ಜೆರುಸಲೇಂ: ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಮುಂದುವರಿದಿದೆ. ಇದರ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಮುಖ ಘೋಷಣೆಯೊಂದನ್ನು ಮಾಡಿದ್ದು, “ಹಮಾಸ್ ವಿರುದ್ಧ ಕದನ ವಿರಾಮ ಮಾಡುವ ಪ್ರಶ್ನೆಯೇ ಇಲ್ಲ” ಎಂದಿದ್ದಾರೆ.
ನೆತನ್ಯಾಹು ತನ್ನ ಇಸ್ರೇಲಿ ಪಡೆಗಳು ಅಕ್ಟೋಬರ್ 7 ರ ದಾಳಿಗೆ ಪ್ರತಿಕ್ರಿಯೆಯಾಗಿ ಹಮಾಸ್ ವಿರುದ್ಧ “ವ್ಯವಸ್ಥಿತ ಪ್ರಗತಿ” ಸಾಧಿಸುತ್ತಿವೆ ಎಂದು ಹೇಳಿದರು.
ಇಸ್ರೇಲ್ ನ ತೀವ್ರವಾದ ಸೇನಾ ಕಾರ್ಯಾಚರಣೆಗಳು ಗಾಜಾದ 2.4 ಮಿಲಿಯನ್ ನಿವಾಸಿಗಳಿಗೆ ಭಯ ಹೆಚ್ಚಿಸಿವೆ. ಗಾಜಾದಲ್ಲಿ ಇದುವರೆಗೆ 8,300 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್-ನಿಯಂತ್ರಿತ ಆರೋಗ್ಯ ಸಚಿವಾಲಯವು ಹೇಳಿದೆ. ಇತ್ತೀಚಿನ ಇಸ್ರೇಲಿ ಅಂಕಿಅಂಶಗಳ ಪ್ರಕಾರ, ಹಮಾಸ್ ಇದುವರೆಗೆ 1,400 ಜನರನ್ನು ಕೊಂದು 230 ಕ್ಕೂ ಹೆಚ್ಚು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ.
‘ಕದನ ವಿರಾಮ ಘೋಷಿಸಿದರೆ ಅದು ಹಮಾಸ್ ಗೆ ಶರಣಾಗುವುದಕ್ಕೆ ಸಮ’ ಎಂದು ನೆತನ್ಯಾಹು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಕದನ ವಿರಾಮದ ಕರೆಗಳು ಇಸ್ರೇಲ್ ಹಮಾಸ್ ಗೆ ಶರಣಾದಂತೆ, ಭಯೋತ್ಪಾದನೆಗೆ ಶರಣಾದಂತೆ… ಇದು ಸಾಧ್ಯವೇ ಇಲ್ಲ” ಎಂದು ಅವರು ಹೇಳಿದರು, “ಈ ಯುದ್ಧವನ್ನು ಗೆಲ್ಲುವವರೆಗೂ ಇಸ್ರೇಲ್ ಹೋರಾಡುತ್ತದೆ” ಎಂದು ಪ್ರತಿಜ್ಞೆ ಮಾಡಿದರು.