Advertisement

ಹೆಲ್ಮೆಟ್‌ ಇಲ್ಲದಿದ್ದರೆ ಪೂಜೆ ಇಲ್ಲ!

07:19 AM Jan 17, 2018 | |

ಭುವನೇಶ್ವರ: ದ್ವಿಚಕ್ರವಾಹನ ಸವಾರರು ಹೆಲ್ಮೆಟ್‌ ಧರಿಸುವಂತೆ ಮನವೊಲಿಸುವ ತರಹೇವಾರಿ ಪ್ರಯತ್ನಗಳು ದೇಶಾದ್ಯಂತ ನಡೆಯುತ್ತಲೇ ಇರುತ್ತವೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ, ಒಡಿಶಾದ ಪೊಲೀಸರು ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಜಗತ್‌ ಸಿಂಗ್‌ಪುರದ ಮಾ ಸರಳಾ ದೇಗುಲದಲ್ಲಿ ಹೆಲ್ಮೆಟ್‌ ಇಲ್ಲದಿದ್ದರೆ ಬೈಕ್‌ ಪೂಜೆ ಮಾಡುವುದಿಲ್ಲ ಎಂದು ಪೂಜಾರಿಗಳು ಘೋಷಿಸಿದ್ದಾರೆ. ಪೂಜೆ ಮಾಡಿಸಬೇಕೆಂದರೆ ಹೆಲ್ಮೆಟ್‌ ಕಡ್ಡಾಯಗೊಳಿಸಿದ್ದಾರೆ.

Advertisement

ಅರೆ, ಹೆಲ್ಮೆಟ್‌ಗೂ ಪೂಜೆಗೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಬೈಕ್‌ ಖರೀದಿಸಿದವರು ಹಾಗೂ ಬಳಸುತ್ತಿರುವವರು ಹೆಲ್ಮೆಟ್‌ ಕೂಡ ಖರೀದಿಸಲಿ ಹಾಗೂ ತಪ್ಪದೇ ಧರಿಸಲಿ ಎಂಬುದೇ ಇದರ ಹಿಂದಿನ ಆಶಯ. ಜಗತ್‌ಸಿಂಗ್‌ಪುರದಲ್ಲಿ ನೋಂದಣಿಯಾಗುವ ಬಹುತೇಕ ದ್ವಿಚಕ್ರ ವಾಹನಗಳನ್ನು ಮೊದಲು ಇದೇ ದೇಗುಲಕ್ಕೆ ತಂದು ಪೂಜೆ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲ, ಪ್ರತಿ ನಿತ್ಯ 10ಕ್ಕೂ ಹೆಚ್ಚು ಬೈಕ್‌ಗಳು ಇಲ್ಲಿಗೆ ಪೂಜೆಗಾಗಿ ಬರುತ್ತವೆ. ಅದರಲ್ಲೂ ಸಂಕ್ರಾಂತಿಯಂತಹ ವಿಶೇಷ ದಿನಗಳಂದು 50ಕ್ಕೂ ಜಾಸ್ತಿ ಬೈಕ್‌ಗಳು ಪೂಜೆಗಾಗಿ ಕ್ಯೂನಿಲ್ಲುತ್ತವೆ. ಈ ದೇಗುಲ ಸುಮಾರು 1 ಸಾವಿರ ಹಳೆಯದಾಗಿದ್ದು, ಸಾವಿರಾರು ಜನರು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಒಡಿಶಾ ಪೊಲೀಸರು ಈ ನಿರ್ಧಾರ ಕೈಗೊಳ್ಳಲು ದೇವಾಲಯದ ಆಡಳಿತ ಮಂಡಳಿಯನ್ನು ಒಪ್ಪಿಸಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನ ಅರ್ಚಕ ಸುದಮ್‌ ಚರಣ ಪಾಂಡಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ವಾಹನ ಪೂಜೆ ಮಾಡಿಸಲು ಬರುವ ಪ್ರತಿಯೊಬ್ಬರೂ ಹೆಲ್ಮೆಟ್‌ ತರಲೇಬೇಕು. ಇಲ್ಲದಿದ್ದರೆ ಪೂಜೆಯೇ ಮಾಡಲ್ಲ ಎಂಬ ನಿಯಮ ಜಾರಿ ಮಾಡಿದ್ದಾರೆ. ಒಡಿಶಾದಲ್ಲಿ ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ವಿಪರೀತ ಹೆಚ್ಚುತ್ತಿದ್ದು, ಇದನ್ನು ತಡೆಯುವಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next