Advertisement

ಈಗ ಭತ್ತದ ಕೊಯ್ಲಿಗೆ ಮಷಿನ್‌ ಬರ

04:10 PM Dec 08, 2018 | |

ದಾವಣಗೆರೆ: ಅತಿವೃಷ್ಟಿ, ಅನಾವೃಷ್ಟಿ, ಬರ, ಬೆಳೆನಷ್ಟ, ಬೆಲೆ ಕುಸಿತ ಹೀಗೆ ಹಲವಾರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ವಿಲವಿಲ ಒದ್ದಾಡುವ ರೈತರಿಗೆ ಜಿಲ್ಲೆಯಲ್ಲಿ ಸಂಕಷ್ಟವೊಂದು ಎದುರಾಗಿದೆ. ಕಳೆದ ಐದು ವರ್ಷಗಳಲ್ಲಿ ಮೂರ್‍ನಾಲ್ಕು ಬೆಳೆ ಕಳೆದುಕೊಂಡಿರುವ ರೈತರಿಗೆ ಈ ಬಾರಿ ತುಂಬಿದ ಭದ್ರಾ ಜಲಾಶಯ ಒಂದಿಷ್ಟು ಭರವಸೆ ಮೂಡಿಸಿ, ಭತ್ತ ಬೆಳೆಯುವಂತಾಯಿತು. ಸಾಲ ಸೋಲದಿಂದ ನಾಟಿ ಮಾಡಿದ ಭತ್ತ ಈಗ ಕೈಗೆ ಬಂದಿದೆ. ಭದ್ರಾ ನಾಲೆ ಅಚ್ಚುಕಟ್ಟು ಪ್ರದೇಶ ಹಾಗೂ ನೀರಾವರಿ ಪ್ರದೇಶಗಳಲ್ಲಿ ಪ್ರಸ್ತುತ ಶೇ.60ರಷ್ಟು ಭತ್ತದ ಕೊಯ್ಲು ಕಾರ್ಯ ಮುಗಿದಿದ್ದು, ಉಳಿದಿರುವ ಶೇ. 40ರಷ್ಟು ಭತ್ತ ಕೊಯ್ಲಿಗೆ ಕಟಾವು ಮೆಷಿನ್‌ ಸಿಗದೇ ರೈತರು ಕಂಗಾಲಾಗಿದ್ದಾರೆ. 

Advertisement

ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ ತಾಲೂಕಿನ ವಿವಿಧೆಡೆ ಭತ್ತದ ಕೊಯ್ಲು ಕಳೆದ ನವೆಂಬರ್‌ ತಿಂಗಳಿನಿಂದಲೇ ಆರಂಭವಾಗಿದ್ದು, ಶೇ. 60ರಷ್ಟು ಮುಗಿದಿದೆ. ಆದರೆ ಬಾಕಿ ಭತ್ತವನ್ನು ಕೊಯ್ಲು ಮಾಡಿಸುವುದೇ ರೈತರಿಗೆ ಸವಾಲಾಗಿದೆ. ಗ್ರಾಮಕ್ಕೆ ಒಂದೆರಡು ಮಾತ್ರ ಮೆಷಿನ್‌ಗಳು
ಬಂದಿರುವ ಕಾರಣ ಕೊಯ್ಲು ಕಾರ್ಯಕ್ಕೆ ಗಂಟೆಗೆ 3,200 ರೂ. ಕೊಟ್ಟರೂ ಕೂಡ ಮೆಷಿನ್‌ ಸಿಗದಂತ ಪರಿಸ್ಥಿತಿ ಇದೆ.
 
ವರ್ಷದಲ್ಲೇ ದುಬಾರಿ: ಕಳೆದ ಬಾರಿ ಭತ್ತದ ಕಟಾವು ಮಾಡಲು ಚೈನ್‌ ಮಷಿನ್‌ಗೆ ಗಂಟೆಗೆ 2,200 ರೂ. ನೀಡಲಾಗಿತ್ತು. ಆದರೆ, ಈ ಬಾರಿ 3,200 ರೂ. ಕೊಟ್ಟರೂ ಕೂಡ ನಿಗದಿತ ಸಮಯಕ್ಕೆ ಭತ್ತದ ಕೊಯ್ಲು ಆಗುತ್ತಿಲ್ಲ. ಮುಂಚಿತವಾಗಿ ಸಸಿ ನಾಟಿ ಮಾಡಿದ ಗದ್ದೆಗಳಲ್ಲಿ ಭತ್ತ ಕೊಯ್ಲಿಗೆ ಬಂದಿದ್ದು, ಮಷಿನ್‌ ಸಿಗದೇ ಹೊಲದಲ್ಲೇ ಭತ್ತ ಬೆಳೆ ಒಣಗುವಂತಾಗಿದೆ. ಇನ್ನೂ ಟ್ರ್ಯಾಕ್ಟರ್‌ ಟೈರ್‌ ಭತ್ತದ ಕೊಯ್ಲು ಮಷಿನ್‌ಗಳು ಹುಡುಕಿದರೂ ಕಾಣುತ್ತಿಲ್ಲ.

ಮಷಿನ್‌ಗೆ ಭಾರಿ ಡಿಮ್ಯಾಂಡ್‌: ದಾವಣಗೆರೆ ಜಿಲ್ಲೆಯಲ್ಲಿ ಭತ್ತದ ಕೊಯ್ಲು ಆರಂಭವಾಗುತ್ತಿದ್ದಂತೆ, ಪ್ರತಿ ಬಾರಿ ತಮಿಳುನಾಡು, ಆಂಧ್ರ ಇತರೆಡೆಯಿಂದ ಮಷಿನ್‌ಗಳನ್ನ ತರುತ್ತಿದ್ದರು. ಆದರೆ, ಈ ಬಾರಿ ಮಷಿನ್‌ಗಳು ಶಿವಮೊಗ್ಗ, ಮೈಸೂರು ಮತ್ತಿತರ ಜಿಲ್ಲೆ ಕಡೆ ಭತ್ತದ ಕೊಯ್ಲಿಗೆ ಹೋಗಿರುವುದರಿಂದ ಮಷಿನ್‌ಗಳ ಅಭಾವ ವ್ಯಾಪಕವಾಗಿದೆ. ಇನ್ನು ಸ್ಥಳೀಯವಾಗಿ ಮಷಿನ್‌ಗಳನ್ನು ಹೊಂದಿದ್ದ ಕೆಲ ಮಾಲೀಕರು ಕೂಡ ಬೇರೆ ಕಡೆಯ ಭತ್ತದ ಕೊಯ್ಲಿಗೆ ಹೋಗಿರುವುದರಿಂದ ಈ ಭಾರಿ ದಾವಣಗೆರೆ ಜಿಲ್ಲೆಯಲ್ಲಿ ಸದ್ಯ ಭತ್ತದ ಕೊಯ್ಲಿನ ಮಷಿನ್‌ಗಳಿಗೆ ಭಾರೀ ಬೇಡಿಕೆ ಇದೆ.

ರೋಗ ಭಯ: ಈಗಾಗಲೇ ಕಟಾವಿಗೆ ಬಂದಿರುವ ಭತ್ತವನ್ನು ನಿಗದಿತ ಸಮಯಕ್ಕೆ ಕಟಾವು ಮಾಡಲು ಮೆಷಿನ್‌ ಸಿಗದೇ ಇರುವುದರಿಂದ ಹೊಲದಲ್ಲೇ ಭತ್ತ ಬಿಸಿಲಿನ ಝಳಕ್ಕೆ ಸಂಪೂರ್ಣ ಒಣಗುತ್ತಿದೆ. ಇನ್ನೂ ಬೆಂಕಿ ರೋಗ (ಅಫರ್‌) ಬೀಳುತ್ತಿರುವುದರಿಂದ ಕಾಳುಗಟ್ಟುವ ಭತ್ತ ಜೊಳ್ಳಾಗುವ ಆತಂಕ ಎದುರಾಗಿದೆ.

ಕೇಳಿದ ದರಕ್ಕೆ ಮಾರಾಟ: ಭತ್ತದ ಕೊಯ್ಲು ಮಾಡಿರುವ ರೈತರು ಭತ್ತವನ್ನು ಸಂಗ್ರಹಿಸಲು ಮನೆ ಬಳಿ ಆವರಣ, ಗೋದಾಮು, ಕಣ ಇಲ್ಲದೇ ರಸ್ತೆಗಳ ಬದಿಗಳಲ್ಲಿಯೇ ರಾಶಿ ಮಾಡಿಕೊಂಡಿದ್ದಾರೆ. ಹಸಿ ಇರುವ ಭತ್ತವನ್ನು ನೆರಳು ಮತ್ತು ಮಳೆಯಿಂದಾಗಿ ಒಣಗಿಸಲು ಕಷ್ಟ ಪಡುತ್ತಿದ್ದಾರೆ. ಮಳೆ ಆತಂಕ ಹಾಗೂ ಖರೀದಿ ಕೇಂದ್ರ ಆರಂಭದ ವಿಳಂಬದಿಂದಾಗಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಜನ ರೈತರು ಖರೀದಿದಾರರು ಕೇಳಿದ ದರಕ್ಕೆ ಭತ್ತ ಮಾರಾಟ ಮಾಡಿದ್ದಾರೆ.

Advertisement

ಮಳೆ ಆತಂಕ: ಒಂದೆಡೆ ಭತ್ತ ಕಟಾವಿಗೆ ಮಷಿನ್‌ ಗಾಗಿ ರೈತರು ಹೆಣಗಾಡುತ್ತಿದ್ದಾರೆ. ಇನ್ನೂ ಕೆಲವೆಡೆ ಎಲ್ಲೆಲ್ಲೋ ಹುಡುಕಾಡಿ ಹೆಚ್ಚು ಹಣ ಕೊಟ್ಟು ಮಷಿನ್‌ ತರಿಸುತ್ತಿದ್ದಾರೆ. ಆದರೂ ಬೆಳಿಗ್ಗೆ ಇಬ್ಬನಿಯಿಂದ ಕೊಯ್ಲು ಕಾರ್ಯ ತಡವಾದರೆ, ಮಧ್ಯಾಹ್ನ- ಸಂಜೆ ಒಮ್ಮೊಮ್ಮೆ ಏಕಾಏಕಿ ಸುರಿವ ಮಳೆ ರೈತರನ್ನ ಚಿಂತಾಕ್ರಾಂತರನ್ನಾಗಿಸಿದೆ. ಇತ್ತ ಕಟಾವಿಗೆ ಬಂದಿರುವ ಭತ್ತ ಕೂಡ ಮಣ್ಣುಪಾಲಾಗುವ ಭೀತಿ ರೈತರಲ್ಲಿ ಮನೆ ಮಾಡಿದೆ. ಪ್ರತಿಬಾರಿ ಜಿಲ್ಲೆಯಲ್ಲಿ ರೈತರು ಅತಿವೃಷ್ಟಿ, ಅನಾವೃಷ್ಟಿ, ರೋಗಬಾಧೆಯಿಂದ ತೊಂದರೆ ಅನುಭವಿಸುವ ರೈತರು, ಮತ್ತೂಂದೆಡೆ ಸೂಕ್ತ ಬೆಲೆ ಸಿಗದೇ ಹೈರಾಣಾಗುವ ಸ್ಥಿತಿ ತಪ್ಪಿದ್ದಲ್ಲ.

ರೈತರ ಸುಲಿಗೆ ಈ ಬಾರಿ ಸಣ್ಣ ಭತ್ತಕ್ಕೆ ಸೊಳ್ಳೆ, ಬೆಂಕಿರೋಗ ಬಿದ್ದಿದ್ದರಿಂದ ನಾಲ್ಕೈದು ಬಾರಿ ಔಷಧಿ ಸಿಂಪಡಿಸಿದ್ದರಿಂದ ಸಾಕಷ್ಟು ಸಾಲ ಮಾಡಿ, ಭತ್ತ ಬೆಳೆದಿದ್ದೇನೆ. ಇದೀಗ ಭತ್ತದ ಕೊಯ್ಲು ಮಾಡಿಸಬೇಕಿದೆ. ಕೊಯ್ಲಿಗೆ ಮಷಿನ್‌ ಸಿಗುತ್ತಿಲ್ಲ. ಮಷಿನ್‌ ಸಿಕ್ಕರೂ ಕೂಡ ಅವರು ರಾತ್ರಿ ಇಬ್ಬನಿಯಲ್ಲಿ ಕಟಾವು ಮಾಡಬೇಕಿದೆ. ಆ ವೇಳೆ ಕಟಾವು ತರಾತುರಿಯಲ್ಲಿ ನಡೆಯುವುದರಿಂದ ಅಪಾರ ಪ್ರಮಾಣದ ಭತ್ತದ ಕಾಳು ನೆಲದ ಪಾಲಾಗುತ್ತದೆ. ಈ ಬಾರಿ 3200 ರೂ. ಕೊಟ್ಟರೂ ಮಷಿನ್‌ ಸಿಗುತ್ತಿಲ್ಲ. ಮಷಿನ್‌ ಮಾಲೀಕರು ಹಾಗೂ ಮಧ್ಯವರ್ತಿಗಳು ಪರಿಸ್ಥಿತಿ ಲಾಭ ಪಡೆಯಲು ರೈತರ ಸುಲಿಗೆಗೆ ಮುಂದಾಗಿದ್ದಾರೆ.
 ಟಿ.ಆರ್‌. ರವಿಕುಮಾರ್‌, ರೈತ

ಕನ್ನ ಹಾಕಿದ ಮೇಲೆ ಬಾಗಿಲು ಮುಚ್ಚಿದಂತೆ ಅನ್ನದಾತರು ಪ್ರತಿ ಬಾರಿ ಒಂದಲ್ಲ ಒಂದು ರೀತಿ ಸಮಸ್ಯೆ ಎದುರಿಸುತ್ತಾ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈಗಾಗಲೇ ಭತ್ತದ ಕೊಯ್ಲು ಶೇ. 60ರಷ್ಟು ಮುಗಿದಿದೆ. ಜಿಲ್ಲೆಯಲ್ಲಿ ಒಂದಿಷ್ಟು ರೈತರು ಈಗಾಗಲೇ ಭತ್ತ ಮಾರಾಟ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ ಸಹ ಖರೀದಿ ಕೇಂದ್ರ ಆರಂಭ ಆಗಿಲ್ಲ. ಡಿ. 15ರಿಂದ ತೆರೆದರೂ ಕೂಡ ಅದರಿಂದ ಎಲ್ಲಾ ರೈತರಿಗೆ ಅನುಕೂಲ ಆಗಲ್ಲ. ಇದೆಲ್ಲಾ ಕೋಟೆ ಕನ್ನ ಹಾಕಿದ ಮೇಲೆ ಬಾಗಿಲು ಮುಚ್ಚಿದ ಹಾಗೆ. ಕಣ್ಣೀರು ಒರೆಸುವ ತಂತ್ರ ಅಷ್ಟೇ. ರೈತ ಬೆಳೆದ ಬೆಳೆಗೆ ಮಾತ್ರ ಬೆಲೆ ಸಿಗುತ್ತಿಲ್ಲ, ರೋಗಬಾಧೆ, ಮೆಷಿನ್‌ ಕೊರತೆ, ಅಕಾಲಿಕ ಮಳೆ.. ಹೀಗೆ ಹತ್ತಾರು ಸಮಸ್ಯೆಗಳಿಂದ ರೈತ ಬಳಲಿ, ಮತ್ತಷ್ಟು ಸಾಲದ ಸುಳಿಗೆ ಸಿಲುಕುತ್ತಾನೆ.
 ಹೊನ್ನೂರು ಮುನಿಯಪ್ಪ, ರೈತ ಮುಖಂಡ

  ವಿಜಯ ಸಿ. ಕೆಂಗಲಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next