Advertisement

ನೆರೆಪೀಡಿತ ಕೊಡಗಿಗೆ “ಅಧಿಕೃತ ಭೇಟಿ’ಗಳ ಪ್ರವಾಹ 

06:00 AM Aug 29, 2018 | |

ಕೇರಳಕ್ಕೆ ನೀಡಬೇಕಾದ ಪರಿಹಾರ ನೆರವಿನ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಬೇಕಾದುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಇದುವರೆಗೆ ಕೇಂದ್ರದಿಂದ 600 ಕೋಟಿ ರೂ.ಗಳ ತಾತ್ಕಾಲಿಕ ನೆರವನ್ನಷ್ಟೇ ಘೋಷಿಸಲಾಗಿದೆ. ಕೊಡಗಿನ ಬಗೆಗೂ ಕೇಂದ್ರದ ಹೊಣೆ ಕಡಿಮೆಯದೇನಲ್ಲ. ನಿರ್ಮಲಾ ಸೀತಾರಾಮನ್‌ ಹಾಗೂ ಸಾ.ರಾ. ಮಹೇಶ್‌ ನಡುವಿನ “ಜಗಳ’ದ ನೆರಳು ಕೇಂದ್ರದ ನಡೆಯ ಮೇಲೆ ಬೀಳಕೂಡದು.

Advertisement

ಮಡಿಕೇರಿಯಲ್ಲಿ ಮೊನ್ನೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್‌ ನಡುವೆ ನಡೆದ ಬಿಸಿಬಿಸಿ ವಾಗ್ವಾದ ಪ್ರಕರಣ, ಕೊಡಗನ್ನು ಪೀಡಿಸಿರುವ ಭೂ ಕುಸಿತ ಹಾಗೂ ಭೀಕರ ನೆರೆ ಅವಾಂತರದ ಘಟನೆಯ ಮೇಲಿನ ಲಕ್ಷ್ಯವನ್ನು ಕೆಲ ದಿನಗಳ ಕಾಲ ಬೇರೆಡೆಗೆ ಸೆಳೆದಿರುವುದು ನಿಜ. 

ಸಾ.ರಾ. ಮಹೇಶ್‌ ಅವರ ದೌರ್ಬಲ್ಯಗಳು ಏನೇ ಇರಬಹುದು. ಆದರೆ ನಮ್ಮ ರಕ್ಷಣಾ ಸಚಿವೆ ಸ್ವಲ್ಪ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು ಎಂಬ ಮಾತನ್ನಿಲ್ಲಿ ಹೇಳಲೇಬೇಕಾಗುತ್ತದೆ. ಇಷ್ಟಕ್ಕೂ ಈ ಘರ್ಷಣೆಗೆ ಮೂಲಕಾರಣ, ನಿವೃತ್ತ ಸೇನಾ ಅಧಿಕಾರಿಗಳ ಸಭೆಯನ್ನು ಮುಗಿಸಿಯೇ ಇನ್ನೊಂದು ಸಭೆಗೆ ತೆರಳುವಂತೆ ಸಚಿವ ಮಹೇಶ್‌ ಅವರು ಕೇಂದ್ರ ಸಚಿವೆಯನ್ನು ವಿನಂತಿಸಿದ್ದೇ ಇರಬೇಕೆಂದು ಕಾಣುತ್ತದೆ. ಅವರು ಈ ವಿನಂತಿಯನ್ನು ಸೌಜನ್ಯದಿಂದಲೇ ನಿರಾಕರಿಸಿ, ಮುಂದಿನ ಸಭೆಗೆ ಇನ್ನೊಂದು ಸ್ವಲ್ಪ ಹೊತ್ತು ಕಾಯುವಂತೆ ಸೌಜನ್ಯದಿಂದಲೇ ಸೂಚಿಸಬಹುದಿತ್ತು. ನಿವೃತ್ತ ಸೈನಿಕರನ್ನು ಅವರು “ಪರಿವಾರದವರು’ ಎಂದು ಉಲ್ಲೇಖೀಸಿದ್ದನ್ನು ಸಚಿವ ಮಹೇಶ್‌ ತಪ್ಪಾಗಿ ಅರ್ಥೈಸಿಕೊಂಡರೆಂದು ಕಾಣುತ್ತದೆ. ಮಹೇಶ್‌ ಸ್ವತಃ ಜನತಾ ಪರಿವಾರದವರಾಗಿದ್ದರೂ “ಸೆಕ್ಯುಲರ್‌’ ಮಂತ್ರಿಯಾದ ಅವರು ಸಚಿವೆ “ಪರಿವಾರ’ ಎಂಬ ಪದವನ್ನು ಬಳಸಿದ್ದನ್ನು ಕಂಡು, ಅವರು ಆರೆಸ್ಸೆಸ್‌ ಬಗ್ಗೆ ಮಾತನಾಡುತ್ತಿದ್ದಾರೆಂದು ಭಾವಿಸಿರಬೇಕು. 

ಕೊಡಗಿನಲ್ಲಿ ನಿರ್ಮಲಾ ಸೀತಾರಾಮನ್‌ ತಾವಿದ್ದ ಕೆಲ ತಾಸುಗಳ ಅವಧಿಯಲ್ಲಿ ತೋರಿದ ನಡವಳಿಕೆ ಅಚ್ಚರಿ ಹುಟ್ಟಿಸುವಂಥದ್ದೇನೂ ಅಲ್ಲ. ಸೀತಾರಾಮನ್‌ ಮುಖ್ಯ ಸಮಸ್ಯೆಯೆಂದರೆ ಅವರು ಹಾಸ್ಯ ಪ್ರಜ್ಞೆಯಿಲ್ಲದ ಅತಿ ಗಂಭೀರ ವ್ಯಕ್ತಿ; ಅದರಲ್ಲೂ ವಿಶೇಷವಾಗಿ ಯಾರಾದರೂ ಟೀಕಿಸಿದರೆ ಸಿಕ್ಕಾಪಟ್ಟೆ ಕೆರಳುವವರು. ಬಿಜೆಪಿಯ ವಕ್ತಾರರಲ್ಲೊಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಪ್ರಶ್ನೆಗಳಿಗೆ ಹಾಗೂ ಟೀಕೆಗಳಿಗೆ ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದರೆಂಬುದನ್ನು ಟಿ.ವಿ. ವೀಕ್ಷಕರು ಖುದ್ದಾಗಿ ಬಲ್ಲರು. ಟಿ.ವಿ. ಚರ್ಚೆ ಸಂವಾದಗಳಲ್ಲಿ ಸಮರ ಸನ್ನದ್ಧರಂತೆ ತೋರಿಬರುತ್ತಿದ್ದರು; ಇದೀಗ ರಕ್ಷಣಾ ಸಚಿವರಾಗಿಯೂ ಹಾಗೇ ಮುಂದುವರಿದಿದ್ದಾರೆ. 

ಎಲ್ಲಕ್ಕಿಂತ ಮೊದಲಿಗೆ ಸಚಿವ ಮಹೇಶ್‌ ಹಾಗೂ ಎಳೆ ವಯಸ್ಸಿನ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಇವರಿಬ್ಬರೂ ಕೊಡಗಿನಲ್ಲಿ ಎಷ್ಟೋ ದಿನಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರೆಂಬುದನ್ನು, ಇಂಥ ಬಿಡುವಿರದ ದುಡಿಮೆಯಿಂದಾಗಿ ಇಬ್ಬರೂ ತೀರಾ ಬಸವಳಿದಿದ್ದರೆಂಬುದನ್ನು ಸಚಿವೆ ಅರ್ಥ ಮಾಡಿಕೊಳ್ಳಬೇಕಿತ್ತು. ಇಬ್ಬರೂ ಕೊಡಗಿನ ನೆರೆಯಿಂದ ಕೊಚ್ಚಿ ಹೋಗಿದ್ದ ಕೆಸರು ಮಣ್ಣನ್ನು ತುಳಿತುಳಿದು ದಣಿದಿದ್ದವರು; ಸಚಿವೆಯಾದರೋ ಒಬ್ಬ ವೀಕ್ಷಕಿಯಾಗಿ ಬಂದವರಷ್ಟೆ; ಕೇವಲ ನೋಡಿ ಹೋಗುವುದಕ್ಕೆ ಬಂದವರು; ಒಂದೆಡೆಯಿಂದ ಇನ್ನೊಂದೆಡೆಗೆ, ಒಂದು ಸಭೆಯಿಂದ ಇನ್ನೊಂದಕ್ಕೆ ಧಾವಿಸುತ್ತಿದ್ದವರು. ಆದರೂ ಒಂದು ವಿಷಯದಲ್ಲಿ ಅಭಿನಂದಿಸಬೇಕಿದೆ. ಕೇವಲ ವೈಮಾನಿಕ ಸರ್ವೇಕ್ಷಣ ನಡೆಸಿ, ನೋಡಿದ ಶಾಸ್ತ್ರ ಮುಗಿಸಿ ದಿಲ್ಲಿಗೆ ಹಾರಿ ಹೋಗಲಿಲ್ಲ; ಬದಲಿಗೆ ನಷ್ಟ ಅಂದಾಜಿಸಲು ಪ್ರವಾಹ ಪೀಡಿತ ಜಾಗಗಳಲ್ಲಿ ಖುದ್ದಾಗಿ ಓಡಾಡಿದರು! ನಿರ್ಮಲಾ ಪ್ರಧಾನಮಂತ್ರಿಗಳ ಪ್ರತಿನಿಧಿಯಾಗಿ ಬಂದವರು; ಕೊಡಗಿನ ಜಲಗಂಡದ ಪ್ರತ್ಯಕ್ಷ ವೀಕ್ಷಣೆಗಾಗಿ ಅಲ್ಲಿನ ಜಾಗಗಳಿಗೆ ಅವರು ಖುದ್ದಾಗಿ ಭೇಟಿ ನೀಡಬೇಕಿತ್ತು. ಇಲ್ಲವೇ ಕನಿಷ್ಠ ಪಕ್ಷ ವೈಮಾನಿಕ ವೀಕ್ಷಣೆಯನ್ನಾದರೂ ನಡೆಸಬೇಕಿತ್ತು. 

Advertisement

ರಕ್ಷಣಾ ಸಚಿವೆ ಹೀಗೆ ಮಳೆ – ನೆರೆ ಪೀಡಿತ ಕೊಡಗಿಗೆ “ನಿಮಿಷ – ನಿಮಿಷಗಳ ಕಾರ್ಯಸೂಚಿ (ಮಿನಿಟ್‌ ಟು ಮಿನಿಟ್‌ ಇಟಿನರಿ)’ ಹಿಡಿದು ಬಂದದ್ದೇಕೆ ಎಂದೂ ಕೆಲವರಿಗೆ ಅಚ್ಚರಿಯಾಗಬಹುದು. ಬಹುಶಃ ತನ್ನ ಬಿಡುವಿರದ ಕಾರ್ಯಪಟ್ಟಿಯಲ್ಲಿ ಅವರು ಕೊಡಗನ್ನು ಪೊಲೀಸ್‌ ಸಿಬಂದಿ ಹಾಗೂ ಇತರ ಸರಕಾರಿ ಕರ್ತವ್ಯಧಿಕಾರಿಗಳು ಇಂಥ ಅತಿ ಗಣ್ಯವ್ಯಕ್ತಿಗಳ ಭೇಟಿಯನ್ನು ಒಂದು “ಪೀಡೆ’ಯೆಂದೇ ಭಾವಿಸುವುದು ಸಹಜ. ಇಷ್ಟಕ್ಕೂ ನಿರ್ಮಲಾ ಸೀತಾರಾಮನ್‌ ಅವರು ಕೊಡಗಿನ ನತದೃಷ್ಟ ಸಂತ್ರಸ್ತರಿಗೆ ಕೊಡ ಮಾಡಿದ ಪರಿಹಾರ ಮೊತ್ತವನ್ನೂ ಗಮನಿಸಬೇಕು. ಅವರು ಕೊಡ ಹೊರಟ ಮೊತ್ತ 7 ಕೋಟಿ ರೂ.ಗಳು. ಕೊಡಗಿಗೆ 1,000 ಕೋಟಿ ರೂ. ಸಹಾಯಧನದ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸರಿಯಾಗಿಯೇ ಅಂದಾಜಿಸಿದ್ದಾರೆ. ಕೇಂದ್ರ ಅಥವಾ ರಾಜ್ಯ ಸರಕಾರದ ಮಟ್ಟದಲ್ಲಿ ಹಣಕ್ಕೇನೂ ಕೊರತೆಯಿಲ್ಲ. ಕರ್ನಾಟಕದ ಸರಕಾರ ಅಧಿಕಾರಾರೂಢ ಪಕ್ಷ ಯಾವುದೇ ಆಗಿರಲಿ, ಬೆಂಗಳೂರಿನ ಅಭಿವೃದ್ಧಿಗಾಗಿ ಕೋಟಿಗಟ್ಟಲೆ ಹಣವನ್ನು ಚೆಲ್ಲಿದೆ ಎಂಬುದನ್ನು ಅಗತ್ಯವಾಗಿ ಗಮನಿಸಬೇಕಾಗಿದೆ.

ರಾಜ್ಯ ಸಚಿವರುಗಳು ದಿಲ್ಲಿಯವರ ಅಡಿಯಾಳುಗಳಲ್ಲ
ಕೇಂದ್ರದ ಮಂತ್ರಿಯೊಬ್ಬರು ಸಾರ್ವಜನಿಕವಾಗಿ ಹೀಗೆ ರಾಜ್ಯವೊಂದರ ಸಚಿವರೊಂದಿಗೆ ಜಗಳ ತೆಗೆದಿರುವುದನ್ನು ನಾನು ಇದುವರೆಗೂ ಕಂಡಿಲ್ಲ. ಕೇಂದ್ರದ ಮಂತ್ರಿಯೊಬ್ಬರು ರಾಜ್ಯದ ಮಂತ್ರಿಗಳಿಗಿಂತ ಯಾವ ದೃಷ್ಟಿಯಲ್ಲೂ ಮೇಲೆನ್ನುವಂತಿಲ್ಲ. ಆರಂಭದಿಂದಲೂ ಕರ್ನಾಟಕ ದಿಲ್ಲಿಯ ಸಚಿವರುಗಳಿಗಿಂತಲೂ ಹೆಚ್ಚು ಉತ್ತಮರಾದ ಹಲವಾರು ಮಂತ್ರಿಗಳನ್ನು ಹಾಗೂ ಮುಖ್ಯಮಂತ್ರಿಗಳನ್ನು ಕೊಟ್ಟಿದೆ. ಕೆಲ ವೈಯಕ್ತಿಕ ಕಾರಣಗಳಿಗಾಗಿ ಅವರು ಪ್ರಾದೇಶಿಕ ರಾಜಕಾರಣಿಗಳಾಗಿ ಉಳಿದುಕೊಂಡಿರಬಹುದು. ಮೈಸೂರು ಜಿಲ್ಲೆಯ ಕೃಷ್ಣ ರಾಜ ನಗರ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ ಮೂಲಕ ಪ್ರಧಾನ ಸಭೆಗೆ ಆಯ್ಕೆಯಾಗಿರುವ ಸಚಿವ ಸಾ.ರಾ. ಮಹೇಶ್‌ ಅವರೊಡನೆ ಕೇಂದ್ರ ಸಚಿವೆ ಗೌರವಯುತವಾಗಿ ನಡೆದುಕೊಳ್ಳಬೇಕಿತ್ತು; ಅವರೊಂದಿಗೆ ಜಗಳ ತೆಗೆಯಬಾರದಿತ್ತು. ಇದೇ ರೀತಿ ಐಎಎಸ್‌ ಅಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರೊಂದಿಗೂ ಅಷ್ಟೇ. ಒಂದು ರಾಜ್ಯದ ಮಂತ್ರಿಯೆಂದರೆ ಆತ/ಆಕೆ ಕೇಂದ್ರ ಮಂತ್ರಿಯ ಅಡಿಯಾಳಲ್ಲ. ಪ್ರಧಾನಮಂತ್ರಿಗಳ ಭೇಟಿಯೇ ಇರಲಿ – ಅಥವಾ ಇತರ ಯಾವ ಮಂತ್ರಿಯ ಭೇಟಿಯೇ ಇರಲಿ -ಶಿಷ್ಟಾಚಾರ ಪಾಲನೆಯ ವಿಷಯದಲ್ಲಿ ರಾಜ್ಯ ಹಾಗೂ ಜಿಲ್ಲಾ ಅಧಿಕಾರಿಗಳು ತಮ್ಮ ಕರ್ತವ್ಯವೇನೆಂಬುದನ್ನು ಚೆನ್ನಾಗಿ ಅರಿತವರೇ ಆಗಿದ್ದಾರೆ.

ಕೇರಳ ಪ್ರವಾಹ ಹಾಗೂ ಚೀನ
ಕೇರಳದ ಸಂತ್ರಸ್ತರ ಕಷ್ಟದಲ್ಲಿ ತಾವಿದ್ದೇವೆಂದು ಘೋಷಿಸಿರುವ ಇತರ ರಾಷ್ಟ್ರಗಳ ಸರಕಾರಗಳೂ ದೇಣಿಗೆ ನೀಡಲು ಮುಂದಾಗಿವೆ. ಕತಾರ್‌ ಸರಕಾರ ಕೂಡ 35 ಕೋಟಿ ದೇಣಿಗೆಯನ್ನು ಘೋಷಿಸಿದೆ. ಮಾಲ್ದೀವ್ಸ್‌ನಂಥ ಪುಟಾಣಿ ರಾಷ್ಟ್ರ ಕೂಡ ಸಹಾಯ ಮಾಡುವುದಾಗಿ ಹೇಳಿದೆ. ಈ ರಾಷ್ಟ್ರದೊಂದಿಗೆ ನಮ್ಮ ಸಂಬಂಧ ಅಷ್ಟೇನೂ ಚೆನ್ನಾಗಿರಲಿಲ್ಲ. ಇಲ್ಲೊಂದು ಪ್ರಶ್ನೆ ಮೂಡುತ್ತದೆ. ಮಾರ್ಕ್ಸಿಸ್ಟ್‌ ನೇತೃತ್ವದ (ಚೀನಾಪರ ಎಂದು ಓದಿಕೊಳ್ಳಿ) ಸರಕಾರ ಕೇರಳದಲ್ಲಿದೆ, ಹಾಗಿದ್ದೂ ಚೀನಾ ಏಕೆ ನೆರವಿನ ಘೋಷಣೆಯನ್ನು ಮಾಡಿಲ್ಲ? ಬಹುಶಃ ಚೀನ ಈಗ ಬಂಡವಾಳಶಾಹಿ ರಾಷ್ಟ್ರವಾಗಿ ಬದಲಾಗಿದೆ. ಹೀಗಾಗಿ ವ್ಯಾಪಾರಿ ಬುದ್ಧಿಯಿಂದ ನಡೆದುಕೊಳ್ಳುತ್ತಿದೆ. ಮಾರ್ಕ್ಸಿಸಂ ಆಗಲಿ, ಮಾವೋಯಿಸಂ ಆಗಲಿ ಅದಕ್ಕೆ ಮರೆತೇ ಹೋಗಿದೆ. ಭಾರತದಲ್ಲಿರುವ ಕಮ್ಯುನಿಸ್ಟ್‌ ಕಾಮ್ರೇಡರಿಗೆ ಚೀನಾ ವಿಚ್ಛೇದನ ನೀಡಿಯಾಗಿದೆ. ಆದರೆ ಇದೇ ವೇಳೆ ಭೂತಪೂರ್ವ ಸೋವಿಯತ್‌ ಒಕ್ಕೂಟ ನಮ್ಮಲ್ಲಿನ ಕಮ್ಯುನಿಸ್ಟರ ಲಾಲನೆಪಾಲನೆಯನ್ನು ಚೆನ್ನಾಗಿಯೇ ನಿರ್ವಹಿಸಿದೆ.

ಇನ್ನು ಯುಎಇ ತಾನು ಕೇರಳಕ್ಕೆ ನೆರೆ ಪರಿಹಾರ ದೇಣಿಗೆಯ ರೂಪದಲ್ಲಿ 700 ಕೋಟಿ ಕೊಡುವುದಾಗಿ ಬಂದಿರುವ ವರದಿಯನ್ನು ತಳ್ಳಿ ಹಾಕಿದೆ, ಆದರೂ ಕೇರಳದ ಜನರು ಅಲ್ಲಿನ ಪ್ರಗತಿಗೆ ನೀಡಿರುವ ಕೊಡುಗೆಯನ್ನು ಅದು ಸರಿಯಾಗಿಯೇ ನೆನಪಿಸಿಕೊಂಡಿದೆ. ಅರಬ್‌ ಸಂಸ್ಥಾನದ ಕೊಡುಗೆಯನ್ನು ಭಾರತ ಸರಕಾರ ಸೌಜನ್ಯದಿಂದಲೇ ನಿರಾಕರಿಸಬೇಕಾದ ಅಗತ್ಯವೂ ಇದೆ. ಅರಬ್‌ ರಾಷ್ಟ್ರಗಳ ಮೈತ್ರಿಯನ್ನು ಭಾರತ ಕಳೆದುಕೊಂಡರೆ ಭಾರತಕ್ಕೇ ನಷ್ಟ .

ಸೌದಿ ಅರೇಬಿಯಾದ ತೈಲ ಪೂರೈಕೆಯ ಮೇಲೆ ಭಾರತ ಸರಕಾರ ವಿಪರೀತವೆನಿಸುವಷ್ಟು ಅವಲಂಬಿತವಾಗಿದೆ; ಒಂದು ವೇಳೆ ಇದನ್ನು ಕಳೆದುಕೊಂಡರೆ ನಾವು ಇತರ ರಫ್ತುದಾರ ದೇಶಗಳತ್ತ ನೋಡಬೇಕಾಗುತ್ತದೆ. ಇರಾನ್‌ನಿಂದ ನಾವು ತೈಲ ತರಿಸಿಕೊಳ್ಳುವುದನ್ನು ನಿಲ್ಲಿಸಬೇಕೆಂಬುದು ಡೊನಾಲ್ಡ್‌ ಟ್ರಂಪ್‌ ಅವರ ಆಡಳಿತವಿರುವ ಅಮೆರಿಕದ ಬಯಕೆಯಾಗಿದೆ. ನಾವು ನಮ್ಮಲ್ಲೇ ತೈಲ ನಿಕ್ಷೇಪಗಳ ಶೋಧಕಾರ್ಯ ನಡೆಸದಿರುವ ಮೂಲಕ ಇಲ್ಲಿನ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆ ಗಗನಕ್ಕೇರುವಂತೆ ಮಾಡಿರುವುದು ನಮ್ಮ ತಪ್ಪೇ ಹೌದು. ರಾಜಸ್ಥಾನದ ಮರುಭೂಮಿ ಪ್ರದೇಶದಲ್ಲಿ ತೈಲಶೋಧ ಕಾರ್ಯ ನಡೆಸುವ ಬಗ್ಗೆ ಕೇಂದ್ರ ಸಚಿವರಾಗಿದ್ದ ನಮ್ಮ ವೀರಪ್ಪ ಮೊಯ್ಲಿ ಅವರು ಹಿಂದೊಮ್ಮೆ ಮಾತಾಡಿದ್ದಿದೆ. ಅದೇ ಕೊನೆ. ಅಂದಿನಿಂದ ಇಂದಿನವರೆಗೆ ಬೇರೆ ಯಾರೂ ಈ ವಿಷಯವನ್ನು ಪ್ರಸ್ತಾವಿಸುವ ಗೋಜಿಗೆ ಹೋಗಿಲ್ಲ.

ಆದರೂ ಒಂದು ಅಂಶವನ್ನು ಇಲ್ಲಿ ಅಗತ್ಯವಾಗಿ ಗಮನಿಸಬೇಕಿದೆ. ನಮ್ಮ ದೇಶ ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ)ನಂಥ ಏಶಿಯನ್  ರಾಷ್ಟ್ರಗಳ ಅಭಿವೃದ್ಧಿ ಉದ್ದೇಶಿತ ವಿತ್ತ ಸಂಸ್ಥೆಗಳಿಂದ ಹಣದ ನೆರವು ಅಥವಾ ತಾಂತ್ರಿಕ ನೆರವು ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕಿಲ್ಲ. ನಮ್ಮ ಕರ್ನಾಟಕ ಸರಕಾರವೂ ಬೆಂಗಳೂರು “ಕ್ಲಸ್ಟರ್‌ ಸಿಟಿ’ ಯೋಜನೆಯಂಥ ಕೆಲ ಯೋಜನೆಗಳಿಗೆ ಎಡಿಬಿಯ ನೆರವು ಕೋರಿದ್ದುಂಟು. ಐದು ರಾಷ್ಟ್ರಗಳ ಭಾಗೀದಾರಿಕೆಯ ಬ್ರಿಕ್ಸ್‌ ಬ್ಯಾಂಕ್‌ಸ್ಥಾಪನೆಯಲ್ಲಿ ಭಾರತದ ಪಾಲೂ ಇದೆ.

ನಾವು “ವಿಶ್ವಶಕ್ತಿ’ಯಾಗುವ ಹಂತಕ್ಕಿಂತ ಬಹುದೂರದಲ್ಲಿದ್ದೇವೆ ಎಂಬುದೇನೋ ನಿಜ. ಆದರೆ “ಆಹಾರಕ್ಕಾಗಿ ಆಮದು’ ಎಂಬ ಸ್ಥಿತಿಯೂ ಒಂದು ಕಾಲದಲ್ಲಿ ನಮ್ಮದಾಗಿತ್ತು ಎಂಬ ಐತಿಹಾಸಿಕ ಸತ್ಯ ದೇಶದ ಇಂದಿನ ಯುವ ತಲೆಮಾರಿನವರಿಗೆ ಬಹುಶಃ ಗೊತ್ತಿರಲಾರದು. ಸ್ವಾತಂತ್ರೊéàತ್ತರದ ಆರಂಭಿಕ ದಶಕಗಳಲ್ಲಿ ನಾವು ಅಮೆರಿಕದಿಂದ ಆಮದಾಗಿ ಬರುತ್ತಿದ್ದ ಗೋಧಿಯ ಮೇಲೆ ಅವಲಂಬಿತರಾಗಿದ್ದೆವು. ಇದೀಗ ಕೇರಳಕ್ಕೆ ನೀಡಬೇಕಾದ ಪರಿಹಾರ ನೆರವಿನ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಬೇಕಾದುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಇದುವರೆಗೆ ಕೇಂದ್ರದಿಂದ 600 ಕೋಟಿ ರೂ.ಗಳ ತಾತ್ಕಾಲಿಕ ನೆರವನ್ನಷ್ಟೇ ಘೋಷಿಸಲಾಗಿದೆ. ಕೊಡಗಿನ ಬಗೆಗೂ ಕೇಂದ್ರದ ಹೊಣೆ ಕಡಿಮೆಯದೇನಲ್ಲ. ನಿರ್ಮಲಾ ಸೀತಾರಾಮನ್‌ ಹಾಗೂ ಸಾ.ರಾ. ಮಹೇಶ್‌ ನಡುವಿನ “ಜಗಳ’ದ ನೆರಳು ಕೇಂದ್ರದ ನಡೆಯ ಮೇಲೆ ಬೀಳಕೂಡದು. 

Advertisement

Udayavani is now on Telegram. Click here to join our channel and stay updated with the latest news.

Next