Advertisement

ನವ ಭಾರತದ ಯುವ ಮತದಾರರ ಚಿತ್ತ ಎತ್ತ?

01:45 AM Apr 20, 2019 | mahesh |

ಸೇನೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರದ ಭದ್ರತೆಯಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಸಿನಿಕ ನಿಲುವು ಚುನಾವಣೆಯಲ್ಲಿ ಅವುಗಳಿಗೆ ಹಾನಿ ಮಾಡಬಹುದು ಎನ್ನುವುದರಲ್ಲಿ ಸಂದೇಹವಿಲ್ಲ. ಯುವ ಮತದಾರ ರಾಷ್ಟ್ರದ ಸ್ವಾಭಿಮಾನ ಮತ್ತು ಭಾರತದ ಸ್ಥಾನ-ಮಾನದ ಕುರಿತಂತೆ ತನ್ನದೇ ಆದ ಆಸೆ-ಆಶೋತ್ತರಗಳನ್ನು ಹೊಂದಿದ್ದಾನೆ ಎನ್ನುವುದನ್ನು ಅಲಕ್ಷಿಸಲು ಸಾಧ್ಯವಿಲ್ಲ.

Advertisement

ಸ್ವಾತಂತ್ರ್ಯೋತ್ತರದ ಪ್ರಾರಂಭದ ವರ್ಷಗಳಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯುವ ಕಾಲದಲ್ಲಿ ಬಹು ಸಂಖ್ಯೆಯ ಮತದಾರರಿಗೆ ತಮ್ಮಿಂದ ಚುನಾಯಿತ ಪ್ರತಿನಿಧಿ ಯಾವ ಸರಕಾರ ರಚನೆ ಪ್ರಕ್ರಿಯೆಯ ಭಾಗೀದಾರ ಎನ್ನುವ ಸ್ಪಷ್ಟ ಕಲ್ಪನೆಯೂ ಇರುತ್ತಿರಲಿಲ್ಲ ಎಂದರೆ ತಪ್ಪಾಗದು.

ಇತ್ತೀಚಿನ ವರ್ಷಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಭಿನ್ನ ಒಲವು-ನಿಲುವು ತಳೆಯುವುದರ ಮೂಲಕ ಮತದಾರ ತನ್ನ ಪ್ರಬುದ್ಧತೆಯ ಪರಿಚಯ ಮಾಡಿದ್ದಾನೆ. ರಸ್ತೆ, ನೀರು, ವಿದ್ಯುತ್‌, ಶಿಕ್ಷಣ, ಕಾನೂನು ವ್ಯವಸ್ಥೆಯ ಉಸ್ತುವಾರಿಗೆ ಉತ್ತರದಾಯಿಯಾದ ರಾಜ್ಯ ಸರಕಾರ ಮತ್ತು ರಕ್ಷಣೆ, ವಿದೇಶ ವ್ಯವಹಾರ, ಮೂಲ ಸೌಕರ್ಯ ಅಭಿವೃದ್ಧಿ, ಅರ್ಥ ವ್ಯವಸ್ಥೆ ವಿಕಾಸದ ಜವಾಬ್ದಾರಿ ಹೊತ್ತ ಕೇಂದ್ರ ಸರಕಾರದ ರಚನೆಗಾಗಿ ನಡೆಯುವ ಚುನಾವಣೆಯ ವ್ಯತ್ಯಾಸವನ್ನು ನವ ಭಾರತದ ಯುವ ಮತದಾರ ಹಿಂದಿಗಿಂತ ಚೆನ್ನಾಗಿ ಅರಿತಿದ್ದಾನೆ. ಇಂದಿನ ಸುಶಿಕ್ಷಿತ ಮತದಾರ ರಾಷ್ಟ್ರದ ಅಭಿವೃದ್ಧಿ, ರಕ್ಷಣೆ, ಅಂತಾರಾಷ್ಟ್ರೀಯ ವಿಷಯಗಳಲ್ಲಿ ಸರಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ತೌಲನಿಕ ಚಿಂತನೆ ಮಾಡುವ ಸಾಮರ್ಥ್ಯ ಹೊಂದಿದ್ದಾನೆ.

ಬಡತನ, ಕೃಷಿ, ನಿರುದ್ಯೋಗದಂತಹ ಸಮಸ್ಯೆಗಳು ದಶಕಗ ಳಿಂದ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಹಾಗೂ ಘೋಷಣೆಗಳಲ್ಲಿ ಪ್ರಾಮುಖ್ಯತೆ ಪಡೆಯುತ್ತಿದೆ ಯಾದರೂ ಇಂದಿನ ಮತದಾರರಲ್ಲಿ ಒಂದು ದೊಡ್ಡ ವರ್ಗ ರಾಷ್ಟ್ರದ ಉಜ್ವಲ ಭವಿಷ್ಯದ ಕುರಿತಾಗಿ ಚಿಂತನಶೀಲವಾಗಿದೆ ಎಂದರೆ ತಪ್ಪಾಗದು. ರಾಜಕೀಯ ಪಕ್ಷಗಳು ರಾಷ್ಟ್ರೀಯ-ಅಂತಾ ರಾಷ್ಟ್ರೀಯ ವಿಷಯಗಳ ಕುರಿತಂತೆ ತಳೆಯುತ್ತಿರುವ ನಿಲುವನ್ನು ತನ್ನದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುವ ಜಾಗರೂಕತೆ ಹಾಗೂ ಅರಿವನ್ನು ಆತ ಬೆಳೆಸಿಕೊಳ್ಳುತ್ತಿದ್ದಾನೆ ಎನ್ನುವುದು ಗಮನಿಸಬೇಕಾದ ವಿಷಯ. ಅಮೆರಿಕ, ಬ್ರಿಟನ್‌ನಂತಹ ಮುಂದುವರಿದ ರಾಷ್ಟ್ರಗಳ ಮತದಾರ ರಂತೆ ನಮ್ಮ ಸಾಮಾನ್ಯ ಮತದಾರರೂ ಇಂದು ದೇಶದ ಅಂತ ರಾಷ್ಟ್ರೀಯ ವರ್ಚಸ್ಸು, ಭದ್ರತೆಯ ಕುರಿತು ಹೆಚ್ಚು ಸಂವೇದ ಶೀಲರಾಗಿದ್ದಾರೆ ಎನ್ನುವುದು ದೃಶ್ಯ-ಶ್ರವ್ಯ ಮಾಧ್ಯಮಗಳಲ್ಲಿ ವ್ಯಕ್ತವಾಗುವ ಮತದಾರರ ಪ್ರತಿಕ್ರಿಯೆಗಳಲ್ಲಿ ಕಾಣಬಹುದಾಗಿದೆ.

ಭಾರತದಂತಹ ಪ್ರಗತಿಶೀಲ ದೇಶದಲ್ಲಿ ಬಡತನ ನಿವಾರಣೆ, ಉದ್ಯೋಗ, ಭ್ರಷ್ಟಾಚಾರ ನಿರ್ಮೂಲನೆ ಚುನಾವಣೆಗಳಲ್ಲಿ ಮುಖ್ಯ ವಿಷಯಗಳಾಗಿರುತ್ತವೆ ನಿಜ. ಕೃಷಿ ಕ್ಷೇತ್ರದ ಸಮಸ್ಯೆಗಳು ಚುನಾವಣೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ. ಇವೆಲ್ಲವುದರ ಹೊರತಾಗಿಯೂ ಹೆಚ್ಚುತ್ತಿರುವ ಉಗ್ರವಾದ, ಬಾಹ್ಯ ಶಕ್ತಿಗಳು ದೇಶದ ಮುಂದೆ ಒಡ್ಡುತ್ತಿರುವ ಬೆದರಿಕೆಯ ಕುರಿತು ಜನತೆ ಇಂದು ಗಂಭೀರರಾಗಿದ್ದಾರೆ.

Advertisement

ಯುವ ಮತದಾರ ರಾಷ್ಟ್ರದ ಸ್ವಾಭಿಮಾನ ಮತ್ತು ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸ್ಥಾನ-ಮಾನದ ಕುರಿತಂತೆ ತನ್ನದೇ ಆದ ಆಸೆ-ಆಶೋತ್ತರಗಳನ್ನು ಹೊಂದಿದ್ದಾನೆ ಎನ್ನುವುದನ್ನು ಅಲಕ್ಷಿಸಲು ಸಾಧ್ಯವಿಲ್ಲ. ರಾಷ್ಟ್ರ ರಾಜಕಾರಣವನ್ನು ಕಾಡುತ್ತಿರುವ ವಂಶವಾದ, ಭ್ರಷ್ಟಾಚಾರದಿಂದ ಅಸಂತುಷ್ಟ ಗೊಂಡಿರುವ ಮತದಾರ ನಿಸ್ವಾರ್ಥವಾಗಿ ದುಡಿಯುವ ರಾಜಕೀಯ ನೇತೃತ್ವವನ್ನು ಅನುಸರಿಸುವ-ಆರಾಧಿಸುವ ಹೊಸ ಪರಿ(trend) ನಾವಿಂದು ಕಾಣುತ್ತಿದ್ದೇವೆ.

ರಾಷ್ಟ್ರದ ಭದ್ರತೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ವರ್ಚಸ್ಸು ಚುನಾವಣೆಯ ಈ ಹೊತ್ತಿನಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ ಎನ್ನುವುದು ಸ್ಪಷ್ಟ. ಕೆಲವು ರಾಜಕೀಯ ಪಕ್ಷಗಳು ಹೊಸ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫ‌ಲವಾಗಿವೆ. ಸೇನೆಯ ಶೌರ್ಯ-ಸಾಹಸ, ದೇಶಭಕ್ತಿಯ ಮೇಲೆ ಆದರವಿರುವ ಜನತೆಗೆ ಸ್ವಾರ್ಥ ರಾಜಕಾರಣಿಗಳ ಸೇನೆಯ ಟೀಕೆ ಸಮ್ಮತವಲ್ಲ.

ಸೇನೆಯ ವಿಶ್ವಾಸಾರ್ಹತೆ ಮತ್ತು ರಾಷ್ಟ್ರದ ಭದ್ರತೆಯಂತಹ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ಸಿನಿಕ ನಿಲುವು ಚುನಾವಣೆಯಲ್ಲಿ ಅವುಗಳಿಗೆ ಹಾನಿ ಮಾಡಬಹುದು ಎನ್ನುವುದರಲ್ಲಿ ಸಂದೇಹವಿಲ್ಲ. ಒಂದು ರಾಷ್ಟ್ರ ಪ್ರಗತಿಯ ಹಾದಿಯಲ್ಲಿ ಮುಂದುವರೆಯಬೇಕಾದರೆ ಆಂತರಿಕ ಹಾಗೂ ಬಾಹ್ಯ ಶತ್ರುಗಳ ಸವಾಲನ್ನು ಎದುರಿಸುವ ರಾಜಕೀಯ ನೇತೃತ್ವ ಇರಬೇಕೆಂಬುದನ್ನು ಇಂದಿನ ಮತದಾರರು ಚೆನ್ನಾಗಿ ಅರಿತಿದ್ದಾರೆ. ದೇಶದಲ್ಲಿ ಶಾಂತಿ, ಸ್ಥಿರತೆ ಇದ್ದರೆ ವಿದೇಶೀ ಬಂಡವಾಳ ಹರಿದು ಬರುವುದು ಸಾಧ್ಯ. ವ್ಯಾಪಾರ-ಉದ್ದಿಮೆಗಳಲ್ಲಿ ವೃದ್ಧಿ ಕಾಣಬಹುದು. ಆ ದೃಷ್ಟಿಯಲ್ಲಿ ದೇಶದ ಸುರಕ್ಷತೆ ಪ್ರಮುಖ ಅಂಶ ಎನ್ನುವುದು ನಿರ್ವಿವಾದ ಸಂಗತಿ.

ಯಾವ ರೀತಿಯಲ್ಲಿ ತುಷ್ಟೀಕರಣ ರಾಜಕಾರಣ ಅನುಸರಿಸಿದ ರಾಜಕೀಯ ಪಕ್ಷಗಳು ಕಾಲಾಂತರದಲ್ಲಿ ತಮ್ಮ ವರ್ಚಸ್ಸು ಬದಲಿಸಲು ಶತ ಪ್ರಯತ್ನ ಪಡಬೇಕಾಯಿತೋ ಅದೇ ರೀತಿಯಲ್ಲಿ ಸೇನೆ, ರಾಷ್ಟ್ರದ ಸುರಕ್ಷತೆ ವಿಷಯದಲ್ಲಿ ಲಘುವಾಗಿ ಮಾತನಾಡುವ ಪಕ್ಷಗಳು, ರಾಜಕಾರಣಿಗಳು ಚುನಾವಣೋತ್ತರದಲ್ಲಿ ಪಶ್ಚಾತ್ತಾಪ ಪಡಬೇಕಾಗಬಹುದು. ನವ ಭಾರತದ ಯುವ ಮತದಾರರ ಚಿಂತನೆ ಹೊಸ ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಎನ್ನುವುದರಲ್ಲಿ ಸಂದೇಹವಿಲ್ಲ.

ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next