Advertisement

ಟಿಪ್ಪು ನಂತರ ನಿಜಾಮುದ್ದೀನ್ ರೈಲಿಗೆ ಹೊಸ ಹೆಸರು ನಾಮಕರಣ

06:31 PM Oct 11, 2022 | Team Udayavani |

ಧಾರವಾಡ : ಕಳೆದ ನಾಲ್ಕು ದಿನಗಳ ಹಿಂದಷ್ಟೇ ರೈಲಿಗೆ ಟಿಪ್ಪು ಸುಲ್ತಾನ್ ಹೆಸರು ಬದಲಿಸಿದ ಬೆನ್ನಲ್ಲೇ ಹುಬ್ಬಳ್ಳಿ-ನಿಜಾಮುದ್ದೀನ್ ರೈಲನ್ನು ಪಂಡಿತ ಸವಾಯಿ ಗಂಧರ್ವ ಎಂಬುದಾಗಿ ಮರು ನಾಮಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರದ ರೈಲ್ವೆ, ಸಂವಹನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಹೇಳಿದರು.

Advertisement

ನಗರದಲ್ಲಿ 20.4 ಕೋಟಿ ವೆಚ್ಚದಲ್ಲಿ ನವೀಕೃತಗೊಂಡಿರುವ ನೈರುತ್ಯ ರೈಲ್ವೆಯ ಧಾರವಾಡ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿ, ಅವರು ಮಾತನಾಡಿ, ನಿಜಾಮುದ್ದೀನ್ ರೈಲಿಗೆ ಪಂಡಿತ ಸವಾಯಿ ಗಂಧರ್ವರ ಹೆಸರು ಇಡುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನವಿ ಮಾಡಿದ್ದಾರೆ. ಈ ಮನವಿ ಮೇರೆಗೆ ಈ ಭಾಗದಲ್ಲಿ ಖ್ಯಾತರಾಗಿರುವ ಅವರನ್ನು ಹೆಸರನ್ನು ಈ ರೈಲಿಗೆ ಮರು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಧಾರವಾಡದಿಂದ ಬೆಂಗಳೂರಿಗೆ ವಂದೇ ಭಾರತ ರೈಲು ಬೇಕೆಂಬ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸಲಾಗುವುದು. ಧಾರವಾಡದಿಂದ ಬೆಂಗಳೂರು ಮಾರ್ಗದ ರೈಲು ವಿದ್ಯುದ್ಧಿಕರಣ ಶೇ.೭೦ ರಷ್ಟು ಪೂರ್ಣಗೊಂಡಿದ್ದು, ಇದು ಫೆಬ್ರವರಿಯಲ್ಲಿ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಧಾರವಾಡ-ಬೆಂಗಳೂರು ವಂದೇ ಭಾರತ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಾರಣಾಸಿಗೆ ವಾರಕ್ಕೆ ಎರಡು ದಿನ ರೈಲು ಸಂಚಾರ ನಿಗದಿಗೊಳಿಸುವ ಬಗ್ಗೆ ವಾರಣಾಸಿಯಲ್ಲಿ ರೆಲ್ವೆ ಸಂಚಾರದ ಸಮಯವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ ಸಚಿವರು, ಧಾರವಾಡದ ಹಳಿಯಾಳ ಮಾರ್ಗದ ತಪೋವನ ಹತ್ತಿರ ಎಲ್‌ಸಿ 300 ಮೇಲ್ಸೆತುವೆಗೆ ತಕ್ಷಣವೇ ವಾಟ್ಸಅಪ್‌ನಲ್ಲಿ ಹಿರಿಯ ಅಧಿಕಾರಿಗಳಿಂದ ದೊರೆತ ಅನುಮೋದನೆಯನ್ನು ತಮ್ಮ ಭಾಷಣದ ಮಧ್ಯೆಯೇ ಓದಿ ಹೇಳಿದರು.

ಪವರ್‌ಪುಲ್ ಮಂತ್ರಿ

Advertisement

ಈ ಭಾಗದಲ್ಲಿ ಆಗಿರುವ ಅಭಿವೃದ್ದಿಗೆ ಪ್ರಹ್ಲಾದ ಜೋಶಿ ಅವರೇ ಕಾರಣ ಎಂಬುದಾಗಿ ಹೇಳಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಜೋಶಿ ಪವರ್‌ಪುಲ್ ಮಂತ್ರಿಯಾಗಿದ್ದಾರೆ. ನನಗೆ ಮಾರ್ಗದರ್ಶಕ ಆಗಿರುವ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ ಅವರು, ಈಗ ಮೋದಿ ಅವರಿಂದಾಗಿ ಈ ದೇಶದ ಸಮಗ್ರ ಅಭಿವೃದ್ಧಿಯ ಚಿತ್ರಣ ಬದಲಾಗಿದ್ದು, ಮುಂಬರುವ ಪೀಳಿಗೆ ಮೋದಿಯವರ ನೇತೃತ್ವದಲ್ಲಿ ಬೃಹತ್ ಭಾರತವನ್ನು ಕಾಣಲಿದ್ದಾರೆ ಎಂದರು.

ಕೇಂದ್ರ ಗಣಿ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ಸಚಿವ ಅಶ್ವಿನಿ ವೈಷ್ಣವ ಅವರು ಐಎಎಸ್ ಅಧಿಕಾರಿಯಾಗಿ, ಉದ್ಯಮಿಯಾಗಿ, ವಾಜಪೇಯಿ ಅವರ ಆಪ್ತ ಕಾರ್ಯದರ್ಶಿಯಾಗಿ ಈಗ ಮೋದಿ ಅವರ ನೇತೃತ್ವದಲ್ಲಿ ರೇಲ್ವೆ ಹಾಗೂ ತಂತ್ರಜ್ಞಾನ ಸಚಿವರಾಗಿದ್ದಾರೆ. ಇದೀಗ ರೇಲ್ವೆಯಲ್ಲಿ ಹೊಸ ಹೊಸ ಆಧುನಿಕ ತಂತ್ರಜ್ಞಾನವನ್ನು ತರುತ್ತಿದ್ದಾರೆ. ರೇಲ್ವೆ ಪ್ರಯಾಣಿಕರಿಗೆ ಒಟ್ಟು 62 ಸಾವಿರ ಕೋಟಿ ಸಬ್ಸಿಡಿ ನೀಡಲಾಗಿದೆ. ಆತ್ಮ ನಿರ್ಭರ ಭಾರತ ಯೋಜನೆಯಲ್ಲಿ ಕವಚ ಎಂಬ ವಿಶ್ವದರ್ಜೆ ರೇಲ್ವೆ ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. 2014-2022 ರ ಅಭಿವೃದ್ಧಿಯಲ್ಲಿ 30.446 ಕಿ.ಮೀ ವಿದ್ಯುದ್ಧಿಕರಣ ಮಾಡಲಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ಬಸಪ್ಪ ಮಾತನಾಡಿ, ವಿದ್ಯಾಕಾಶಿ ಧಾರವಾಡಕ್ಕೆ ಇಂದಿನ ರೈಲು ಪುನರಾಭಿವೃದ್ಧಿ ಲೋಕಾರ್ಪಣೆಯು ಕಿರೀಟ ಪ್ರಾಯವಾಗಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿದರು.ಮಹಾನಗರ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ, ಬಯಲುಸೀಮೆ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್ ರೆಸಾರ್ಟ ಅಧ್ಯಕ್ಷರಾದ ರಾಜಶೇಖರ ಕೋಟೆಣ್ಣವರ, ಸೌತ್-ವೆಸ್ಟರ್ನ ರೇಲ್ವೆ ಜನರಲ್ ಮ್ಯಾನೇಜರ್ ಸಂಜಯ ಕಿಶೋರ ಸೇರಿದಂತೆ ಇದ್ದರು.

ಪೇಡಾ ನಗರದಿಂದಲೇ ವಂದೇ ಭಾರತ ರೈಲು

ಪೇಡಾ ನಗರ ಧಾರವಾಡ ಜನತೆಗೆ ನಮಸ್ಕಾರ, ಧಾರವಾಡ ಪೇಡೆ ತಿನ್ನಬೇಕು ಅನ್ನುತ್ತಲೇ ಕನ್ನಡ ಭಾಷೆ ಬಳಸಿ ಆರಂಭದಲ್ಲಿಯೇ ಗಮನ ಸೆಳೆದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ, ಸಾಹಿತ್ಯ-ಸಂಗೀತದ ಸಮಾಗಮ ಹೊಂದಿರುವ ಧಾರವಾಡದ ಈ ನೆಲದಿಂದಲೇ ಐದು ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ಈ ಮಣ್ಣಿನ ವೈಶಿಷ್ಟ್ಯತೆ. ಇನ್ನು ಇಲ್ಲಿ ಪೇಡಾದ ರುಚಿ ಹೇಳತೀರದು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಈ ಪೇಡಾ ಕೊಟ್ಟಿದ್ದು, ಹೀಗಾಗಿ ಪೇಡಾ ನಗರದಿಂದಲೇ ವಂದೇ ಭಾರತ ರೈಲು ಕೊಡುವುದಾಗಿ ಭರವಸೆ ನೀಡಿದರು. ಇದಲ್ಲದೇ ಈ ಪೇಡಾ ತೆಗೆದುಕೊಂಡು ಜೋಶಿ ಅವರ ಜತೆಗೊಡಿಸಿ, ನರೇಂದ್ರ ಮೋದಿ ಅವರಿಗೂ ಪೇಡಾ ಕೊಟ್ಟು ವಂದೇ ಭಾರತ ರೈಲಿಗೆ ಅನುಮತಿ ಪಡೆಯುವ ವಿಶ್ವಾಸವಿದೆ ಎಂದರು.

ಮನ ಓಲೈಸಬೇಕು

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗವು ಈ ಭಾಗದ ಆರ್ಥಿಕತೆಯ ಬೆಳವಣಿಗೆಗೆ ಅತೀ ಮಹತ್ವದಾಗಿದೆ. ಆದರೆ ಕೆಲ ಪರಿಸರವಾದಿಗಳು ಇದನ್ನು ವಿರೋಧಿಸಿರುವುದರಿಂದ ಹೈಕೋರ್ಟ್ ನಲ್ಲಿ ಪ್ರಕರಣ ಬಾಕಿ ಇದೆ. ಪಶ್ಚಿಮ ಘಟ್ಟಗಳ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಯೋಜನೆಯನ್ನು ಕೈಗೊಳ್ಳಲು ಸಿದ್ದರಿದ್ದು, ಸ್ಥಳೀಯರು ಈ ಮಾರ್ಗ ವಿರೋಧಿಸುವ ಪರಿಸರವಾದಿಗಳ ಮನ ಓಲೈಸಬೇಕು ಎಂದರು.

ಪ್ಲಾಟ್ ಪಾರಂನಲ್ಲಿಯೇ ಕಾರ್ಯಕ್ರಮ
ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ನಿಲ್ದಾಣದ ಪಕ್ಕದ ಜಾಗದಲ್ಲಿ ವೇದಿಕೆ ಕಾರ್ಯಕ್ರಮಕ್ಕಾಗಿ ಹಾಕಿದ್ದ ಬೃಹತ್ ವೇದಿಕೆ ಹಾಗೂ ಪೆಂಡಾಲ್ ಕುಸಿದು ಬಿದ್ದಿದೆ. ಈ ಹಿನ್ನಲೆಯಲ್ಲಿಯೇ ನಿಲ್ದಾಣದ ಪ್ಲಾರ್ಟ್ ಪಾರಂನಲ್ಲಿಯೇ ವೇದಿಕೆ ಸಿದ್ದಪಡಿಸಿ, ಕಾರ್ಯಕ್ರಮ ನಡೆಸಲಾಯಿತು. ಆದರೆ ಪ್ಲಾಟ್ ಪಾರಂನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದ ಪ್ರಯಾಣಿಕರಿಗೆ ಸ್ವಲ್ಪ ತೊಂದರೆ ಉಂಟಾಗಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next