Advertisement

ಉಪ್ಪಿನಂಗಡಿ ಗ್ರಾಮ ಪಂಚಾಯತ್‌ಗೆ ಘನತ್ಯಾಜ್ಯ ವಿಲೇವಾರಿ ಜಾಗವೆಲ್ಲಿ?

05:10 AM May 28, 2018 | Karthik A |

ಉಪ್ಪಿನಂಗಡಿ: ಉಪ್ಪಿನಂಗಡಿ ಘನ ತ್ಯಾಜ್ಯ ಘಟಕಕ್ಕೆ ಸರಿಯಾದ ನಿವೇಶನ ದೊರೆಯದೆ, ಹೋರಾಟವೂ ತೂಗುಯ್ಯಾಲೆಯಲ್ಲಿದ್ದು, ಜಿಲ್ಲಾಡಳಿತ ಮಧ್ಯೆ ಪ್ರವೇಶಿದರೆ ಮಾತ್ರ ಸುಸೂತ್ರವಾಗಲು ಸಾಧ್ಯವೆಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ಇಪ್ಪತ್ತು ವರ್ಷಗಳಿಂದ ಹಲವು ಪಕ್ಷಗಳು ಆಡಳಿತ ನಡೆಸಿದರೂ ನಿರ್ದಿಷ್ಟ ಜಾಗ ಗುರುತಿಸಲು ಸಾಧ್ಯವಾಗಿಲ್ಲ. 20 ವರ್ಷಗಳ ಹಿಂದೆ ಉಪ್ಪಿನಂಗಡಿ ಹಿರೇಬಂಡಾಡಿ ಗಡಿ ಪ್ರದೇಶದಲ್ಲಿ ನಿವೇಶನ ಗುರುತಿಸಿ ಘನ ತ್ಯಾಜ್ಯ ಘಟಕವನ್ನು ಲಕ್ಷಾಂತರ ರೂ. ವ್ಯಯಿಸಿ, ರಚಿಸಲಾಯಿತು. ಆದರೆ, ನಿರ್ವಹಣೆ ಸರಿಯಿಲ್ಲದ ಕಾರಣ ಆಸುಪಾಸಿನ ನಾಗರಿಕರ ವ್ಯಾಪಕ ದೂರುಗಳ ಮೇರೆಗೆ ಅದನ್ನು ರದ್ದುಗೊಳಿಸಲಾಯಿತು. ಬಳಿಕ ರಾಷ್ಟೀಯ ಹೆದ್ದಾರಿ 75ರ ಕುಮಾರಧಾರಾ ನದಿ ಕಿನಾರೆಯ ಪಕ್ಕದಲ್ಲಿರುವ ಸ್ಥಳಿಯ ಪಂಚಾಯತ್‌ ಗೆ ಸೇರಿದ ನಿವೇಶನದಲ್ಲಿ ಘನತ್ಯಾಜ್ಯ ರಾಶಿ ಹಾಕುವುದು ಅನಿವಾರ್ಯವಾಗಿತ್ತು. ಆದರೆ, ಕಿಡಿಗೇಡಿ ದಾರಿಹೋಕರು ಪ್ರತಿ ವರ್ಷ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದು, ಹೊಗೆಯಿಂದಾಗಿ ಸುತ್ತಲಿನ ಮನೆಗಳ ನಿವಾಸಿಗಳು, ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪಕ್ಕದಲ್ಲಿರುವ ಅಡಿಕೆ, ತೆಂಗಿನ ತೋಟಗಳ ಮಾಲಕರೂ ಈ ಹೊಗೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿ ಈ ತ್ಯಾಜ್ಯ ರಾಶಿ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗುತ್ತಿದೆ.

Advertisement

ಜಾಗವೇ ಇಲ್ಲ
ತ್ಯಾಜ್ಯಕ್ಕೆ ಬೆಂಕಿ ಬಿದ್ದಾಗಲೆಲ್ಲ ಅಗ್ನಿಶಾಮಕ ದಳವನ್ನು ಕರೆಸುವುದು ಪಂಚಾಯತ್‌ ಗೆ ಕೆಲಸವಾಗಿದೆ. ಈಗ ಈ ನಿವೇಶನಕ್ಕೂ ಕುತ್ತು ಬಂದಿದೆ. ರಾಷ್ಟೀಯ ಹೆದ್ದಾರಿಯ ಚರ್ತುಷ್ಪಥ ರಸ್ತೆ ವಿಸ್ತರಣೆಗೆ ಈ ಜಾಗವೂ ಸೇರಿಕೊಳ್ಳಲಿದ್ದು, ಬದಲಿ ಜಾಗಕ್ಕಾಗಿ ಹಲವು ನಿವೇಶನಗಳನ್ನು ಹುಡುಕಿ ಮಂಜೂರಾತಿ ಪಡೆಯಲಾಗಿತ್ತು. ಆದರೆ, ಸಮೀಪದ ನಿವಾಸಿಯೊಬ್ಬರು ಈ ಸ್ಥಳದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣವನ್ನು ರದ್ದುಗೊಳಿಸಲು ನ್ಯಾಯಾಲಯದ ಮೊರೆಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದು ಪಂಚಾಯತ್‌ಗೆ ಬಹುದೊಡ್ಡ ಸವಾಲಾಗಿದೆ. ಪಂಚಾಯತ್‌ ವ್ಯಾಪ್ತಿ 6 ವಾರ್ಡ್‌ಗಳಿಂದ ಕೂಡಿದ್ದು, ಘನತ್ಯಾಜ್ಯ ಘಟಕಕ್ಕೆ ಬೇರೆ ಜಾಗ ಸಿಗದೆ ಸ್ಥಳೀಯ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕಗ್ಗಂಟಾದ ಸಮಸ್ಯೆ
ಸುಮಾರು 11 ಸಾವಿರದ ಜನಸಂಖ್ಯೆಯುಳ್ಳ, ಪಟ್ಟಣ ಪಂಚಾಯತ್‌ ಗೂ ಮೀರಿಸುವ 10 ಕೋಟಿ ರೂ. ಆದಾಯವಿರುವ ಉಪ್ಪಿನಂಗಡಿ ಗ್ರಾ.ಪಂ. ಜನಪರ ಕಾಳಜಿಯಿಂದ ಅಭಿವೃದ್ಧಿಯ ಮುಂದಡಿ ಇರಿಸಿದ್ದರೂ ಘನತ್ಯಾಜ್ಯ ಘಟಕಕ್ಕೆ ನಿರ್ದಿಷ್ಟ ಜಾಗವೇ ಇಲ್ಲದಂತಾಗಿದೆ. ಇಪ್ಪತ್ತು ಸದಸ್ಯರ ಗ್ರಾ.ಪಂ.ನಲ್ಲಿ ಹೊಂದಾಣಿಕೆಯ ಮೂಲಕ ಅಭಿವೃದ್ಧಿಪರ ಆಡಳಿತ ನೀಡಲು ಎಲ್ಲ ಸದಸ್ಯರು ಬದ್ಧರಾಗಿದ್ದರೂ ಘನತ್ಯಾಜ್ಯ ಘಟಕವೇ ಅವರಿಗೆ ಕಗ್ಗಂಟಾಗಿದೆ.

ತಕ್ಷಣವೇ ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಿತ ತಾಲೂಕು ದಂಡಾಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು ಹಾಗೂ ಸಂಘ – ಸಂಸ್ಥೆಯ ಪದಾಧಿಕಾರಿಗಳನ್ನೊಳಗೊಂಡ ವಿಶೇಷ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಪಟ್ಟಣದ ಸ್ವತ್ಛತೆಯೇ ದೊಡ್ಡ ಸಮಸ್ಯೆಯಾಗಿ, ಅನಾರೋಗ್ಯಕ್ಕೆ ದಾರಿಯಾದೀತು. ಪಟ್ಟಣದಲ್ಲಿ ಘನತ್ಯಾಜ್ಯ ಸಂಗ್ರಹಿಸಲು ವಿಶೇಷ ಟ್ರ್ಯಾಕ್ಟರ್‌ ಮೂಲಕ 10ಕ್ಕೂ ಹೆಚ್ಚು ಸಿಬಂದಿ ನಸುಕಿನಿಂದಲೇ ಕರ್ತವ್ಯ ನಿಭಾಯಿಸಿದರೂ ಸಂಜೆಯಾದರೂ ಮುಗಿಯುವುದಿಲ್ಲ.

ಹೋಟೆಲ್‌ – ಅಂಗಡಿಗಳೆಷ್ಟು?
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಸ್ಯಾಹಾರಿ ಹೊಟೇಲ್‌ಗ‌ಳು 15, ಅಂಗಡಿ ಮುಂಗಟ್ಟುಗಳು 620, ತಂಪು ಪಾನೀಯ ಅಂಗಡಿಗಳು 100, ಕೌÒರಿಕ ಅಂಗಡಿಗಳು 50, ಮಾಂಸಾಹಾರಿ ಹೊಟೇಲ್‌ಗ‌ಳು 15, ವಾಣಿಜ್ಯ ಸಂಕೀರ್ಣಗಳು 14, ವಸತಿ ಸಮುಚ್ಚಯಗಳು 8, ಕಲ್ಯಾಣ ಮಂಟಪಗಳು 4, ಆಸ್ಪತ್ರೆ, ಕ್ಲಿನಿಕ್‌ ಗಳು 25 ಹಾಗೂ ವಸತಿ ಗೃಹಗಳು 3 ಇವೆ. ಇವುಗಳಿಂದ ತಿಂಗಳಿಗೆ 75 ಸಾವಿರ ರೂ. ಆದಾಯವಿದೆ. ಆದರೆ, ಒಂದು ಟ್ಯಾಂಕರ್‌ಗೆà ಉಪ್ಪಿನಂಗಡಿ ಗ್ರಾ.ಪಂ. 1.10 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಜಿ.ಪಂ. ಸ್ವತ್ಛತೆ ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಗಳ ಒತ್ತಡದ ಮೇರೆಗೆ ದ್ರವ್ಯ ತ್ಯಾಜ್ಯ ಘಟಕ ರಚನೆಯಾಗಿದ್ದು, ಗೊಬ್ಬರ ತಯಾರಿಸುವ ಮೂಲಕ ಪ್ರಶಸ್ತಿಗೂ ಅರ್ಹವಾಗಿದೆ.

Advertisement

ಅದೆಷ್ಟೋ ಬಾರಿ ಸ್ಥಳೀಯ ವರ್ತಕರನ್ನು ಒಳಗೊಂಡ ಸಭೆ ಕರೆದು, ಘನ ಹಾಗೂ ದ್ರವ ತ್ಯಾಜ್ಯ ವಿಂಗಡಿಸಿ ಕೊಡುವಂತೆ ತಿಳಿಹೇಳಿದರೂ ಪ್ಲಾಸ್ಟಿಕ್‌ ನಿಂದ ಮುಕ್ತಗೊಳ್ಳಲು ಗ್ರಾ.ಪಂ.ಗೆ ಸಾಧ್ಯವಾಗಿಲ್ಲ. ಹಲವು ಬಾರಿ ಪಂಚಾಯತ್‌ ಅಧಿಕಾರಿಗಳು ಖುದ್ದಾಗಿ ಅಂಗಡಿಗಳ ಮೇಲೆ ದಾಳಿ ಮಾಡಿ, ಪ್ಲಾಸ್ಟಿಕ್‌ ಉಪಯೋಗಿಸುತ್ತಿರುವ ವರ್ತಕರಿಗೆ ದಂಡ ವಿಧಿಸಿದರೂ ಪ್ಲಾಸ್ಟಿಕ್‌ ಬಳಕೆ ತಡೆಯಲು ಸಾಧ್ಯವಾಗಿಲ್ಲ.

ಪ್ರಯತ್ನ ಫ‌ಲ ನೀಡಿಲ್ಲ
ನಾನು ಅಧ್ಯಕ್ಷತೆ ವಹಿಸಿದ ಕಳೆದ ಮೂರುವರೆ ವರ್ಷಗಳಿಂದ ಸತತ ಪ್ರಯತ್ನ ನಡೆಸಿದ್ದೇನೆ. ಈಗಾಗಲೇ ಕಂದಾಯ ಇಲಾಖೆ ಸರ್ವೇ ನಂ. 104ರ ನೆಡಿRಲು (ಅಜಿರಾಳ) ಎಂಬಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ 45 ಸೆಂಟ್ಸ್‌ ಜಾಗ ಮಂಜೂರಾಗಿತ್ತು. ಆದರೆ, ಸ್ಥಳೀಯರೊಬ್ಬರು ನ್ಯಾಯಾಲಯದ ಮೊರೆ ಹೋಗಿ ಸ್ಟೇ ತಂದಿದ್ದರಿಂದ ಯೋಜನೆಯನ್ನು ಮುಂದುವರಿಸಲು ತಡೆ ಉಂಟಾಗಿದೆ.
– ಅಬ್ದುಲ್‌ ರೆಹಮಾನ್‌, ಅಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.

— ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next