Advertisement

NMC ಲಾಂಛನ ವಿವಾದ- ಲಾಂಛನದಲ್ಲಿನ ಮಾರ್ಪಾಡುಗಳಿಗೆ IMA ವಿರೋಧ

11:07 PM Dec 07, 2023 | Team Udayavani |

ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ದ ಲಾಂಛನದಲ್ಲಿ ಕಿರು ಬದಲಾವಣೆಯನ್ನು ಮಾಡಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

Advertisement

ಭಾರತೀಯ ವೈದ್ಯಕೀಯ ಸಂಘ (ಐಎಂಎ)ದ ಕೆಂಗಣ್ಣಿಗೆ ಗುರಿಯಾಗಿದ್ದು ಈ ಬಗ್ಗೆ ತಗಾದೆ ತೆಗೆದಿದೆ. ಈ ಸಂಬಂಧ ಎನ್‌ಎಂಸಿಗೆ ಪತ್ರ ಬರೆದಿರುವ ಐಎಂಎ, ವೈದ್ಯರ ಮೂಲ ಧ್ಯೇಯೋದ್ದೇಶಗಳಿಗೆ ಹಾನಿಯುಂಟು ಮಾಡುವ ಲಾಂಛನದಲ್ಲಿನ ಈ ಬದಲಾವಣೆಯನ್ನು ತತ್‌ಕ್ಷಣ ಸರಿಪಡಿಸುವಂತೆ ಆಗ್ರಹಿಸಿದೆ.

ಲಾಂಛನದಲ್ಲಿ ಮಾಡಲಾಗಿರುವ ಬದಲಾವಣೆ ಏನು?

ಎನ್‌ಎಂಸಿ ಇತ್ತೀಚೆಗಷ್ಟೇ ತನ್ನ ಲಾಂಛನದಲ್ಲಿ ಚಿಕ್ಕ ಬದಲಾವಣೆಯನ್ನು ಮಾಡಿತ್ತು. ಲಾಂಛನದ ನಡುವೆ ವರ್ಣಮಯ ಧನ್ವಂತರಿಯ ಚಿತ್ರವನ್ನು ಅಳವಡಿಸಲಾಗಿದ್ದರೆ, ಮೇಲ್ಭಾಗದಲ್ಲಿ ಇಂಡಿಯಾದ ಬದಲು ಭಾರತ್‌ ಎಂದು ಬರೆಯಲಾಗಿದೆ. ಉಳಿದಂತೆ ಲಾಂಛನದಲ್ಲಿ ಯಾವುದೇ ಮಹತ್ತರ ಬದಲಾವಣೆ ಮಾಡಲಾಗಿಲ್ಲ.

ವಿರೋಧ ಯಾಕೆ?
ರಾಷ್ಟ್ರೀಯ ಸಂಸ್ಥೆಯಾಗಿರುವ ಎನ್‌ಎಂಸಿಯು ದೇಶದಲ್ಲಿನ ಎಲ್ಲ ಧರ್ಮ, ಜಾತಿ, ವರ್ಗ, ಸಮುದಾಯಗಳ ಜನರನ್ನು ಪ್ರತಿನಿಧಿಸುವಂತಾಗಿದ್ದು ಎಲ್ಲರನ್ನೂ ಸಮಾನ ದೃಷ್ಟಿಕೋನದಲ್ಲಿ ಪರಿಗಣಿಸ ಬೇಕು. ಇದಕ್ಕಿಂತ ಮುಖ್ಯವಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಆತನ ಧರ್ಮ, ಜಾತಿಯನ್ನು ಪರಿಗಣಿಸದೆ ಚಿಕಿತ್ಸೆಯನ್ನು ನೀಡುವುದಾಗಿ ಪದವಿ ಪಡೆಯುವ ಸಂದರ್ಭದಲ್ಲಿ ವೈದ್ಯರು ಪ್ರಮಾಣ ಮಾಡುತ್ತಾರೆ. ಹೀಗಿರುವಾಗ ವೈದ್ಯಕೀಯ ಸಂಸ್ಥೆಯಾದ ಎನ್‌ಎಂಸಿಯ ಲಾಂಛನದಲ್ಲಿ ಹಿಂದೂ ದೇವರಾದ ಧನ್ವಂತರಿಯ ಚಿತ್ರವನ್ನು ಅಳವಡಿಸಿರುವುದು ಬಲುದೊಡ್ಡ ಪ್ರಮಾದ ಎಂಬುದು ಐಎಂಎ ತಕರಾರು.

Advertisement

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕಿವಿಮಾತು

ಐಎಂಎನ ಕೇರಳ ಘಟಕ ಆರಂಭದಲ್ಲಿ ಇಂತಹ ತಗಾದೆ ತೆಗೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿತ್ತು. ಇದೀಗ ಐಎಂಎ ನ ರಾಷ್ಟ್ರೀಯ ಘಟಕ ಕೂಡ ಇದೇ ಧಾಟಿಯಲ್ಲಿ ಮಾತನಾಡಿದ್ದು ಎನ್‌ಎಂಸಿ ಲಾಂಛನ ದಲ್ಲಿನ ಲೋಪಗಳನ್ನು ತತ್‌ಕ್ಷಣ ಸರಿಪಡಿಸುವಂತೆ ಆಗ್ರಹಿಸಿದೆ. ಈ ಹಿಂದೆ ಲಾಂಛನ ದಲ್ಲಿ ಧನ್ವಂತರಿಯ ಚಿತ್ರವನ್ನು ಸಾಂಕೇತಿಕವಾಗಿ ಬಳಸಲಾಗಿದ್ದರೆ ಈಗ ಅದನ್ನು ವರ್ಣಮಯಗೊಳಿಸುವ ಮೂಲಕ ಎದ್ದು ಕಾಣುವಂತೆ ಮಾಡಲಾಗಿದೆ. ಇದು ಜನರಲ್ಲಿ ಆಯೋಗ ಮತ್ತು ವೈದ್ಯರ ಬಗ್ಗೆ ಒಂದಿಷ್ಟು ಅನುಮಾನ ಸೃಷ್ಟಿಸುವಂತೆ ಮಾಡಿದೆ ಎಂದು ಐಎಂಎ ದೂರಿದೆ. ಅಷ್ಟು ಮಾತ್ರವಲ್ಲದೆ ಎನ್‌ಎಂಸಿ ಇಂತಹ ಅನಗತ್ಯ ಗೊಂದಲ, ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಬದಲಾಗಿ ದೇಶದಲ್ಲಿನ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವುದರತ್ತ ತನ್ನ ಗಮನವನ್ನು ಕೇಂದ್ರೀಕರಿಸಬೇಕು ಎಂದು ಕಿವಿಮಾತು ಹೇಳಿದೆ.

ಧನ್ವಂತರಿ ಯಾರು?
ವೇದ ಹಾಗೂ ಪುರಾಣಗಳಲ್ಲಿ ದೇವತೆಗಳ ವೈದ್ಯನೆಂದು ಧನ್ವಂತರಿಯನ್ನು ಉಲ್ಲೇಖೀಸಲಾಗಿದೆ. ದೇವತೆ ಗಳು ರಾಕ್ಷಸ ರೊಂದಿಗೆ ಹೋರಾಡುವ ಸಂದರ್ಭ ಗಳಲ್ಲಿ ಗುಣಪಡಿಸ ಲಾರದ ನೋವು, ವ್ಯಾಧಿ ಗಳಿಗೆ ತುತ್ತಾಗು ವುದನ್ನು ಕಂಡು ವೈದ್ಯನಾಗಿ ಚಿಕಿತ್ಸೆ ನೀಡಲು ಧನ್ವಂತರಿ ರೂಪಧಾರಿ ಯಾಗಿ ವಿಷ್ಣು ಅವತರಿಸಿದನು ಎಂಬ ಉಲ್ಲೇಖ ಹಿಂದೂ ಪುರಾಣಗಳಲ್ಲಿದೆ. ಧನ್ವಂತರಿ ಯನ್ನು ಆಯುರ್ವೇದದ ದೇವತೆ ಎಂದೂ ಪರಿಗಣಿಸಲಾಗಿದೆ. ಅಷ್ಟು ಮಾತ್ರವಲ್ಲದೆ ಧನ್ವಂತರಿಯು ಭಾರತೀಯ ವೈದ್ಯ ಪದ್ಧತಿಯ ಮೊದಲ ವೈದ್ಯನೆಂಬ ಪ್ರತೀತಿ ಹಾಗೂ ನಂಬಿಕೆ ಇದೆ. ಇನ್ನು ವೈದಿಕ ಸಂಪ್ರದಾಯದ ಪ್ರಕಾರ ಧನ್ವಂತರಿ ಆಯುರ್ವೇದದ ಹರಿಕಾರ. ಹಲವು ಸಸ್ಯಗಳ, ಗಿಡಮೂಲಿಕೆಗಳನ್ನು ಬಳಸಿ ಔಷಧ ತಯಾರಿಸಿದ ಗೌರವ ಧನ್ವಂತರಿಗೆ ಸಲ್ಲುತ್ತದೆ.

ಎನ್‌ಎಂಸಿಯ ಬೆನ್ನಿಗೆ ನಿಂತ ಆರೋಗ್ಯ ಸಚಿವಾಲಯ
ಇದೇ ವೇಳೆ ಕೇಂದ್ರ ಆರೋಗ್ಯ ಸಚಿವಾಲಯ ಕೂಡ ಎನ್‌ಎಂಸಿಯ ನಿಲುವನ್ನು ಸಮರ್ಥಿಸಿಕೊಂಡಿದೆ. 2022ರಲ್ಲಿ ಹಳೆಯ ಲಾಂಛನ ವನ್ನು ಅಂಗೀಕರಿಸಲಾಗಿತ್ತು. 2020ರ ವರೆಗೆ ಭಾರತೀಯ ವೈದ್ಯಕೀಯ ಆಯೋಗ (ಎಂಸಿಐ) ಕಾರ್ಯನಿರ್ವಹಿಸುತ್ತಿದ್ದರೆ 2020ರಲ್ಲಿ ಇದನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಎಂದು ಮರುನಾಮಕರಣ ಮಾಡಲಾಗಿತ್ತು.
ಎನ್‌ಎಂಸಿ-ಐಎಂಎ

ಸಂಘರ್ಷ ಹೊಸದೇನಲ್ಲ
ಕಳೆದ ವರ್ಷ ಎನ್‌ಎಂಸಿ, ಪದವಿಪೂರ್ವ ವೈದ್ಯಕೀಯ ತರಬೇತಿಯ ಭಾಗವಾಗಿ “ಚರಕ ಶಪಥ’ ಸ್ವೀಕರಿಸುವುದನ್ನು ಕಡ್ಡಾಯಗೊಳಿಸಿತ್ತು. ಆರಂಭದಲ್ಲಿ ಇದು ವೈದ್ಯರು ಪದವಿ ಪಡೆಯುವ ಸಂದರ್ಭದಲ್ಲಿ ಸ್ವೀಕರಿಸುವ ಪ್ರಮಾಣದ ಬದಲಾಗಿ ಚರಕ ಶಪಥವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಭಾವಿಸಲಾಗಿತ್ತು. ಈ ಸಂಬಂಧ ದೇಶಾ ದ್ಯಂತ ವೈದ್ಯಕೀಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಎನ್‌ಎಂಸಿಯ ಈ ನಿರ್ಧಾಕ್ಕೆ ಐಎಂಎ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಆ ಬಳಿಕ ಎನ್‌ಎಂಸಿ ಸ್ಪಷ್ಟನೆ ನೀಡಿ, ವೈದ್ಯರ ಪ್ರಮಾಣಕ್ಕೂ ಚರಕ ಶಪಥಕ್ಕೂ ಯಾವುದೇ ಸಂಬಂಧ ಇಲ್ಲ. ವೈದ್ಯಕೀಯ ತರಬೇತಿ ಕೋರ್ಸ್‌ಗೆ ಸೇರ್ಪಡೆಗೊಳ್ಳುವ ಆರಂಭದಲ್ಲಿ ವಿದ್ಯಾರ್ಥಿಗಳು ಚರಕ ಶಪಥ ಸ್ವೀಕರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿತ್ತು. ಅಷ್ಟು ಮಾತ್ರವಲ್ಲದೆ ವೈದ್ಯಕೀಯ ಪಠ್ಯಕ್ರಮದಲ್ಲಿ ಯೋಗವನ್ನು ಸೇರ್ಪಡೆಗೊಳಿಸುವ ಸಂದರ್ಭದಲ್ಲಿಯೂ ಇಂತಹುದೇ ಆಕ್ಷೇಪ, ವಿರೋಧಗಳು ಕೇಳಿಬಂದಿದ್ದವು.

ಎನ್‌ಎಂಸಿ ವಾದವೇನು?

ಐಎಂಎ ಎತ್ತಿರುವ ಆಕ್ಷೇಪವನ್ನು ಎನ್‌ಎಂಸಿ ಸಾರಾಸಗಟಾಗಿ ತಳ್ಳಿಹಾಕಿದೆ. ಎನ್‌ಎಂಸಿ ಲಾಂಛನದಲ್ಲಿ ಈ ಹಿಂದಿನಿಂದಲೂ ಧನ್ವಂತರಿಯ ಚಿತ್ರವಿತ್ತು. ಆದರೆ ಈ ಹಿಂದಿನ ಲಾಂಛನದಲ್ಲಿ ಧನ್ವಂತರಿಯ ಚಿತ್ರ ಕಪ್ಪು-ಬಿಳುಪಿನಲ್ಲಿದ್ದರೆ ಈಗ ಲಾಂಛನವನ್ನು ನವೀಕರಿಸುವ ಸಂದರ್ಭದಲ್ಲಿ ಧನ್ವಂತರಿಯ ಚಿತ್ರವನ್ನು ವರ್ಣಮಯಗೊಳಿಸಲಾಗಿದೆ. ಇನ್ನು ಲಾಂಛನದಲ್ಲಿ ಈ ಹಿಂದೆ ಇಂಡಿಯಾ ಎಂದು ನಮೂದಿಸಲಾಗಿದ್ದರೆ ಈಗ ಅದನ್ನು ಭಾರತ ಎಂದು ಬದಲಾಯಿಸಿರುವುದು ನಿಜ. ಇದನ್ನು ಹೊರತುಪಡಿಸಿದಂತೆ ಯಾವುದೇ ಮಹತ್ವದ ಬದಲಾವಣೆಯನ್ನು ಮಾಡಿಲ್ಲ ಎಂದು ಎನ್‌ಎಂಸಿ ಸ್ಪಷ್ಟಪಡಿಸಿದೆ. ಅಷ್ಟು ಮಾತ್ರವಲ್ಲದೆ ವೈದ್ಯರು ಪದವಿ ಪಡೆಯುವ ಸಂದರ್ಭದಲ್ಲಿ ಮಾಡುವ ಪ್ರಮಾಣಕ್ಕೂ, ಎನ್‌ಎಂಸಿ ಲಾಂಛನದಲ್ಲಿ ಮಾಡಲಾಗಿರುವ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ವೈದ್ಯಕೀಯ ಸೇವೆಯಲ್ಲಿ ಯಾವುದೇ ತಾರತಮ್ಯ ಅಥವಾ ವೈದ್ಯರ ಘನತೆ, ಗೌರವಗಳಿಗೆ ಕುಂದುಂಟು ಮಾಡುವಂತಹ ಯಾವುದೇ ಕಾರ್ಯವನ್ನು ಆಯೋಗ ಮಾಡಿಲ್ಲ ಎಂದು ಇದೇ ವೇಳೆ ಪ್ರತಿಪಾ ದಿಸಿದೆ. ಆಯೋಗದ ಲಾಂಛನ ಬದಲಾವಣೆ ವಿಷಯದಲ್ಲಿ ಅನಗತ್ಯ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಎನ್‌ಎಂಸಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next