Advertisement

ಮುಂಬಯಿಯಲ್ಲಿ ಹೊಸ ಡ್ಯಾನ್ಸ್‌ ಬಾರ್‌ಗಳಿಗೆ ನೋ ಚಾನ್ಸ್‌ !

11:29 AM Oct 26, 2017 | Team Udayavani |

ಮುಂಬಯಿ: ನಗರದಲ್ಲಿ  ಸದ್ಯ ಯಾವುದೇ ಡ್ಯಾನ್ಸ್‌ ಬಾರ್‌ಗಳು  ಕಾರ್ಯಾರಂಭ ಮಾಡುವ ಸಾಧ್ಯತೆ ದೂರವಾಗಿದೆ. 2016ರ ನವೆಂಬರ್‌ನಲ್ಲಿ  ಸುಪ್ರೀಂ ಕೋರ್ಟ್‌  ನೀಡಿದ  ಆದೇಶದಂತೆ  ಡ್ಯಾನ್ಸ್‌ ಬಾರ್‌ಗಳನ್ನು ತೆರೆಯಲು ಲೈಸೆನ್ಸ್‌  ಕೋರಿ  ಹೊಸದಾಗಿ ಸಲ್ಲಿಸಲಾಗಿದ್ದ  ಎಲ್ಲಾ  79 ಅರ್ಜಿಗಳನ್ನೂ  ಮುಂಬಯಿ  ಪೊಲೀಸರು  ತಿರಸ್ಕರಿಸಿದ್ದಾರೆ.  ಪೊಲೀಸರ ಈ ನಿರ್ಧಾರದಿಂದ ನಗರದ  ನಾಗರಿಕರು  ನಿಟ್ಟುಸಿರು ಬಿಡುವಂತಾಗಿದ್ದರೆ  ಬಾರ್‌  ಮಾಲಕರು  ಮಾತ್ರ  ತೀವ್ರ ಹಿನ್ನಡೆಯನ್ನು  ಕಾಣುವಂತಾಗಿದೆ. 

Advertisement

ರಾಜ್ಯದಲ್ಲಿ  ಡ್ಯಾನ್ಸ್‌ ಬಾರ್‌ಗಳು  ಪುನರಾರಂಭಗೊಳ್ಳಲು ಅವಕಾಶ  ನೀಡದಿರುವ  ಕ್ರಮವಾಗಿ  ರಾಜ್ಯ ಸರಕಾರ  ರೂಪಿಸಿದ್ದ  ನಿಯಮಾವಳಿಯನ್ನು  ಪ್ರಶ್ನಿಸಿ  ಸಲ್ಲಿಸಲಾಗಿರುವ  ಅರ್ಜಿಯ ವಿಚಾರಣೆಯನ್ನು  ಮುಂದಿನ  ಜನವರಿವರೆಗೆ  ಮುಂದೂಡಲಾಗಿರುವುದರಿಂದ  ಸದ್ಯಕ್ಕಂತೂ ನಗರದಲ್ಲಿ  ಮತ್ತೆ  ಡ್ಯಾನ್ಸ್‌ ಬಾರ್‌ಗಳು  ತಲೆಎತ್ತುವ ಸಾಧ್ಯತೆಗಳು  ದೂರವಾಗಿವೆ. ಡ್ಯಾನ್ಸ್‌ ಬಾರ್‌  ಅಸೋಸಿಯೇಶನ್‌  ರಾಜ್ಯ ಸರಕಾರ  ರೂಪಿಸಿರುವ  ಕಾನೂನಿಗೆ  ತಡೆ  ನೀಡುವಂತೆ  ಕೋರಿ ಸಲ್ಲಿಸಿರುವ  ಅರ್ಜಿಯ  ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ  ನ್ಯಾಯಾಧೀಶರು  ಇನ್ನೊಂದು  ಪ್ರಮುಖ  ಪ್ರಕರಣದ  ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯರ  ಸಾಂವಿಧಾನಿಕ ಪೀಠದ  ಸದಸ್ಯರಾಗಿರುವ  ಹಿನ್ನೆಲೆಯಲ್ಲಿ  ಡ್ಯಾನ್ಸ್‌ ಬಾರ್‌ ಮಾಲಕರ ಅರ್ಜಿಯ  ವಿಚಾರಣೆಯನ್ನು ಸದ್ಯಕ್ಕೆ  ಮುಂದೂಡಲಾಗಿದೆ ಎಂದು  ಬಾರ್‌ ಮಾಲಕರ  ಪರ ವಕೀಲರಾದ ಸತ್ಯಜಿತ್‌ ಸಾಹಾ ತಿಳಿಸಿದರು. 

ಷರತ್ತುಗಳ ಈಡೇರಿಕೆಯಲ್ಲಿ ಅರ್ಜಿದಾರರು ವಿಫ‌ಲ
2016ರ  ನ. 24ರಂದು  ಸುಪ್ರೀಂ ಕೋರ್ಟ್‌ ನೀಡಿದ್ದ  ಆದೇಶದಲ್ಲಿ   ಈಗಾಗಲೇ  ನಗರದಲ್ಲಿ  ಲೈಸೆನ್ಸ್‌  ನೀಡಲಾಗಿರುವ  ಮೂರು ಡ್ಯಾನ್ಸ್‌ ಬಾರ್‌ಗಳ ಮಾದರಿಯಲ್ಲಿ  ನಿಯಮಾವಳಿಗಳನ್ನು  ಪಾಲಿಸುವ  ಭರವಸೆ  ನೀಡುವ  ಬಾರ್‌ಗಳ ಮಾಲಕರು  ಲೈಸೆನ್ಸ್‌ಗಾಗಿ  ಅರ್ಜಿ ಸಲ್ಲಿಸಿದಲ್ಲಿ  ಅದನ್ನು  ಪರಿಗಣಿಸುವಂತೆ ಪೊಲೀಸರಿಗೆ ನಿರ್ದೇಶ ನೀಡಿತ್ತು. ಅದರಂತೆ  ಜುಲೈವರೆಗೆ  ನಗರ  ಪೊಲೀಸರಿಗೆ  79 ಅರ್ಜಿಗಳು  ಸಲ್ಲಿಕೆಯಾಗಿದ್ದವು. ಆದರೆ  ಸ್ಥಳೀಯ  ಪ್ರದೇಶಗಳ  ಠಾಣೆಗಳ  ಪೊಲೀಸರು  ನಕಾರಾತ್ಮಕ  ವರದಿಯನ್ನು ಸಲ್ಲಿಸಿದ  ಹಿನ್ನೆಲೆಯಲ್ಲಿ ಮತ್ತು ನ್ಯಾಯಾಲಯದಿಂದ  ಅಂಗೀಕರಿಸಲ್ಪಟ್ಟ  26 ಷರತ್ತುಗಳನ್ನು  ಈಡೇರಿಸುವಲ್ಲಿ ಅರ್ಜಿದಾರರು  ವಿಫ‌ಲವಾದ್ದರಿಂದ  ಈ ಅರ್ಜಿ ತಿರಸ್ಕರಿಸ ಲಾಗಿದೆ ಎಂದು  ಪೊಲೀಸ್‌ ಅಧಿಕಾರಿ ತಿಳಿಸಿದರು. 

ಬಾರ್‌ ಮಾಲಕರ ಅಸಮಾಧಾನ
ಆದರೆ  ಮುಂಬಯಿ  ಪೊಲೀಸರ  ಈ ನಿರ್ಧಾರಕ್ಕೆ  ತೀವ್ರ ಅಸಮಾಧಾನ ವ್ಯಕ್ತಪಡಿಸಿ ರುವ  ಬಾರ್‌ ಮಾಲಕರು  ಪೊಲೀಸರು  ಡ್ಯಾನ್ಸ್‌ ಬಾರ್‌ಗಳಿಗೆ  ಲೈಸೆನ್ಸ್‌  ನೀಡಲು  ನಿರಾಸಕ್ತಿಯನ್ನು  ತಾಳಿರುವುದರಿಂದ  ಸಕಾರಣಗಳಿಲ್ಲದೇ  ನಮ್ಮ  ಅರ್ಜಿಗಳನ್ನು  ತಿರಸ್ಕರಿಸಿದ್ದಾರೆ ಎಂದು ದೂರಿದ್ದಾರೆ. ಲೈಸೆನ್ಸ್‌  ನೀಡಿಕೆ  ಪ್ರಕ್ರಿಯೆಯಲ್ಲಿ  ಪಾರದರ್ಶಕತೆಯನ್ನು  ಕಾಯ್ದುಕೊಳ್ಳಲು  ಬಾರ್‌ ಆವರಣಗಳ  ಪರಿಶೀಲನೆಗಾಗಿ  ನ್ಯಾಯಾಲಯದಿಂದ  ಸ್ವತಂತ್ರ  ಮಂಡಳಿಯೊಂದನ್ನು  ನೇಮಕ ಮಾಡಬೇಕು ಎಂದು  ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next