Advertisement

ಬಾಲ್ಯವಿವಾಹ ತಡೆಯದಿದ್ದರೆ ನೋಟಿಸ್‌

03:26 PM Sep 10, 2017 | Team Udayavani |

ಯಾದಗಿರಿ: ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ವಿಫಲವಾದಲ್ಲಿ ಸಂಬಂಧಪಟ್ಟ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರಿಗೆ ನೋಟಿಸ್‌ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶರಣಪ್ಪ ಪಾಟೀಲ್‌ ಗೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಸೂಚಿಸಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಕ್ಕಳ ಸಹಾಯ ವಾಣಿ-1098 ಸಲಹಾ ಮಂಡಳಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಗ್ಗೆ ಸಮಸ್ಯೆ ಇದ್ದಲ್ಲಿ ತಿಳಿಸಿದರೆ, ಸದ್ಯದಲ್ಲಿ ಗ್ರಾಮ ಪಂಚಾಯತ್‌ ಅಧ್ಯಕ್ಷರ ಸಭೆ ಕರೆಯಲಿದ್ದು, ಅಲ್ಲಿ ಅವರಿಗೆ ಸೂಚನೆ ನೀಡಲಾಗುವುದೆಂದು ಅವರು ತಿಳಿಸಿದರು.

ಏಪ್ರಿಲ್‌ 2017ರಿಂದ ಜೂನ್‌ 2017ರ ವರೆಗೆ 70 ಬಾಲ್ಯವಿವಾಹ ಪ್ರಕರಣ ಪತ್ತೆಯಾಗಿದ್ದು, ಜುಲೈ 2015ರಿಂದ ಜೂನ್‌ 2017ರ ವರೆಗೆ ಒಟ್ಟು 141 ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿವೆ ಎಂದು ಮಕ್ಕಳ ಸಹಾಯವಾಣಿ ಸಂಯೋಜಕ ಶರ್ವಯ್ಯ ಮಾಹಿತಿ ನೀಡಿದರು.

ಬಾಲ್ಯವಿವಾಹವಾದ 70 ಮಕ್ಕಳ ಪೈಕಿ ಯಾರು ಶಾಲೆಗೆ ಹೋಗುತ್ತಿದ್ದಾರೆ ಮುಂತಾದವುಗಳ ಕುರಿತಂತೆ ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದಾಗ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಶರಣಪ್ಪ ಪಾಟೀಲ, ಶಾಲಾ ಶಿಕ್ಷಕರು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

ಲಂಬಾಣಿ ತಾಂಡಗಳಲ್ಲಿ ಹೆಚ್ಚಾಗಿ ಬಾಲ್ಯವಿವಾಹ ನಡೆಯುತ್ತಿದ್ದು, ಇತ್ತ ಗಮನಹರಿಸಬೇಕು. ಮಾಹಿತಿ, ಶಿಕ್ಷಣ ಹಾಗೂ ಸಂವಹನದ ಮೂಲಕ ಅರಿವು ಮೂಡಿಸಬೇಕೆಂದು ಕರೆ ನೀಡಿದರು. ಇದೇ ವೇಳೆ ದೊರೆತ ಮಕ್ಕಳನ್ನು ಮಕ್ಕಳ ಸಹಾಯವಾಣಿ-1098ಗೆ ಹೇಗೆ ಮಾಹಿತಿ ನೀಡುವುದು ಸೇರಿದಂತೆ ವಿವಿಧ ಪ್ರಕಿಯೆಗಳ ಕುರಿತು ಅಧಿಕಾರಿಗಳಿಂದ ಜಿಲ್ಲಾ ಧಿಕಾರಿಗಳು ಮಾಹಿತಿ ಪಡೆದರು. ಮಕ್ಕಳ ಸಾಗಾಟ ಕುರಿತಂತೆ ಪ್ರಶ್ನೆ ಕೇಳಲಾಗಿ, ಜಿಲ್ಲೆಯಲ್ಲಿ ಯಾವುದೇ ಮಕ್ಕಳ ಸಾಗಾಟ ಪ್ರಕರಣಗಳು ಕಂಡುಬಂದಿಲ್ಲವೆಂದು ಪೊಲೀಸ್‌ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಪೋಕೊ ಕಾಯ್ದೆಯಡಿ ಜಿಲ್ಲೆಯಲ್ಲಿ ಈ ವರ್ಷ ಎರಡು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

Advertisement

ಮಕ್ಕಳ ಸಹಾಯವಾಣಿ ಮೂಲಕ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡ ಮಕ್ಕಳನ್ನು ತಪಾಸಣೆಗೆ ಆಸ್ಪತ್ರೆಗಳಿಗೆ ಕರೆ ತರುತ್ತಿಲ್ಲ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಎಂ.ಎಸ್‌. ಪಾಟೀಲ್‌ ಸಭೆ ಗಮನಕ್ಕೆ ತಂದರು. ತಮ್ಮ ಸುಪರ್ದಿಗೆ ತೆಗೆದುಕೊಂಡು ಮಕ್ಕಳನ್ನು ಸನಿಹದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಜರುಪಡಿಸಿ ಆರೋಗ್ಯ ತಪಾಸಣೆ ಮಾಡಿಸಲಾಗುವುದೆಂದು ಮಕ್ಕಳ ಸಹಾಯವಾಣಿ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಜಿಲ್ಲೆಯಲ್ಲಿ ಒಟ್ಟು 45 ಬಾಲಕಾರ್ಮಿಕರನ್ನು ದಾಳಿ ನಡೆಸಿ ಪತ್ತೆ ಹಚ್ಚಿದ್ದು, ಆಯಾ ಅಂಗಡಿ ಮತ್ತು ಹೋಟೆಲ್‌ ಮಾಲೀಕರಿಗೆ ಸದ್ಯದಲ್ಲಿ ನೋಟಿಸ್‌ ನೀಡಲಾಗುವುದು ಎಂದು ಬಾಲಕಾರ್ಮಿಕ ಇಲಾಖೆ ಜನಾ ನಿರ್ದೇಶಕ ರಘುವೀರ ಸಿಂಗ್‌ ಠಾಕೂರ ಸಭೆಗೆ ಮಾಹಿತಿ ನೀಡಿದರು. ಮಕ್ಕಳ ರಕ್ಷಣೆ ನಿಟ್ಟಿನಲ್ಲಿ ಜಿಪಂ, ಶಿಕ್ಷಣ ಇಲಾಖೆ, ಶಿಕ್ಷಣ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಪೊಲೀಸ್‌ ಇಲಾಖೆ, ರೈಲ್ವೆ ಇಲಾಖೆ, ಸಾರಿಗೆ ಇಲಾಖೆ ಮುಂತಾದವುಗಳು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಇದೇ ಸಂದರ್ಭದಲ್ಲಿ ಪಿಪಿಟಿ ಪ್ರದರ್ಶನದ ಮೂಲಕ ಮಕ್ಕಳ ಸಹಾಯವಾಣಿ ಸಂಯೋಜಕರಾದ ಶರ್ವಯ್ಯ ಅವರು ಸಭೆಗೆ ಮಾಹಿತಿ ನೀಡಿದರು. ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪುರ, ಮಕ್ಕಳ ಕಲ್ಯಾಣ ಸಮಿತಿಯ ವಿಶ್ವನಾಥ ರೆಡ್ಡಿ ಪಾಟೀಲ್‌, ಕೊಲ್ಯಾಬ್‌ ಕೇಂದ್ರ ಡಾನ್‌ ಬೋಸ್ಕೋ ಸಮಾಜ ಸೇವಾ ಕೇಂದ್ರದ ಫಾದರ್‌ ಜಿ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next