Advertisement

ಶಾಲೆಯ ಅಂಗಳಕ್ಕೆ ಅಧಿಕಾರಿಗಳು ದೌಡು

02:42 PM May 24, 2022 | Team Udayavani |

ಬಂಕಾಪುರ: “ಸರಕಾರಿ ಶಾಲಾ ರಸ್ತೆಯೇ ಮಾಯ-ಮಕ್ಕಳ ಪರದಾಟ’ ಎಂಬ ತಲೆಬರಹದಡಿ ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಸ್ಪಂದಿಸಿದ ಸಿಎಂ ಆಪ್ತ ಕಾರ್ಯದರ್ಶಿ ರಮೇಶ ಕೊನರಡ್ಡಿ ಪಟ್ಟಣದ ಖನೋಜಗಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಶಾಲೆಗೆ ತೆರಳಲು ರಸ್ತೆಯೇ ಮಾಯವಾಗಿದ್ದು ಶಾಲೆಗೆ ತೆರಳಲು ಮಕ್ಕಳು ರಸ್ತೆಯನ್ನು ಹುಡುಕುವಂತಾಗಿದೆ ಎಂದು ಪಾಲಕರು ಹಾಗೂ ನಾಗರಿಕರು ಆರೋಪ ವ್ಯಕ್ತಪಡಿಸಿದ್ದರು.

ಸತತ ಸುರಿಯುತ್ತಿರುವ ಮಳೆಗೆ ರಸ್ತೆ ಜಲಾವೃತಗೊಂಡು ಕೆಸರುಗದ್ದೆಯಂತಾಗಿದೆ. ಶಾಲೆಯಲ್ಲಿ ಯಾವುದೇ ನೀರು, ಶೌಚಾಲಯದ ಸೌಲಭ್ಯ ಇಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಬಯಲು ಶೌಚವನ್ನೇ ಅನಿವಾರ್ಯವಾಗಿ ಅವಲಂಬಿಸಬೇಕಾಗಿದೆ. ಶಾಲೆಗೆ ಕಾಂಪೌಂಡ್‌ ಇರದೇ ಇರುವುದರಿಂದ ಹಾಗೂ ಹೊರವಲಯಕ್ಕೆ ಹೊಂದಿಕೊಂಡಿರುವುದರಿಂದ ಕುಡುಕರ ತಾಣವಾಗಿ, ಜೂಜಾಡುವ ಅಡ್ಡೆಯಾಗಿ ಪರಿಣಮಿಸಿದೆ.

ಈ ಕುರಿತು “ಉದಯವಾಣಿ’ ಬೆಳಕು ಚೆಲ್ಲಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಆಪ್ತ ಕಾರ್ಯದರ್ಶಿಗಳು ಸೋಮವಾರ ಮಧ್ಯಾಹ್ನ ಸಂಬಂಧಪಟ್ಟ ಅಧಿ ಕಾರಿಗಳೊಂದಿಗೆ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಂತರ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೂಡಲೇ ಶಾಲೆಗೆ ಹೋಗುವ ರಸ್ತೆಯನ್ನು ಮೆಟ್‌ಲಿಂಗ್‌ ಮಾಡಿ ವಿದ್ಯಾರ್ಥಿಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಮಳೆಯ ನೀರು ರಸ್ತೆಯ ಮೇಲೆ ನಿಲ್ಲದಂತೆ ಕಾಲುವೆಯನ್ನು ದುರಸ್ತಿಗೊಳಿಸಿ, ಅವಶ್ಯವಿದ್ದಲ್ಲಿ ದೊಡ್ಡ ಸಿಡಿಗಳನ್ನು ನಿರ್ಮಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಓಡಾಡಲು ಯಾವುದೇ ತೊಂದರೆಯಾಗದ ಹಾಗೆ ನೋಡಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರಿಗೆ ಸೂಚಿಸಿದರು.

Advertisement

ನಂತರ ಶಾಲಾ ಕಾಂಪೌಂಡ್‌, ಶೌಚಾಲಯ, ಸುಸಜ್ಜಿತ ಮೈದಾನ ನಿರ್ಮಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಬಿಇಒ ಪ್ರಭಯ್ಯ ಚಿಕ್ಕಮಠ ಅವರಿಗೆ ಸೂಚಿಸಿದರು. ಮುಖಂಡರಾದ ಬಸವರಾಜ ನಾರಾಯಣಪುರ, ವಿಶ್ವನಾಥ ಹರವಿ, ವಿನಾಯಕ ಪೂಜಾರ, ರಾಜೇಂದ್ರ ಟೊಪಣ್ಣವರ, ಹನುಮಂತ ಕಮ್ಮಾರ, ಉಪತಹಶೀಲ್ದಾರ್‌ ವಿ.ವಿ. ಕುಲಕರ್ಣಿ, ಕಂದಾಯ ನಿರೀಕ್ಷಕ ಆರ್‌.ಎಂ. ನಾಯಕ, ವೀರಣ್ಣ ಬಾರಕೇರ ಇನ್ನಿತರರಿದ್ದರು.

ಜಿ+1 ಮನೆಗಳ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗಿರುವುದರಿಂದ ಸದ್ಯ ಸಿಸಿ ರಸ್ತೆ ನಿರ್ಮಾಣ ಮಾಡಲು ಸಮಯದ ಕೊರತೆ ಇದೆ. ಮೆಟ್‌ಲಿಂಗ್‌ ರಸ್ತೆ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು. ನಂತರ ಸಿಸಿ ರಸ್ತೆ, ಪಕ್ಕಾ ಗಟಾರ ನಿರ್ಮಿಸಿ ಶಾಶ್ವತ ಪರಿಹಾರ ಸೂಚಿಸಲಾಗುವುದು. -ರಮೇಶ ಕೊನರಡ್ಡಿ, ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ

ಸಿಎಂ ಕಾರ್ಯದರ್ಶಿಗಳು ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಿದ್ದಾರೆ. ಅವರ ಆದೇಶದಂತೆ ರಸ್ತೆ ಹಾಗೂ ಶಾಲೆ ಅಭಿವೃದ್ಧಿ ಹೊಂದಬೇಕು. ಇಲ್ಲದೇ ಹೋದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. –ಸತೀಶ ಟೊಪಣ್ಣವರ, ಸಮಾಜಸೇವಕ

Advertisement

Udayavani is now on Telegram. Click here to join our channel and stay updated with the latest news.

Next