Advertisement

ವರದಕ್ಷಿಣೆಗೆ ಇಲ್ಲ  ಮನುಸ್ಮೃತಿಯ ಸಮರ್ಥನೆ

08:15 AM Mar 01, 2021 | Team Udayavani |

ಸ್ತ್ರೀಧನಾನಿ ತು ಯೇ ಮೋಹಾದುಪ
ಜೀವಂತಿ ಭಾಂಧವಾಃ|
ನಾರೀಯಾನಾನಿ ವಸ್ತ್ರಂ ವಾ ಪಾಪಾಯಾಂತ್ಯಧೋಗತಿಂ ||
ಸ್ತ್ರೀ-ಧನಗಳಿಂದ ಉಪಜೀವನ ಮಾಡುವ ಸಂಬಂಧಿಗಳು ಅಥವಾ ಸ್ತ್ರೀಯರ ವಾಹನ, ವಸ್ತ್ರ ಇತ್ಯಾದಿಗಳನ್ನು ಉಪಭೋಗಿಸುವ ಬಂಧುಗಳು ನರಕಕ್ಕೆ ಹೋಗುತ್ತಾರೆ. (ಮನುಸ್ಮತಿಃ 3 : 52)

Advertisement

ಕಳೆದ ಇಪ್ಪತ್ತು ವರ್ಷಗಳಲ್ಲಿ ದೇಶದಲ್ಲಿ ಸರಿಸು ಮಾರಾಗಿ ಪ್ರತೀ ದಿನ 21 ಮಂದಿ ಮಹಿಳೆಯರು ವರದಕ್ಷಿಣೆ ಸಂಬಂಧಿ ಕಾರಣಗಳಿಗಾಗಿ ಪ್ರಾಣ ಕಳೆದುಕೊಂಡಿದ್ದಾರೆ. 2000-2019ರ ನಡುವೆ ವರದಕ್ಷಿಣೆಯಿಂದಾಗಿ ಕನಿಷ್ಠ 1.51 ಲಕ್ಷ ಮಹಿಳೆಯರು ಸಾವನ್ನಪ್ಪಿದ್ದಾರೆ. 2018 ರಲ್ಲಿ ಕೇವಲ ಒಂದೇ ವರ್ಷದಲ್ಲಿ 7,115 ವರದಕ್ಷಿಣೆ ಸಾವುಗಳು ದಾಖಲಾಗಿವೆ. ಪ್ರತಿ ಒಂದು ದಾಖಲಾದ ಸಾವಿಗೆ ಸಂವಾದಿಯಾಗಿ ಅದೆಷ್ಟೋ ಸಾವುಗಳು ದಾಖಲಾಗದೆ ಹೋಗಿರಬಹುದೇನೋ?

ಇನ್ನೊಂದಡೆ ಕಳೆದ ಹತ್ತು ವರ್ಷಗಳಲ್ಲಿ ವರದಕ್ಷಿಣೆ ನಿಷೇಧ ಕಾಯಿದೆಯ ಪ್ರಕಾರ ವರದಕ್ಷಿಣೆಗಾಗಿ ಪೀಡಿಸಿದ ಕಿರುಕುಳಗಳ ಪ್ರಕರಣಗಳ ಸಂಖ್ಯೆ 65,939. ಅಂದರೆ ಒಂದು ದಿನದಲ್ಲಿ ಕನಿಷ್ಠ 27 ಮಂದಿ ಮಹಿಳೆಯರು ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳವನ್ನು ತಾಳಲಾರದೆ ಪೊಲೀಸ್‌ ಠಾಣೆಯ ಮೆಟ್ಟಲೇರಿದ್ದಾರೆ.

ಆಂಗ್ಲ ಪತ್ರಿಕೆಯೊಂದು ಈಗ ವರದಕ್ಷಿಣೆ ಪಡೆದಿರುವ ಹೊಸ ರೂಪಗಳನ್ನು ಉಲ್ಲೇಖೀಸುತ್ತ ಪ್ರಕಟಿಸಿದ ವಿವರವಾದ ವರದಿಯ ಅಂಕಿ ಸಂಖ್ಯೆಗಳು ಇವು. ಇವನ್ನೆಲ್ಲ ಓದುತ್ತ ಹೋದಂತೆ ನನ್ನ ಇತ್ತೀಚಿನ ಸಂಶೋಧನಾಸಕ್ತಿಯ ವಿಷಯವಾದ, ಸುಮಾರು 2,500 ವರ್ಷಗಳಷ್ಟು ಹಿಂದೆ ಹಲವ ರಿಂದ ಹಲವು ಶತಮಾನಗಳ ಅವಧಿಯಲ್ಲಿ ರಚಿಸಲ್ಪಟ್ಟಿರಬಹುದಾದ ಮನುಸ್ಮತಿಯಲ್ಲಿ ಹೆಣ್ಣು ಮತ್ತು ವರದಕ್ಷಿಣೆಗೆ ಸಂಬಂಧಿಸಿದ ಕೆಲವು ಸಾಲುಗಳು ನೆನಪಾದವು.

ಹೆಣ್ಣಿಗೆ ಸಂಬಂಧಿಸಿ ಶೋಷಣೆ, ದೌರ್ಜನ್ಯ, ಕಿರುಕುಳ ಎಂದಾಗಲೆಲ್ಲ ಕೆಲವರು “ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ’ (ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ (9:3) ಎಂದ ಮನುವಿನ ಮಾತನ್ನು ಉಲ್ಲೇಖೀಸಿ ಸಮಾಜದ ಎಲ್ಲ ಅನಿಷ್ಟಗಳಿಗೂ ಮನುಸ್ಮತಿಯೇ ಕಾರಣ ಎನ್ನುವ ಹಾಗೆ ವಾದಿಸಿ ಕೈತೊಳೆದುಕೊಂಡು ಬಿಡುತ್ತಾರೆ. ನಿಜ, ಒಪ್ಪೋಣ, ಸ್ಮತಿಯಲ್ಲಿ ಹೆಣ್ಣಿನ ಕುರಿತು ಹಲವು ಋಣಾತ್ಮಕವಾದ ಮಾತುಗಳು ಹೇಳಲ್ಪಟ್ಟಿವೆ. ಅಧ್ಯಾಯ 9ರಲ್ಲಿ 14ರಿಂದ 18ರ ವರೆಗಿನ ಶ್ಲೋಕಗಳಲ್ಲಿ ಇಂತಹ ಮಾತುಗಳಿವೆ.

Advertisement

ಹೆಣ್ಣನ್ನು ಶಯ್ಯೆ, ಆಸನ, ಅಲಂಕಾರಗಳ ಮೋಹ, ಕಾಮ, ಕ್ರೋಧ, ಚಂಚಲ ಸ್ವಭಾವ ಇತ್ಯಾದಿಗಳೊಂದಿಗೆ ಸವಿೂಕರಿಸುವ ಪೂರ್ವಗ್ರಹ ಪೀಡಿತವಾದ ಹೇಳಿಕೆಗಳು ಅಲ್ಲಿವೆ. ಆದರೆ ಅದೇ ಮನುಸ್ಮತಿ ಹೆಣ್ಣಿನ ಕುರಿತು ಅತ್ಯಂತ ಧನಾತ್ಮಕ ವಾದ ಹೇಳಿಕೆಗಳನ್ನೂ ಒಳಗೊಂಡಿದೆ ಮತ್ತು ಇದಕ್ಕಿಂತ ಮುಖ್ಯವಾಗಿ ವರದಕ್ಷಿಣೆಯನ್ನು ಸ್ಪಷ್ಟ ಮಾತುಗಳಲ್ಲಿ ಖಂಡಿಸಿದೆ. ಉದಾಹರಣೆಗೆ ಹೆಣ್ಣು ಸಂತಾನೋತ್ಪತ್ತಿಗಾಗಿ ಇರುವವಳು ಎಂದು ಹೇಳು ತ್ತಲೇ, ಸ್ತ್ರೀಯರು ಪೂಜಾರ್ಹರು, ಮನೆಯ ಬೆಳಕು ಎಂದು ಆಕೆಯ ಗುಣಗಾನ ಮಾಡುತ್ತದೆ.

“”ಪ್ರಜನಾರ್ಥಂ ಮಹಾಭಾಗಾಃ
ಪೂಜಾರ್ಹಾ ಗೃಹದೀಪ್ತಯಃ
ಸ್ತ್ರೀಯಃ ಶ್ರೀಯಶ್ಚಗೇಹೇಷು ನ ವಿಶೇಷೋಸ್ತಿಕಶ್ಚನ”
ಈ ಲೇಖನದ ಆರಂಭದಲ್ಲಿ ಉಲ್ಲೇಖೀಸಿರುವಂತೆ ಸ್ತ್ರೀಧನ ಉಪಯೋಗಿಸುವವ ಅಧೋಗತಿ ಹೊಂದು
ತ್ತಾನೆ, ನರಕಕ್ಕೆ ಹೋಗುತ್ತಾನೆ ಎನ್ನುತ್ತದೆ.
“ಎಲ್ಲಿ ಸ್ತ್ರೀಯರಿಗೆ ಗೌರವ, ಸಮ್ಮಾನಗಳು ದೊರೆ
ಯುತ್ತವೆಯೋ ಅಲ್ಲಿ ದೇವತೆಗಳು ಪ್ರಸನ್ನರಾಗು
ತ್ತಾರೆ. ಯಾವ ಮನೆಯಲ್ಲಿ ಸ್ತ್ರೀಯರು ಗೌರವಿಸಲ್ಪಡುವುದಿಲ್ಲವೋ ಅಲ್ಲಿ ಮಾಡುವ ಎಲ್ಲ ಯಜ್ಞ, ಪೂಜೆಗಳು ನಿಷ್ಫಲವಾಗುತ್ತವೆ (3:56) ಎನ್ನುತ್ತದೆ.

“ಯಾವ ಕುಲದಲ್ಲಿ ಸ್ತ್ರೀಯರು ದುಃಖ ಪಡುತ್ತಾರೋ ಆ ವಂಶವು ನಿರ್ವಂಶವಾಗುತ್ತದೆ. ಯಾವ ವಂಶದಲ್ಲಿ ಸ್ತ್ರೀಯರು ಸಂತೋಷದಿಂದಿರು ತ್ತಾರೋ ಆ ವಂಶವು ಸರ್ವದಾ ಅಭ್ಯುದಯವನ್ನು ಹೊಂದುತ್ತದೆ’ (3:57)

“ಗೌರವ-ಮಾನ-ಮರ್ಯಾದೆಗಳನ್ನು ಪಡೆ ಯದೇ ಯಾವ ಸ್ತ್ರೀಯರು ಬರಿ ನೋವಿನಿಂದ ಶಾಪ ಹಾಕುತ್ತಾರೋ, ಆ ಮನೆ ಹಾಗೂ ಮನೆ ತನಗಳು ದುರ್ವಿಧಿಗೆ ಗುರಿಯಾದಂತೆ ಹಾಳಾಗಿ ಹೋಗುತ್ತವೆ’ (3:58)

“ಹೆಣ್ಣು ಸಂಭ್ರಮಗೊಂಡರೆ ಕುಲವೆಲ್ಲ ಅವಳಿಂದ ಸಂಭ್ರಮಗೊಳ್ಳುತ್ತದೆ. ಅವಳಿಗೆ ಸಂತೋಷ- ತೃಪ್ತಿಗಳು ದೊರೆಯದಿದ್ದರೆ ಇಡೀ ಮನೆಗೂ ಅವು ದೊರೆಯುವುದಿಲ್ಲ’ (3:62)

ಹೆಣ್ಣಿಗೆ ಯಾವ ರೀತಿಯ ಪ್ರಾಶಸ್ತ್ಯ ನೀಡ ಬೇಕೆಂಬುವುದನ್ನು ಹೇಳುವ ಈ ಸಾಲುಗಳನ್ನೂ ಗಮನಿಸಿ:
“ಸದ್ಯ ಮದುವೆಯಾದ ಮಗಳು, ಸೊಸೆ ಮೊದ ಲಾದವರನ್ನು, ಕುಮಾರಿಯರನ್ನು, ರೋಗಿಗಳನ್ನು, ಗರ್ಭಿಣಿ ಸ್ತ್ರೀಯರನ್ನು ಯಾವ ಸಂಕೋಚವಿಲ್ಲದೇ ಕರೆದು ಅತಿಥಿಗಳಿಗಿಂತ ಮೊದಲೇ ಇವರಿಗೆ ಭೋಜನ ಬಡಿಸಬೇಕು’ (3:114)

“ಮನುವಾದಿ’ಗಳನ್ನು ಟೀಕಿಸುವವರು ಟೀಕಿ ಸುವ ಭರದಲ್ಲಿ ವರದಕ್ಷಿಣೆಗಾಗಿ ಹೆಣ್ಣುಗಳನ್ನು ಕೊಲ್ಲಬಹುದೆಂದು ಮನುಸ್ಮತಿ ಹೇಳುವುದಿಲ್ಲ ಎಂಬುದನ್ನು ಮರೆಯುತ್ತಾರೆ. ಹೀಗೆ ವರದಕ್ಷಿಣೆ ಗಾಗಿ ಹೆಣ್ಣುಗಳನ್ನು ಬಲಿಪಡೆಯುವುದು ಇವತ್ತು ಯಾವುದೇ ಒಂದು ಜಾತಿ, ಧರ್ಮ, ಪಂಥಕ್ಕೆ ಸೇರಿದವರಿಗೆ ಸೀಮಿತವಾಗಿಲ್ಲ ಎನ್ನುವುದನ್ನೂ ನಾವು ಗಮನಿಸಬೇಕು. ಅಲ್ಲದೆ ಈಗ “ವರದಕ್ಷಿಣೆ’ ಎಂಬ ಶಬ್ದವನ್ನೇ ಬಳಸದೆ ಅದು “ಉಡುಗೊರೆ’ ಅಥವಾ “ಗೃಹ ನಿವೇಶನ’, ವರನ ಕಡೆಯ ಯಾರೋ ಒಬ್ಬರಿಗೆ (ಸರಕಾರಿ) ನೌಕರಿ ತೆಗೆಸಿಕೊಡುವ “ವಾಗ್ಧಾನ’ಗಳು ಎಂಬ ತುಂಬ ನಾಜೂಕಾದ ರೂಪಗಳನ್ನು ಪಡೆಯುತ್ತಿರುವಾಗ ಸಮಾಜದ ಕ್ರೌರ್ಯ ತುಂಬ ಸೂಕ್ಷ್ಮವಾದ ಹಂತಗಳನ್ನು ತಲುಪಿದೆ. ಹಾಗಾಗಿಯೇ ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. (2019ರ ಅಂಕಿ ಸಂಖ್ಯೆಗಳ ಪ್ರಕಾರ). ಇನ್ನು ದಿಲ್ಲಿ ವರದಕ್ಷಿಣೆ ಸಾವುಗಳ ನಗರಗಳ ಯಾದಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.

ನಮ್ಮ ನಾಗರಿಕ ಸಮಾಜ ಅದ್ದೂರಿಯಾದ ಮದುವೆಯ ಸಂಪೂರ್ಣ ಖರ್ಚನ್ನು ವಧು ವಿನ ತಂದೆಯೇ ಭರಿಸುವಂತೆ ಮಾಡುವ ನವನವೀನ ವರದಕ್ಷಿಣೆಯ ನಮೂನೆಗ ಳನ್ನು ಕಂಡುಕೊಂಡಿರುವಾಗ ಭವಿಷ್ಯದಲ್ಲಿ ಪೊಲೀಸರಿಗೆ ವರದಕ್ಷಿಣೆ ಸಾವುಗಳ ಪ್ರಕರಣ ಗಳನ್ನು ಪತ್ತೆಹಚ್ಚುವುದೇ ಕಷ್ಟವಾಗಬಹುದು. ಯಾಕೆಂದರೆ “ವರದಕ್ಷಿಣೆ’ಯ ಬದಲು ಹಲವು ನಯನುಡಿಗಳು. (ಗಿಫ್ಟ್, ಶೇರಿಂಗ್‌, ಮ್ಯೂಚುವಲ್‌ ಹೆಲ್ಪ್ ಇತ್ಯಾದಿ) ಬಳಕೆಗೆ ಬರುವ ದಿನಗಳು ಬರತೊಡಗಿವೆ, ಬಂದಿವೆ. ಅಪರಾಧ ಸಾಬೀತಾಗದಂತೆ ಅಪರಾಧ ಎಸಗುವ ಮತ್ತು ತಾನು ಮಾಡಿದ್ದು ಅಪರಾಧವಲ್ಲ, ಸಮಾಜಸೇವೆ ಎನ್ನುವ ರೀತಿಯಲ್ಲಿ ಅಪರಾಧ ಮಾಡುವ ಕಲೆಯಲ್ಲಿ ನಮ್ಮ ಸಮಾಜ ಪಳಗುತ್ತಿದೆ. ಹಾಗಾಗಿ ವರದಕ್ಷಿಣೆಯಂತಹ ಸಾಮಾಜಿಕ ಪಿಡುಗಿಗೆ ಅಂದಿನ ಮನುವೇ ಮೂಲಕಾರಣ ಎನ್ನುವವರು ಇಂದಿನ ಸಮಾಜದ ಎಲ್ಲ ಧರ್ಮ, ಜಾತಿ, ಮತ ಪಂಥಗಳಿಗೂ ವ್ಯಾಪಿಸಿರುವ ವರದಕ್ಷಿಣೆಯ ಧನದಾಹಕ್ಕೆ ಏನು ಕಾರಣ? ಎಂದು ತಮ್ಮನ್ನೇ ತಾವು ಪ್ರಶ್ನಿಸಿಕೊಳ್ಳಬೇಕಾಗಿದೆ.

ಡಾ| ಬಿ. ಭಾಸ್ಕರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next