ದರ್ಶನ್ ಅಭಿನಯದ “ಒಡೆಯ’ ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು “ಒಡೆಯ’ದಲ್ಲಿರುವುದರಿಂದ ನೋಡುಗರಿಗೆ ಪಕ್ಕಾ ಮನರಂಜನೆಯ ಹೂರಣ ಸಿಕ್ಕಂತಾಗಿದೆ. ಬಿಡುಗಡೆಯಾಗಿರುವ ಚಿತ್ರಮಂದಿರಗಳಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ನಿರ್ಮಾಪಕ ಹಾಗು ನಿರ್ದೇಶಕರಿಗೆ ಸಂತಸವನ್ನು ಹೆಚ್ಚಿಸಿದೆ. ಮೆಚ್ಚುಗೆಯ ಜೊತೆಯಲ್ಲಿ ಗಳಿಕೆಯಲ್ಲೂ ಖುಷಿಪಡಿಸಿರುವ “ಒಡೆಯ’ನ ಕುರಿತು ಹೇಳುವ ನಿರ್ದೇಶಕ ಎಂ.ಡಿ. ಶ್ರೀಧರ್, “ರಾಜ್ಯಾದ್ಯಂತ 420 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ “ಒಡೆಯ’ನ ದರ್ಶನವಾಗಿದೆ.
ಬಿಡುಗಡೆಗೊಂಡ ಎಲ್ಲಾ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗಳಿಕೆ ಕೂಡ ತೃಪ್ತಿ ಕೊಟ್ಟಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ “ಒಡೆಯ’ನ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಮೈಸೂರು, ಮಂಡ್ಯ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರದ ಬಗ್ಗೆ ಜನರಿಂದ ಒಳ್ಳೆಯ ರಿಪೋರ್ಟ್ ಸಿಗುತ್ತಿದೆ. ಒಂದು ಸಿನಿಮಾ ಮಾಡಿದ ನಿರ್ಮಾಪಕರಿಗೆ ಇದಕ್ಕಿಂತ ಒಳ್ಳೆಯ ಖುಷಿ ಬೇರೊಂದಿಲ್ಲ. ಸಿನಿಮಾ ನೋಡಿ ಹೊರಬಂದವರಿಗೆ ಎಲ್ಲಾ ಅಂಶಗಳು ಇಷ್ಟವಾಗಿರುವುದೇ ಮೆಚ್ಚುಗೆಗೆ ಕಾರಣ. ಇಲ್ಲಿ ಮಾಸ್ ಅಷ್ಟೇ ಅಲ್ಲ, ಹಾಸ್ಯದ ಹೂರಣವೂ ತುಂಬಿದೆ.
ಇವೆಲ್ಲದರ ಜೊತೆಯಲ್ಲಿ ಸೆಂಟಿಮೆಂಟ್ ಹಾಗು ಫ್ಯಾಮಿಲಿ ಡ್ರಾಮ ಇದೆ. ಹಾಗಾಗಿ ಇದನ್ನು ಇಷ್ಟಪಡುವ ಮೂಲಕ “ಒಡೆಯ’ ಎಂಟ್ರಿಯನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿದ್ದಾರೆ’ ಎಂಬುದು ನಿರ್ದೇಶಕ ಶ್ರೀಧರ್ ಅವರ ಮಾತು. ಇನ್ನು, ದರ್ಶನ್ ಅವರ ಯಾವುದೇ ಸಿನಿಮಾ ಇದ್ದರೂ, ಅದು ಪಕ್ಕಾ ಮನರಂಜನೆ ಇದ್ದೇ ಇರುತ್ತೆ. “ಒಡೆಯ ಎಲ್ಲಾ ಅಂಶಗಳಿರುವ ಚಿತ್ರವಾಗಿರುವುದರಿಂದ ಫ್ಯಾಮಿಲಿ ಆಡಿಯನ್ಸ್ ಕೂಡ ಬರುತ್ತಿದ್ದಾರೆ. ಶನಿವಾರ ಹಾಗೂ ಭಾನುವಾರ ಮಲ್ಟಿಪ್ಲೆಕ್ಸ್ ಸೇರಿದಂತೆ ಬಿಡುಗಡೆಯಾಗಿರುವ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ಸದ್ಯಕ್ಕೆ “ಒಡೆಯ’ನಿಗೆ ಉತ್ತಮ ಬೆಂಬಲ ಸಿಗುತ್ತಿರುವುದರಿಂದ ಚಿತ್ರದ ವೇಗ ಮತ್ತಷ್ಟು ಹೆಚ್ಚಿದೆ.
ಸಿನಿಮಾ ನೋಡಿದವರು ಈಗಾಗಲೇ ತಮ್ಮ ಮುಖಪುಟ ಸೇರಿದಂತೆ ಅನೇಕ ಸೋಶಿಯಲ್ ಮೀಡಿಯಾಗಳಲ್ಲಿ “ಒಡೆಯ’ನಲ್ಲಿರುವ ಅಂಶಗಳನ್ನು ಗುಣಗಾನ ಮಾಡುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಕೂಡ “ಒಡೆಯ’ನ ಹಾಡು, ಕುಣಿತ, ಫೈಟ್ಸ್ಗೆ ಫಿದಾ ಆಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ “ಒಡೆಯ’ನಿಗೆ ಭರ್ಜರಿ ಮೆಚ್ಚುಗೆ ಸಿಕ್ಕಿದೆ ಎಂಬುದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ನಿರ್ದೇಶಕ ಶ್ರೀಧರ್. ಚಿತ್ರವನ್ನು ಎನ್.ಸಂದೇಶ್ ಚಿತ್ರ ನಿರ್ಮಿಸಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಎ.ವಿ.ಕೃಷ್ಣಕುಮಾರ್ (ಕೆಕೆ) ಛಾಯಾಗ್ರಹಣವಿದೆ. ಎ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ.