Advertisement

2.75 ಕೋಟಿ ರೂ. ಪ್ರಸ್ತಾವನೆ ಅನುದಾನ ಪತ್ತೆಯಿಲ್ಲ !

10:25 AM Nov 12, 2018 | Team Udayavani |

ಬೆಳ್ತಂಗಡಿ: ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ಕಾಲನಿಯ ಅಭಿವೃದ್ಧಿಗಾಗಿ ದ.ಕ. ಜಿಲ್ಲಾ ಗಿರಿಜನ ಅಭಿವೃದ್ಧಿ ಯೋಜನೆ (ಐಟಿಡಿಪಿ) ಯಿಂದ 2.75 ಕೋ.ರೂ. ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆ ಯಾಗಿ 7 ತಿಂಗಳುಗಳೇ ಕಳೆದರೂ ಇನ್ನೂ ಅನುದಾನದ ಪತ್ತೆಯಿಲ್ಲ !

Advertisement

ಸ್ಥಳೀಯರು ತಮಗೆ ಮೂಲ ಸೌಕರ್ಯ ನೀಡಬೇಕು, ಇಲ್ಲದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಕಳೆದ ಎ. 6ರಂದು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ನಿವಾಸಿಗಳನ್ನು ಸಮಾಧಾನಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದರು.

ಬಳಿಕ ಅಲ್ಲಿನ ರಸ್ತೆ, ಸಮುದಾಯ ಭವನದ ಅಭಿವೃದ್ಧಿಗೆ 2.75 ಕೋ.ರೂ. ಪ್ರಸ್ತಾವನೆಯನ್ನೂ ಸರಕಾರಕ್ಕೆ ಸಲ್ಲಿಸಿದ್ದರು. ಚುನಾವಣೆ ಮುಗಿದು ಹೊಸ ಸರಕಾರ ಅಸ್ತಿತ್ವಕ್ಕೆ ಬಂದರೂ ಬಾಂಜಾರು ಅಭಿವೃದ್ಧಿಯ ಪ್ರಸ್ತಾವನೆ ಕೇವಲ ಕಡತದಲ್ಲಿಯೇ ಉಳಿದಿದ್ದು, ಇನ್ನೂ ಅನುದಾನ ಮಂಜೂರಾತಿಯಾಗಿಲ್ಲ. ಕಳೆದ ಅ. 10ರಂದು ಬಾಂಜಾರಿಗೆ ಭೇಟಿ ನೀಡಿದ ದ.ಕ. ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಕೂಡ ಅನುದಾನ ಮಂಜೂರಾತಿ ಭರವಸೆ ನೀಡಿದ್ದು, ಸ್ಥಳೀಯರಲ್ಲಿ ಹೊಸ ಆಸೆ ಸೃಷ್ಟಿಸಿದೆ. ಜತೆಗೆ ನಿವಾಸಿಗಳ ಬೇಡಿಕೆ ಮೇರೆಗೆ ಅಲ್ಲಿಗೆ ಹತ್ತಿರವಾಗುವ ಹನಿಯೂರು- ಕಾಟಾಜೆ-ಬಾಂಜಾರು ಸಂಪರ್ಕ ರಸ್ತೆಗೆ ಅನುದಾನವನ್ನು ಬಳಸಿಕೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಸ್ತಾವನೆಯಲ್ಲೇನಿದೆ?
ನೆರಿಯ ಗ್ರಾಮದ ಬಂಜಾರುಮಲೆ ಪ್ರದೇಶದ ಅಭಿವೃದ್ಧಿಗೆ ಸಲ್ಲಿಕೆಯಾದ ಒಟ್ಟು 2.75 ಕೋ.ರೂ. ಪ್ರಸ್ತಾವನೆಯಲ್ಲಿ 5 ಕಿ.ಮೀ.ಗಳ ರಸ್ತೆ ನಿರ್ಮಾಣಕ್ಕೆ 100 ಲಕ್ಷ ರೂ., ಒಟ್ಟು 2 ಕಿರು ಸೇತುವೆಗಳ ನಿರ್ಮಾಣಕ್ಕೆ 100 ಲಕ್ಷ ರೂ., ಒಟ್ಟು 4 ಮೋರಿಗಳ ನಿರ್ಮಾಣಕ್ಕೆ 50 ಲಕ್ಷ ರೂ. ಒಳಗೊಂಡಿದೆ.

ಪ್ರಸ್ತುತ ಇಲ್ಲಿನ ಮಲೆಕುಡಿಯ ಕಾಲನಿಯಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿದ್ದರೂ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಅದರ ಅಭಿವೃದ್ಧಿಯನ್ನೂ ದೃಷ್ಟಿಯಲ್ಲಿಟ್ಟುಕೊಂಡು ಭವನದ ದುರಸ್ತಿ, ಅಡುಗೆ ಕೋಣೆ ಹಾಗೂ ಆವರಣ ಗೋಡೆ ರಚನೆಗೆ ಒಟ್ಟು 25 ಲಕ್ಷ ರೂ.ಗಳ ಪ್ರಸ್ತಾವನೆ ಸರಕಾರಕ್ಕೆ ಹೋಗಿದೆ. ಈ ರೀತಿಯಲ್ಲಿ ರಸ್ತೆ ಅಭಿವೃದ್ಧಿಗೆ 2.50 ಕೋ.ರೂ. ಹಾಗೂ ಸಮುದಾಯ ಭವನ ಅಭಿವೃದ್ಧಿಗೆ 25 ಲಕ್ಷ ರೂ. ಪ್ರಸ್ತಾವನೆ ಹೋಗಿದೆ.

Advertisement

2 ಕೋ.ರೂ. ಗೊಂದಲ
ಬಂಜಾರು ಪ್ರದೇಶಕ್ಕೆ ತೆರಳಬೇಕಾದರೆ ಚಾರ್ಮಾಡಿ ಘಾಟಿ ರಸ್ತೆಯ 9ನೇ ತಿರುವಿನಿಂದ 9 ಕಿ.ಮೀ. ಸಾಗಬೇಕಿದೆ. ಈ 9 ಕಿ.ಮೀ. ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯ ಒಂದು ಭಾಗಕ್ಕೆ ಕಾಂಕ್ರೀಟ್‌ ಹಾಕಲಾಗಿದೆ. ಇದರ ಅನುದಾನಕ್ಕೆ ಸಂಬಂಧಪಟ್ಟು ಒಂದು ಪತ್ರದಲ್ಲಿ 2 ಕೋ.ರೂ. ಮೀಸಲಿಡಲಾಗಿದೆ ಎಂದು ತಿಳಿಸಲಾಗಿತ್ತು.

ಇಲ್ಲಿ 1 ಕೋ.ರೂ. ರಸ್ತೆ ಕಾಂಕ್ರೀಟ್‌ ಕಾರ್ಯ ನಡೆಯುತ್ತಿರುವ ವೇಳೆ, ಹಾಲಿ ಕಾಮಗಾರಿ ಬಳಿಕ 2 ಕೋ.ರೂ.ಗಳ ಕಾಮಗಾರಿ ನಡೆಯಲಿದೆ ಎಂದು ನಂಬಿದ್ದರು. ಆದರೆ ಅದರಲ್ಲಿ 1 ಕೋ. ರೂ.ಆಗಲೇ ನಡೆಯುತ್ತಿದ್ದ ಕಾಮಗಾರಿಯ ಅನುದಾನವಾಗಿದ್ದು, ಮತ್ತೂಂದು ಕೋ. ರೂ ಅನ್ನು ಕೋಲೋಡಿಗೆ ನೀಡಲಾಗಿತ್ತು. ಹೀಗಾಗಿ ಹಿಂದಿನ 2 ಕೋ. ರೂ.ಗಳ ಗೊಂದಲದಂತೆ 2.75 ಕೋ. ರೂ. ಪ್ರಸ್ತಾವನೆಯೂ ಗೊಂದಲ ಸೃಷ್ಟಿಸದಿರಲಿ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

ಅನುದಾನದ ಮಾಹಿತಿ ಇಲ್ಲ
ಬಾಂಜಾರು ಮಲೆಕುಡಿಯ ಪರಿಶಿಷ್ಟ ವರ್ಗದ ಮೂಲ ಸೌಕರ್ಯದ ಬೇಡಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ವತಿಯಿಂದ 2.75 ಕೋ.ರೂ. ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಅನುದಾನ ಈವರೆಗೆ ಮಂಜೂರಾಗಿಲ್ಲ. ಯಾವಾಗ ಮಂಜೂರಾಗುತ್ತದೆ ಎಂಬುದರ ಕುರಿತು ಮಾಹಿತಿ ಇಲ್ಲ.
– ಡಾ| ಹೇಮಲತಾ
ಯೋಜನ ಸಮನ್ವಯಾಧಿಕಾರಿ, ಐಟಿಡಿಪಿ, ದ.ಕ. ಜಿಲ್ಲೆ

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next