Advertisement

ನಗರದಲ್ಲಿಯೂ ಓಲಾ ಟ್ಯಾಕ್ಸಿ ಸೇವೆ ರದ್ದು !

12:32 PM Mar 24, 2019 | Team Udayavani |

ಮಹಾನಗರ : ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳನ್ನು ಉಲ್ಲಂಘಿಸಿ ಬೈಕ್‌ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪೆನಿಗೆ ನೀಡಿದ್ದ ಪರವಾನಿಗೆಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸರಕಾರವು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಂಸ್ಥೆಯ ಟ್ಯಾಕ್ಸಿ ಸೇವೆ ಮಾ. 25ರಿಂದ ಆರು ತಿಂಗಳುಗಳ ಕಾಲ ರದ್ದುಗೊಳಿಸಲು ದಕ್ಷಿಣ ಕನ್ನಡ ಜಿಲ್ಲೆಯ ಸಾರಿಗೆ ಇಲಾಖೆ ಸೂಚಿಸಿದೆ.

Advertisement

ಈಗ ನಗರ ವ್ಯಾಪ್ತಿಯನ್ನು ಕೇಂದ್ರೀಕರಿಸಿ ಸುಮಾರು 250ಕ್ಕೂ ಅಧಿಕ ಓಲಾ ಟ್ಯಾಕ್ಸಿ ಸೇವೆ ಕಾರ್ಯಾಚರಣೆ ನಡೆಸುತ್ತಿದೆ. ಸರಕಾರದ ಆದೇಶದ ಪ್ರಕಾರ ಮಾ. 25ರಿಂದ 2021ರ ಜೂ. 19ರ ವರೆಗೆ ಚಾಲ್ತಿಯಲ್ಲಿರುವ ಪರವಾನಿಗೆಯನ್ನು ಸಾರಿಗೆ ಪ್ರಾಧಿಕಾರಕ್ಕೆ ಒಪ್ಪಿಸಬೇಕಾಗಿದೆ. ಜತೆಗೆ ಟ್ಯಾಕ್ಸಿ ಸೇವೆಯನ್ನು ಮಾ.25ರಿಂದ ನಿಲ್ಲಿಸಬೇಕು. ಮುಂದಿನ ಆರು ತಿಂಗಳುಗಳ ಕಾಲ ಪರವಾನಿಗೆಯನ್ನು ಅಮಾನತುಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ಅಮಾನತು ಆದೇಶವನ್ನು ಉಲ್ಲಂಘಿಸಿ ಸೇವೆ ಒದಗಿಸುವ ಓಲಾ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಆದೇಶ ಮರುಪರಿಶೀಲಿಸಿ
ದ.ಕ. ಜಿಲ್ಲಾ ಆನ್‌ಲೈನ್‌ ಟ್ಯಾಕ್ಸಿ ಮತ್ತು ಡ್ರೈವರ್ ಅಸೋಸಿಯೇಶನ್‌ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ‘ಸುದಿನ’ ಜತೆಗೆ ಮಾತನಾಡಿ, ‘ಓಲಾ ಸಂಸ್ಥೆಯ ಪರವಾನಿಗೆ 6 ತಿಂಗಳು ರದ್ದುಗೊಳಿಸಿ ಸರಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸುಮಾರು 250ಕ್ಕೂ ಅಧಿಕ ವಾಹನಗಳ ಚಾಲಕರು ಅತಂತ್ರರಾಗಿದ್ದಾರೆ. ಸರಕಾರದ ಆದೇಶದಿಂದ ಚಾಲಕರು ಆತಂಕ ಎದುರಿಸುವಂತಾಗಿದೆ. ಕಂಪೆನಿಯವರ ತಪ್ಪಿನಿಂದಾಗಿ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಡ್ರೈವರ್‌ ಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಸರಕಾರ ಮಾಡಿಕೊಡಬೇಕು. ಸರಕಾರದ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಮತ್ತು ಓಲಾ ಕಾರುಗಳ ಮೇಲೆ ಇತರ ಖಾಸಗಿ ಕಾರುಗಳ ಚಾಲಕರು, ಮಾಲಕರು ದಬ್ಟಾಳಿಕೆ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮಾ. 25ರಿಂದ ತಪಾಸಣೆ
ಮಾ. 25ರಿಂದ ಓಲಾ ಸಂಸ್ಥೆಯ ಪರವಾನಿಗೆ ರದ್ದುಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ. ಹೀಗಾಗಿ ಮಂಗಳೂರು ಅಂ.ವಿಮಾನ ನಿಲ್ದಾಣ, ರೈಲು ನಿಲ್ದಾಣದಲ್ಲಿ ಓಲಾ ಸೇವೆ ಮುಂದುವರಿಸದಂತೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಮಾ.25ರಿಂದ ಈ ಬಗ್ಗೆ ಇಲಾಖೆಯಿಂದ ತಪಾಸಣೆ ನಡೆಸಲಾಗುವುದು.
– ಜಿ.ಎಸ್‌. ಹೆಗಡೆ, ಪ್ರಾದೇಶಿಕ
ಸಾರಿಗೆ ಅಧಿಕಾರಿ ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next