Advertisement

Article: ಪರಿಶ್ರಮಕ್ಕಿಲ್ಲ ಗಂಟೆಗಳ ಮಿತಿ

12:06 AM Nov 02, 2023 | Team Udayavani |

ಈಚೆಗೆ ಇನ್ಫೋಸಿಸ್‌ ಮುಖ್ಯಸ್ಥ ನಾರಾಯಣ ಮೂರ್ತಿ ಅವರು ನೀಡಿದ್ದ ಒಂದು ಹೇಳಿಕೆ ಸಾಕಷ್ಟು ಟೀಕೆಗೆ ಒಳಗಾಗಿದೆ. ನಮ್ಮ ದೇಶವು ಜಾಗತಿಕ ಮಟ್ಟ ದಲ್ಲಿ ಎದುರಾಗುತ್ತಿರುವ ಸ್ಪರ್ಧೆಯನ್ನು ಸಮರ್ಥ ವಾಗಿ ಎದುರಿಸಿ ಗೆದ್ದು ಬೀಗಲು ಪೂರಕವಾಗಿ ಯುವಜನತೆ ವಾರದಲ್ಲಿ 70 ತಾಸು ದುಡಿಯಬೇಕು ಎಂಬುದಾಗಿತ್ತು ಮೂರ್ತಿಯವರ ಟೀಕೆಗೆ ಒಳಗಾಗಿ ರುವ ಹೇಳಿಕೆ. ಎಲ್ಲೋ ಕೆಲವರು ಮಾತ್ರ ಈ ಹೇಳಿಕೆ ಯನ್ನು ಸಮರ್ಥಿಸಿಕೊಂಡದ್ದು ಬಿಟ್ಟರೆ ವೈದ್ಯಕೀಯ ಕ್ಷೇತ್ರದ ತಜ್ಞರು ಕೂಡ ಇದು ಅಸಾಧ್ಯ ಮಾತು ಹಾಗೂ ದೇಶದ ಜನರ ಆರೋಗ್ಯದ ಮೇಲೆ ಗಂಭೀರವಾದಂಥ ಅಡ್ಡ ಪರಿಣಾಮ ಬೀರಲು ಪೂರಕವಾದಂಥ ಸಲಹೆ ಎಂದು ಹೇಳಿದ್ದಾರೆ. ಜತೆಗೆ ಈ ಹೇಳಿಕೆಯನ್ನು ಸಮರ್ಥಿಸಿಕೊಂಡವರು ಕೂಡ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡಿದ್ದಾರೆ. ನಾರಾಯಣ ಮೂರ್ತಿಯವರು ನೀಡಿ ರುವ ಸಲಹೆಯಲ್ಲಿ, ಯುವಜನತೆ ವಾರದಲ್ಲಿ 70 ತಾಸುಗಳ ಕಾಲ ಕಂಪೆನಿಯಲ್ಲೇ ದುಡಿಯಬೇಕು ಎಂದಿಲ್ಲ ಎಂದು ಆ ಹೇಳಿಕೆಯನ್ನು ಸಮರ್ಥಿಸಿ ಕೊಂಡವರು ಹೇಳಿದ್ದಾರೆ.

Advertisement

ಅಂತೂ ಈ ಹೇಳಿಕೆ ಸಾಕಷ್ಟು ಚಿಂತನೆಗಳಿಗೆ ಒಂದು ವೇದಿಕೆ ಒದಗಿಸಿದೆ. ಈಗ ಇರುವುದು ನಾವು ಎಷ್ಟು ಗಂಟೆ ದುಡಿಯಬೇಕು ಎಂಬ ವಿಷಯ. ಇಲ್ಲಿ ಗಂಟೆ ಮತ್ತು ದುಡಿಯುವ ಶಬ್ದಗಳ ವ್ಯಾಖ್ಯೆ, ಅರ್ಥವೂ ವಿಶಾಲವಾಗಿದೆ. ನಾವು ಕಂಪೆನಿಯಲ್ಲಿ, ಅಥವಾ ವೇತನಕ್ಕಾಗಿ ದುಡಿಯುವ ದುಡಿಮೆಯ ಅವಧಿ ಒಂದು ಕಡೆಯಾದರೆ, ಮನೆಯಲ್ಲಿ ನಾವು ಮಾಡುವ ಕೆಲಸವಿರಬಹುದು, ಕಚೇರಿಯ ಕೆಲಸಕ್ಕೆ ಬೇಕಾದ ಹೋಂವರ್ಕ್‌ ಇರಬಹುದು…. ಇವೆಲ್ಲವೂ ದಾಖಲೆ ಗಳಿಗೆ ಸಿಗುವ ಸಮಯವೂ ಇಲ್ಲ, ಕೆಲಸವೂ ಅಲ್ಲ.

ಒಬ್ಬ ವಿದ್ಯಾರ್ಥಿ ಎಷ್ಟು ತಾಸು ಕಲಿಯುತ್ತಾನೆ ಎಂಬ ಪ್ರಶ್ನೆಗೆ ಆತನ ತರಗತಿಯ ಸಮಯವನ್ನಷ್ಟೇ ಹೇಳಿದರೆ ಅದು ಸಮರ್ಪಕ ಉತ್ತರವಾಗದು. ಆತ ಮನೆಯಲ್ಲಿ ಮಾಡುವ ಸಿದ್ಧತೆ, ಟ್ಯೂಷನ್‌ಗಾಗಿ ತೆಗೆದುಕೊಳ್ಳುವ ಸಮಯ ಸಹಿತ ಶಿಕ್ಷಣಕ್ಕೆ ಪೂರಕವಾಗಿ ಆತ ವಿನಿಯೋ ಗಿಸುವ ಎಲ್ಲ ಸಮಯವನ್ನೂ ಆತನ ಕಲಿಕೆಯ ಸಮಯವೆಂದೇ ಪರಗಣಿಸಬೇಕಾಗುತ್ತದೆ. ಇಲ್ಲಿ ಆತ ಎಷ್ಟು ಪರಿಶ್ರಮ ಹಾಕಿ ಕಲಿಯುತ್ತಾನೋ ಅಷ್ಟು ಉತ್ತಮ ಅಂಕಗಳಿಕೆ ಸಾಧನೆ ಮಾಡಲು ಸಾಧ್ಯ. ಕಲಿ ಯಲು ಇಷ್ಟೇ ಸಮಯ ಸಾಕು ಎಂದು ಯಾವ ಹೆತ್ತ ವರೂ ಹೇಳುವುದಿಲ್ಲ. ದಿನದಲ್ಲಿ ಅರ್ಧ ತಾಸು ಆಡಿ ದರೂ ಸಾಕು, ಸಾಕು, ಪುಸ್ತಕ ತೆಗೆದು ಓದು ಎಂದು ಹೇಳುವವರೇ ಹೆಚ್ಚು.

ಸಮಯದ ಮಹತ್ವ
ಸಮಯಕ್ಕೆ ವಿಶೇಷವಾದ ಮಹತ್ವವಿದೆ. ನಮ್ಮ ದೇಶ ದಲ್ಲಿ ಸಮಯಕ್ಕೆ ಸರಿಯಾದ ಮಹತ್ವ ಸಿಗುತ್ತಿಲ್ಲ. ಒಂದು ಕಚೇರಿಗೆ ಯಾವುದಾದರೂ ಕೆಲಸ ಮಾಡಿಸಿ ಕೊಳ್ಳಲು ಹೋದರೆ ನಾಳೆ ಬಾ, ನಾಳೆ ಬಾ ಎಂಬ ಉತ್ತರ ಈಗಲೂ ಸಿಗುತ್ತದೆ. ಆದರೆ ಆ ನಾಳೆ ಬಾ ಎಂಬ ಒಂದು ಶಬ್ದ ಎಷ್ಟು ಸಮಯ ಹಾಗೂ ಆರ್ಥಿಕ ನಷ್ಟವನ್ನು ಉಂಟು ಮಾಡುತ್ತದೆ ಎಂಬುದನ್ನು ಯಾರಾದರೂ ಊಹಿಸಿದ್ದಾರಾ? ಸಮಯಕ್ಕೆ ಮಹತ್ವ ಕೊಡುವವರು ಈ ರೀತಿಯ ಉತ್ತರ ಹೇಳಲು ಸಾಧ್ಯವೇ? ಆ ಕೆಲಸ ಮಾಡಿಸಿಕೊಳ್ಳಲು ಬರುವವ ದಿನವೇತನ ಆಧಾರದಲ್ಲಿ ದುಡಿಯುವವನಾಗಿದ್ದರೆ ಆತ ಎಷ್ಟೋ ದಿನಗಳ ಸಂಬಳವನ್ನು ಕಳೆದುಕೊಳ್ಳ ಬೇಕಾಗುತ್ತದೆ.

ಆತ ಮನೆಯಿಂದ ಕಚೇರಿಗೆ ಬರಲು ಮಾಡುವ ಖರ್ಚು, ಹೊಟೇಲ್‌ ಖರ್ಚು ಮುಂತಾದ ವುಗಳನ್ನೆಲ್ಲ ಲೆಕ್ಕ ಹಾಕಿದರೆ ಒಂದು ಸಣ್ಣ ಕೆಲಸಕ್ಕಾಗಿ ಅನಗತ್ಯವಾಗಿ ಎಷ್ಟೋ ಖರ್ಚು ಮಾಡುತ್ತಾನೆ. ಇನ್ನೊ ಬ್ಬರ ಹಣ ಮತ್ತು ಸಮಯಕ್ಕೆ ಎಲ್ಲರೂ ಬೆಲೆ ನೀಡು ವಂತಾದರೆ ನಾಳೆ ಬಾ ಎಂಬ ಉತ್ತರಕ್ಕೆ ಅವಕಾಶವೇ ಇರುವುದಿಲ್ಲ. ನಾಳೆ ಬಾ ಎಂಬ ಉತ್ತರವು ದೇಶದ ಪ್ರಗತಿಗೆ ದೊಡ್ಡ ಹಿನ್ನಡೆಯೇ ಆಗಿದೆ. ಸಮಯಕ್ಕೆ ಜಪಾನ್‌ ದೇಶದವರು ನೀಡುವಷ್ಟು ಮಹತ್ವವನ್ನು ಬೇರೆ ದೇಶ ನೀಡುತ್ತಿಲ್ಲ ಎಂದು ಎಲ್ಲೋ ಓದಿದ ನೆನಪು. ಜಪಾನ್‌ ಆ ಕಾರಣದಿಂದಲೇ ಉತ್ಪಾದಕತೆ ಯಲ್ಲಿ ಯಶಸ್ಸು ಪಡೆದು ದೇಶದ ಜನರಲ್ಲಿ ಸಂತೋಷ ಹೆಚ್ಚಾಗುತ್ತಲೇ ಇದೆ ಎಂಬುದು ವರದಿಯೊಂದರಿಂದ ತಿಳಿದು ಬರುತ್ತದೆ.

Advertisement

ಪೋಲಾಗುವ ಸಮಯ ಕೆಟ್ಟ ಚಿಂತನೆಗೆ ಕಾರಣ
ನಾವು ಯಾವತ್ತೂ ಯಾವುದಾದರೊಂದು ಕೆಲಸದಲ್ಲಿ ಮಗ್ನರಾಗಿದ್ದರೆ ಕೆಟ್ಟ ವಿಷಯಗಳ ಕಡೆಗೆ ಗಮನ ಹರಿಸಲು ಆಸ್ಪದವೇ ಇರುವುದಿಲ್ಲ. ಕೆಲಸವಿಲ್ಲದ ಮನಸ್ಸುಗಳನ್ನು ದೆವ್ವಗಳು ಆಳುತ್ತವೆ ಎಂಬ ಒಂದು ಮಾತೂ ಇದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಮಯ, ಆರೋಗ್ಯ, ಜೀವನಶಿಸ್ತು ಮುಂತಾದವು ಅತೀ ಮುಖ್ಯವಾದವು. ಸಮಯವನ್ನು ನಾವು ಬಳಸುವುದಕ್ಕೆ ಪೂರಕವಾಗಿ ಅದು ನಮ್ಮೊಂದಿಗೆ ಹೊಂದಿಕೊಳ್ಳುತ್ತದೆ. ಎಷ್ಟೋ ಮಂದಿ ಯಾವುದಕ್ಕೂ ಪುರುಸೊತ್ತಿಲ್ಲ ಎಂದು ಹೇಳುವುದು ಸಾಮಾನ್ಯ. ಆದರೆ ಏನು ಕೆಲಸ ಮಾಡಲಿಕ್ಕಿದೆ ಎಂದು ಹೇಳಿದರೆ ನೆಟ್ಟಗೆ ಒಂದು ಉತ್ತರ ಸಿಗುವುದಿಲ್ಲ. ನಾವು ಪ್ರತೀ ದಿನ ಬಸ್ಸಿನಲ್ಲಿ ಹೆಚ್ಚು ಹೊತ್ತು ಸಂಚಾರ ಮಾಡು ವವರಾಗಿದ್ದರೆ ಆ ಸಮಯವನ್ನೂ ಸರಿಯಾಗಿ ವಿನಿಯೋಗಿಸಲು ಸಾಕಷ್ಟು ಅವಕಾಶಗಳಿವೆ. ನಾಳೆಯ ಕೆಲಸಕ್ಕೆ ಸಿದ್ಧತೆ, ಯಾರೊಂದಿಗಾದರೂ ದೂರವಾಣಿ ಮೂಲಕ ಮಾತನಾಡುವ ಕೆಲಸವಿ ದ್ದರೂ ಅದನ್ನು ಈ ಸಮಯದ ವೇಳೆಯಲ್ಲಿ ಮಾಡಿಕೊಳ್ಳಬಹುದು. ಇದನ್ನೂ ನಮ್ಮ ಕೆಲಸದ ಅವಧಿಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ ನಾವು ಆ ಬಗ್ಗೆ ಚಿಂತಿಸುವುದೇ ಇಲ್ಲ.

ಒತ್ತಡರಹಿತ ಕೆಲಸ ಈಗಿನ ಅಗತ್ಯ
ನಮ್ಮ ಬಹುತೇಕ ಕೆಲಸಗಳಲ್ಲೂ ಒತ್ತಡ ಹೆಚ್ಚು. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕೆಡಲು ಇದು ಪ್ರಮುಖ ಕಾರಣ. ಕೆಲಸವನ್ನು ಒತ್ತಡ ರಹಿತವಾಗಿ ಮಾಡಿಕೊಳ್ಳಲು ನಾವು ಯೋಜನೆ ರೂಪಿಸಿಕೊಳ್ಳಬೇಕು. ಕೆಲಸದಲ್ಲಿ ಅತಿಯಾದ ಒತ್ತಡದಿಂದ ಉತ್ತಮ ಫ‌ಲಿತಾಂಶ ಸಿಗುವುದು ಸಾಧ್ಯವೇ ಇಲ್ಲ. ಯಾವ ತಜ್ಞರೂ ಒತ್ತಡದಲ್ಲಿ ಕೆಲಸ ಮಾಡಿ ಎಂದು ಹೇಳುವುದಿಲ್ಲ. ಕೆಲಸದ ಜತೆಯಲ್ಲಿ ನಾವು ಮನಸ್ಸು ಹಗುರ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಕೆಲಸದ ಜತೆಯಲ್ಲಿ ಆರೋಗ್ಯದ ಕಡೆಗೆ ಗಮನ ಕೊಡುವುದು ಅತೀ ಅಗತ್ಯ. ನಾವು ದಿನದಲ್ಲಿ ಮನೆ, ಕಚೇರಿ ಎಂದು 15 ತಾಸುಗಳಿಗೂ ಹೆಚ್ಚು ದುಡಿದರೂ ಅದರಲ್ಲಿ ಒತ್ತಡವಿಲ್ಲದಂತೆ ನೋಡಿಕೊಂಡರೆ ಆಯಾಸ ನಮ್ಮ ಹತ್ತಿರ ಸುಳಿಯು ವುದೇ ಇಲ್ಲ. ಅತಿಯಾದ ಒತ್ತಡದಿಂದ 2 ತಾಸು ದುಡಿದರೂ ಅಯ್ಯಬ್ಟಾ ಸಾಕು ಎಂದನಿಸುತ್ತದೆ. ಆದ್ದ ರಿಂದ ಇಲ್ಲಿ ಕೆಲಸದ ಅವಧಿ ಮುಖ್ಯವಲ್ಲ, ಕೆಲಸದ ಶೈಲಿ ಹಾಗೂ ಕೆಲಸದ ವಾತಾವರಣ ಮುಖ್ಯ ಎಂದೇ ಹೇಳಬೇಕಾಗುತ್ತದೆ. ದುಡಿಯುತ್ತಾ ದುಡಿಯುತ್ತಾ ನಾವು ಮಾನವರಾಗಿಯೇ ಇರಬೇಕು ಹೊರತು ಯಂತ್ರಗಳಾಗಿ ಪರಿವರ್ತಿತರಾಗಬಾರದು.

ಪರಿಶ್ರಮ ಅತ್ಯಗತ್ಯ
ಸಾಧಿಸಬೇಕೆಂದರೆ ಪರಿಶ್ರಮ ಅಗತ್ಯ. ಆ ಪರಿಶ್ರಮ ವನ್ನು ಗಂಟೆಗಳ ಮಿತಿಯಲ್ಲಿ ಅಳೆಯುವುದು ಸಲ್ಲದು. ದೈಹಿಕ ಹಾಗೂ ಮಾನಸಿಕ ವ್ಯಾಯಾಮದ ಜತೆಗೆ ಕೆಲಸ ಮಾಡಿದರೆ ಆಯಾಸ ಕಾಡುವುದಿಲ್ಲ. ನಾವೆಲ್ಲರೂ ದಿನನಿತ್ಯ ಮಾಡುವ ಕೆಲಸದ ಅವಧಿ ಹಾಗೂ ಪೋಲು ಮಾಡುವ ಸಮಯವನ್ನು ಲೆಕ್ಕ ಹಾಕಿ ನೋಡೋಣ. ಪೋಲು ಮಾಡುವ ಸಮ ಯದಿಂದ ಏನೇನು ಅನರ್ಥಗಳಾಗಿವೆ, ಮನಸ್ಸಿಗೆ ಎಷ್ಟು ಖುಷಿಯಾಗಿದೆ ಅಥವಾ ಬೇಸರವಾಗಿದೆ ಎಂಬುದನ್ನೂ ತಿಳಿದುಕೊಳ್ಳೋಣ. ಆಗ ಗೊತ್ತಾಗು ತ್ತದೆ ಕೆಲಸ ಮಾಡುತ್ತಲೇ ಇದ್ದರೆ ಖುಷಿ ಜಾಸ್ತಿ ಎಂದು. ಆದರೆ ಕೆಲಸದ ಅವಧಿ ಎಂದು ಕಂಪೆನಿಗಳು ಅತೀ ಯಾಗಿ ಒತ್ತಡ ಹೇರಿದರೆ ಅಥವಾ ನಾರಾಯಣ ಮೂರ್ತಿ ನೀಡಿದ ಸಲಹೆಯನ್ನು ಕಂಪೆನಿಗಳು ಜಾರಿಗೆ ತರಲು ಮುಂದಾದರೆ ಅದರಿಂದ ಯುವಶಕ್ತಿ ಇನ್ನಷ್ಟು ದುರ್ಬಲವಾಗುವುದು ಖಚಿತ.

ಏನೇ ಆದರೂ ಯುವಶಕ್ತಿ ಸಮಯದ ಮಹತ್ವವನ್ನು ಅರಿತುಕೊಳ್ಳುವುದು ಅಗತ್ಯ. ಕಳೆದು ಹೋದ ಸಮಯವು ಮತ್ತೆ ಸಿಗುವುದೇ ಇಲ್ಲ. ಜೀವನ ಎಂಬ ಸಣ್ಣ ಅವಧಿಯಲ್ಲಿ ಸಮಯಕ್ಕೆ ಅತೀ ಹೆಚ್ಚಿನ ಮಹತ್ವವಿದೆ. ಇದನ್ನರಿತು ನಾವು ದುಡಿದರೆ ಯಶಸ್ಸು ಕೈಹಿಡಿದೀತು.

 ಪುತ್ತಿಗೆ ಪದ್ಮನಾಭ ರೈ

 

Advertisement

Udayavani is now on Telegram. Click here to join our channel and stay updated with the latest news.

Next