Advertisement

Mysore Saligrama Hotel; ರಾಜಕೀಯ ಚರ್ಚೆ ಬೇಡ: ಬೋರ್ಡ್‌ ಹಾಕಿದ ಮಾಲಿಕ

01:08 PM Apr 05, 2023 | Team Udayavani |

ಸಾಲಿಗ್ರಾಮ (ಮೈಸೂರು ಜಿಲ್ಲೆ): ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚಹಾದಂಗಡಿಗಳು, ಗೂಡಂಗಡಿಗಳು ರಾಜಕೀಯ ಚರ್ಚಾ ವೇದಿಕೆಗಳಾಗುವುದು ಸರ್ವೇ ಸಾಮಾನ್ಯ. ಆದರೆ, ಇಲ್ಲೊಬ್ಬರು ರಾಜಕೀಯ ಚರ್ಚೆ ಮಾಡದಂತೆ ಬೋರ್ಡ್‌ ಹಾಕಿ ನಿರ್ಬಂಧ ಹಾಕಿರುವುದು ಜನರನ್ನು ಹುಬ್ಬೇರುವಂತೆ ಮಾಡಿದೆ.

Advertisement

ಗಮನ ಸೆಳೆಯುತ್ತಿದೆ: ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮ ರಾಮನಾಥಪುರ ಮುಖ್ಯ ರಸ್ತೆಯಲ್ಲಿರುವ ದೊಡ್ಡಮ್ಮತಾಯಿ ನರ್ಸರಿ ಹಾಗೂ ಚಹಾದಂಗಡಿ ಮಾಲಿಕ ಎಚ್‌.ಎಸ್‌.ಜಲೇಂದ್ರ ಅವರೇ ಇಂತಹ ಬೋರ್ಡ್‌ ಹಾಕಿರುವವರಾಗಿದ್ದು ಅಂಗಡಿ ವ್ಯಾಪಾರ ಮಾಡುವುದರ ಜತೆಗೆ ಹಲವು ಗಲಾಟೆಗಳಿಗೆ ಕಾರಣವಾಗುವ ರಾಜಕೀಯ ವಿಚಾರಗಳನ್ನು ಕಡ್ಡಾಯವಾಗಿ ಮಾತನಾಡದಂತೆ ಅಂಗಡಿ ಮುಂಭಾಗದಲ್ಲಿ “ಸಾರ್ವಜನಿಕರು, ಗ್ರಾಹಕರಲ್ಲಿ ಮನವಿ. ಇಲ್ಲಿ ರಾಜಕೀಯ ಸುದ್ದಿ ಮಾತನಾಡಬೇಡಿ’ ಎಂಬ ಬೋರ್ಡ್‌ ನೇತು ಹಾಕಿದ್ದಾರೆ. ಈ ಬೋರ್ಡ್‌ ಈ ಭಾಗದಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿದೆ.

ಗಲಾಟೆ ತಪ್ಪಿಸಲು ಬೋರ್ಡ್‌ ಹಾಕಿದ್ದಾರೆ:
ಗ್ರಾಮೀಣ ಭಾಗದಲ್ಲಿ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿದ್ದಂತೆ ಮನೆ ಮುಂದಿನ ಜಗುಲಿ, ಅರಳಿಕಟ್ಟೆಗಳು, ಮದುವೆ ಮನೆಗಳು ರಾಜಕೀಯ ಚರ್ಚಾ ವೇದಿಕೆಗಳಾಗುತ್ತಿವೆ. ಇನ್ನು ಚಹಾದಂಗಡಿಗಳು ಮಾತ್ರ ಸೊಗಸಾದ ಚಹಾ ಸೇವಿಸುತ್ತಾ ಗುಂಪುಗೂಡಿ ಚರ್ಚಿಸುವ ಜನರ ಗುಂಪು ಸರ್ವೇ ಸಾಮಾನ್ಯ.

ಆದರೆ, ಈ ಬೋರ್ಡ್‌ ಹಾಕಿರುವ ಇವರ ಅಂಗಡಿ ಮುಂದೆ ಚರ್ಚೆಗಳು ಹೆಚ್ಚಾಗಿ ತೀರಾ ವಿಕೋಪಕ್ಕೆ ಹೋದಂತಹ ಸಂದರ್ಭಗಳು ಇದ್ದು, ಇದರಿಂದ ತಮ್ಮ ವ್ಯಾಪಾರಕ್ಕೆ ಅಡಚಣೆ ಆಗಲಿದೆ. ಇದನ್ನು ತಪ್ಪಿಸಲು ಅಂಗಡಿ ಮುಂಭಾಗ ಬೋರ್ಡ್‌ ಹಾಕಲಾಗಿದೆ ಎಂದು ಮಾಲೀಕ ಜಲೇಂದ್ರ ಮಾಹಿತಿ ನೀಡಿದ್ದಾರೆ.

ಚುನಾವಣಾ ಕಾವು: ರಾಜಕೀಯ ಚರ್ಚೆಗಳು ಕೇಳಲು, ಮಾತನಾಡಲು ಹಿತವೇ ಆದರೂ ಎರಡೂ ಪಕ್ಷಗಳ ಕಾರ್ಯಕರ್ತರು ಒಂದೆಡೆ ಸೇರಿ ತಮ್ಮ ತಮ್ಮ ಪಕ್ಷಗಳ ಸಮರ್ಥನೆಗೆ ಇಳಿಯುತ್ತಾರೆ. ಅದು, ವಿಪರೀತವಾದರೂ, ಸ್ವಲ್ಪ ಮಾತಿಗೆ ಮಾತು ಬೆಳೆದರೂ ಕೋಪಗೊಂಡು ಗಲಾಟೆಗಳಾಗುತ್ತವೆ. ಹೀಗಾಗಿ ಬೋರ್ಡ್‌ ಹಾಕಿದ್ದು ಕೆ.ಆರ್‌.ನಗರ ಮತ ಕ್ಷೇತ್ರದಲ್ಲಿ ಚುನಾವಣಾ ಕಾವು ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತೋರಿಸುತ್ತಿದೆ.

Advertisement

ಒಟ್ಟಾರೆ ತಮಗೆ ರಾಜಕೀಯವೋ, ಇಲ್ಲ ಯಾವುದೋ ವಿಚಾರವೋ ವ್ಯಾಪಾರವಾದರೆ ಸಾಕು ಎನ್ನುವ ಅಂಗಡಿಗಳ ಮಾಲಿಕರ ನಡುವೆ ರಾಜಕೀಯ ವಿಚಾರವನ್ನೇ ಮಾತನಾಡದಂತೆ ಬೋರ್ಡ್‌ ಹಾಕಿ ನಿರ್ಬಂಧ ಹಾಕಿರುವ ಜಲೇಂದ್ರ ಅವರ ಬಗ್ಗೆ ಸಾರ್ವಜನಿಕರು ಇದು ಉತ್ತಮ ಬೆಳವಣೆಗೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಪರಸ್ಪರ ವಿಚಾರ ಕೆದಕಿದರೆ ಗಲಾಟೆ

ನಮ್ಮ ಅಂಗಡಿಗೆ ನಿತ್ಯ ನೂರಾರು ಜನರು ಬರುತ್ತಾರೆ. ಅವರು ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ ಯಾವುದಾದರೊಂದು ಪಕ್ಷಗಳ ಕಾರ್ಯಕರ್ತರಾಗಿರು ತ್ತಾರೆ. ಅವರಿಗೆ ನಿತ್ಯ ತಮ್ಮ ನಾಯಕರ ವಿಚಾರವಾಗಿ ಮಾತನಾಡು ವಾಗ, ಉದ್ರೇಕದಿಂದ ಪರಿಸ್ಥಿತಿಗಳು ಕೈಮೀರಿ ಹೋಗುತ್ತವೆ. ಇದರಿಂದಾಗಿ ವ್ಯಾಪಾರಿಗಳು- ನಮ್ಮ ಸಂಬಂಧಕ್ಕೆ ಧಕ್ಕೆ ಆಗುತ್ತದೆ. ಹೀಗಾಗಿ ರಾಜಕೀಯ ವಿಚಾರ ಮಾತನಾಡದೇ ನೆಮ್ಮದಿಯಾಗಿ ನಮ್ಮ ಸೇವೆ ಪಡೆಯಲಿ, ಇದಕ್ಕೋಸ್ಕರ ನಾನು ಬೋರ್ಡ್‌ ಹಾಕಿದ್ದೇನೆಂದು ಹೊಸೂರು ಅಂಗಡಿ ಮಾಲಿಕ ಎಚ್‌.ಎಸ್‌.ಜಲೇಂದ್ರ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next