Advertisement

ಮರುಪಾವತಿಸಿದವರಿಗಿಲ್ಲ ಸಾಲಮನ್ನಾ ಭಾಗ್ಯ 

03:45 AM Jun 26, 2017 | Team Udayavani |

ಬೆಳ್ತಂಗಡಿ: ವಿಪಕ್ಷ – ಸರಕಾರದ ಹಗ್ಗಜಗ್ಗಾಟದಲ್ಲಿ ಮೇಲುಗೈ ಸಾಧಿಸಿದ ಸರಕಾರ ಅಂತೂ ಇಂತೂ ನಿರೀಕ್ಷೆಯಂತೆಯೇ ರೈತರ ಸಾಲ ಮನ್ನಾ ಮಾಡಿದೆ. ಆದರೆ ಎಂದಿನಂತೆಯೇ ಯಾರು ಸಾಲ ಮರುಪಾವತಿ ಮಾಡದೇ ಬಾಕಿ ಇರಿಸಿಕೊಂಡಿದ್ದಾರೆಯೋ ಅವರ ಸಾಲವಷ್ಟೇ ಮನ್ನಾಭಾಗ್ಯ ಕಾಣಲಿದೆ. ಪ್ರಾಮಾಣಿಕವಾಗಿ ಸಾಲ ಕಟ್ಟಿದ ರೈತರಿಗೆ ಯಾವುದೇ ಭಾಗ್ಯ ಅನ್ವಯವಾಗುವುದಿಲ್ಲ. ಜತೆಗೆ ಸಾಲಮನ್ನಾ ಭಾಗ್ಯ ಪಡೆದವರಿಗೆ ಸಾಲ ಪಡೆದ ದಿನದಂದ 1 ವರ್ಷದವರೆಗೆ ಹೊಸ ಸಾಲ ದೊರೆಯುವಂತೆ ಶರತ್ತು ಕೂಡ ಹಾಕಿದೆ.

Advertisement

ಸಾಲಮನ್ನಾ
ರಾಜ್ಯದಲ್ಲಿ ಬರ ಪ್ರಮಾಣ ಜಾಸ್ತಿ ಇತ್ತು. ಆದ್ದರಿಂದ ರೈತರ ಸಂಕಷ್ಟ ಹೆಚ್ಚಾಗಿತ್ತು. ಇದಕ್ಕಾಗಿ ಸಾಲ ಮನ್ನಾ ಮಾಡಬೇಕೆಂದು ಕೂಗು ಎದ್ದಿತ್ತು. ಮುಖ್ಯಮಂತ್ರಿಯ ಮೂಗು ಹಿಡಿದಾದರೂ ಸಾಲ ಮನ್ನಾ ಮಾಡಿಸಿಯೇ ಸಿದ್ಧ ಎಂದು ವಿಪಕ್ಷ  ನಾಯಕ ಯಡಿಯೂರಪ್ಪ ಗುಡುಗಿದ್ದರು. ದಂಡಯಾತ್ರೆ ಮಾಡಿದ್ದರು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಲಿ, ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿದ ಸಾಲ ನಾವು ಮನ್ನಾ ಮಾಡುತ್ತೇವೆ ಎಂದು ರಾಜ್ಯ ಸರಕಾರ ಹೇಳಿತ್ತು.

ಸಾಲ ಮನ್ನಾ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಅರುಣ್‌ ಜೇಟಿÉ ಹೇಳಿದ ಮರುದಿನ ರಾಜ್ಯ ಸರಕಾರ ಸಾಲ ಮನ್ನಾ ಘೋಷಣೆ ಮಾಡಿತು. ಸಾಲ ಮನ್ನಾ ಮಾಡುವುದು ಈಗ ಫ್ಯಾಶನ್‌ ಆಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದನ್ನು ಈಗ ಕಾಂಗ್ರೆಸ್‌ನವರು ಟೀಕಾಸ್ತ್ರವಾಗಿ ತೆಗೆದುಕೊಂಡಿದ್ದಾರೆ. ನಾವಂತೂ ಸಾಲಮನ್ನಾ ಮಾಡಿದ್ದು ಕೇಂದ್ರದ ಬಳಿ ಮಾಡಿಸಿ ಎಂದು ಸವಾಲು ಹಾಕುತ್ತಿದ್ದಾರೆ.

ಜೂ. 21ರಂದು ಕರ್ನಾಟಕ ಸರಕಾರ 50,000 ರೂ. ವರೆಗೆ ರೈತರ ಸಾಲಮನ್ನಾ ಮಾಡಿದ್ದು ಜೂ. 24ರಂದು ಅಧಿಕೃತ ಸೂಚನೆ ಹೊರಡಿಸಿದೆ. ರಾಜ್ಯದ 22.27 ಲಕ್ಷ ರೈತರ 8,165 ಕೋ.ರೂ. ಸಾಲವನ್ನು ಸರಕಾರ ತುಂಬಬೇಕಿದೆ. ಜೂ. 24ರಂದೇ ಮಹಾರಾಷ್ಟ್ರ ಸರಕಾರ ಕೂಡ ರೈತರ ಸಾಲ ಮನ್ನಾ ಮಾಡಿದೆ. 40 ಲಕ್ಷ ರೈತರ 34 ಸಾವಿರ ಕೋ.ರೂ. ಸಾಲ ಮನ್ನಾವಾಗಿದೆ.

ಕಟ್ಟಿದವರಿಗಿಲ್ಲ
ಕರ್ನಾಟಕ ಸರಕಾರದ ಸುತ್ತೋಲೆಯಲ್ಲಿ ಯಾರು ಸಾಲ ಮರುಪಾವತಿಗೆ ಬಾಕಿ ಇರಿಸಿ ಕೊಂಡಿದ್ದಾರೋ ಅಂತಹ ರೈತರ ಸಾಲದಲ್ಲಿ 50,000 ರೂ.ಗಳನ್ನು ಸರಕಾರ ತುಂಬುವ ಮೂಲಕ ರೈತರಿಗೆ ನೆರವಾಗಲಿದೆ ಎಂದು ಸೂಚಿಸಲಾಗಿದೆ. ಆದರೆ ಮಹಾರಾಷ್ಟ್ರ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾರು ಸಕಾಲದಲ್ಲಿ ಪಾವತಿ ಮಾಡಿದ್ದಾರೋ ಅವರಿಗೆ ಶೇ. 25ರ ನೆರವು ಘೋಷಿಸಿದೆ.

Advertisement

ನವೀಕೃತ ಸಾಲ
ಮೊದಲೆಲ್ಲ  ಮೇ – ಜುಲೈ ಅವಧಿಯಲ್ಲಿ ಹೆಚ್ಚಾಗಿ ಕೃಷಿ ಸಾಲ ಮಾಡುತ್ತಿದ್ದರು. ಈಗ ವರ್ಷದ ಅಷ್ಟೂ ತಿಂಗಳು ಬೆಳೆ ಸಾಲ ನೀಡಲಾಗುತ್ತದೆ. ಬಡ್ಡಿ ರಹಿತ ಸಾಲ ಪಡೆಯಬೇಕಾದರೆ ಆತ 365 ದಿನಗಳ ಒಳಗೆ ಅದನ್ನು ಮರುಪಾವತಿ ಮಾಡಬೇಕು. 1 ದಿನ ತಡವಾದರೂ ಅಲ್ಪಾವಧಿಯ ಆ ಸಾಲಕ್ಕೆ ಶೇ. 13ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ ಹೇಗೋ ಏನೋ ಮಾಡಿ ರೈತರು ಅದನ್ನು 365 ದಿನಗಳ ಒಳಗೆ ಪಾವತಿಸಿ ತತ್‌ಕ್ಷಣ ಹೊಸ ಸಾಲ ಪಡೆಯುತ್ತಾರೆ. ಹೊಸ ಸಾಲ ವಿತರಣೆ ಒಂದೊಂದು ಸಹಕಾರಿ ಸಂಸ್ಥೆಗಳಲ್ಲಿ ಒಂದೊಂದು ರೀತಿ ಸಮಯ ಬೇಡುತ್ತದೆ. ಆಡಳಿತ ಮಂಡಳಿಯ ಸಭೆ ನಡೆಯಲು ಸಮಯ ತಗುಲಬಹುದು. ಇಲ್ಲದಿದ್ದರೆ ಎನ್‌ಸಿಎಸ್‌ ನೋಂದಣಿಗಾಗಿ 1-2 ತಿಂಗಳ ಸಮಯ ಕಾಯಬೇಕಾಗಿಯೂ ಬರುತ್ತದೆ. ಇಂತಹ ಸಂದರ್ಭದಲ್ಲೆಲ್ಲಾ ರೈತ ಸಾಲಮರುಪಾವತಿ ಮಾಡಿದ್ದಾನೆ ಎಂದೇ ದಾಖಲೆ ಇರುವ ಕಾರಣ ಅಂತಹವರಿಗೆ ಸಾಲಮನ್ನಾ ಭಾಗ್ಯದ ಪ್ರಯೋಜನ ದೊರೆಯುವುದಿಲ್ಲ. ಇನ್ನು ಸಹಕಾರಿ ಸಂಸ್ಥೆಗಳು ಸರಕಾರದ ಹಣಕ್ಕಾಗಿ ಕಾಯಬೇಕು.

ಎಲ್ಲರಿಗೂ ದೊರೆಯಲಿ
ದ.ಕ. ಉಡುಪಿಯಲ್ಲಿ 84,153 ರೈತರಿಗೆ 379.31 ಕೋ.ರೂ. ಪ್ರಯೋಜನವಿದೆ. ಆದರೆ 13,514 ರೈತರು 64 ಕೋ.ರೂ. ಸಕಾಲದಲ್ಲಿ ಸಾಲ ಪಾವತಿಸಿದ್ದಾರೆ. ಮರುಪಾವತಿ ಮಾಡಿದ ರೈತರಿಗೂ ಈ ಸೌಲಭ್ಯ ನೀಡಬೇಕೆಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರು ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಾಮಾಣಿಕತನ ತಪ್ಪೇ?
ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ರೈತ ಪ್ರಾಮಾಣಿಕನಾಗಿದ್ದರೆ ಆತನಿಗೆ ಯಾವುದೇ ಪ್ರಯೋಜನ ದೊರೆಯುವುದಿಲ್ಲ. ಇದು ರೈತರ ಹುಬ್ಬೇರಿಸಿದೆ. ಸಾಮಾನ್ಯವಾಗಿ ರೈತರೆಂದರೆ ಮುಗ್ಧ ಹಾಗೂ ಪ್ರಾಮಾಣಿಕರು ಎಂದೇ ಜನಜನಿತ. ಬೆಳೆ ದಿವಿನಾಗಿ ಬಂದು ಫಸಲು ಹುಲುಸಾದರೆ ಅವರು ಸಾಲ ಬಾಕಿ ಇಡುವುದಿಲ್ಲ. ಹವಾಮಾನ ಸೇರಿದಂತೆ ಮಾರುಕಟ್ಟೆ ವೈಪರೀತ್ಯ ದಂತಹ ಬೇರೆ ಬೇರೆ ಕಾರಣಗಳು ಸಾಲ ಮರು ಪಾವತಿಗೆ ತಡೆಯಾಗುತ್ತವೆ. ಬಯಲು ಸೀಮೆಯ ರೈತರ ಸಮಸ್ಯೆಗಳು ಒಂದು ರೀತಿಯಾದರೆ ಕರಾ ವಳಿ ಪ್ರಾಂತ್ಯದ ರೈತರದ್ದು ಬೇರೆಯೇ ಸಮಸ್ಯೆ.

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳಲ್ಲಿ ಶೇ. 100 ಸಾಲ ಮರುಪಾವತಿ ಯಾಗುತ್ತಿದೆ. ಇಲ್ಲಿನ ರೈತರ ಪ್ರಾಮಾಣಿಕತನಕ್ಕೆ ಸರಕಾರ ಬೆಲೆ ಕೊಟ್ಟು ಈಗಾಗಲೇ ಮರುಪಾವತಿ ಸಿದವರಿಗೂ ಸಾಲಮನ್ನಾ ನೀಡಬೇಕು 
– ವೃಷಭ ಆರಿಗ, ಕೃಷಿಕರು

ಸಾಲಮನ್ನಾ ಸ್ವಾಗತಾರ್ಹ. ಅಡಿಕೆ, ರಬ್ಬರು, ಕೊಕ್ಕೊ ಬೆಲೆ ಕಡಿಮೆ ಇದ್ದರೂ ದ.ಕ. ಉಡುಪಿಯಲ್ಲಿ ಸಹಕಾರಿ ಕಾಳಜಿಯಿಂದ ಹಾಗೂ ಬಡ್ಡಿ ರಿಯಾಯಿತಿಗಾಗಿ ಸಕಾಲದಲ್ಲಿ ರೈತರು ಮರುಪಾವತಿಸಿ, ಮರುಸಾಲ ಪಡೆಯುತ್ತಾರೆ. ಆದ್ದರಿಂದ ಶಾಕ್‌ ನೀಡುವ ಬದಲಾಗಿ ಪ್ರಯೋಜನ ದೊರೆಯುವಂತೆ ಘೋಷಣೆಯಾಗಬೇಕು.
– ಎನ್‌.ಎಸ್‌. ಗೋಖಲೆ 
ಅಧ್ಯಕ್ಷರು, ಮುಂಡಾಜೆ ಸಹಕಾರಿ ಸಂಘ

–  ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next