Advertisement

ನಿರ್ಭಯಾ ಅಪರಾಧಿಗಳಿಗೆ ಇಂದು ಬೆಳಿಗ್ಗೆ ಗಲ್ಲು ಫಿಕ್ಸ್ ; ತಡೆ ಮನವಿ ಅರ್ಜಿ ವಜಾ

09:58 AM Mar 20, 2020 | Team Udayavani |

ಹೊಸದಿಲ್ಲಿ: ಅಂತೂ ಇಂತೂ ನಿರ್ಭಯಾಳಿಗೆ ನ್ಯಾಯ ಸಿಕ್ಕಂತಾಗಿದೆ. ನೇಣುಕುಣಿಕೆ ತಪ್ಪಿಸಿಕೊಳ್ಳುವ ಸಲುವಾಗಿ ಗುರುವಾರ ತಡರಾತ್ರಿ ದಿಲ್ಲಿ ಹೈಕೋರ್ಟ್‌ಗೆ ನಿರ್ಭಯಾ ಹಂತಕರು ಸಲ್ಲಿಸಿದ್ದ ಅರ್ಜಿಯೂ ವಜಾಗೊಂಡಿದೆ. ಈ ಮೂಲಕ ಶುಕ್ರವಾರ ಬೆಳಗ್ಗೆ 5.30ಕ್ಕೆ ನಾಲ್ವರೂ ಹಂತಕರೂ ಗಲ್ಲಿಗೇರುವುದು ಫಿಕ್ಸ್‌ ಆಗಿದೆ. ಹೆಚ್ಚು ಕಡಿಮೆ ಶುಕ್ರವಾರ ಬೆಳಗ್ಗೆ ಈ ಪತ್ರಿಕೆ ನಿಮ್ಮ ಕೈಗೆ ಸಿಗುವ ಹೊತ್ತಿಗೆ ನಾಲ್ವರೂ ನಿರ್ಭಯಾ ಹಂತಕರು ನೇಣಿಗೇರಿರುತ್ತಾರೆ.

Advertisement

ತಡರಾತ್ರಿ ಹೋರಾಟ
ಗುರುವಾರ ಬೆಳಗ್ಗೆ ಸುಪ್ರೀಂ ಕೋರ್ಟ್‌ ಮತ್ತು ದಿಲ್ಲಿ ಸೆಷನ್ಸ್‌ ಕೋರ್ಟ್‌ಗಳಲ್ಲಿ ಪವನ್‌ ಮತ್ತು ಮುಕೇಶ್‌ ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತವಾದವು. ಹೀಗಾಗಿ ಅವರ ಎಲ್ಲ ಕಾನೂನು ಹಾದಿಗಳು ಬಂದ್‌ ಆದವು. ಆದರೂ ಗುರುವಾರ ರಾತ್ರಿ 9 ಗಂಟೆ ವೇಳೆಗೆ ಈ ಅಪರಾಧಿಗಳು ನೇಣು ಶಿಕ್ಷೆಗೆ ತಡೆ ಕೋರಿ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ತಡರಾತ್ರಿಯೇ ಅರ್ಜಿ ವಿಚಾರಣೆ ನಡೆಯಿತು. ಅಪರಾಧಿಗಳ ಪರ ವಕೀಲ ಎ.ಪಿ.ಸಿಂಗ್‌ ವಾದ ಮಂಡಿಸಿದರು.

ಈ ವೇಳೆ ಪ್ರತಿಕ್ರಿಯೆ ನೀಡಿದ ಹೈಕೋರ್ಟ್‌, ಈಗಾಗಲೇ ಈ ಹಂತಕರ ಅರ್ಜಿಗಳು ಸುಪ್ರೀಂಕೋರ್ಟ್‌ ನಲ್ಲಿ ತಿರಸ್ಕೃತಗೊಂಡಿವೆ. ನಾವೀಗ ಇಲ್ಲಿ ತಡೆ ನೀಡಿದರೆ ನ್ಯಾಯ ವ್ಯವಸ್ಥೆಯಲ್ಲಿಯೇ ಅಲ್ಲೋಲಕಲ್ಲೋಲವಾಗುತ್ತದೆ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದರು.

ಅಂತಿಮ ಪರಿಶೀಲನೆ ಮುಕ್ತಾಯ
ನಿರ್ಭಯಾ ಪ್ರಕರಣ ನಾಲ್ವರೂ ಹಂತಕರ ಮುಂದಿದ್ದ ಕಾನೂನಾತ್ಮಕ ಪರಿಹಾರಗಳೆಲ್ಲವೂ ಮುಗಿದಿದ್ದರಿಂದ ಗುರುವಾರ ಸಂಜೆಯೇ ದಿಲ್ಲಿಯ ತಿಹಾರ್‌ ಜೈಲಿನ ಅಧಿಕಾರಿಗಳು ನೇಣಿಗೇರಿಸುವ ಪೂರ್ವಸಿದ್ಧತೆ ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next