Advertisement

ನಗರಪ್ರಜ್ಞೆಯ ಆಧುನಿಕ ಪ್ರತಿಮೆಗಳನ್ನು ಕನ್ನಡಕ್ಕೆ ತಂದವರು ನಿಸಾರ್ ಅಹಮದ್: ಜಯಂತ್ ಕಾಯ್ಕಿಣಿ

08:19 AM May 04, 2020 | Nagendra Trasi |

ಮಣಿಪಾಲ:” ಕನ್ನಡ ಸಾಂಸ್ಕೃತಿಕ ಲೋಕದ ಹಿರಿಯ ಕವಿ ನಿಸಾರ್ ಅಹಮದ್ ನಮ್ಮನ್ನು ಅಗಲಿದ್ದಾರೆ. ಆದರೆ ನಮಗೆ ನಿಸಾರ್ ಅಂದ ಕೂಡಲೇ ನೆನಪಿಗೆ ಬರುವುದೇ ನಿತ್ಯೋತ್ಸವದ ನಿಸಾರ್ ಅಹಮದ್ ಅಂತ ಕರೆಯುವುದು ಒಂದು ವಾಡಿಕೆಯಾಗಿದೆ. ಆದರೆ ನಿಸಾರ್ ಅವರನ್ನು ನಾವು ಕೇವಲ ನಿತ್ಯೋತ್ಸವಕ್ಕೆ ಸೀಮಿತಗೊಳಿಸಬಾರದು. ಅವರ ಜೀವನವನ್ನು ಒಂದು ವೃಕ್ಷ ಅಂತ ತೆಗೆದುಕೊಂಡರೆ ಅದರ ಕೇವಲ ಒಂದು ಟೊಂಗೆ ಮಾತ್ರ ನಿತ್ಯೋತ್ಸವ”.

Advertisement

1978ರಲ್ಲಿ ನಿತ್ಯೋತ್ಸವ ಕವನದ ಕ್ಯಾಸೆಟ್ ಬಂದ ಮೇಲೆ ಬಹಳ ಜನಪ್ರಿಯವಾಯಿತು ಸತ್ಯ. ಭಾವಗೀತೆ ಪ್ರಕಾರಗಳಲ್ಲಿ ಪ್ರತಿ ಜನರ ಮನೆ, ಮನೆಗೆ ತಲುಪಿಸುವಲ್ಲಿ ಒಂದು ಹೊಸ ಪ್ರಕಾರಕ್ಕೆ ನಾಂದಿ ಹಾಡಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಮುಖ್ಯ ಕೊಡುಗೆಗಳು ಮುಖ್ಯಧಾರೆಯ ಕವಿತೆಗಳು. ಬರೇ ಸುಗಮ ಸಂಗೀತಕ್ಕೆ, ಗೀತ ಸಾಹಿತ್ಯಕ್ಕೆ ಕೊಟ್ಟಿದ್ದಲ್ಲ. ಅವರ ಎಂಟು ಪ್ರಮುಖ ಕವನ ಸಂಕಲನಗಳಿವೆ. ಉದಾಹರಣೆಗೆ ಸಂಜೆ ಐದರ ಮಳೆ, ನಾನೆಂಬ ಪರಕೀಯ,ಅನಾಮಿಕ ಆಂಗ್ಲರು, ಸ್ವಯಂ ಸೇವೆಯ ಗಿಳಿಗಳು, ಮನಸ್ಸು ಗಾಂಧಿ ಬಜಾರು, ಸುಮಹೂರ್ತ, ನೆನದವರ ಮನದಲ್ಲಿ ಇಂತಹ ಮಹತ್ವದ ಕವನ ಸಂಕಲನಗಳನ್ನು ಬರೆದಿದ್ದರು. ನವೋದಯದಿಂದ ನವ್ಯ ಬಂದು, ನವ್ಯದಿಂದ ಸಮಾಜಮುಖಿ ಕಾವ್ಯದ ಕಡೆಗೆ ಹೋಗುವ ಕಾಲ ಅದು. 1960, 70, 80ರ ದಶಕ
ಅದಾಗಿದೆ. ಆ ಮೂರು ದಶಕಗಳಲ್ಲಿ ಬಂದಂತಹ ಬಹಳ ಮಹತ್ವದ ಕವನ ಸಂಕಲನವಾಗಿದೆ.

ಆಮೇಲೆ ಅವರು ನಗರಪ್ರಜ್ಞೆಯ ಆಧುನಿಕ ಪ್ರತಿಮೆಗಳನ್ನು ಕನ್ನಡ ತಂದವರು ನಿಸಾರ್ ಅಹಮದ್. ಅಂದರೆ “ಕುರಿಗಳು ಸಾರ್ ಕುರಿಗಳು” ಆ ಅಭಿವ್ಯಕ್ತಿಯೇ ಎಷ್ಟು ಆಧುನಿಕವಾಗಿದೆ ನೋಡಿ. ಕ್ಯಾಕ್ಟಸ್(ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿತ್ತು) ಮೇಲೆಯೇ ಒಂದು ಪದ್ಯ ಬರೆದಿದ್ದರು. ಎಲ್ಲರೂ ಮಲ್ಲಿಗೆ, ಸಂಪಿಗೆ ಮೇಲೆ ಪದ್ಯ ಬರೆಯುತ್ತಿದ್ದರೆ, ಇವರು ಕ್ಯಾಕ್ಟಸ್ ಮೇಲೆ ಬರೆದಿದ್ದರು. ಅಂದರೆ ಒಂದು ಬಯಲುಸೀಮೆಯ ಮರುಭೂಮಿಯಲ್ಲಿ ಬೆಳೆಯುವ ಕ್ಯಾಕ್ಟಸ್ ಅನ್ನು ನಗರದ ಜನ ತಮ್ಮ ಬಾಲ್ಕನಿಯಲ್ಲಿ ತಂದು ಬೆಳೆಸುವ ಹವ್ಯಾಸ ಮಾಡಿಕೊಂಡಿದ್ದರ ವೈರುಧ್ಯದ ಬಗ್ಗೆ ಬರೆದಿದ್ದ ಕವನ ಅದಾಗಿತ್ತು.

ಅನಾಮಿಕ ಆಂಗ್ಲರು ಅದು ಬಹಳ ಮಹತ್ವದ ಕವಿತೆ. ಒಂದಾನೊಂದು ಕಾಲದಲ್ಲಿ ಇಲ್ಲಿ ಬ್ರಿಟಿಷರಿದ್ದರು. ಆಗ ತೀರಿಕೊಂಡವರನ್ನು ಇಲ್ಲೇ ಹೂತಿರುತ್ತಾರೆ. ಅದನ್ನು ನೆನಪಿಸಿಕೊಂಡು ಬರೆದ ಸುಂದರ ರೂಪಕವಾಗಿತ್ತು. ಆಮೇಲೆ ರಾಮನ್ ಸತ್ತ ಸುದ್ದಿ ಎಂಬ ಕವಿತೆ…ಒಬ್ಬ ರೈತನಿಗೆ ಸಿವಿ ರಾಮನ್ ಸತ್ತ ಸುದ್ದಿ ಹೇಳಿದರೆ ಅದರ ಅರ್ಥ ಏನು ಎಂಬುದು ಅವರ ಜಿಜ್ಞಾಸೆಯಾಗಿತ್ತು. ಹೀಗೆ ಈ ಥರದ ಆಧುನಿಕ ವಿಚಾರಗಳ ಮೇಲೆ ಚಿಂತನಶೀಲ ತನ್ಮಯತೆ ಬೆಳೆಸಿಕೊಂಡಿದ್ದರು. ಒಬ್ಬ ಒಳ್ಳೆಯ ಲೇಖಕನಿಗೆ ಇರಬೇಕಾಗಿದ್ದು ಚಿಂತನಶೀಲ ತನ್ಮಯತೆ. ಬರೇ ಚಿಂತನೆಯಾದರೆ ಅದು ಶುಷ್ಕ ಪಾಂಡಿತ್ಯವಾಗುತ್ತದೆ. ಅವೆರಡರ ಭಿನ್ನವಾದ ಪಾಕ ಚಿಂತನಶೀಲ
ತನ್ಮಯತೆಯಾಗಿದೆ. ಅದು ನಿಸಾರ್ ಅಹಮದ್ ಅವರಲ್ಲಿತ್ತು.

ಇಡೀ ಸಮಾಜವನ್ನೇ ಒಂದು ಕುಟುಂಬ ಎಂದು ತಿಳಿದವರು ಅವರು. ತುಂಬಾ ಲವಲವಿಕೆಯ ಮತ್ತು ಜೀವನ ಪ್ರೀತಿಯ ಮನುಷ್ಯ ನಿಸಾರ್ ಅಹಮದ್. ಈ ನಿಟ್ಟಿನಲ್ಲಿ ಅವರ ಜೀವನಪ್ರೀತಿ ತುಂಬಿದ, ಚಿಂತನಶೀಲದಿಂದ ಕೂಡಿದ್ದ ಕಾವ್ಯವನ್ನು ಓದೋಣ ಅದೇ ನಾವು ಅವರಿಗೆ ನೀಡುವ ಗೌರವವಾಗಲಿದೆ.

Advertisement

ಜಯಂತ್ ಕಾಯ್ಕಿಣಿ
ಖ್ಯಾತ ಕವಿ, ಸಾಹಿತಿ

(ನಿರೂಪಣೆ: ನಾಗೇಂದ್ರ ತ್ರಾಸಿ)

Advertisement

Udayavani is now on Telegram. Click here to join our channel and stay updated with the latest news.

Next