Advertisement

ಮರ ಕಡಿಯದೆ ಸಸಿ ನೆಟ್ಟು ಪೋಷಿಸಿ

02:46 PM Apr 25, 2019 | Team Udayavani |

ಶ್ರೀರಂಗಪಟ್ಟಣ: ಮಾನವ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪತ್ತು ಬಳಸಿಕೊಂಡು ಅರಣ್ಯ ನಾಶ ಮಾಡುವುದರಿಂದ ಪ್ರಕೃತಿ ವಿಕೋಪಗಳು ಸಂಭವಿಸಲು ಪ್ರಮುಖ ಕಾರಣ ಎಂದು 3ನೇ ಜಿಲ್ಲಾ ಅಪರ ಮತ್ತು ಸತ್ರ ನ್ಯಾಯಾಧೀಶ ಕಸನಪ್ಪ ನಾಯಕ್‌ ಆತಂಕ ವ್ಯಕ್ತಪಡಿಸಿದರು.

Advertisement

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಆಯೋಜಿಸಿದ್ದ ಭೂ ಸಂರಕ್ಷಣಾ ದಿನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭೂಮಿಯಲ್ಲಿರುವ ನೈಸರ್ಗಿಕ ಸಂಪತ್ತನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಪರಿಸರ ಹಾಳು ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕಾಡು ನಾಶ ಮಾಡುವುದರಿಂದ ಪರಿಸರ ನಾಶವಾಗಿ ಅಕಾಲಿಕ ಮಳೆ, ಮಳೆ ಪ್ರಮಾಣ ಕುಸಿತ ಮತ್ತಿತರೆ ವಿಕೋಪಗಳು ಸಂಭವಿಸುತ್ತಿವೆ ಎಂದು ಹೇಳಿದರು.

ನೈಸರ್ಗಿಕ ಸಂಪತ್ತು ಉಳಿಸಿ: ಭೂಮಿ ಮೇಲೆ ಶುದ್ಧ ನೀರು, ಗಾಳಿ, ಬೆಳಕು ಮನುಷ್ಯನಿಗೆ ಸಮರ್ಪಕವಾಗಿ ದೊರೆಯದೆ ಮನುಷ್ಯನ ಆರೋಗ್ಯ ಹದಗೆಡುತ್ತಿದೆ. ಮುಂದಿನ ಪೀಳಿಗೆಯೂ ಆರೋಗ್ಯವಾಗಿ ಬದುಕಬೇಕೆಂದರೆ, ಮಾನವ ದುರಾಸೆ ಬಿಟ್ಟು ಭೂಮಿಯಲ್ಲಿರುವ ನೈಸರ್ಗಿಕ ಸಂಪತ್ತು ಲೂಟಿ ಮಾಡದೆ ಸಂರಕ್ಷಣೆ ಮಾಡಬೇಕು. ಈಗಾಗಲೇ ಕುಡಿಯುವ ನೀರಿಗೆ ಪರದಾಟ, ಮಳೆ ಇಲ್ಲದೆ ಬರಗಾಲ, ಕೃಷಿ ಮಾಡಲಾಗದೆ ವಲಸೆ ಹೋಗುವ ಪರಿಸ್ಥಿತಿ ಏರ್ಪಟ್ಟಿದೆ. ಈಗಲಾದರೂ ಮಾನವ ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಪರಿಸರ, ಜಲ ಸಂರಕ್ಷಣೆ ಮಾಡಿ ಭೂಮಿಯ ಒಡಲು ತಂಪಾಗಿಡುವ ಕಾರ್ಯಚಟುವಟಿಕೆಗಳು ಹಮ್ಮಿಕೊಳ್ಳಬೇಕಿದೆ.

ಸಸಿ ನೆಟ್ಟು ಪೋಷಿಸಿ: ತಾಪಮಾನ ಹೆಚ್ಚಳದಿಂದ ಭೂಮಿ ಮತ್ತು ಮಾನವನ ಆರೋಗ್ಯ ಕೆಡುತ್ತಿದೆ. ಈಗಾಗಲೇ ಸ್ವಯಂಕೃತ ಅಪರಾಧಗಳಿಮದ ಕಾಡು ಕಡಿದು ನಾಶ ಮಾಡಲಾಗಿದೆ. ಪರಿಸರ ಸಂರಕ್ಷಣೆ ಎಂದರೆ ಕಾಡು ಮಾತ್ರ ಬೆಳೆಸುವುದಷ್ಟೇ ಅಲ್ಲ. ಮನೆ ಸುತ್ತಮುತ್ತ, ಹೊಲಗದ್ದೆಗಳ ಬಳಿ, ಖಾಲಿ ಇರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಸಸಿ ನೆಟ್ಟು, ಪೋಷಣೆ ಮಾಡಿ ಗಿಡಮರಗಳ ಬೆಳೆಸಲು ಮುಂದಾಗಬೇಕು. ಮರಗಳು ಹೇರಳವಾಗಿದ್ದರೆ ಮಾತ್ರ ಭೂಮಿಯ ಒಡಲು ತಂಪಾಗಿರುತ್ತದೆ. ಉತ್ತಮ ಗಾಳಿ, ಶುದ್ಧ ನೀರು, ಉತ್ತಮ ಮಳೆಯಾದರೆ ಮನುಷ್ಯನ ಆರೋಗ್ಯವೂ ಕಾಪಾಡಬಹುದು ಎಂದು ಸಲಹೆ ನೀಡಿದರು.

ಮರ ಕಡಿಯಬೇಡಿ: ವಕೀಲ ನಿಂಗೇಗೌಡ ಮಾತನಾಡಿ, ನಮ್ಮ ಸುತ್ತಮುತ್ತಲ ಬೆಟ್ಟಗುಡ್ಡಗಳನ್ನು ಕೊರೆಯುವುದು, ಅರಣ್ಯ ಸಂಪತ್ತು ನಾಶ ಮಾಡುವುದು, ರಸ್ತೆ ಬದಿ ಮರಗಳ ಮಾರಣ ಹೋಮ, ಸುಸಜ್ಜಿತ ನಾಡು ಕಟ್ಟಲು ನೈಸರ್ಗಿಕ ಸಂಪತ್ತು ಲೂಟಿ ಮಾಡಲಾಗುತ್ತಿದೆ. ಹೈಟೆಕ್‌ ಹೆಸರಲ್ಲಿ ಶತಮಾನದ ಮರಗಳನ್ನು ಉರುಳಿಸಿ ಧ್ವಂಸ ಮಾಡಿ ರಸ್ತೆ ಹಾಕುವ ಕೆಲಸಗಳು ನಡೆಯುತ್ತಿವೆ. ಈಗಾಗಲೇ ಮಳೆ ಇಲ್ಲದೆ, ಸಕಾಲದಲ್ಲಿ ಬೆಳೆಗಳು ಕೈಗೆಟುಕದೆ, ಕುಡಿಯಲು ನೀರಿಲ್ಲದೆ ಅನೇಕ ದೈನಂದಿನ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಈಗಲಾದರೂ ಎಚ್ಚೆತ್ತು ನೈಸರ್ಗಿಕ ಸಂಪತ್ತು ಸಂರಕ್ಷಿಸುವತ್ತ ಗಮನಹರಿಸಬೇಕು ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾ ಧೀಶರಾದ ವೀರಣ್ಣ ಸೋಮಶೇಖರ್‌, ಪರಮೇಶ್ವರ್‌, ಅರುಣ್‌ ಕುಮಾರ್‌ ಮಾತ ನಾಡಿದರು. ಆಯುಷಾ ಬಿ.ಪಿ.ಮಜೀದ್‌, ತಹಶೀಲ್ದಾರ್‌ ನಾಗಪ್ರಶಾಂತ್‌, ವಕೀಲರ ಸಂಘದ ಅಧ್ಯಕ್ಷ ಸುಬ್ರಮಣ್ಯ, ಉಪಾಧ್ಯಕ್ಷ ಸೋಮು, ಕಾರ್ಯದರ್ಶಿ ಜಯಕುಮಾರ್‌ ಮತ್ತಿತತರರು ಭಾಗವಹಿಸಿದ್ದರು.

 

ಈಗಾಗಲೇ ನೀರಿಗಾಗಿ ಅಲೆದಾಟ ಶುರು:

ಈಗಾಗಲೇ ಅಂತರ್ಜಲ ಬತ್ತಿ ಹೋಗಿದೆ. ಕೊಳವೆ ಬಾವಿಗಳು ಎಷ್ಟು ಅಡಿಗಳ ಆಳಕ್ಕೆ ಕೊರೆದರೂ ನೀರು ಬರುತ್ತಿಲ್ಲ. ನೀರಿಗಾಗಿ ಬಿಂದಿಗೆ ಹಿಡಿದು ನಾಗರೀಕರು ಕಿಲೋಮೀಟರ್‌ಗಟ್ಟಲೆ ಅಲೆದಾಡುತ್ತಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ ಎಂದು ವಕೀಲ ನಿಂಗೇಗೌಡ ಆತಂಕ ವ್ಯಕ್ತಪಡಿಸಿದರು. ರೈತರು ನೈಸರ್ಗಿಕ ಗೊಬ್ಬರ ಬಳಸದೆ ರಾಸಾಯಿನಿಕ ಗೊಬ್ಬರ ಬಳಸುವುದರಿಂದ ನೀರು ವಿಷವಾಗುತ್ತಿದೆ. ಶುದ್ಧ ನೀರು ಸಿಗದೆ, ಶುದ್ಧೀಕರಣ ಮಾಡಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಗ್ರಾಮಗಳಲ್ಲಿ ಬದುಕನ್ನು ಅರಸಿ ನಗರಪಟ್ಟಣಗಳತ್ತ ವಲಸೆ ಹೋಗುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಜನಜೀವನ ಸಂಕಷ್ಟ ಎದುರಿಸಬೇಕಾಗಲಿದೆ. ಈಗಲಾದರೂ ಮನುಷ್ಯ ಎಚ್ಚೆತ್ತು ಮರಗಿಡ ಬೆಳೆಸಬೇಕು. ಕಾಡು ನಾಶ ಮಾಡದೆ, ಹೆಚ್ಚಿನ ಸಸಿ ನೆಟ್ಟು ಪರಿಸರ ಕಾಪಾಡಬೇಕು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next