Advertisement

ಟ್ಯಾಂಕರ್‌ನಿಂದ ನೀರು ಪೂರೈಸಲು ಸೂಚನೆ

10:56 AM Jun 18, 2019 | Suhan S |

ಕೊಪ್ಪ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ನೀರಿನ ಮೂಲವಾದ ಹಿರಿಕೆರೆ ಸಂಪೂರ್ಣ ಬತ್ತಿ ಹೋಗಿದೆ. ಹಾಗಾಗಿ, ಪಟ್ಟಣ ವ್ಯಾಪ್ತಿಯ ಜನರಿಗೆ ತೊಂದರೆಯಾಗದಂತೆ ಬೆಳಗಿನಿಂದಲೇ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಸೂಚಿಸಿದ್ದೇನೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

Advertisement

ಬಾಳಗಡಿ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಟಾಸ್ಕ್ಫೋರ್ಸ್‌ ಸಮಿತಿ ಸಭೆಯಲ್ಲಿ ಭಾಗವಹಿಸಿದ ನಂತರ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು.

ಹಾಳಾದ ವಾಟರ್‌ ಲಿಫ್ಟಿಂಗ್‌ ಪಂಪ್‌: ನಾಗಲಾಪುರದಿಂದ ಪಟ್ಟಣ ಪ್ರದೇಶಕ್ಕೆ ನೀರು ಸರಬರಾಜು ಮಾಡುವ ಸಿಗದಾಳು ಘಾಟಿಯ ಎರಡನೇ ಪಂಪ್‌ಹೌಸ್‌ನಲ್ಲಿ ವಾಟರ್‌ ಲಿಫ್ಟಿಂಗ್‌ ಪಂಪ್‌ ಹಾಳಾಗಿದ್ದು, ಅದನ್ನು ದುರಸ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚಿನ ಸಾಮರ್ಥ್ಯದಲ್ಲಿ ನೀರು ಸರಬರಾಜು ಮಾಡಲು ಸಾಧ್ಯವಾಗುವಂತೆ 15ಲಕ್ಷ ರೂ. ವೆಚ್ಚದಲ್ಲಿ 75ಎಚ್ಪಿ ಸಾಮರ್ಥ್ಯದ ಮೋಟರ್‌ ಖರೀದಿಸಿ ಅಳವಡಿಸುವ ಬಗ್ಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದೆ.

ಹಿರಿಕೆರೆಯಿಂದ ನೀರು ಶುದ್ಧೀಕರಣ ಘಟಕದ ವರೆಗೂ ನೀರು ಲಿಫ್ಟ್‌ ಮಾಡಲು ಅನುಕೂಲವಾಗುವಂತೆ 12ಲಕ್ಷ ರೂ. ವೆಚ್ಚದಲ್ಲಿ 50ಎಚ್ಪಿ ಸಾಮರ್ಥ್ಯದ ಪಂಪ್‌ ಅಳವಡಿಕೆಗೆ ಟೆಂಡರ್‌ ಕರೆಯಲಾಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿದ ನಂತರ ಚಾಲನೆ ನೀಡಲಾಗುವುದು ಎಂದರು.

ಹಿರಿಕೆರೆಯಲ್ಲಿ ರಂಧ್ರ: ಭಾನುವಾರ ಸಂಜೆ ವೇಳೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಿಳಿಯುತ್ತಿದ್ದಂತೆ ಹಿರಿಕೆರೆ ವೀಕ್ಷಣೆಗೆ ಆಗಮಿಸಿ ಅಲ್ಲಿನ ಸ್ಥಿತಿಗತಿ ತಿಳಿದಿದ್ದೇನೆ. ಕೆರೆಯ ಒಳಭಾಗದಲ್ಲಿ ರಂಧ್ರ ಬಿದ್ದಿರುವುದರಿಂದ ನೀರು ಈ ಮಟ್ಟಕ್ಕೆ ಬರುತ್ತಿದ್ದಂತೆ ಸುಮಾರು 5 ಇಂಚು ವೇಗದಲ್ಲಿ ಈ ರಂಧ್ರದ ಮೂಲಕ ಹೊರಹೋಗುತ್ತದೆ ಎಂದು ವಾಟರ್‌ಮ್ಯಾನ್‌ ಮಾಹಿತಿ ನೀಡಿದ್ದಾರೆ. ಕೂಡಲೇ ಅದನ್ನು ಟಾಸ್ಕ್ಪೋರ್ಸ್‌ ಹಣದಲ್ಲಿ ದುರಸ್ತಿ ಮಾಡಿಸಲು ಸೂಚಿಸಿದ್ದೇನೆ ಎಂದು ಹೇಳಿದರು.

Advertisement

ಕೆರೆ, ಕಟ್ಟೆಗಳಿಗೆ ಕಾಯಕಲ್ಪ: ಹರಿಹರಪುರ ಮತ್ತು ಕಸಬಾ ಹೋಬಳಿಗಳ ಜನವಸತಿ ಪ್ರದೇಶಗಳಿಗೆ 19 ಕೋಟಿ ರೂ.ವೆಚ್ಚದಲ್ಲಿ ನೀರೊದಗಿಸುವ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಆ ಯೋಜನೆ ಬದಲಾಗಿದ್ದು, ಜಲಧಾರೆ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಗ್ರಾಮಗಳನ್ನು ಸೇರಿಸಿ 23 ಕೋಟಿ ರೂ.ವೆಚ್ಚದಲ್ಲಿ ತುಂಗಾ ನದಿಯಿಂದ ನೀರೊದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜಲಧಾರೆ ಯೋಜನೆಯಡಿ ಮಲೆನಾಡನ್ನು ಸೇರಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಮಲೆನಾಡುಭಾಗದಲ್ಲಿ ಕೊಳವೆಬಾವಿ ಸಂಸ್ಕೃತಿ ಹೆಚ್ಚಾಗಿ ಕಂಡುಬರುತ್ತಿದ್ದು, ಇದರಿಂದ ನೀರಿನ ಮೂಲಗಳು ಹಾಳಾಗಲಿವೆ. ಜಲಧಾರೆ ಯೋಜನೆಯಡಿ ಹೆಚ್ಚಿನ ಕೆರೆ, ಕಟ್ಟೆಗಳಿಗೆ ಕಾಯಕಲ್ಪ ನೀಡಬಹುದಾಗಿದೆ ಎಂದರು.

ಟ್ಯಾಂಕರ್‌ನಿಂದ ನೀರು ಪೂರೈಕೆ: ತಹಶೀಲ್ದಾರ್‌ ಎರ್ರಿಸ್ವಾಮಿ ಮಾತನಾಡಿ, ಕೆಸವೆ ಗ್ರಾಪಂಯ ಗಾಡಿಕೆರೆ ವಾಟೆಸರಳಿನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ವಸತಿ ಪ್ರದೇಶದಿಂದ ಸುಮಾರು 1.5 ಕಿ.ಮೀ. ದೂರದಿಂದ ಪೈಪ್‌ ಅಳವಡಿಸಿ ನೀರು ಪೂರೈಸುವಂತೆ ಜನತೆ ಮನವಿ ಮಾಡಿದ್ದಾರೆ. ಜನವಸತಿ ಪ್ರದೇಶದ ಅಕ್ಕಪಕ್ಕದಲ್ಲಿಯೇ ಕೆರೆಗಳಿದ್ದು, ಅಲ್ಲಿನ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ನೀರು ಪೂರೈಕೆಗೆ ಸೂಕ್ತ ಕ್ರಮ ಕೈಗೊಳ್ಳಬಹುದಾಗಿದೆ. ಅಲ್ಲಿಯವರೆಗೂ ಅವಶ್ಯವಿದ್ದಲ್ಲಿ ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ತಾಪಂ ಇಒ ಕೆ.ಗಣಪತಿ, ಪಪಂ ಮುಖ್ಯಾಧಿಕಾರಿ ಶೇಷಮೂರ್ತಿ, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ವಿಜಯ್‌ಗೌಡ, ಪಪಂ ಸದಸ್ಯರಾದ ಕೆ.ಎಸ್‌.ಸುಬ್ರಹ್ಮಣ್ಯ ಶೆಟ್ಟಿ, ವಿಜಯಕುಮಾರ್‌, ಸಮಾಜ ಕಲ್ಯಾಣ ಇಲಾಖೆ, ಮೆಸ್ಕಾಂ, ಜಿಪಂ ಇಂಜಿನಿಯರಿಂಗ್‌ ವಿಭಾಗದ ಮುಹಿಮ್‌ ಮತ್ತು ಸಂಪತ್‌ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next