Advertisement

ಫ‌ಲಿತಾಂಶದ ಬಳಿಕ ರಾಜ್ಯದಲ್ಲಿ ಏನೂ ಆಗೋಲ್ಲ: ಜಿಟಿಡಿ

04:20 PM May 15, 2019 | Team Udayavani |

ಶ್ರೀರಂಗಪಟ್ಟಣ: ಮೇ 23ರ ಲೋಕಸಭಾ ಚುನಾವಣಾ ಫ‌ಲಿತಾಂಶದ ಬಳಿಕ ರಾಜ್ಯದಲ್ಲಿ ಏನೂ ಆಗುವುದಿಲ್ಲ ಎಂದು ಸಹಕಾರ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

Advertisement

ಪಟ್ಟಣದ ಶ್ರೀ ನಿಮಿಷಾಂಬ ದೇವಿ ವರ್ಧಂತ್ಯುತ್ಸ ವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಯಾಗುತ್ತಿದೆ ಎನ್ನುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಈ ಫ‌ಲಿತಾಂಶದಿಂದ ಏನೂ ಬದಲಾವಣೆಯಾಗೋಲ್ಲ. ಆದರೆ, ಎಲ್ಲರೂ ದೇಶದ ಫ‌ಲಿತಾಂಶ ಏನಾಗಬಹುದೆಂಬ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅದಕ್ಕಾಗಿ ಮೇ 23 ಫ‌ಲಿತಾಂಶವನ್ನು ಕಾತರದಿಂದ ಎದುರುನೋಡುತ್ತಿದ್ದಾರೆ.

ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಧಿಕಾರ ಹೋಗುತ್ತೆ ಅಂತಾನೇ ಇದ್ದಾರೆ. ಇದುವರೆಗೂ ಅವರು ಹೇಳಿರುವ ಭವಿಷ್ಯವೆಲ್ಲಾ ಸುಳ್ಳಾಗಿದೆ. ಈಗಲೂ ಸರ್ಕಾರ ಉರುಳುವ ಮಾತನಾಡುತ್ತಿದ್ದಾರೆ. ಅದೂ ಸಹ ಸುಳ್ಳಾಗಲಿದೆ ಎಂದು ದೃಢವಾಗಿ ಹೇಳಿದರು.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಇನ್ನು ನಾಲ್ಕು ವರ್ಷ ರಾಜ್ಯದ ಸರ್ವತೋಮುಖ ಅಭಿವೃದ್ಧಿ ಮಾಡುತ್ತಾರೆ. ಮೈತ್ರಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುವರು. ಕುಮಾರಸ್ವಾಮಿ ಮುಖ್ಯಮಂತ್ರಿ, ಪರಮೇಶ್ವರ್‌ ಉಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಅವರ ನೇತೃತ್ವದ ಮಂತ್ರಿಮಂಡಲ ಅಧಿಕಾರದಲ್ಲಿರಲಿದೆ ಎಂದು ಭವಿಷ್ಯ ನುಡಿದರು.

ಮಂಡ್ಯದಲ್ಲಿ ಮೈತ್ರಿನಾಯಕರು ವಾಕ್ಸಮರ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ ಅವರು, ರಾಜ್ಯದಲ್ಲಿ ಹಾಗೂ ಮಂಡ್ಯದಲ್ಲಿ ನಡೆಯುತ್ತಿರುವ ಮೈತ್ರಿ ನಾಯಕರ ವಾಕ್ಸಮರ ಇಂದಿನಿಂದ ನಿಲ್ಲುತ್ತೆ. ಅವರೆಲ್ಲರಿಗೂ ಜ್ಞಾನೋದಯ ವಾಗಿದೆ. ಅವರು ಯಾರೂ ಸಹ ಇನ್ನು ಮುಂದೆ ಮಾತನಾಡುವುದಿಲ್ಲ. ಎಲ್ಲಾ ಹಿರಿಯರು ಈಗಾಗಲೇ ಕುಳಿತು ಮಾತನಾಡಿದ್ದಾರೆ. ನಾವೆಲ್ಲರು ಒಗ್ಗಟ್ಟಾಗಿದ್ದು, ಒಂದೇ ತಟ್ಟೆಯಲ್ಲಿ ಊಟ ಮಾಡುವ ಸನ್ನಿವೇಶವಿದೆ. ಸಣ್ಣ ಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡುವ ಹೋಗುವ ಮಾತನಾಡಿದ್ದಾರೆ ಎಂದರು.

Advertisement

ನನ್ನ ಶ್ರೀಮತಿಯವರ ಅಪೇಕ್ಷೆ ಮೇರೆಗೆ ಈ ದೇವಸ್ಥಾನಕ್ಕೆ ಬಂದಿದ್ದೇನೆ. ಅಮ್ಮನವರ ಉತ್ಸವದಲ್ಲಿ ಪಾಲ್ಗೊಂಡಿದ್ದು ಬಹಳ ಸಂತೋಷ ಉಂಟುಮಾಡಿದೆ. ಅರ್ಚಕರು 101 ಕಳಸದ ಅಭಿಷೇಕವನ್ನು ಭಕ್ತಿ ಪೂರ್ವಕವಾಗಿ ಮಾಡಿದ್ದಾರೆ. ಈ ನಾಡಿಗೆ ಮಳೆ, ಬೆಳೆ ಸೌಖ್ಯ ತರಬೇಕು. ಎಲ್ಲರಿಗೂ ಉತ್ತಮ ಅರೋಗ್ಯ ಕೊಟ್ಟು ಕಾಪಾಡಲಿ. ಎಲ್ಲರೂ ಪ್ರೀತಿ, ಶಾಂತಿ, ಸಹಬಾಳ್ವೆಯಿಂದ ಬಾಳಲು ತಾಯಿ ಆಶೀರ್ವಾದ ಎಲ್ಲರಿಗೂ ಇರಲಿ ಎಂದರು.

ದೇವಾಲಯದ ವತಿಯಿಂದ ಸಚಿವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ಶ್ರೀ ನಿಮಿಷಾಂಬ ದೇಗುಲದ ಅರ್ಚಕರಿಂದ ಬಲಗೈಗೆ ದಾರ ಕಟ್ಟಿಸಿಕೊಂಡ ಸಚಿವ ಜಿ.ಟಿ.ದೇವೇಗೌಡರು ದೇವರಿಗೆ ಕೈಮುಗಿದರು.

Advertisement

Udayavani is now on Telegram. Click here to join our channel and stay updated with the latest news.

Next