Advertisement

ಬೆಂಗಳೂರಿಗೆ ನೀರು ಕೊಡಲ್ಲ- ಸದ್ಧರ್ಮ ನ್ಯಾಯಪೀಠಕ್ಕೆ ಸೋಮವಾರ ದೂರು

11:26 PM Jun 15, 2019 | Team Udayavani |

ದಾವಣಗೆರೆ: ಮಳೆ ಕೊರತೆಯಿಂದ ತುಂಗಾ-ಭದ್ರಾ ಜಲಾಶಯಗಳು ಭರ್ತಿಯಾಗದೇ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರಿಗೆ ನೀರು ಕೊಂಡೊಯ್ಯುವುದು ಅಮಾನವೀಯ ಹಾಗೂ ಅವೈಜ್ಞಾನಿಕ ಕ್ರಮ ಎಂದು ಖಡ್ಗ ಸ್ವಯಂ ಸೇವಕರ ಸಂಘದ ನಿರ್ದೇಶಕ ಚಂದ್ರಹಾಸ ಹೇಳಿದರು.

Advertisement

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ನದಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಪ್ರಸ್ತಾವದ ವಿರುದ್ಧ ಸಂಘ ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಸ್ವಾಮೀಜಿಯವರ ಸದ್ಧರ್ಮ ನ್ಯಾಯಪೀಠಕ್ಕೆ ಸೋಮವಾರ ದೂರು ಸಲ್ಲಿಸಲಿದೆ ಎಂದರು.

ಬೆಂಗಳೂರು ನಾಗರಿಕರ ಕುಡಿಯುವ ನೀರಿನ ಬವಣೆ ತೀರಿಸಲು ತುಂಗಭದ್ರಾ ನದಿಯಿಂದ 10 ಟಿಎಂಸಿ ನೀರು ಕೊಂಡೊಯ್ಯುವ ಬಗ್ಗೆ ರೂಪುರೇಷೆ ಸಿದ್ಧಪಡಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಯೋಜನೆಯಿಂದ ತುಂಗಭದ್ರಾ ನದಿಗಳ ಮೇಲೆ ಅವಲಂಬಿತರಾಗಿರುವ ರೈತರು, ಅಕ್ಕಪಕ್ಕದ ಜಿಲ್ಲೆಗಳ ಸಾರ್ವಜನಿಕರಿಗೆ ಬಹು ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅಭಿವೃದ್ಧಿ ಸೋಗಲ್ಲಿ ಬೆಂಗಳೂರಿನ ನೀರಿನ ಮೂಲ (ಕೆರೆಗಳು, ಸಣ್ಣ ಝರಿಗಳು, ಮರಗಳು)ಗಳನ್ನು ನಾಶ ಮಾಡಿ ಈಗ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂಬ ಕಾರಣವೊಡ್ಡಿ ಈ ಭಾಗದ ನದಿಗಳತ್ತ ಮುಖ ಮಾಡುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಉತ್ತಮ ಮಳೆ ಬೀಳುವ ಪ್ರದೇಶಗಳಲ್ಲಿ ಬೆಂಗಳೂರು ನಗರ ಪ್ರಮುಖವಾಗಿದೆ. ಆದರೆ, ಮಳೆ ನೀರು ಶೇಖರಿಸಲು ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವುದನ್ನು ಬಿಟ್ಟು ಬೇರೆ ಪ್ರದೇಶದತ್ತ ನೀರು ಹುಡುಕಿಕೊಂಡು ಹೋಗುವುದು ಮೂರ್ಖತನವಲ್ಲವೇ?. ಬೆಂಗಳೂರಲ್ಲಿ ಬೀಳುವ ಮಳೆ ನೀರನ್ನು ಶೇಖರಿಸಿ ಬೇರೆಡೆ ತೆಗೆದುಕೊಂಡು ಹೋಗುವುದು ಸೂಕ್ತ. ಅದನ್ನು ಬಿಟ್ಟು ನೀರಿಗಾಗಿ ಪರದಾಡುವ ಪ್ರದೇಶದಿಂದಲೇ ನೀರು ಕೊಂಡೊಯ್ಯುವ ಆಲೋಚನೆ ಅಸಮರ್ಪಕ ಎಂದು ಅವರು ಹೇಳಿದರು.

Advertisement

ಒಂದು ವೇಳೆ ಈ ಯೋಜನೆಯನ್ನು ಅನುಷ್ಠಾನಗೊಳಿಸಿದರೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಉತ್ತರ ಕರ್ನಾಟಕ ಪ್ರದೇಶದ ಜನರು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಆದ್ದರಿಂದ ಈ ಭಾಗದ ಸಮಸ್ಯೆಯ ಗಂಭೀರತೆ ಪರಿಗಣಿಸಿ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಶ್ರೀಗಳು ಮನವರಿಕೆ ಮಾಡಿಕೊಡಬೇಕೆಂದು ಈ ಭಾಗದ ಜನರ ಪರವಾಗಿ ಖಡ್ಗ ಸಂಘ ದೂರು ಸಲ್ಲಿಸಿ, ಮನವಿ ಮಾಡಲಿದೆ ಎಂದರು.

ಭದ್ರಾ ಕಾಲುವೆಯಿಂದ ಶಾಂತಿಸಾಗರ (ಸೂಳೆಕೆರೆ)ವನ್ನು ಸಂಪೂರ್ಣ ತುಂಬಿಸಲು ನೀರು ಹರಿಸಿ ಎಂಬುದಾಗಿ ಅಧಿಕಾರಿಗಳಿಗೆ ಕೋರಿದರೆ ಶಾಂತಿಸಾಗರಕ್ಕೆ 0.08 ಟಿಎಂಸಿ ನೀರು ಮಾತ್ರ ಬಿಡಲು ಆವಕಾಶವಿದೆ. ಅದಕ್ಕಿಂತ ಹೆಚ್ಚು ಬಿಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿಯ ರೈತರ ಮೇಲೆ ಬರೆ ಎಳೆದು ನೀರು ಕೊಂಡೊಯ್ಯುವುದು ಸರಿಯೇ? ಎಂದು ಅವರು ಪ್ರಶ್ನಿಸಿದರು.

ಮೊದಲು ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕ ಜಿಲ್ಲೆಯ ಜನರ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ, ನಂತರ ಬೆಂಗಳೂರಿಗೆ ನೀರು ಕೊಂಡೊಯ್ಯುವ ಬಗ್ಗೆ ಸರ್ಕಾರ ಯೋಚಿಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next