Advertisement

ನಿಫಾ ವೈರಸ್‌ ಹಾವಳಿ ಮುನ್ನೆಚ್ಚರಿಕೆಯೇ ಮದ್ದು

11:14 PM Jun 06, 2019 | mahesh |

ನಿಫಾ ವೈರಸ್‌ ಮರಳಿ ಕೇರಳಕ್ಕೆ ದಾಳಿಯಿಟ್ಟಿದೆ. ಈಗಾಗಲೇ ಇಬ್ಬರಲ್ಲಿ ಈ ವೈರಾಣು ಇರುವುದು ದೃಢಪಟ್ಟಿದ್ದು, ಸುಮಾರು 350 ಮಂದಿಯನ್ನು ವಿಶೇಷ ನಿಗಾದಲ್ಲಿ ಇರಿಸಲಾಗಿದೆ. ಜೊತೆಗೆ ಕರ್ನಾಟಕದಲ್ಲೂ ನಿಫಾ ವೈರಸ್‌ ಭೀತಿ ಕಾಣಿಸಿಕೊಂಡಿದೆ. ರಾಜ್ಯದ ಎಂಟು ಜಿಲ್ಲೆಗಳಲ್ಲಿ ನಿಫಾ ಕಟ್ಟೆಚ್ಚರ ಘೋಷಿಸಲಾಗಿದೆ. ಕೇರಳದಲ್ಲಿ ನಿಫಾ ವೈರಸ್‌ ಮೊದಲು ಕಾಣಿಸಿಕೊಂಡದ್ದು ಕಳೆದ ವರ್ಷ. 17 ಜನರನ್ನು ಬಲಿತೆಗೆದುಕೊಂಡ ಬಳಿಕ ಈ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿತ್ತು. ಆದರೆ ಇದೀಗ ಮಳೆ ಶುರುವಾಗುವ ಕಾಲಕ್ಕೆ ಸರಿಯಾಗಿ ಮತ್ತೂಮ್ಮೆ ವೈರಾಣು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಮಲೇರಿಯಾ, ಡೆಂ , ಚಿಕುನ್‌ಗುನ್ಯಾ ಮುಂತಾದ ವೈರಾಣುಗಳು ತಂಪು ವಾತಾವರಣದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಮಳೆಗಾಲದಲ್ಲಿ ಈ ವೈರಾಣುಗಳ ಉಪಟಳ ಸಾಮಾನ್ಯ. ಇದರ ಜತೆಗೆ ನಿಫಾ ಕೂಡಾ ಸೇರಿಕೊಂಡರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಈ ಕಾರಣಕ್ಕೆ ಈ ಸಲ ಕೇರಳ ಸರಕಾರ ನಿಫಾ ಹಾವಳಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರವೂ ತಕ್ಷಣ ತಜ್ಞರ ತಂಡವೊಂದನ್ನು ಕೇರಳಕ್ಕೆ ರವಾನಿಸಿ ಸಕಾಲಿಕವಾದ ನೆರವು ಒದಗಿಸಿದೆ.

Advertisement

ನಿಫಾ ಹಣ್ಣು ತಿನ್ನುವ ಬಾವಲಿಗಳಿಂದ ಹರಡುವ ಒಂದು ಅಪಾಯಕಾರಿ ವೈರಸ್‌. ಹಂದಿ, ಕೋಳಿಯಂಥ ಸಾಕುಪ್ರಾಣಿಗಳಿಂದಲೂ ಹರಡುವ ಸಾಧ್ಯತೆಯಿದ್ದರೂ ಇದರ ಮುಖ್ಯ ವಾಹಕ ಬಾವಲಿಗಳು. ಹೀಗಾಗಿ ಇದನ್ನು ಬಾವಲಿ ಜ್ವರ ಅಂತಲೂ ಕರೆಯುತ್ತಾರೆ. 1998ರಲ್ಲಿ ಮಲೇಶ್ಯಾ ಮತ್ತು 1999ರಲ್ಲಿ ಸಿಂಗಾಪುರದಲ್ಲಿ ಮೊದಲು ಈ ವೈರಸ್‌ ಕಾಣಿಸಿತ್ತು. 2007ರಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಿಫಾ ಕಾಣಿಸಿಕೊಂಡಾಗ ಭಾರತೀಯರು ಇದರ ಹೆಸರನ್ನು ಮೊದಲು ಕೇಳಿದ್ದು. ಅನಂತರ ಕಳೆದ ವರ್ಷ ಕೇರಳದಲ್ಲಿ ಬಹಳಷ್ಟು ಹಾಹಾಕಾರ ಎಬ್ಬಿಸಿದೆ. ಇದೀಗ ಇಲ್ಲಿ ವೈರಸ್‌ ಮರುಕಳಿಸಿರುವುದು ಮಾತ್ರ ಚಿಂತೆಗೆ ಕಾರಣವಾಗಿದೆ.

ನಿಫಾ, ಹಂದಿಜ್ವರ ಸೇರಿದಂತೆ ವಿವಿಧ ರೀತಿಯ ವೈರಾಣುಗಳ ಹಾವಳಿ ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚುತ್ತಿದ್ದರೂ ಇದನ್ನು ಎದುರಿಸಲು ಸಾಕಷ್ಟು ಮೂಲ ಸೌಕರ್ಯಗಳ ನಿರ್ಮಾಣವಾಗುತ್ತಿಲ್ಲ. ದೇಶದಲ್ಲಿ ವೈರಾಣು ಪರೀಕ್ಷೆ ಕೇಂದ್ರವಿರುವುದು ಪುಣೆ ಮತ್ತು ಹೈದರಾಬಾದ್‌ನಲ್ಲಿ ಮಾತ್ರ. ವ್ಯಾಪಕವಾಗಿ ವೈರಾಣು ರೋಗ ಹರಡಿದಾಗ ಈ ಎರಡು ಪ್ರಯೋಗಾಲಯಗಳು ಕೆಲಸದ ಒತ್ತಡದಿಂದ ಬಳಲುತ್ತವೆ. ಸಕಾಲಿಕವಾಗಿ ವರದಿ ಕೈಸೇರದೆ ಸಾಧ್ಯವಾಗದೆ ವೈದ್ಯರು ಒದ್ದಾಡಬೇಕಾಗುತ್ತದೆ. ಇನ್ನಷ್ಟು ಪ್ರಯೋಗಾಲಯಗಳನ್ನು ನಿರ್ಮಿಸುವುದಾಗಿ ಸರಕಾರ ಹೇಳಿದ್ದರೂ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಕಳೆದ ವರ್ಷ ಕೇರಳದಲ್ಲಿ ನಿಫಾ ವೈರಸ್‌ ನಿಯಂತ್ರಣಕ್ಕೆ ಬಂದ ಬಳಿಕ ರಾಜ್ಯ ಮತ್ತು ಕೇಂದ್ರ ಸರಕಾರ ಇದೊಂದು ಸ್ಥಳೀಯ ಸಮಸ್ಯೆ ಎಂದು ಪರಿಗಣಿಸಿ ಅದರ ಮೇಲೆ ನಿಗಾ ಇಡುವುದನ್ನು ಬಿಟ್ಟಿದ್ದವು. ದೇಶದಲ್ಲಿ ಬಾವಲಿಗಳು ಎಲ್ಲೆಂದರಲ್ಲಿ ಇವೆ. 58 ಜಾತಿಯ ಬಾವಲಿಗಳು ನಮ್ಮ ದೇಶದಲ್ಲಿಯೇ ಇವೆ. ಈ ಬಾವಲಿಗಳು ಯಾವ ಕಾಲದಲ್ಲೂ ನಿಫಾ ವೈರಸ್‌ ಹರಡಬಲ್ಲವು. ದೇಶದ ಯಾವುದೇ ಕಡೆ ನಿಫಾ ವೈರಸ್‌ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದು, ನಮ್ಮನ್ನಾಳುವವರು ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು.

ಕಳೆದ ವರ್ಷ ನಿಫಾ ವೈರಸ್‌ ಕಾಣಿಸಿಕೊಂಡ ಬಳಿಕ ಸಾವಿರಾರು ಬಾವಲಿಗಳನ್ನು ಸಾಮೂಹಿಕವಾಗಿ ಸಾಯಿಸಲಾಗಿತ್ತು. ತಮ್ಮದಲ್ಲದ ತಪ್ಪಿಗಾಗಿ ಬಾವಲಿಗಳು ಪ್ರಾಣ ತೆರಬೇಕಾಗಿ ಬಂತು. ಹಾಗೇ ನೋಡಿದರೆ ನಿಫಾ ವೈರಸ್‌ ಹರಡಲು ಮೂಲ ಕಾರಣ ಮನುಷ್ಯರು. ಬಾವಲಿಗಳ ವಾಸಸ್ಥಾನಗಳನ್ನು ಅವ್ಯಾಹತವಾಗಿ ನಾಶ ಮಾಡಿದ ಕಾರಣ ಅವುಗಳೀಗ ಮನುಷ್ಯರು ವಾಸವಾಗಿರುವ ಪ್ರದೇಶಗಳಿಗೆ ಅನಿವಾರ್ಯವಾಗಿ ಬರುವಂತಾಗಿದೆ. ಸ್ಥಿತ್ಯಂತರದಿಂದಾಗಿ ಬಾವಲಿಗಳ ಮೂಲ ಸ್ವಭಾವದಲ್ಲೂ ಬದಲಾವಣೆಗಳಾಗಿವೆ. ಹಸಿವು ಮತ್ತು ಒತ್ತಡದಿಂದ ಬಳಲುತ್ತಿರುವ ಅವುಗಳೀಗ ವೈರಸ್‌ಗಳನ್ನು ಸಾಗಿಸುವ ಜೀವಂತ ವಾಹಕಗಳಾಗಿ ಬದಲಾಗಿವೆ. ಅವುಗಳ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಮೂತ್ರ ಮತ್ತು ಜೊಲ್ಲಿನಲ್ಲಿ ವೈರಾಣುಗಳು ಸುಲಭವಾಗಿ ಮನುಷ್ಯರಿಗೆ ವರ್ಗಾವಣೆಯಾಗುತ್ತವೆ. ಇದು ಬಾವಲಿ ಎಂದಲ್ಲ ಎಲ್ಲ ಪ್ರಾಣಿ ಪಕ್ಷಿಗಳ ಕತೆಯೂ ಹೌದು. ಮಾನವ ಚಟುವಟಿಕೆ ಮಿತಿಮೀರಿದ ಪರಿಣಾಮವಾಗಿ ಪ್ರಾಣಿ ಪಕ್ಷಿಗಳು ನೆಲೆ ಕಳೆದುಕೊಳ್ಳುತ್ತಿವೆ. ತಮ್ಮ ತಾಣಗಳಲ್ಲಿ ನೆಮ್ಮದಿಯಿಂದಿದ್ದ ಅವುಗಳೀಗ ಮನುಷ್ಯರಿರುವ ಪ್ರದೇಶಗಳಿಗೆ ನುಗ್ಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಪ್ರಕೃತಿಯ ಸಮತೋಲನ ತಪ್ಪಿದರೆ ಯಾವ್ಯಾವ ರೀತಿಯಲ್ಲಿ ಅನಾಹುತಗಳು ಎದುರಾಗಬಹುದು ಎನ್ನುವುದಕ್ಕೆ ನಿಫಾ ಕೂಡಾ ಒಂದು ಉದಾಹರಣೆಯಾಗಬಲ್ಲದು.

Advertisement

ನಿಫಾಕ್ಕೆ ಇನ್ನೂ ಔಷಧಿ ಕಂಡುಕೊಳ್ಳಲಾಗಿಲ್ಲ. ಆ್ಯಂಟಿ ಬಯೋಟಿಕ್‌ಗಳ ಮೂಲಕವೇ ಇದನ್ನು ನಿಯಂತ್ರಣಕ್ಕೆ ತರುತ್ತಾರೆ. ನಿಫಾ ಸೇರಿದಂತೆ ಯಾವುದೇ ವೈರಸ್‌ ಎಚ್ಚರಿಸಲು ಮುನ್ನೆಚ್ಚರಿಕೆ ವಹಿಸುವುದೊಂದೇ ಮಾರ್ಗ. ಆಡಳಿತದ ಜನರು ಕೂಡಾ ರೋಗ ಹರಡುವುದನ್ನು ತಡೆಯಲು ಸಕ್ರಿಯವಾಗಿ ಸಹಭಾಗಿಗಳಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next