ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗುವುದು ಮುಂದುವರಿದಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್ 30ರವರೆಗೆ ಪಟಾಕಿ ಮಾರಾಟ ಮಾಡದಂತೆ ರಾಷ್ಟ್ರೀಯ ಹಸಿರು ಪೀಠ ನಿರ್ಬಂಧ ವಿಧಿಸಿದೆ. ಸಿಡಿಮದ್ದು ಮಾರಾಟದ ಮೇಲಿನ ನಿರ್ಬಂಧ ನವೆಂಬರ್ 9ರ ರಾತ್ರಿಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.
“ನಗರ, ಪಟ್ಟಣ ಪ್ರದೇಶಗಳಲ್ಲಿನ ವಾಯುಮಾಲಿನ್ಯದ ಪ್ರಮಾಣ ಕಡಿಮೆಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಅಷ್ಟೇ ಅಲ್ಲ ದೀಪಾವಳಿ, ಹೊಸ ವರ್ಷ, ಕ್ರಿಸ್ಮಸ್ ನಂತಹ ಹಬ್ಬದ ವೇಳೆ ಪಟಾಕಿ ಸುಡಲು ಸಮಯ ನಿಗದಿಪಡಿಸಬೇಕು” ಎಂದು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ಜಸ್ಟೀಸ್ ಆದರ್ಶ್ ಕುಮಾರ್ ಗೋಯೆಲ್ ಆದೇಶದಲ್ಲಿ ತಿಳಿಸಿದ್ದಾರೆ.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ವಾಯು ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಬೇಕಾದ ವಿಶೇಷ ಕ್ರಮ ತೆಗೆದುಕೊಳ್ಳಬೇಕು ಎಂದು ಹಸಿರುಪೀಠ ಸೂಚಿಸಿದೆ.
ಇದನ್ನೂ ಓದಿ:ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರ ಜನತೆಗೆ ‘ಡಬಲ್ ಶಾಕ್’ ನೀಡಿದೆ: ಸುರ್ಜೇವಾಲ ಕಿಡಿ
ದೀಪಾವಳಿ ಹಬ್ಬ ಸಮೀಪಿಸುತ್ತಿರುವಂತೆಯೇ ಪಟಾಕಿ ಮಾರಾಟಕ್ಕೆ ಬೇಡಿಕೆ ಹೆಚ್ಚುವ ದಿನಗಳಲ್ಲಿಯೇ ಪಟಾಕಿ ಮಾರಾಟಕ್ಕೆ ನಿಷೇಧ ಹೇರಿರುವುದು ಮಾರಾಟಗಾರರಲ್ಲಿ ಅಸಮಾಧಾನ ಮೂಡಿಸಿರುವುದಾಗೊ ವರದಿ ಹೇಳಿದೆ.