ಬ್ರಹ್ಮಾವರ: ಕೃಷ್ಣ ಮಥುರೆಯಲ್ಲಿ ಅವತರಿಸಿ ಬಳಿಕ ಗೋವುಗಳ ವಿಶೇಷ ಪಾಲನೆ ನಡೆಯುತ್ತಿದೆ ಎಂಬ ಕಾರಣಕ್ಕೆ ವೃಂದಾವನಕ್ಕೆ ತೆರಳಿದ ಮತ್ತು ಅಲ್ಲಿ ತಾನೂ ಸ್ವತಃ ಗೋಪಾಲನೆಯನ್ನು ಮಾಡಿ ಗೋಕುಲೋದ್ಧಾರಕನಾದ ಕತೆ ಭಾಗವತ ಪುರಾಣದಲ್ಲಿ ವಿಶೇಷವಾಗಿ ಉಲ್ಲೇಖೀತವಾಗಿದೆ. ಕಲಿಯುಗದ ವರ್ತಮಾನದಲ್ಲಿ ಶ್ರೀ ಪೇಜಾವರ ಕಿರಿಯ ಶ್ರೀಗಳು ತಮ್ಮ ಗುರುಗಳ ಅನುಗ್ರಹದೊಂದಿಗೆ ಯಾವ ಪ್ರತಿ ಫಲಾಪೇಕ್ಷೆಯೂ ಇಲ್ಲದೇ ಸಾವಿರಾರು ಗೋವುಗಳಿಗೆ ಆಶ್ರಯ ನೀಡುತ್ತಿರುವ ನೀಲಾವರದ ಗೋಶಾಲೆ ಈ ನಾಡಿನ ನಂದಗೋಕುಲವಾಗಿದೆ ಎಂದು ನಾಡಿನ ಪ್ರಸಿದ್ಧ ಮಾಧ್ವ ಪೀಠಗಳಲ್ಲೊಂದಾಗಿರುವ ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಹೇಳಿದರು.
ಅವರು ನೀಲಾವರ ಗೋಶಾಲೆಯಲ್ಲಿ ತಮ್ಮ ಪಟ್ಟದ ದೇವರಾದ ಶ್ರೀ ವೇಣು ಗೋಪಾಲ ಕೃಷ್ಣ ದೇವರ ಪೂಜೆ ನಡೆಸಿ ಭಿಕ್ಷೆ ಸ್ವೀಕರಿಸಿ, ಭಕ್ತರಿಗೆ ಸಂದೇಶ ನೀಡಿದರು.
ಈ ಗೋಶಾಲೆಯಲ್ಲಿ ಬಂದು ತನು ಮನ ಧನ ಯಾವುದೇ ರೀತಿಯಲ್ಲಿ ಗೋ ಸೇವೆ ನಡೆಸಿದರೂ ಅತಿಶಯ ಫಲ ನಿಶ್ಚಿತ. ಗೋ ಸೇವೆಯನ್ನು ನಿರಂತರವಾಗಿ ಆದ್ಯತೆಯಾಗಿ ನಡೆಸಲೇಬೇಕೆಂದು ಕರೆ ನೀಡಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶ ನೀಡಿ ಶ್ರೀ ವ್ಯಾಸರಾಜ ಮಠಾಧೀಶರು ಇಂದು ಗೋಶಾಲೆಗೆ ಆಗಮಿಸಿ ಪೂಜೆ , ಪಾಠ ಪ್ರವಚನಾದಿಗಳನ್ನು ನಡೆಸಿರುವುದರಿಂದ ಗೋಶಾಲೆಯ ಪಾವನತ್ವ ವೃದ್ಧಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಠದ ದಿವಾನರಾದ ಎಂ. ರಘುರಾಮಾಚಾರ್ಯ, ಗೋವರ್ಧನ ಗಿರಿ ಟ್ರಸ್ಟ್ನ ವ್ಯವಸ್ಥಾಪಕ ರಘುರಾಮಾಚಾರ್ಯ, ವಿಶ್ವಸ್ತ ರಾದ ಜಲಂಚಾರು ರಘುಪತಿ ತಂತ್ರಿ, ಎಂ. ಲಕ್ಷಿ$¾àನಾರಾಯಣ ರಾವ್, ಅರ್ಚಕ ಪವನಾಚಾರ್ಯ, ಶ್ರೀಗಳ ಕಾರ್ಯದರ್ಶಿ ಕೃಷ್ಣ ಭಟ್ ಉಪಸ್ಥಿತರಿದ್ದರು.