಇದಕ್ಕೆ ಕಾರಣವಾಗಿವೆ.

ಕೊರೊನಾ ಪಾಸಿಟಿವ್‌ ಪ್ರಕರಣಗಳು ಒಂದು ರೀತಿಯ ಸಮಸ್ಯೆಯುಂಟು ಮಾಡಿದರೆ ಒಮಿಕ್ರಾನ್‌ ಪ್ರಕರಣಗಳು ಮತ್ತೊಂದು ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಲಿವೆ. ಒಮಿಕ್ರಾನ್‌ ಸೋಂಕು ರೋಗನಿರೋಧಕ ಶಕ್ತಿ ಕಡಿಮೆ ಇರುವವರನ್ನು ಹೆಚ್ಚಾಗಿ ಕಾಡುವ ಸಾಧ್ಯತೆಗಳಿವೆ. ಕೊರೊನಾ ಲಸಿಕೆ ಪಡೆಯದವರನ್ನು ಈ ಸೋಂಕು ಅತಿಯಾಗಿ ಕಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇದು ಒಮಿಕ್ರಾನ್‌ ಅಲೆಯೇ?
ಈ ಮಧ್ಯೆ, ಪಾಸಿಟಿವ್‌ ಪ್ರಕರಣಗಳು ಏರುಗತಿಯಲ್ಲಿದ್ದು ಎಲ್ಲ ಪ್ರಕರಣಗಳು ಜಿನೋಮಿ ಸಿಕ್ವೆನ್ಸಿಂಗ್‌ ಒಳಪಡಿಸುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯೂ ಇದನ್ನು ಒಮಿಕ್ರಾನ್‌ ಅಲೆ ಎಂದು ಹೇಳುತ್ತಿಲ್ಲ. ಆದರೆ ಇತ್ತೀಚೆಗೆ ಹರಡುವಿಕೆಯ ವೇಗ ನೋಡಿದರೆ ಒಮಿಕ್ರಾನ್‌ ಅಲೆ ಎಂಬಂತೆ ಕಾಣಿಸುತ್ತಿದೆ.

ಒಮಿಕ್ರಾನ್‌ ಸೋಂಕು ಸೌಮ್ಯ ಸ್ವರೂಪವಾದರೂ ಹರಡುವಿಕೆ 7ಪಟ್ಟು ವೇಗವಿದೆ. ಇದರಿಂದ ಮುಂದಿನ ದಿನದಲ್ಲಿ ರಾಜ್ಯದಲ್ಲಿ ಏಕಕಾಲಕ್ಕೆ ಸುಮಾರು 50,000ರಿಂದ 60000 ಜನರಿಗೆ ಕೋವಿಡ್‌ ದೃಢವಾದರೆ ಅವರಲ್ಲಿ ನಿತ್ಯ ಶೇ.5ರಷ್ಟು ಮಂದಿಗೆ ಆಸ್ಪತ್ರೆಯ ಅಗತ್ಯ ಕಾಣಿಸಿಕೊಂಡರೆ ಆರೋಗ್ಯ ವ್ಯವಸ್ಥೆಗೆ ಕಠಿಣವಾಗಿ ಪರಿಣಮಿಸಲಿದೆ. ಸೌಮ್ಯ ಲಕ್ಷಣಗಳಿರುವ ಎಲ್ಲ ಸೋಂಕಿತರಿಗೆ ಐಸೋಲೇಶನ್‌ ಮಾಡುವುದು ಸಹ ಕಷ್ಟ ಸಾದ್ಯವಾಗಲಿದೆ ಎಂದು ಹೇಳಲಾಗಿದೆ.

Advertisement

ಆರ್ಥಿಕ ವ್ಯವಸ್ಥೆಗೆ ಹೊಡೆತ
ಒಮಿಕ್ರಾನ್‌ ಸೋಂಕು ನೇರವಾಗಿ ಆರ್ಥಿಕತೆಯ ಮೇಲೆ ಹೊಡೆತ ಬೀಳುವ ಸಾಧ್ಯತೆಗಳು ಹೆಚ್ಚಾಗಿ ಕಾಣುತ್ತಿದೆ. ಒಬ್ಬ ವೈದ್ಯ, ಕಾರ್ಮಿಕ, ಪೊಲೀಸ್‌ ಸೇರಿದಂತೆ ಇತರೆ ವರ್ಗದಲ್ಲಿ ಕೆಲಸ ಮಾಡುವ ಪ್ರದೇಶದಲ್ಲಿ ತಲಾ 10 ಮಂದಿಗೆ ಸೋಂಕು ದೃಢವಾದರೆ, ಅವರ ಸಂಪರ್ಕಕ್ಕೆ ಬಂದ ನೂರಾರು ಮಂದಿಯನ್ನು ಎರಡು ವಾರಗಳ ಕ್ವಾರಂಟೈನ್‌ ಮಾಡಬೇಕಾಗುತ್ತದೆ. ಇದರಿಂದ ವಿವಿಧ ಕ್ಷೇತ್ರದಲ್ಲಿ ಕೆಲಸಗಾರರ ಕೊರತೆ ಉಂಟಾಗಬಹುದು. ಇದು ಪರೋಕ್ಷವಾಗಿ ಆರ್ಥಿಕತೆ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ.

ಮುಕ್ತಿ ಯಾವಾಗ?
ಯಾವುದೇ ಒಂದು ವೈರಸ್‌ನ ಹರಡುವಿಕೆ ಅವಧಿಯನ್ನು ಇಷ್ಟೇ ಎಂದು ಹೇಳುವುದು ಕಷ್ಟ ಸಾಧ್ಯ. ಆದರೆ ದಕ್ಷಿಣ ಆಫ್ರಿಕಾ ಒಮಿಕ್ರಾನ್‌ ನೆವಂಬರ್‌ನಲ್ಲಿ ಪ್ರಾರಂಭಗೊಂಡು ಡಿಸೆಂಬರ್‌ ಅಂತ್ಯಕ್ಕೆ ಕ್ಷೀಣಗೊಳ್ಳುತ್ತಿದೆ. ಈ ಲೆಕ್ಕಾಚಾರದಲ್ಲಿ ಕರ್ನಾಟಕದಲ್ಲಿ 2022ರ ಫೆಬ್ರವರಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿ, ಎಪ್ರಿಲ್‌ನಲ್ಲಿ ಹಿಡಿತಕ್ಕೆ ಬರುವ ಸಾಧ್ಯಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರೋಗ್ಯ ವ್ಯವಸ್ಥೆ ಹೇಗಿದೆ?
ಕೊರೊನಾ ಒಂದನೇ ಹಾಗೂ ಎರಡನೇ ಸೃಷ್ಟಿದ ಆತಂಕದಿಂದಾಗಿ ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸೌಕರ್ಯ ಹಾಗೂ ವ್ಯವಸ್ಥೆಯನ್ನು ಪ್ರಸ್ತುತ ಮೂರುಪಟ್ಟು ಉನ್ನತೀಕರಣ ಮಾಡಿದೆ. ನಾನ್‌ ಕೋವಿಡ್‌ ಬೆಡ್‌ಗಳನ್ನು ಕೋವಿಡ್‌ ಬೆಡ್‌ಗಳಾಗಿ ಪರಿವರ್ತಿಸಲು ಅಗತ್ಯವಿರುವ ಸಿದ್ಧತೆ ಮಾಡಲಾಗುತ್ತದೆ. ಈಗಾಗಲೇ ಬೆಂಗಳೂರಿನ ಆರ್‌.ವಿ. ಆಸ್ಪತ್ರೆಯನ್ನು ಸಂಪುರ್ಣವಾಗಿ ಕೋವಿಡ್‌ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.

ಒಮಿಕ್ರಾನ್‌ ಲಕ್ಷಣಗಳು
-ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
-ಒಂದು ಅಥವಾ ಎರಡು ದಿನಗಳವರೆಗೆ ಸುಸ್ತು.
– ಸೌಮ್ಯವಾದ ಜ್ವರ, ಗಂಟಲು ನೋವು, ತಲೆನೋವು, ಉಸಿರಾಟದ ತೊಂದರೆ, ಎದೆನೋವು

ಮುನ್ನೆಚ್ಚರಿಕೆ ಕ್ರಮಗಳೇನು?
-ಕಡ್ಡಾಯವಾಗಿ ಎರಡು ಡೋಸ್‌ ಲಸಿಕೆ ಪಡೆದಿರಬೇಕು.
– ಕಡ್ಡಾಯವಾಗಿ ಕೋವಿಡ್‌ ನಿಯಮಾವಳಿ ಆಳವಡಿಕೆ
– ಲಕ್ಷಣಗಳು ಪತ್ತೆಯಾದರೆ ಪರೀಕ್ಷೆಗೆ ಒಳಗಾಗಿ
-ಸಭೆ ಸಮಾರಂಭದಿಂದ ದೂರವಿರಿ

ಕೊರೊನಾ ರೂಪಾಂತರಿ ವೈರಸ್‌ ಒಮಿಕ್ರಾನ್‌ ಸೋಂಕು ಹರಡುವಿಕೆ ಪ್ರಮಾಣ ಅಧಿಕವಾಗಿದೆ. ಇದುವೆರೆಗಿನ ವರದಿ ಅನ್ವಯ ಸೋಂಕಿಗೆ ತುತ್ತಾದ ಮಕ್ಕಳಲ್ಲಿ ಸೌಮ್ಯ ಸ್ವರೂಪದ ಲಕ್ಷಣಗಳಿವೆ. ಇದರಿಂದಾಗಿ ಭಯಪಟ್ಟುಕೊಳ್ಳವ ಅಗತ್ಯವಿಲ್ಲ. ಆದರೆ ಪೋಷಕರು ಮಕ್ಕಳ ಆರೋಗ್ಯ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಕೊರೊನಾ ಲಕ್ಷಣ ಪತ್ತೆಯಾದ ಕೂಡಲೇ ಪರೀಕ್ಷೆಗೆ ಒಳಪಡಿಸುವುದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸ ಬಹುದಾಗಿದೆ.
– ಡಾ. ಶ್ರೀಕಂಠ ಜೆ.ಟಿ.
ಮಕ್ಕಳ ತಜ್ಞರು,
ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು.

ಕೊರೊನಾ ಒಂದನೇ ಹಾಗೂ ಡೆಲ್ಟಾ ಅಲೆಯಲ್ಲಿ ಸೋಂಕಿತರಲ್ಲಿ ಶ್ವಾಸಕೋಶಕ್ಕೆ ಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡು ಬಂದಿತ್ತು. ಆ ಸಮಸ್ಯೆ ಒಮಿಕ್ರಾನ್‌ನಲ್ಲಿ ಕಾಣ ಸಿಗುವ ಸಾಧ್ಯತೆ ಕಡಿಮೆ ಇದೆ. ಇದರಿಂದಾಗಿ ಸೋಂಕಿತ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಬಹಳಷ್ಟು ಕಡಿಮೆಯಿದೆ.
– ಡಾ. ಅರವಿಂದ ಎ.ಎಸ್‌,
ಆಸ್ಟರ್‌ ಆರ್‌.ವಿ. ಆಸ್ಪತ್ರೆ

ಒಮಿಕ್ರಾನ್‌ ಗರ್ಭಿಣಿ ಮಹಿಳೆಯಲ್ಲಿ ತೀವ್ರವಾದ ಆರೋಗ್ಯ ಸಮಸ್ಯೆಗಳು ಉಂಟು ಮಾಡುತ್ತದೆ ಎನ್ನುವುದು ಸಾಬೀತಾಗಿಲ್ಲ. ಆದರೆ ಗರ್ಭಿಣಿ ಮಹಿಳೆಯಲ್ಲಿ ರೋಗನಿರೋಧ ಶಕ್ತಿ ಕಡಿಮೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಕೋವಿಡ್‌ ಲಕ್ಷಣಗಳು ಕಂಡು ಬಂದ ಕೂಡಲೇ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು.
-ಡಾ. ಉಷಾ
ಪ್ರಸೂತಿ ತಜ್ಞೆ

ಫೆಬ್ರವರಿ ಅಂತ್ಯಕ್ಕೆ ಕೊರೊನಾ ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆಯಾಗಲಿದೆ. ಸೋಂಕಿನ ವೇಗ ಅಧಿಕವಾಗಿದ್ದು, ಆರೋಗ್ಯ ವ್ಯವಸ್ಥೆ ಸೇರಿದಂತೆ ಇತರೆ ವ್ಯವಸ್ಥೆ ಮೇಲೆ ಭಾರೀ ಹೊಡೆತ ಬೀಳಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೋವಿಡ್‌ ಮಾರ್ಗಸೂಚಿಯನ್ನು ಪಾಲನೆ ಮಾಡುವುದರ ಜತೆಗೆ ಲಸಿಕೆಯನ್ನು ಪಡೆದುಕೊಳ್ಳಿ.
-ಡಾ. ಸುದರ್ಶನ ಬಲ್ಲಾಳ್‌
ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯ.

ಕೊರೊನಾ ರೂಪಾಂತರಿ ಮೂರನೇ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಲಿದೆ. ವಾಕ್ಸಿನ್‌ ಪಡೆದಕೊಂಡರು ಸೋಂಕು ಕಾಡಲಿದೆ ಎನ್ನುವ ವಿಷಯ ಜನರಲ್ಲಿ ಆತಂಕ ಹಾಗೂ ಒತ್ತಡವನ್ನು ಹೆಚ್ಚಿಸಲಿದೆ.
-ಡಾ.ಶ್ರದ್ಧಾ ಎಸ್‌.
ಮನೋರೋಗ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next