Advertisement

ಹೊಸಬಾಳು: ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಬದಲಿ ಸೇತುವೆ

12:03 AM Jul 08, 2019 | Sriram |

ಸಿದ್ದಾಪುರ: ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕಿಸುವ ಹೊಸಬಾಳು ಬಳಿ ಕುಬ್ಜಾ ನದಿಯ ಸೇತುವೆ ಶಿಥಿಲಗೊಂಡ ಹಿನ್ನೆಲೆ ಮೋರಿ ಅಳವಡಿಸಿ, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯೂ ಶುಕ್ರವಾರದ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ಹೊಸಂಗಡಿ ಹಾಗೂ ಯಡಮೊಗೆ ಸಂಪರ್ಕ ಕಡಿತಗೊಂಡಿದ್ದು, ಜನರು ಅತಂತ್ರರಾಗಿದ್ದಾರೆ.

Advertisement

40 ವರ್ಷ ಹಿಂದೆ ನಿರ್ಮಿಸಿದ ಹೊಸಬಾಳು ಹಳೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಜಿ. ಪಂ. ಅನುದಾನದಡಿ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ಪಕ್ಕದಲ್ಲೇ 12 ಪೈಪ್‌ಗ್ಳನ್ನು ಹಾಕಿ ಮೋರಿಯೊಂದನ್ನು ನಿರ್ಮಿಸಲಾಗಿತ್ತು. ಆದರೆ ಅದು ಸೇತುವೆಗಿಂತ ಕೆಳಮಟ್ಟದಲ್ಲಿರುವುದರಿಂದ ಧಾರಾಕಾರ ಮಳೆ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಇದರಿಂದ ವಿದ್ಯಾರ್ಥಿಗಳು, ನಿತ್ಯ ಸಂಚಾರಿ ಗಳು, ಕಾರ್ಮಿಕರು ಯಡಮೊಗೆಯಿಂದ ಕಾರೂರು ಮಾರ್ಗವಾಗಿ ಕೆರೆಕಟ್ಟೆಗೆ ಬಂದು ಅಲ್ಲಿಂದ ಹೊಸಂಗಡಿಗೆ ಹೋಗಬೇಕಾಗಿದೆ.

ಆಗದ ಹೊಸ ಸೇತುವೆ
ಹೊಸಬಾಳು ಸೇತುವೆ ಶಿಥಿಲಗೊಂಡು ವರ್ಷ ಗಳೇ ಉರುಳಿವೆ. ಕಳೆದ ವರ್ಷ ಜಿಲ್ಲಾಧಿಕಾರಿ ಫ್ರಾನ್ಸಿಸ್‌ ಮೇರಿ ಹಾಗೂ ಜಿ.ಪಂ. ಸಿಇಒ ಶಿವಾನಂದ ಕಾಪಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಫೆಬ್ರವರಿಯಲ್ಲಿ ಮೋರಿ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಕೇಂದ್ರದ ಸಿಆರ್‌ಎಫ್‌ ನಿಧಿಯಡಿ ಹೊಸ ಸೇತುವೆ ನಿರ್ಮಾಣಕ್ಕೆ ಇಲಾಖೆ ಮುಂದಾಗಿತ್ತು. ಆದರೆ ಆರು ತಿಂಗಳಲ್ಲಿ ಪಿಲ್ಲರ್‌ಗೆ ಹೊಂಡ ಮಾಡಿದ್ದು ಬಿಟ್ಟರೆ ಕಾಮಗಾರಿ ಮುಂದಡಿ ಇಟ್ಟಿಲ್ಲ. ಸೇತುವೆ ಕೈಗೂಡುವ ಲಕ್ಷಣವೂ ಇಲ್ಲ!

ಎಚ್ಚೆತ್ತುಕೊಳ್ಳಲಿಲ್ಲ
ಭಾರೀ ಪ್ರಮಾಣದ ಮಳೆಯಾದರೆ ಯಡಮೊಗೆ- ಹೊಸಂಗಡಿ ಸಂಪರ್ಕ ಕಡಿದುಕೊಳ್ಳುವ ಆತಂಕದ ಬಗ್ಗೆ ಉದಯವಾಣಿಯು ಈ ಹಿಂದೆಯೇ ಬೆಳಕು ಚೆಲ್ಲಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿ ಗಳು ಎಚ್ಚೆತ್ತುಕೊಳ್ಳದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿದೆ.

Advertisement

ಮೋರಿ ನಿರ್ಮಾಣದಲ್ಲಿ ಹಣ ಗುಳುಂ?
ಸೇತುವೆ ಪಕ್ಕದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಸೇತುವೆಗೆ 3.50 ಲಕ್ಷ ರೂ. ಬಿಡುಗಡೆಯಾಗಿದ್ದು, ಆದರೆ ಈ ಕಾಮಗಾರಿಗೆ 1ರಿಂದ 1.50 ಲಕ್ಷ ರೂ. ವೆಚ್ಚ ಆಗಿದ್ದಿರಬಹುದು ಎಂದು ಅಂದಾಜಿಲಸಾಗಿದೆ. ಬಾಕಿ ಹಣ 2 ಲಕ್ಷ ರೂ. ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪರ್ಯಾಯ ರಸ್ತೆ ದುರಸ್ತಿ ಮಾಡಿ
ಈ ಭಾಗದಿಂದ 150 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಿದ್ದಾಪುರ, ಹೊಸಂಗಡಿ, ಶಂಕರನಾರಾಯಣ, ಕುಂದಾಪುರ ಕಡೆಯ ಕಾಲೇಜು ವ್ಯಾಸಂಗಕ್ಕೆ ತೆರಳುತ್ತಾರೆ. ಸದ್ಯ ಪರ್ಯಾಯವಾಗಿ ಕಾರೂರು ಮೂಲಕ ಕೆರೆಕಟ್ಟೆ ಹೊಸಂಗಡಿಗೆ ತೆರಳಬೇಕಿದೆ. ಆದರೆ ಈ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರವೇ ಕಷ್ಟಕರವಾಗಿದೆ. ಇದನ್ನಾದರೂ ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

2-3 ದಿನಗಳಲ್ಲಿ ಟೆಂಡರ್‌

ಮಳೆಯಿಂದಾಗಿ ಸೇತುವೆ ಕೊಚ್ಚಿಹೋಗಿರುವ ಬಗ್ಗೆ ಜಿಲ್ಲಾ ಪಂಚಾಯತ್‌ ಎಂಜಿನಿಯರ್‌ ಹತ್ತಿರ ಮಾತನಾಡಿದ್ದೇನೆ. ಇನ್ನೂ 2-3 ದಿನದಲ್ಲಿ ಟೆಂಡರ್‌ ಕರೆಯುವ ಬಗ್ಗೆ ತಿಳಿಸಿದ್ದಾರೆ. ಡಿಸೆಂಬರ್‌ ಒಳಗೆ ಕಾಮಗಾರಿ ಮುಗಿಯುತ್ತದೆ. ಜನರು ಸಂಚಾರಕ್ಕೆ ಬದಲಿ ಮಾರ್ಗವಾಗಿ ಸಾಗಬೇಕಾಗುತ್ತದೆ. -ರೋಹಿತ್‌ಕುಮಾರ್‌ ಶೆಟ್ಟಿ,ಸದಸ್ಯರು ಜಿಲ್ಲಾ ಪಂಚಾಯತ್‌ ಸಿದ್ದಾಪುರ ಕ್ಷೇತ್ರ

ಬೇರೆ ಮಾರ್ಗವಾಗಿ ಸಂಚರಿಸಿ

ಇಲ್ಲಿನ ಸೇತುವೆ ಮಳೆಯ ನೀರಿನಿಂದ ಕೊಚ್ಚಿಕೊಂಡು ಹೋಗಿರುವುದರಿಂದ ಇದಕ್ಕೆ ಪರ್ಯಾಯವಾಗಿ ಕೆರೆಕಟ್ಟೆ -ಹೊಸಂಗಡಿ ಮಾರ್ಗವಾಗಿ ಸಂಚರಿಸುವಂತೆ ಗ್ರಾಮ ಪಂಚಾಯತ್‌ ಮನವಿ ಮಾಡಿಕೊಳ್ಳುತ್ತದೆ.
-ಸುಮಾ,ಪಿಡಿಒ ಯಡಮೊಗೆ ಗ್ರಾ.ಪಂ.
-ಸತೀಶ್‌ ಆಚಾರ್‌ ಉಳ್ಳೂರು
Advertisement

Udayavani is now on Telegram. Click here to join our channel and stay updated with the latest news.

Next