Advertisement

ತರಗತಿಗೆ ಹಳೆ ಕಟ್ಟಡ, ಗುಜರಿ ದಾಸ್ತಾನಿಗೆ ಹೊಸ ಕೊಠಡಿ!

02:10 AM Jun 26, 2018 | Team Udayavani |

ಕರಾಯ: ಹೊಸ ಕಟ್ಟಡ ವಿದ್ದರೂ ಈ ಶಾಲೆಯಲ್ಲಿ ಅದನ್ನು ಬಳಸದೆ ಬಾಗಿಲು ಹಾಕಿದ್ದು, ಅವ್ಯವಸ್ಥೆ ಸೃಷ್ಟಿಯಾಗಿದೆ. ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಕರಾಯ ಸರಕಾರಿ ಪ್ರೌಢಶಾಲೆಯ ದುಸ್ಥಿತಿ ಇದು. ಎರಡು ವರ್ಷಗಳ ಹಿಂದೆ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾಗಿದ್ದು, ಅದನ್ನು ಬಳಸಬೇಕಾದ ಶಿಕ್ಷಕ ವೃಂದ, ಅದಕ್ಕೆ ಬೀಗ ಹಾಕಿಟ್ಟಿದೆ. ಹಳೆಯ ಕಟ್ಟಡದಲ್ಲೇ ಪಾಠ- ಪ್ರವಚನ ನೀಡಲಾಗುತ್ತಿದ್ದು, ನೂತನ ಕಟ್ಟಡವನ್ನು ನಿರುಪಯುಕ್ತ ಸ್ಥಿತಿಯಲ್ಲಿ ಇರಿಸಲಾಗಿದೆ.

Advertisement

ಕರಾಯ ಸರಕಾರಿ ಪ್ರೌಢಶಾಲೆಗೆ 2013-14ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ 43 ಲಕ್ಷ ರೂ. ಮಂಜೂರು ಆಗಿದ್ದು, 4 ಕೊಠಡಿಗಳನ್ನು ಒಳಗೊಂಡಿರುವ ಕಟ್ಟಡವನ್ನು ನಿರ್ಮಿಸಲಾಗಿದೆ. 2016ರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಕಟ್ಟಡವನ್ನು ಬಳಕೆಗಾಗಿ ಶಾಲೆಗೆ ಹಸ್ತಾಂತರಿಸಲಾಗಿದೆ. ಅದಾಗಿ ಎರಡು ವರ್ಷಗಳೇ ಕಳೆದರೂ ತರಗತಿ ನಡೆಸಲು ಅದನ್ನು ಬಳಸಿಕೊಂಡಿಲ್ಲ. ಹಳೆಯ ಕಟ್ಟಡದಲ್ಲೇ ಮಕ್ಕಳನ್ನು ಕೂರಿಸಿ ತರಗತಿ ನಡೆಸುತ್ತಿದ್ದು, ಹೊಸ ಕಟ್ಟಡವೂ ಶಿಥಿಲಗೊಳ್ಳುತ್ತಿದೆ ಎಂದು ಮಕ್ಕಳ ಹೆತ್ತವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ನಾಲ್ಕು ಕೊಠಡಿ

ಶಾಲಾ ಕಟ್ಟಡದಲ್ಲಿ ಒಟ್ಟು ನಾಲ್ಕು ಕೊಠಡಿಗಳಿವೆ. ಇವುಗಳ ಪೈಕಿ ಒಂದರಲ್ಲಿ ಶಾಲೆಯ ಹಳೆಯ ಗುಜರಿ ಸಾಮಗ್ರಿಗಳನ್ನು ದಾಸ್ತಾನು ಇಡಲಾಗಿದೆ. ಇನ್ನೆರಡು ಕೊಠಡಿಗಳಲ್ಲಿ ಶಾಲೆಯ ಹಳೆಯ ಬೆಂಚು- ಡೆಸ್ಕ್ ಗಳನ್ನು ಇಡಲಾಗಿದೆ. ಇನ್ನೊಂದು ಕೊಠಡಿ ಸಭಾಂಗಣ ರೀತಿಯಲ್ಲಿ ಇದ್ದು, ಇದರಲ್ಲಿ ಒಂದು ಸಭೆ ನಡೆಸಿರುವ ಕುರುಹು ಕಂಡು ಬರುತ್ತಿದೆ. ಮತ್ತೂಂದು ಕೊಠಡಿ ಖಾಲಿಯಾಗಿಯೇ ಇದೆ. ಎಲ್ಲ ಕೊಠಡಿಗಳ ಬಾಗಿಲು ಮುಚ್ಚಿ, ಬೀಗ ಹಾಕಲಾಗಿದೆ. ಬಹಳಷ್ಟು ಶಾಲೆಗಳಲ್ಲಿ ಇಂತಹ ಸೌಲಭ್ಯ ಇರುವುದಿಲ್ಲ. ಹೊಸ ಕಟ್ಟಡವಿದ್ದರೂ ಬಳಸಿಕೊಳ್ಳಲು ಇಚ್ಛಾಶಕ್ತಿ ಇಲ್ಲದಂತಾಗಿದೆ. ಹೊಸ ಕಟ್ಟಡವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳ ಹೆತ್ತವರು, ಗ್ರಾಮಸ್ಥರು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.


ತರಗತಿ ನಡೆಸುತ್ತಿದ್ದೇವೆ

ಶಾಲಾ ಮುಖ್ಯ ಶಿಕ್ಷಕ ಶಿವಬಾಳು ಪ್ರತಿಕ್ರಿಯಿಸಿ, ತರಗತಿ ನಡೆಸುತ್ತೇವೆ. ಒಂದರಲ್ಲಿ ಲೈಬ್ರೆರಿ, ಇನ್ನೊಂದರಲ್ಲಿ ವಿಜ್ಞಾನ ಪರಿಕರ ಇಟ್ಟಿದ್ದೇವೆ. ಶೀಘ್ರದಲ್ಲೇ ಹಳೆ ಕಟ್ಟಡದಲ್ಲಿರುವ ತರಗತಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಕಳಪೆ ಕಾಮಗಾರಿ
ಕಟ್ಟಡ ನಿರ್ಮಿಸಿದ ಗುತ್ತಿಗೆದಾರರು ಕಳಪೆ ಮಟ್ಟದ ಕಾಮಗಾರಿ ನಿರ್ವಹಿಸದ ಹಿನ್ನೆಲೆಯಲ್ಲಿ ಈ ಹಿಂದಿನ ಶಾಸಕರು ಉದ್ಘಾಟನೆ ಮಾಡಲು ಒಪ್ಪಿರಲಿಲ್ಲ.
– ಜಯವಿಕ್ರಮ್‌ ಕಲಾಪು, ಅಧ್ಯಕ್ಷರು, ತಣ್ಣೀರುಪಂಥ ಗ್ರಾ.ಪಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next