Advertisement

ಭೀಕರ ಅಪಘಾತದಲ್ಲಿ ಎನ್‌ಟಿಆರ್‌ ಪುತ್ರ ನಂದಮೂರಿ ಹರಿಕೃಷ್ಣ ದುರ್ಮರಣ

08:13 AM Aug 29, 2018 | |

 ಹೈದರಾಬಾದ್‌: ತೆಲಂಗಾಣದ ನಲ್ಗೊಂಡಾದ ಅನ್ನೆಪರ್ತಿ ಬಳಿ  ಬುಧವಾರ ಬೆಳಗಿನ ಜಾವ 4.30 ರ ವೇಳೆಗೆ  ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜಕಾರಣಿ, ನಟ ನಂದಮೂರಿ ಹರಿಕೃಷ್ಣ (61) ಅವರು ದುರ್ಮರಣಕ್ಕೀಡಾಗಿದ್ದಾರೆ.

Advertisement

 

ಹೈದರಾಬಾದ್‌ನಿಂದ ನೆಲ್ಲೂರ್‌ಗೆ  ತೆರಳುತ್ತಿದ್ದ  ಕಾರು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿದ್ದು, ಕಾರನ್ನು ಹರಿಕೃಷ್ಣ ಅವರೇ ಚಲಾಯಿಸುತ್ತಿದ್ದರು ಎಂದು ತಿಳಿದು ಬಂದಿದೆ. 

ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. 

ಆಪ್ತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

Advertisement

ಕಾರು ನಿಯಂತ್ರಣ ತಪ್ಪಿದ ಬಳಿಕ 10 ಅಡಿ ಎತ್ತರ ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷ್ಯ ದರ್ಶಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ.  

ಹರಿಕೃಷ್ಣ ಅವರ ನಿಧನದ ವಿಚಾರ ತಿಳಿದ ಬಳಿಕ ಬಾವ ಹಾಗೂ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಎಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಆಸ್ಪತ್ರೆಗೆ ಧಾವಿಸಿ ಬಂದಿದ್ದಾರೆ. 

ಹಲವು ಟಿಡಿಪಿ ಶಾಸಕರು,ಸಚಿವರು ಆಸ್ಪತ್ರೆಯತ್ತ ಧಾವಿಸುತ್ತಿದ್ದು, ನೂರಾರು ಜನರು ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ. 

ಹರಿಕೃಷ್ಣ ಅವರು ಟಿಡಿಪಿ ಸಂಸ್ಥಾಪಕ, ಆಂಧ್ರ ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್‌ ಅವರ ನಾಲ್ಕನೇ ಪುತ್ರ. 

1964 ರಲ್ಲಿ ಶ್ರೀ ಕೃಷ್ಣಾವತಾರಂ ಎಂಬ ಚಿತ್ರದಲ್ಲಿ ಬಾಲ ನಟನಾಗಿ ಬಣ್ಣದ ಬದುಕಿಗೆ ಕಾಲಿರಿಸಿದ್ದರು. ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅವರು ನಾಯಕ ನಟನಾಗಿ, ಪೋಷಕರ ಪಾತ್ರ, ಹಾಸ್ಯ ಪಾತ್ರಗಳು ಮತ್ತು ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದರು. 

ಮೊದಲ ಪತ್ನಿಯ ಮೂವರು ಮಕ್ಕಳಾದ ನಟ ಕಲ್ಯಾಣ್‌ ರಾಮ್‌, ಪುತ್ರಿ ಸುಹಾಸಿನಿ ಮತ್ತು  2 ನೇ ಪತ್ನಿಯ ಪುತ್ರ ಜ್ಯೂನಿಯರ್‌ ಎನ್‌ಟಿಆರ್‌ ಎಂದು ಪ್ರಖ್ಯಾತರಾಗಿರುವ ತಾರಕ ರಾಮ್‌ ಅವರನ್ನು ಹರಿಕೃಷ್ಣ ಅಗಲಿದ್ದಾರೆ. 

ಮೊದಲ ಪುತ್ರ  ಜಾನಕಿ ರಾಮ್‌ ಅವರು ಕಾರು ಅಪಘಾತದಲ್ಲಿ ಕೆಲ ವರ್ಷಗಳ ಹಿಂದೆ ದುರ್ಮರಣಕ್ಕೀಡಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next