Advertisement

ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಆಸಕ್ತಿಯೇ ಇಲ್ಲ!

10:28 AM Sep 24, 2018 | Team Udayavani |

ಸುಳ್ಯ: ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗೆ ಘನತ್ಯಾಜ್ಯ ಘಟಕ ಸ್ಥಾಪಿಸುವ ಯೋಜನೆ ಆರಂಭಿಸಿ ದಶ ವರ್ಷಗಳೇ ಸಂದಿವೆ. ತಾಲೂಕಿನಲ್ಲಿ ಈ ಯೋಜನೆ ತಳಮಟ್ಟದಲ್ಲಿ ಮಕಾಡೆ ಮಲಗಿದೆ. 28ರ ಪೈಕಿ 3 ಗ್ರಾ.ಪಂ.ಗಳು ಘಟಕ ಸ್ಥಾಪಿಸಿ ಕಾರ್ಯಾರಂಭಮಾಡಿವೆ. ಇನ್ನೆರಡು ನಿರ್ಮಾಣದ ಹಂತದಲ್ಲಿವೆ. ಉಳಿದ ಗ್ರಾ.ಪಂ. ಗಳಲ್ಲಿ ಸ್ಥಳ ಗುರುತಿಸುವ ಪ್ರಕ್ರಿಯೆಗೆ ಗ್ರಹಣ ಬಡಿದಿದೆ. ಇದು ಉದಯವಾಣಿ ಸುದಿನ ಪರಿಶೀಲನೆ ವೇಳೆ ಕಂಡ ಸ್ಥಿತಿ-ಗತಿ.

Advertisement

ಏನಿದು ಯೋಜನೆ?
2008ರಲ್ಲಿ ಘನ ತ್ಯಾಜ್ಯ ಘಟಕ ಸ್ಥಾಪಿಸುವ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಿತ್ತು. ಆರಂಭದಲ್ಲಿ ನಿರ್ಮಲ ಭಾರತ್‌ ಅಡಿ ಅನುಷ್ಠಾನಕ್ಕೆ ಬಂತು. ಆ ಬಳಿಕ ಕೇಂದ್ರ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವಚ್ಛ ಭಾರತ್‌ ಅಭಿಯಾನದಲ್ಲಿ ಜಿ.ಪಂ. ಮುಖಾಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು.

ಪ್ರತಿ ಗ್ರಾ.ಪಂ.ನಲ್ಲಿ ತ್ಯಾಜ್ಯ ಮರು ಬಳಕೆ ಈ ಘಟಕ ನಿರ್ಮಾಣದ ಉದ್ದೇಶವಾಗಿತ್ತು. 2012ರಿಂದ ಪ್ರತಿ ಘಟಕ ನಿರ್ಮಾಣಕ್ಕೆ ಸರಕಾರ 20 ಲಕ್ಷ ರೂ. ಅನು ದಾನ ನೀಡುತ್ತಿದೆ. ಆಯಾ ಗ್ರಾ.ಪಂ. ಸ್ಥಳ ನಿಗದಿಪಡಿಸಿ, ಕ್ರಿಯಾ ಯೋಜನೆ ತಯಾರಿಸಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಅನುಮತಿ ಪಡೆದುಕೊಳ್ಳಬೇಕು. ಯೋಜನಾ ವರದಿ, ಎಸ್ಟಿ ಮೇಟ್‌, ಪ್ಲಾನ್‌, ಗ್ರಾಮ ನಕ್ಷೆ, ಪಹಣಿ ಪತ್ರ ಸಹಿತ ದಾಖಲೆಗಳನ್ನು ಜಿ.ಪಂ.ಗೆ ಕಳುಹಿಸಬೇಕು. ಅಲ್ಲಿಂದ ಸರಕಾರಕ್ಕೆ ಸಲ್ಲಿಸಿ, ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಅನುಮೋದನೆಗೊಂಡು ಅನುದಾನ ಮಂಜೂರು ಆಗುತ್ತದೆ. ನೋಂದಾಯಿತ ಗುತ್ತಿಗೆ ಸಂಸ್ಥೆ ಮೂಲಕ ಕಾಮಗಾರಿ ನಡೆಯುತ್ತದೆ. ಈಗ ಆನ್‌ಲೈನ್‌ ಮೂಲಕ ದಾಖಲೆ ಸಲ್ಲಿಸಬೇಕಿದೆ.

ತ್ಯಾಜ್ಯ ಸಂಗ್ರಹ ಹೇಗೆ?
ಹಸಿ/ಒಣ ಕಸ ಪ್ರತ್ಯೇಕ್ಷಿಸಿ ಅದನ್ನು ಘಟಕಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ಅದನ್ನು ಮರು ಬಳಕೆ ಮಾಡಿ, ಗೊಬ್ಬರ ಉತ್ಪಾದಿಸಿ ಮಾರಾಟ ಮಾಡುವುದು. ಆದಾಯದ ಜತೆಗೆ ತ್ಯಾಜ್ಯ ಸಂಸ್ಕರಿಸಿ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ ಉದ್ದೇಶ. ಮನೆ ಕಸ ಸಂಗ್ರಹಕ್ಕಿಂತಲೂ ರಸ್ತೆ, ಅಂಗಡಿ ಮಾರುಕಟ್ಟೆ, ಶಾಲೆ, ಪ್ರಯಾಣಿಕ ನಿಲ್ದಾಣ, ಕಾಲನಿಗಳ ತ್ಯಾಜ್ಯ ಸಂಗ್ರಹಿಸಿ, ಶುಚಿತ್ವದ ಜತೆಗೆ ಮರು ಬಳಸಲು ಕಾರ್ಯಸಾಧು ಯೋಜನೆಯಿದು.

ಈಗ ಏನಾಗಿದೆ?
ಮೂರು ಗ್ರಾ.ಪಂ.ಗಳಲ್ಲಿ ಘಟಕ ನಿರ್ಮಿಸಲಾಗಿದೆ. ಬೆಳ್ಳಾರೆ, ಸುಬ್ರಹ್ಮಣ್ಯ, ಪಂಜ ಗ್ರಾ.ಪಂ.ಗಳಲ್ಲಿ ಮರು ಸಂಸ್ಕರಣೆ ನಡೆಯುತ್ತಿದೆ. ಐವರ್ನಾಡಿನಲ್ಲಿ ಕಾಮಗಾರಿ ಆರಂಭದ ಹಂತದಲ್ಲಿದೆ. ಬೆರಳೆಣಿಕೆ ಗ್ರಾ.ಪಂ. ಗಳಲ್ಲಿ ಸ್ಥಳ ಗುರುತಿಸಿ ಪಹಣಿಪತ್ರ ಆಗಿದೆ. 20ಕ್ಕೂ ಅಧಿಕ ಕಡೆ ಸ್ಥಳ ಗುರುತಿಸುವಿಕೆಗೆ ಹಲವು ಅಡ್ಡಿ ಎದುರಾಗಿದೆ.

Advertisement

ಒಂದು ಎಕ್ರೆ ಬೇಕು
ನಿಯಮ ಪ್ರಕಾರ ಘಟಕಕ್ಕೆ 1 ಎಕ್ರೆ ಭೂಮಿಯಯನ್ನು ಕಾಯ್ದಿರಿಸಬೇಕು. ಆದರೆ ಕೆಲ ಪಂಚಾಯತ್‌ಗಳಲ್ಲಿ ಸರಕಾರಿ ಜಾಗದ ಕೊರತೆ ಇದೆ. ಕೆಲವೆಡೆ 50 ಸೆಂಟ್ಸ್‌ ಕಾದಿರಿಸಿದ್ದೂ ಇದೆ. ಅಕ್ಕಪಕ್ಕದ ಗ್ರಾ.ಪಂ.ಗಳು ಹೊಂದಾಣಿಕೆ ಮೂಲಕ ಒಂದೇ ಕಡೆ ಘಟಕ ಸ್ಥಾಪಿಸುವ ಪ್ರಸ್ತಾವ ಇದ್ದರೂ ಯೋಜನೆ ನಿರೀಕ್ಷಿತ ಪ್ರಗತಿ ಕಂಡಿಲ್ಲ.

ಏನು ಸಮಸ್ಯೆ?
ಕಂದಾಯ-ಅರಣ್ಯ ಇಲಾಖೆ ನಡುವಿನ ಭೂ ವಿವಾದ ಪಹಣಿ ಪತ್ರಕ್ಕೆ ಅಡ್ಡಿ ಆಗಿದೆ. 18ಕ್ಕೂ ಅಧಿಕ ಗ್ರಾ.ಪಂ. ಭೂಮಿ ಕಾದಿರಿಸಿದರೂ ಗಡಿ ಗುರುತು ವೇಳೆ ಅರಣ್ಯ ಇಲಾಖೆ ಆಕ್ಷೇಪ ಸಲ್ಲಿಸಿದೆ. ಬಹುತೇಕ ಅರ್ಜಿಗಳು ತಾಲೂಕು ಕಚೇರಿ, ಸಹಾಯಕ ಆಯುಕ್ತರ ಕಚೇರಿ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವೆ. ಕೆಲವೆಡೆ ಜನವಸತಿ, ಶಾಲೆ ಕಾರಣಕ್ಕೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಗಿದೆ. ಗಡಿ ವಿವಾದ ಬಗೆಹರಿಸುವ ಅಥವಾ ಹೊಸ ಜಾಗ ಗುರುತಿಸುವುದು ಆಗದೆ ಘಟಕ ನಿರ್ಮಾಣ ಅಂತಿಮ ಹಂತಕ್ಕೆ ಬಾರದು ಅನ್ನುತ್ತಾರೆ ಗ್ರಾ.ಪಂ.ಪಿಡಿಒಗಳು. ಘನ ತ್ಯಾಜ್ಯ ಘಟಕ ಸ್ಥಾಪನೆಯ ಆಸಕ್ತಿಯೆ ಗೌಣವಾಗಿದೆ. ಹಲವು ಪಂಚಾಯತ್‌ಗಳು ಹಳ್ಳಿ ಕಾರಣದಿಂದ ತ್ಯಾಜ್ಯ ಸಮಸ್ಯೆ ಕಡಿಮೆ. ಹಾಗಾಗಿ ಘಟಕ ಅಗತ್ಯವಿಲ್ಲ ಎಂಬ ಮನಸ್ಥಿತಿ ಹೊಂದಿದೆ. ಮುಂದಿನ 15 ವರ್ಷದ ಬೆಳವಣಿಗೆಯ ಬಗ್ಗೆ ಯೋಚಿಸದ ಕಾರಣ ಇಂತಹ ನಿಲುವು ಹೊಂದಿದೆ ಅನ್ನುವ ಆಪಾದನೆಯೂ ಕೇಳಿ ಬರುತ್ತಿದೆ.

ಆಕ್ಷೇಪಗಳೇ ಅಡ್ಡಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಸ್ಥಳ ಗುರುತಿಸುವಿಕೆಗೆ ಹಲವು ಅಡ್ಡಿಗಳು ಉಂಟಾಗಿರುವುದೇ ವಿಳಂಬಕ್ಕೆ ಕಾರಣ. ಶಾಲೆ, ವಸತಿ ಕಾರಣ ಒಡ್ಡಿ ಕೆಲ ಸ್ಥಳಗಳಿಗೆ ಜನರಿಂದ ಆಕ್ಷೇಪಣೆ ಬಂದಿದೆ. ಪರ್ಯಾಯ ಜಾಗ ಗುರುತಿಸುವುದು ಇಲ್ಲಿನ ಸಮಸ್ಯೆ ಆಗಿದೆ.
– ಮಧುಕುಮಾರ್‌
ಇಒ, ಸುಳ್ಯ ತಾ.ಪಂ.

ಫಾಲೋಅಫ್‌ ಮಾಡಬೇಕು
ಗ್ರಾ.ಪಂ.ಗಳು ಘನತ್ಯಾಜ್ಯ ಘಟಕಕ್ಕೆಂದು ಸ್ಥಳ ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ ಕಡತಗಳು ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಬಗ್ಗೆ ಮಾಹಿತಿ ಇಲ್ಲ. ಅದನ್ನು ಪರಿಶೀಲಿಸುತ್ತೇನೆ. ಈ ಬಗ್ಗೆ ಗ್ರಾ.ಪಂ.ಗಳು ಫಾಲೋಅಪ್‌ ಮಾಡಬೇಕು.
– ಕುಂಞಮ್ಮ
 ತಹಶೀಲ್ದಾರ್‌, ಸುಳ್ಯ

ಅರ್ಜಿ ಹಾಕಿ ಪಡೆಯಲು ಅವಕಾಶ
ಗ್ರಾ.ಪಂ. ಗುರುತಿಸಿದ ಸ್ಥಳ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತಿದ್ದರೆ ಅರಣ್ಯ ಸಂರಕ್ಷಣಾ ಕಾಯಿದೆ ಅನ್ವಯ ಜಾಗ ಒದಗಿಸಲು ಸರಕಾರಕ್ಕೆ ಅರ್ಜಿ ಸಲ್ಲಿಸಬಹುದು. ಆ ಮೂಲಕ, ಕೆಲ ನಿಯಮ ಅನುಸಾರ ಪಡೆದುಕೊಳ್ಳುವ ಅವಕಾಶ ಇದೆ.
– ಮಂಜುನಾಥ ಎನ್‌.
ವಲಯ ಅರಣ್ಯಾಧಿಕಾರಿ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next