Advertisement

ಕೋವಿಡ್‌ ರೀತಿಯೇ ಅಪ್ಪಳಿಸಿದ ನೋಟಿಸ್‌!

02:49 PM Aug 21, 2021 | Team Udayavani |

ಬೆಂಗಳೂರು: ಆಸ್ತಿ ತೆರಿಗೆ ಬಾಕಿ ವಸೂಲಿ ಹಾಗೂ ದಂಡದ ಬಡ್ಡಿ ಪಾವತಿ ಮಾಡುವಂತೆ ಪಾಲಿಕೆ ಅಧಿಕಾರಿಗಳು ನೀಡಿರುವ ನೋಟಿಸ್‌ಗೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಮತ್ತೊಂದೆಡೆ ನೋಟಿಸ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ಆಸ್ತಿ ಮಾಲೀಕರು, ನಾಗರಿಕಕ್ಷೇಮಾಭಿವೃದ್ಧಿ ಸಂಘಟನೆಗಳು, ತಮ್ಮ ಬೇಡಿಕೆ ಹಾಗೂ ಸಮಸ್ಯೆಗಳ ಬಗ್ಗೆ ಮೌನ ಮುರಿದಿದ್ದಾರೆ.

Advertisement

ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿ ಕೊಂಡ ಆಸ್ತಿ ಮಾಲೀಕರಿಗೆ 2016-17ರಲ್ಲೇ ನೋಟಿಸ್‌ ನೀಡಬೇಕಿತ್ತು. ಈಗ ದಿಢೀರ್‌ ದಂಡ ಮತ್ತು ದಂಡದ ಬಡ್ಡಿ ಪಾವತಿ ನೋಟಿಸ್‌ ನೀಡಿರುವುದರ ಹಿಂದಿನ ಉದ್ದೇಶವೇನು? ಈ ಬಗ್ಗೆ ಸರ್ಕಾರ ಪರಿಶೀಲಿಸಬೇಕು. ಜತೆಗೆ ದಂಡ ವಸೂಲಾತಿ ತಗ್ಗಿಸುವ ಹಾಗೂ ರದ್ದುಗೊಳಿಸುವ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

“ನಾನು ಖಾಸಗಿ ಕಂಪನಿ ಉದ್ಯೋಗಿ. ಕೋವಿಡ್‌ ಲಾಕ್‌ಡೌನ್‌ನಿಂದ ಮೊದಲಿದ್ದ ಸಂಬಳದಲ್ಲಿ ಅರ್ಧಕ್ಕರ್ಧ ಕಡಿತವಾಗಿದೆ. ಕಟ್ಟಡ ನಿರ್ಮಾಣ ಕ್ಕೆಂದು ಪಡೆದ ಬ್ಯಾಂಕ್‌ ಸಾಲ ಪಾವತಿಗೂ ಕಷ್ಟಪಡುತ್ತಿದ್ದೇನೆ. ಇಷ್ಟೊಂದು ಆಸ್ತಿ ತೆರಿಗೆ ಪಾವತಿ ಹಾಗೂ ದಂಡದ ಬಡ್ಡಿ ಪಾವತಿ ನೋಟಿಸ್‌ ಒಮ್ಮೆಲೆ ಕೋವಿಡ್‌ ಮಹಾಮಾರಿಯಂತೆಯೇ ಬಂದು ಅಪ್ಪಳಿಸಿದೆ!’ ಎಂದು ಮಾಲೀಕರೊಬ್ಬರು ಅಧಿಕಾರಿಗಳು ನೀಡಿದ ನೋಟಿಸ್‌ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು.

ಇದನ್ನೂ ಓದಿ:ಪುನೀತ್‌ ವರ್ಕೌಟ್ ವಿಡಿಯೋಗೆ ಫ್ಯಾನ್ಸ್‌ ಫಿದಾ

“ಕೋವಿಡ್‌ ಲಾಕ್‌ಡೌನ್‌ನಿಂದ ಸಂಬಳ ಕಡಿತ, ಉದ್ಯೋಗ ನಷ್ಟ ಎಂದು ಹಲವರು ತಿಂಗಳಿಡೀ ಮನೆ, ಕುಟುಂಬ ನಿರ್ವಹಣೆಗೂ ಪರದಾಡು ತ್ತಿದ್ದಾರೆ. ಸ್ವಂತ ಉದ್ದಿಮೆ ನಡೆಸಲು ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಇದರ ಮಧ್ಯೆ ಆಸ್ತಿ ತೆರಿಗೆ ಪಾವತಿ ನೋಟಿಸ್‌ ಆಸ್ತಿ ಮಾಲೀಕರಿಗೆ ದಿಗ್ಬ್ರಮೆ ಮೂಡಿಸಿದೆ’ ಎಂದು ವಿವಿಧ ನಾಗರಿಕ ಕ್ಷೇಮಾಭಿವೃದ್ಧಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತವೆ.

Advertisement

“ಮೇಲಧಿಕಾರಿಗಳ ಆದೇಶದಂತೆ ವಲಯ ವರ್ಗೀಕರಣವನ್ನುತಪ್ಪಾಗಿ ಘೋಷಿಸಿಕೊಂಡ ಆಸ್ತಿ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ.ಕೋವಿಡ್‌ ಲಾಕ್‌ಡೌನ್‌ ನಿಂದ ಆಸ್ತಿ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವುದು ನಿಜ.ಹೀಗಾಗಿ, ದಂಡ ಮತ್ತು ಬಡ್ಡಿ ವಿನಾಯಿತಿಗೆ ಒತ್ತಾಯಿ ಸುತ್ತಿದ್ದಾರೆ. ಮೇಲಾಧಿಕಾರಿಗಳು ಹಾಗೂ ಸರ್ಕಾರದ ಮಟ್ಟದಲ್ಲೇ ಸೂಕ್ತ ನಿರ್ಧಾರವಾಗಬೇಕಿದೆ. ಆದರೆ,ಈ ಮಧ್ಯೆ ಏನೂ ಉತ್ತರಿಸಲಾಗದೆ ನಾವೂ ಗೊಂದಲಕ್ಕೀಡಾಗಿದ್ದೇವೆ’ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗೊಂದಲ ನಿವಾರಣೆಗೆ ಒತ್ತಾಯ: “ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ವಲಯ ವರ್ಗೀಕರಣವನ್ನು ತಪ್ಪಾಗಿ ಘೋಷಿಸಿಕೊಂಡ ಆಸ್ತಿ
ಮಾಲೀಕರಿಗೆ 2016-17ರಲ್ಲೇ ನೋಟಿಸ್‌ ನೀಡಬೇಕಿತ್ತು. 2016ರಲ್ಲಿ ಆಸ್ತಿ ಮಾಲೀಕರಿಗೆ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.ವಾರ್ಡ್‌ ಕಮಿಟಿ ಮೂಲಕವೂ ಜಾಗೃತಿ ಮೂಡಿಸಿಲ್ಲ. ಈಗ ದಿಢೀರನೆ, ದಂಡ ಮತ್ತು ದಂಡದ ಬಡ್ಡಿ ಪಾವತಿಸುವ ನೋಟಿಸ್‌ ನೀಡಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಶೀಘ್ರ ಚರ್ಚೆ ನಡೆಸಿ ಆಸ್ತಿ ಮಾಲೀಕರಲ್ಲಿನ ಗೊಂದಲ ನಿವಾರಿಸಬೇಕು. ಜತೆಗೆ, ದಂಡ ವಸೂಲಾತಿ ತಗ್ಗಿಸುವ ಹಾಗೂ ರದ್ದುಗೊಳಿಸುವ ಬಗ್ಗೆ ಸ್ಪಷ್ಟ ನಿರ್ಧಾರಕೈಗೊಳ್ಳಬೇಕಿದೆ ಎಂದು ನಾಗರಿಕರ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ನಡೆಗೆ ಬೇಸರ: ಪಾಲಿಕೆ ಕೇಂದ್ರ ಕಚೇರಿ ಹಾಗೂ ಎಂಟು ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ಕಂದಾಯ ವಿಭಾಗದಲ್ಲಿ 30 ಕಂದಾಯ ಅಧಿಕಾರಿಗಳು, 64 ಸಹಾಯಕ ಕಂದಾಯ ಅಧಿಕಾರಿಗಳು, 400 ಮಂದಿ ರೆವಿನ್ಯೂ ಇನ್‌ಸ್ಪೆಕ್ಟರ್‌ ಹಾಗೂ ಮೌಲ್ಯ ಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟು ಜನ ಅಧಿಕಾರಿಗಳಿದ್ದೂ ವ್ಯತ್ಯಾಸ ಮೊತ್ತದ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿಲ್ಲ. ಆಸ್ತಿ ಮಾಲೀಕರಿಗೆ ಸೂಕ್ತ
ಮಾಹಿತಿ ನೀಡುವಲ್ಲಿ ಎಡವಿದ್ದಾರೆ ಎಂದು ಅಸಮಾಧಾನ್ಯ ವ್ಯಕ್ತಪಡಿಸಿದ್ದಾರೆ.


ಕೋವಿಡ್‌ ನೆಪದಲ್ಲಿ ನೋಟಿಸ್‌ ಜಾರಿ: ಎರಡನೇ ಅಲೆ ವೇಳೆ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚಿದ್ದರಿಂದ ಕಂದಾಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೋವಿಡ್‌ ನಿಯಂತ್ರಣ ಕೆಲಸಗಳಿಗೆ ನೇಮಿಸಲಾಗಿತ್ತು. ಆ ವೇಳೆ ಆಸ್ತಿ ತೆರಿಗೆ ಸಂಗ್ರಹದ ಬಗ್ಗೆ ಗಮನಹರಿಸಿಲ್ಲ. ಪಾಲಿಕೆ ಆಡಳಿತಾಧಿಕಾರಿಗಳು ತಮ್ಮ ಮೊದಲ ಸಭೆಯಲ್ಲಿ ಪಾಲಿಕೆಯ ಪ್ರಮುಖಆದಾಯದ ಮೂಲವಾದ ಆಸ್ತಿ ತೆರಿಗೆ ಸಂಗ್ರಹಕ್ಕೆ ಒತ್ತು ನೀಡುವಂತೆ
ಸ್ಪಷ್ಟ ಸೂಚನೆ ನೀಡಿದ್ದರು . ಆದರೆ, ಕೆಲವು ಸಿಬ್ಬಂದಿ ಕೋವಿಡ್‌ ಸಂದರ್ಭದ ನೆಪವೊಡ್ಡಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಈ ನಡುವೆ ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿಗಳ ಹಂತದಲ್ಲಿ 2016-17 ರಿಂದ 2019-20ರವರೆಗೆ ನಾಲ್ಕು ವರ್ಷದ ಅವಧಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿ ಆಸ್ತಿಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆಎಂದುಹಿರಿಯ ಅಧಿಕಾರಿಯೊಬ್ಬರು ದೂರಿದ್ದಾರೆ.

ತೆರಿಗೆಬಾಕಿ ಉಳಿಸಿಕೊಂಡವರಿಗೆ ಕೊಂಚ ರಿಲೀಫ್
ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಪಾಲಿಕೆ ಕೊಂಚ ರಿಲೀಫ್ ನೀಡಿದೆ. ಈವರೆಗೆ ಆಸ್ತಿ ತೆರಿಗೆಯ ಹಳೆಯ ಬಾಕಿಗೆ ಪ್ರತಿ ತಿಂಗಳಿಗೆ ಶೇ.2ರಂತೆ ವರ್ಷಕ್ಕೆ ಶೇ.24ರಷ್ಟು ಬಡ್ಡಿ ವಿಧಿಸಲಾಗುತ್ತಿತ್ತು. ಆದರೆ, 2020ರ ಬಿಬಿಎಂಪಿ ಕಾಯ್ದೆ ಜಾರಿಯಾದ ಬಳಿಕ ದಂಡದ ಬಡ್ಡಿಯ ಪ್ರಮಾಣವನ್ನು ವಾರ್ಷಿಕ ಶೆ.9ಕ್ಕೆ ಇಳಿಕೆ ಮಾಡಲಾಗಿದೆ. ಆ ಮೂಲಕ ‌ ಶೇ.15ರಷ್ಟು ಬಡ್ಡಿ ದರವನ್ನು ಇಳಿಕೆ ಮಾಡಿದಂತಾಗಿದೆ. ಈ ಸಂಬಂಧ ಬಿಬಿಎಂಪಿಯ ತೆರಿಗೆ ಪಾವತಿ ಸಾಫ್ಟ್ ವೇರ್‌ನಲ್ಲೂ ಪೂರಕವಾದ ಮಾರ್ಪಾಡು ಮಾಡಲಾಗಿದೆ. ಇದರಿಂದ ಅನೇಕ ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅನುಕೂಲವಾಗಲಿದೆ ಎಂದುಕಂದಾಯ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಏಪ್ರಿಲ್‌- ಮೇ ತಿಂಗಳ ಆಸ್ತಿ ತೆರಿಗೆ ರಿಯಾಯಿತಿ
ಪ್ರತಿ ಆರ್ಥಿಕ ವರ್ಷದ ಆರಂಭವಾಗುವ ಏಪ್ರಿಲ್‌ ತಿಂಗಳ ಕೊನೆಯದಿನದ ತನಕ ಒಂದೇ ಬಾರಿಗೆ ಆಸ್ತಿ ತೆರಿಗೆ ಸಲ್ಲಿಸುವವರಿಗೆ ಶೇ.5ರಷ್ಟು ಆಸ್ತಿ ತೆರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ ಲಾಕ್‌ಡೌನ್‌ ಕಾರಣಕ್ಕೆ ಮೇ 31ರವರೆಗೆ ಹಾಗೂ ಆನಂತರ ಜೂನ್‌ 30ರ ತನಕ 2ನೇ ಬಾರಿಗೆ ಆಸ್ತಿ ತೆರಿಗೆ ಪಾವತಿಗೆ ನಗರಾಭಿವೃದ್ಧಿ ಇಲಾಖೆ ಅವಧಿಯನ್ನು ವಿಸ್ತರಣೆ ಮಾಡಿತ್ತು. ಅದರಂತೆ, ಬಿಬಿಎಂಪಿ ಆಸ್ತಿ ತೆರಿಗೆ ವ್ಯಾಪ್ತಿಯಲ್ಲಿ ಒಟ್ಟು 22 ಲಕ್ಷ ಆಸ್ತಿಗಳಿದ್ದು, ಜೂನ್‌ 1ರ ತನಕ 8,60,463 ಮಂದಿ 2021-22 ಸಾಲಿನ ಆಸ್ತಿ ತೆರಿಗೆಯನ್ನು ಪಾವತಿಸಿದ್ದಾರೆ ಎಂದು ಹೇಳಿದ್ದಾರೆ.

ಬೇಡಿಕೆಗಳಿವು
– ಪಾಲಿಕೆ ನೀಡಿರುವ ಎಲ್ಲ ಸೂಚನೆ(ನೋಟಿಸ್‌)ಗಳನ್ನು ಹಿಂಪಡೆದುಕೊಳ್ಳಬೇಕು.
– ತೆರಿಗೆ ಮೊತ್ತದಿಂದ ಆಗಿರುವ ನಷ್ಟವನ್ನು ಮಾತ್ರ ಕಟ್ಟಿಸಿಕೊಂಡು ಬಡ್ಡಿ ಹಾಗೂ ದಂಡವನ್ನು ಮನ್ನಾ ಮಾಡಬೇಕು.
– ಪಾಲಿಕೆ ಈ ವಲಯ ಮರು ವರ್ಗೀಕರಣವನ್ನು ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ತರಬೇಕು.
– ವಲಯ ಮರು ವಿಂಗಡಣೆ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಬೇಕು.
– ಆಸ್ತಿ ತೆರಿಗೆಯನ್ನು ಪಾವತಿಸುವ ಸಮಯದಲ್ಲಿ, ಆಸ್ತಿ ಮಾಲೀಕರು ಮರುಪರಿಶೀಲನೆಯ ಬಗ್ಗೆ ಎಚ್ಚರವಹಿಸಬೇಕು.
– ಪ್ರಾಪರ್ಟಿಗಳನ್ನು ಜಿಯೋ-ಟ್ಯಾಗ್‌ ಮಾಡಲಾಗುತ್ತಿದ್ದು, ಸಾಧ್ಯವಾದರೆ ಸ್ವಯಂಚಾಲಿತವಾಗಿ ಪ್ರತಿಯೊಂದು ಆಸ್ತಿಗೂ ವಲಯಗಳನ್ನು
ವರ್ಗೀಕರಿಸಬಹುದು.
– ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಮಾಡಿರಬಹುದು, ಹಾಗೆಂದು ಉಳಿದವರಿಗೂ ನೋಟಿಸ್‌ ನೀಡುವುದು ಸರಿಯಲ್ಲ.
– ಉದ್ದೇಶಪೂರ್ವಕವಾಗಿ ಇದ್ದರೂ ಅಥವಾ ಇಲ್ಲದಿದ್ದರೂ ಕಡಿಮೆ ಪಾವತಿಗಳ ಉದಾಹರಣೆಗಳಿದ್ದರೆ ಅದೇ ವರ್ಷದಲ್ಲಿ ನೋಟಿಸ್‌ ನೀಡಬೇಕು

-ವಿಕಾಸ್‌ ಆರ್‌. ಪಿಟ್ಲಾಲಿ

Advertisement

Udayavani is now on Telegram. Click here to join our channel and stay updated with the latest news.

Next