Advertisement

ತಾರಸಿ ಅಲ್ಲ, ಮಿನಿಕಾಡು

11:18 AM Mar 22, 2020 | Lakshmi GovindaRaj |

ಕಾಡು ನೋಡಲೆಂದೇ ಬೆಂಗಳೂರಿಗರು ಎಲ್ಲೆಲ್ಲಿಗೋ, ಬೈಕ್‌- ಕಾರನ್ನೇರಿಕೊಂಡು ಟ್ರಿಪ್‌ ಹೋಗುತ್ತಾರೆ. ಮತ್ತೆ ಕೆಲವರು ತಾವು ಇರುವಲ್ಲಿಯೇ ಕಾಡು ಸೃಷ್ಟಿಸುತ್ತಾರೆ. ಅಂಥವರಲ್ಲಿ ಒಬ್ಬರು ಮಂಟಪ ನಟರಾಜ ಉಪಾಧ್ಯ. ಇವರ ಮನೆಯಲ್ಲಿ 300ಕ್ಕೂ ಅಧಿಕ ಗಿಡಗಳು ಹಸಿರು ಹಬ್ಬಿಸಿಕೊಂಡು, ಮಿನಿಕಾಡನ್ನೇ ಸೃಷ್ಟಿಸಿವೆ. ವಿಶ್ವ ಅರಣ್ಯ ದಿನದ ಈ ದಿನ, ಉಪಾಧ್ಯರ ಮನೆಯ ಮಿನಿಕಾಡನ್ನು ಸುತ್ತಿ ಬರೋಣ…

Advertisement

ಉದ್ಯಾನ ನಗರಿ ಎಂದು ಖ್ಯಾತವಾಗಿರುವ ಬೆಂಗಳೂರಿನಲ್ಲಿ ಒಂದು ಕಾಲದಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು ತುಂಬಿತ್ತು. ರಸ್ತೆಯ ಇಕ್ಕೆಲಗಳಲ್ಲಿದ್ದ ಆಳೆತ್ತರದ ಮರಗಿಡಗಳು ಹಸಿರಿನ ಭವ್ಯತೆಯನ್ನು ನೀಡಿ, ಅಲ್ಲಿ ಸಾಗುವವರಿಗೆ ಆಹ್ಲಾದವನ್ನು ನೀಡುತ್ತಿದ್ದುದು ಸುಳ್ಳಲ್ಲ. ಆದರೆ, ಇತ್ತೀಚೆಗೆ ನಗರೀಕರಣದ ಪ್ರಭಾವದಿಂದ, ರಸ್ತೆ ಪಕ್ಕದಲ್ಲಿರುವ ಮರಗಳಿಗೆ ಕೊಡಲಿ ಏಟು ಬಿದ್ದು ಹಸಿರೆಲ್ಲವೂ ಮಾಯವಾಗಿರುವುದು ಹೌದಾದರೂ, ಜನತೆಯಲ್ಲಿ ಮಾತ್ರ ಗಿಡ- ಮರಗಳ ಬಗ್ಗೆ ವಿಶೇಷ ಆಸಕ್ತಿ ಬೆಳೆದು, ತಮ್ಮ ಮನೆ ಮುಂದೆ, ತಾರಸಿ ಮೇಲೆ, ಬಾಲ್ಕನಿಗಳಲ್ಲಿ ಹಸಿರನ್ನು ಬೆಳೆಸುವ ಕೈಂಕರ್ಯವನ್ನು ಸದ್ದಿಲ್ಲದೆ ನಡೆಸಿ, ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಮಾಜಿ ಟೆಕ್ಕಿಯೊಬ್ಬರು, ತಮ್ಮ ಇಡೀ ಮನೆಯ ಮೇಲೆ ಮತ್ತು ಸುತ್ತ ಗಿಡ ಬಳ್ಳಿ ಮರಗಳನ್ನು ಬೆಳೆಸಿ ಸಣ್ಣ ಕಾಡಾಗಿ ಪರಿವರ್ತಿಸಿದ್ದಾರೆ. ಸುತ್ತಲೂ ಇರುವ ಕಾಂಕ್ರೀಟ್‌ ಕಾಡಿನ ಮಧ್ಯೆ ಈ ಕಾಡು ಗಮನ ಸೆಳೆಯುತ್ತದೆ. ಈ ಸಾಹಸಕ್ಕೆ ಮುಂದಾಗಿರುವ ಪರಿಸರ ಪ್ರೇಮಿ, ಉಡುಪಿ ಮೂಲದ ಮಂಟಪ ನಟರಾಜ ಉಪಾಧ್ಯ. ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬಸವನಗುಡಿಯಿಂದ ಹೊರಟು, ಕತ್ರಿಗುಪ್ಪೆ ಮುಖ್ಯರಸ್ತೆಯಲ್ಲಿ ವಿದ್ಯಾಪೀಠ ಮತ್ತು ಬಿಗ್‌ ಬಜಾರ್‌ ಮಧ್ಯೆ, ಐಟಿಐ ಕಾಲೊನಿ ಕೆಳಭಾಗದಲ್ಲಿ ಮುಖ್ಯರಸ್ತೆಯಿಂದ 100 ಒಳಗೆ ಮೀಟರ್‌ ಕೆಳ ಸಾಗಿದರೆ, ವಿವೇಕಾನಂದ ನಗರದ ಮುಖ್ಯರಸ್ತೆಯಲ್ಲಿ ನಿಮಗೊಂದು ವಿಶೇಷ ಎದುರಾಗುತ್ತದೆ. ನೋಡುವಾಗಲೇ ಇದು ಮನೆಯೋ ಅಥವಾ ಯಾವುದೋ ಅರಣ್ಯ ಭಾಗದ ಮುಂಭಾಗಕ್ಕೆ ಬಂದಿದ್ದೇವೋ ಎಂಬ ಅನುಮಾನ ನಿಮ್ಮನ್ನು ಕಾಡುವುದು ಸುಳ್ಳಲ್ಲ.

ಲತೆಗಳ ನಡುವೆ: ಮನೆಯ ಗೇಟ್‌ಗೆ ಹಬ್ಬಿರುವ ಹಸಿರು ಬಳ್ಳಿಗಳು. ಎಲ್ಲಿ ನೋಡಿದರಲ್ಲಿ ಹಸಿರುಟ್ಟ ಗಿಡ- ಮರ- ಬಳ್ಳಿಗಳು ನಿಮಗೆ ಮುದವನ್ನು ಕೊಡುತ್ತವೆ. ಇಡೀ ಮನೆ ಹಸಿರಿನಿಂದ ಮುಚ್ಚಿಹೋಗಿದೆ. ಇದರ ಜೊತೆಗೆ ಇವರ ತಾರಸಿ ವಿಶೇಷವಾಗಿ ಗಮನಸೆಳೆಯುತ್ತದೆ. ತಾರಸಿಗೆ ಹೋಗಬೇಕೆಂದರೆ, ಕಮಾನಿನ ಆಕೃತಿಯಲ್ಲಿ ಬೆಳೆದಿರುವ ಲತೆಗಳ ಮಧ್ಯದಲ್ಲಿ ಮೆಟ್ಟಿಲನ್ನು ಏರಿ ಸಾಗಬೇಕು. ಅದೊಂದು ಸುರಂಗದಂತೆ ಕಂಗೊಳಿಸಿ, ವಿಶಿಷ್ಟ ಅನುಭೂತಿಯನ್ನು ನೀಡುತ್ತದೆ. ಇನ್ನೂ ಮೇಲೆ ಸಾಗಿ ಬಂದರೆ, 30 ಅಡಿ * 50 ಅಡಿ ಸ್ಥಳದ ತಾರಸಿಯು ಗಿಡ, ಮರ, ಬಳ್ಳಿಗಳಿಂದ ವಿಜೃಂಭಿಸುತ್ತದೆ. ನಡೆದಾಡುವುದಕ್ಕೆ ಸ್ಥಳ ಹೊರತು ಪಡಿಸಿದರೆ, ಇಡೀ ತಾರಸಿಯು ಗಿಡ, ಮರ, ಬಳ್ಳಿಗಳಿಂದ ಅಲಂಕೃತವಾಗಿದೆ.

300ಕ್ಕೂ ಅಧಿಕ ಗಿಡಗಳು: ಇಲ್ಲಿ ಸುಮಾರು 300ಕ್ಕೂ ಅಧಿಕ ಬೇರೆ ಬೇರೆ ಜಾತಿಯ ಗಿಡಗಳನ್ನು ಕಾಣಬಹುದಾಗಿದೆ. ಜೊತೆಗೆ ಹೂವಿನ ಮಕರಂದವನ್ನು ಹೀರುವುದಕ್ಕೆ ಬರುವ ಬಣ್ಣ ಬಣ್ಣದ ದುಂಬಿಗಳು, ಚಿಟ್ಟೆಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ. ಇಷ್ಟೇ ಅಲ್ಲದೆ, ಹತ್ತಕ್ಕೂ ಅಧಿಕ ಜಾತಿಯ ಪಕ್ಷಿಗಳು ಭೇಟಿ ಕೊಡುತ್ತವೆ. ಅಳಿಲುಗಳು, ಅವುಗಳನ್ನು ಹಿಡಿಯಲು ಬೆಕ್ಕುಗಳು ಇಲ್ಲಿ ವಾಸವಾಗಿವೆ. ಅಪರೂಪಕ್ಕೆ ಭೇಟಿಕೊಡುವ ಕೋತಿಗಳ ಹಿಂಡಿಗೂ ಇಲ್ಲಿ ಸ್ವಾಗತವಿದೆ. ಈ ಸ್ವಾಗತದ ಪರಿಣಾಮವೋ ಏನೋ, ಅವು ಕೂಡಾ ಬೇಕಾದುದನ್ನು ತಿಂದು ಉಳಿದುದನ್ನು ಹಾಳು ಮಾಡದೇ ಹಿಂದಿರುಗುತ್ತವೆ. ಇಷ್ಟೇ ಅಲ್ಲದೆ, ಮನೆಯ ಹೊರಗೆ, ಕಾಂಪೌಂಡ್‌ ಒಳಗೂ ಹೊರಗೂ ಅನೇಕ ಗಿಡ ಮರ ಬಳ್ಳಿಗಳನ್ನು ಬೆಳೆಸಿ, ತಮ್ಮ ಮನೆಯ ಮೆರುಗನ್ನು ಹೆಚ್ಚಿಸಿದ್ದಾರೆ.

Advertisement

ಸಾವಯವ ಪೋಷಣೆ: ಈ ಮಿನಿ ವನವನ್ನು ಸೃಷ್ಟಿಸುವುದಕ್ಕೆ ಉಪಾಧ್ಯರು, ರಾಸಾಯನಿಕ ಪದಾರ್ಥಗಳನ್ನು ಬಳಸಲಿಲ್ಲ. ರಸ್ತೆಬದಿಯಲ್ಲಿ ಬೀಳುವ ಒಣ ಎಲೆ, ಬಾಳೆಗಿಡ, ಎಳನೀರಿನ ಗರಟೆ, ಪಕ್ಕದ ಗೌಳಿಗರಲ್ಲಿ ಸಿಗುವ ಸಗಣಿ ಇತ್ಯಾದಿ ಹಸಿ ತ್ಯಾಜ್ಯವಸ್ತುಗಳನ್ನೇ ಬಳಸಿ ತಮ್ಮ ಮಿನಿ ಕಾಡನ್ನು ಬೆಳೆಸುತ್ತಿದ್ದಾರೆ. ಈ ಕಾರಣದಿಂದಲೇ, ಈಗ ಅವರ ಮನೆ ಎಂಥ ಬೇಸಿಗೆಯಲ್ಲೂ ಮಲೆನಾಡಿನ ಸ್ವಾಭಾವಿಕ ವಾತಾವರಣದ ಅನುಭವವನ್ನು ನೀಡುತ್ತಿದೆ. ಇರುವ ಒಂದು ಭೂಮಿ ಕೇವಲ ಮಾನವನಿಗೆ ಮಾತ್ರ ಸೀಮಿತವಲ್ಲ, ಪ್ರಪಂಚದ ಜೀವಜಾಲಗಳಿಗೂ ಜೀವನ ನಡೆಸುವ ಹಕ್ಕಿದೆ ಎನ್ನುವುದನ್ನು ಉಪಾಧ್ಯರ ಈ ಕಾರ್ಯದಲ್ಲಿ ಕಾಣಬಹುದಾಗಿದೆ.

ಶತಕೋಟಿ ಮರಗಳ ಕನಸು: ಉಪಾಧ್ಯರು, “ಶತಕೋಟಿ ಮರಗಳು- ಮತ್ತಿನ್ನಷ್ಟು’ (Billion Trees and Beyond; www.billiontreesandbeyond.com) ಎಂಬ ಅಭಿಯಾನವನ್ನೂ ಪ್ರಾರಂಭಿಸಿದ್ದಾರೆ. ಜನ ಸೇರುವಲ್ಲಿ ನಿಂತು ಜನಸಾಮಾನ್ಯರಿಂದ ಜೀವಮಾನದಲ್ಲಿ ಒಂದಿಷ್ಟು ಮರ ನೆಡುವ ಸಂಕಲ್ಪ ಮಾಡಿಸಿ, ಆ ಬಗ್ಗೆ ಅವರ ಸಹಿ ಇರುವ ಪ್ರಮಾಣಪತ್ರವನ್ನು ಕೊಟ್ಟು, ಸಂಕಲ್ಪಗಳನ್ನು ವೆಬ್‌ಸೈಟ್‌ನಲ್ಲಿ ಜಗಜ್ಜಾಹೀರು ಮಾಡುತ್ತಾರೆ. ಈವರೆಗೆ 1.5 ಕೋಟಿ ಮರಗಳನ್ನು ನೆಡುವ ಸಂಕಲ್ಪವಾಗಿದೆ.

* ರವಿ ಮಡೋಡಿ

Advertisement

Udayavani is now on Telegram. Click here to join our channel and stay updated with the latest news.

Next