Advertisement

ನಾನ್‌ಸ್ಟಾಪ್‌ ಶಿವಭಜನೆ; 47 ವರ್ಷದಿಂದ ಕ್ಷಣವೂ ನಿಲ್ಲದ ಸ್ಮರಣೆ

03:00 PM May 20, 2017 | |

ಅದೊಂದು ಕಬ್ಬಿಣದ ಸರಳುಗಳಿರುವ ಕೋಣೆ. ಅದರೊಳಗೆ ನಿಂತವರ ಕೈಯಲ್ಲಿ ತಂಬೂರಿ ಮಿಡಿಯುತ್ತಿದೆ. ಅವರ ಬಾಯಿಯಿಂದ “ಓಂ ನಮಃ ಶಿವಾಯಃ’ ಎಂಬ ಶಿವನಾಮ ಮೊಳಗುತ್ತಿದೆ! ಹೀಗೆ ತಂಬೂರಿ ಹಿಡಿದು ಹೇಳುವುದರಲ್ಲಿ ಏನು ವಿಶೇಷವೆಂದು ನೀವು ಕೇಳಬಹುದು. ಒಂದಲ್ಲ, ಎರಡಲ್ಲ ಕಳೆದ 47 ವರ್ಷಗಳಿಂದಲೂ ಕ್ಷಣವೂ ನಿಲ್ಲದೆ ಇಲ್ಲಿ ನಿರಂತರವಾಗಿ ಈ ಶಿವನಾಮ ಸ್ಮರಣೆ ಮೊಳಗುತ್ತಿದೆ! ಇಲ್ಲಿ ನಾಲ್ಕು ಗಂಟೆಗೊಮ್ಮೆ ಸ್ಮರಣೆ ಮಾಡುವವರು ಬದಲಾಗುತ್ತಾರೆ. ಆದರೆ, 47 ವರ್ಷಗಳಿಂದ ತಂಬೂರಿಯನ್ನು ಕೆಳಗಿಟ್ಟಿಲ್ಲ! ಶಿವನಾಮಸ್ಮರಣೆ ಕ್ಷಣವೂ ಇಲ್ಲಿ ನಿಂತಿಲ್ಲ!

Advertisement

ಬಾಗಲಕೋಟೆ ಜಿಲ್ಲೆಯಲ್ಲಿರುವ ಐತಿಹಾಸಿಕ ನಗರಿ ಬಾದಾಮಿಯಿಂದ 21 ಕಿ.ಮೀ. ದೂರದ ಸೋಮನಕೊಪ್ಪದಲ್ಲಿ ಈ ಭಜನೆ ಕೇಳಿಸುತ್ತದೆ. ಇಲ್ಲಿನ ಶಿವಾನಂದ ಮಠ ಈ ಭಜನೆಯಿಂದಲೇ ಗಮನ ಸೆಳೆದಿದೆ.

ಏನಿದರ ಹಿನ್ನೆಲೆ?

ಅದು 1970ರ ಆಗಸ್ಟ್‌ ತಿಂಗಳ ಕೊನೆಯ ವಾರದ ಮಾತು. ಗದುಗಿನ ಶಿವಾನಂದ ಮಠದ ಪೂರ್ಣಾನಂದ ಶ್ರೀಗಳು ಸೋಮನಕೊಪ್ಪ, ಜಾಲಿಕಟ್ಟಿ ಮುಂತಾದ ಈ ಭಾಗದ ಗ್ರಾಮಗಳಲ್ಲಿ ಸಂಚರಿಸುತ್ತಾ ಗ್ರಾಮಸ್ಥರ ಭಕ್ತಿಗೆ ಪಾತ್ರರಾಗಿದ್ದರು. ಅದೊಂದು ದಿನ ಸೋಮನಕೊಪ್ಪದಲ್ಲಿದ್ದ ಸ್ವಾಮಿಗಳ ಬಳಿ ಬಂದ ಜಾಲಿಕಟ್ಟಿಯ ಜನತೆ, ತಮ್ಮೂರಿಗೆ ಬಂದು ನೆಲೆ ನಿಲ್ಲಲು ಶ್ರೀಗಳನ್ನು ಕೋರುತ್ತಾರೆ. ಆಗ ಸೋಮನಕೊಪ್ಪದವರು ಮಹಾಸ್ವಾಮಿಗಳಿಗೆ ತಮ್ಮೂರಲ್ಲಿಯೇ ಇರುವಂತೆ ದುಂಬಾಲು ಬೀಳುತ್ತಾರೆ. ಎರಡೂ ಊರುಗಳಲ್ಲಿ ತಾವು ಎಲ್ಲಿ ನೆಲೆ ನಿಲ್ಲಬೇಕು ಎಂಬುದಕ್ಕೆ ಶ್ರೀಗಳು ಹಾಕಿದ ಷರತ್ತು ಹೀಗಿತ್ತು: “ಯಾವ ಊರಿನವರು ಇಂದಿನಿಂದ ನಿರಂತರವಾಗಿ 39 ವರುಷ ಶಿವನಾಮಸ್ಮರಣೆ ಮಾಡಲು ಒಪ್ಪುವರೋ ಆ ಊರಿನಲ್ಲಿ ನೆಲೆ ನಿಲ್ಲುತ್ತೇನೆ’ ಎಂದರು! 

ಶ್ರೀಗಳ ಷರತ್ತನ್ನು ಸೋಮನಕೊಪ್ಪದ ಜನತೆ ಒಪ್ಪಿಕೊಂಡರು. ಕೇವಲ ಬಾಯಿ ಮಾತಿಗೆ ಒಪ್ಪದ ಶ್ರೀಗಳು, ಹಾಗೊಂದು ಕರಾರು ಪತ್ರವನ್ನು ಗ್ರಾಮಸ್ಥರ ಕೈಯಲ್ಲಿ ಬರೆಸುತ್ತಾರೆ. ಅದಕ್ಕೆ ಸಮ್ಮತಿ ಸೂಚಿಸಿದ್ದಕ್ಕೆ ಹಿರಿಯರಿಂದ ಸಹಿಯನ್ನೂ ಹಾಕಿಸುತ್ತಾರೆ!

Advertisement

ಏನಿದೆ ಒಪ್ಪಿಗೆ ಪತ್ರದಲ್ಲಿ?

“..ಎಲ್ಲರೂ ಆತ್ಮ ಸಂತೋಷದಿಂದ ಸತ್ಯದಲ್ಲಿ ಹರಿಶ್ಚಂದ್ರನಂತೆ ಮತ್ತು ಭಕ್ತಿಯಲ್ಲಿ ಬಸವಣ್ಣನವರಂತೆ ಸದರಿ ಸಪ್ತಾಹವನ್ನು ನಡೆಸಲು ಒಪ್ಪಿಕೊಂಡಿರುತ್ತೇವೆ…’ ಎಂಬ ವಿವರಗಳಿರುವ ಒಪ್ಪಿಗೆ ಪತ್ರಕ್ಕೆ ಗ್ರಾಮದ ಹಿರಿಯರಾದ ಸೋಮನಿಂಗಪ್ಪ, ಸೋಮಪ್ಪ ಮುಷ್ಠಿಗೇರಿ, ಪಾಟೀಲ ವೈ.ಆರ್‌, ಪಕೀರಪ್ಪ, ಭೀಮಪ್ಪ ದಂಡಿನ ಸೇರಿದಂತೆ ಅನೇಕರು ಸಹಿ ಹಾಕಿದ್ದಾರೆ. ಹೀಗೆ ಆಗಸ್ಟ್‌ 23, 1970ರಿಂದ ಅಖಂಡ ಭಜನೆ ಆರಂಭವಾಗುತ್ತದೆ. ಕೊಟ್ಟ ಮಾತಿನಂತೆ ಶ್ರದ್ಧಾಭಕ್ತಿಯಿಂದ ಸಾಗುತ್ತದೆ.

ನಿರಂತರ ಶಿವಸ್ಮರಣೆಯಿಂದ ಈ ಭಾಗ, ಪುಣ್ಯಭೂಮಿ ಆಗುತ್ತದೆ. ಎಲ್ಲರ ಬದುಕಿನಲ್ಲೂ ಸುಖ- ಸಂತೋಷ ನೆಲೆಯಾಗುತ್ತದೆ ಎಂದು ಅಂದು ಪೂರ್ಣಾನಂದರು ಹೇಳಿದ್ದರಂತೆ. “ಅಂದು ಶ್ರೀಗಳು ಹೇಳಿದ ಮಾತು, ಇಂದು ನಿಜವಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಅಂದಾಜು 2 ಸಾವಿರದಷ್ಟು ಜನಸಂಖ್ಯೆ ಇರುವ ಈ ಗ್ರಾಮದ ಪ್ರತಿ ಮನೆಗೆ ಒಂದೂವರೆ ತಿಂಗಳಿಗೊಮ್ಮೆ ಭಜನೆಯ ಸರದಿ ಬರುತ್ತದೆ. ಸರದಿ ಬಂದಾಗ ಆ ಮನೆಯಲ್ಲಿನ ಮಕ್ಕಳು, ಮಹಿಳೆಯರು, ಹಿರಿಯರು ಯಾರಾದರೊಬ್ಬರು ಶಿವಾನಂದ ಮಠಕ್ಕೆ ಬಂದು ಸ್ಮರಣೆಯಲ್ಲಿ ತೊಡಗಬೇಕು. ಇಲ್ಲಿಯತನಕ ಒಮ್ಮೆಯೂ ಸ್ಮರಣೆ ನಿಂತಿಲ್ಲ. ಸರದಿ ಬಂದವರ ಮನೆಯಲ್ಲಿ ಅಡಚಣೆ ಇದ್ದರೆ ಬೇರೆಯವರನ್ನು ಇಲ್ಲಿಗೆ ಕಳುಹಿಸುತ್ತಾರೆ.

ಮುಂದುವರಿದ ಸ್ಮರಣೆ!
ಪೂರ್ಣಾನಂದ ಶ್ರೀಗಳು ಹೇಳಿದ ಪ್ರಕಾರವಾಗಿ 2009ಕ್ಕೆ ಸ್ಮರಣೆ ಮುಗಿಯಬೇಕಿತ್ತು. ಏಕೆಂದರೆ, ಹಾಕಿದ ಕರಾರಿನಂತೆ ಅಂದಿಗೆ 39 ವರುಷ ಮುಗಿಯುತ್ತದೆ. ಆದರೆ, ಮಠದ ಇಂದಿನ ಶ್ರೀ ಶ್ರದ್ಧಾನಂದ ಸ್ವಾಮೀಜಿ, “ಇನ್ನೂ ಛಲೋ ಆಗತದಾ, ಸ್ಮರಣೆ ನಿಲ್ಲಿಸಬೇಡಿ’ ಎಂದು ಊರವರಿಗೆ ಹೇಳಿದ್ದರಿಂದ ಅದನ್ನು ಮುಂದುವರಿಸಲಾಗಿದೆ.

ಪ್ರವೀಣರಾಜು ಸೊನ್ನದ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next