Advertisement

ಹೊಸ ಮಾದರಿ: ಹೊಸ ಶೌಚಾಲಯಕ್ಕೆ ಎರಡು ಇಂಗುಗುಂಡಿ!

02:45 AM Nov 20, 2018 | Team Udayavani |

ವಿಶೇಷ ವರದಿ: ಸುಳ್ಯ: ವಿಶ್ವ ಶೌಚಾಲಯ ದಿನಚಾರಣೆ ಪ್ರಯುಕ್ತ ಹೊಸ ಮಾದರಿಯ ಶೌಚಾಲಯ ನಿರ್ಮಿಸಲು ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಅದರ ಪ್ರಕಾರ ಶೌಚಾಲಯ ಕಟ್ಟುವ ವೇಳೆ ಒಂದು ಇಂಗುಗುಂಡಿ ಬದಲು ಇನ್ನೂ ಮುಂದೆ ಎರಡು ಇಂಗು ಗುಂಡಿ ನಿರ್ಮಿಸಬೇಕಿದೆ..! ಸ್ವಚ್ಛತೆಯ ದೃಷ್ಟಿಯಲ್ಲಿಟ್ಟುಕೊಂಡು ಈ ಪರಿಕಲ್ಪನೆ ಜಾರಿ ಮಾಡಿದೆ. ಪ್ರತಿ ಶೌಚಾಲಯಕ್ಕೆ ಇನ್ನು ಎರಡು ಗುಂಡಿ ನಿರ್ಮಿಸಲು ಪ್ರೋತ್ಸಾಹ ನೀಡುವಂತೆ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ. ಶೌಚ ಗುಂಡಿ ತುಂಬಿ, ಅದರಿಂದ ತ್ಯಾಜ್ಯ ಹೊರ ಬಂದು ಪರಿಸರ ಮಾಲಿನ್ಯಕ್ಕೆ ಕಾರಣ ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿರುವ ಕಾರಣದಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರಕಾರ ಚಿಂತನೆ ನಡೆಸಿದೆ.

Advertisement

ಎರಡು ಇಂಗುಗುಂಡಿ ಸ್ವರೂಪ
ಈಗಿನ ನಿರ್ಮಾಣದಲ್ಲಿ ಶೌಚಾಲಯಕ್ಕೆ ಒಂದು ಇಂಗುಗುಂಡಿ ಇರುತ್ತದೆ. ಹೊಸ ಮಾದರಿಯ ಶೌಚಾಲಯದಲ್ಲಿ ಎರಡು ಇಂಗುಗುಂಡಿ ಇರಲಿದೆ. 4 ಅಡಿ ಅಗಲ, ಆಳದ ಎರಡು ಗುಂಡಿ ನಿರ್ಮಿಸಬೇಕು. ಎರಡು ಇಂಗುಗುಂಡಿ ಮಧ್ಯೆ1 ಮೀ.ನಷ್ಟು ಅಂತರ ಇರಬೇಕು. ಒಂದು ಅಡಿ ಉದ್ದ ಮತ್ತು ಅಗಲದ ಛೇಂಬರ್‌ ನಿರ್ಮಿಸಬೇಕು. ಛೇಂಬರ್‌ನಿಂದ 4 ಇಂಚಿನ ಪಿವಿಸಿ ಪೈಪುಗಳನ್ನು ವೈ ಆಕಾರದಲ್ಲಿ 2 ಗುಂಡಿಗಳಿಗೆ ಇಳಿಜಾರಾಗಿ ಜೋಡಿಸಬೇಕು. ಈ ಎರಡು ಹೊಂಡಗಳನ್ನು ಗಾಳಿಯಾಡದಂತೆ ಸಿಮೆಂಟ್‌ ಮುಚ್ಚಳ ಅಳವಡಿಸಬೇಕು. ಶೌಚ ಕೋಣೆ, ಬಾಗಿಲು ನಿರ್ಮಿಸಿ ಶೌಚ ಪ್ಯಾನ್‌ ಅನ್ನು ಪಿವಿಸಿ ಪೈಪು ಮೂಲಕ ಛೇಂಬರ್‌ಗೆ ಜೋಡಿಸಬೇಕಿದೆ. ಈ ಎರಡು ಹೊಂಡಗಳು ಕುಡಿಯುವ ನೀರಿನ ಬಳಕೆಯಿಂದ 3 ಮೀ.ದೂರದಲ್ಲಿ ಇರಬೇಕು.

ಪರಿಕಲ್ಪನೆಯ ಉದ್ದೇಶ
ಈ ಪರಿಕಲ್ಪನೆಯಡಿ ತ್ಯಾಜ್ಯ ಭೂಮಿಯಲ್ಲೇ ಉಳಿಯದೆ ಅದನ್ನು ಗೊಬ್ಬರ ರೂಪದಲ್ಲಿ ಮರು ಬಳಸುವ ಬಗ್ಗೆ ಯೋಜನೆಯಿದೆ. ಒಂದು ಹೊಂಡ ತುಂಬಿದ ಅನಂತರ ಇನ್ನೊಂದು ಹೊಂಡ ಬಳಕೆ ಮಾಡುವುದಾಗಿದೆ. ಒಂದು ಹೊಂಡ ಭರ್ತಿ ಆದಾಗ ಪಿಟ್‌ಗೆ ಮೊಹರು ಹಾಕಿ, ಇನ್ನೊಂದನ್ನು ಬಳಕೆಗೆ ತರಲಾಗುತ್ತದೆ. ಮೊಹರು ಮಾಡಿದ ಗುಂಡಿಯೊಳಗಿನ ಅಂಶಗಳು ಆಮ್ಲಜನಕರಹಿತ ಜೀರ್ಣಕ್ರಿಯೆ ಮೂಲಕ ವಿಭಭಜನಗೊಳ್ಳುತ್ತವೆ. ತುಂಬಿದ ಹೊಂಡದಿಂದ ಸಕ್ಕಿಂಗ್‌ ಯಂತ್ರದ ಮೂಲಕ ತ್ಯಾಜ್ಯ ಹೊರ ತೆಗೆದು ಅದನ್ನು ಮರು ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ.

ನಿರ್ಮಾಣಕ್ಕೆ ಬೇಕಾದ ಸಾಮಗ್ರಿ
ಹೊಸ ಆದರಿಯ ಶೌಚಗುಂಡಿ ಹಾಗೂ ಶೌಚಾಲಯ ನಿರ್ಮಾಣಕ್ಕೆ ಇಟ್ಟಿಗೆಗಳು ಅಥವಾ ಸಿಮೆಂಟ್‌ ರಿಂಗ್‌ಗಳು, ಮರಳು, ಸಿಮೆಂಟ್‌, ಸಿಮೆಂಟ್‌ ಅಥವಾ ತಗಡಿನ ಶೀಟ್‌, ಬಾಗಿಲು, ಕಬ್ಬಿಣ, ಜಲ್ಲಿಕಲ್ಲು, 4 ಇಂಚಿನ ಪಿವಿಸಿ ಪೈಪ್‌ (5 ಅಡಿ) ಇತ್ಯಾದಿಗಳು.

ಹೊಸ ಮಾದರಿಗೆ ಪ್ರೋತ್ಸಾಹ
ಕೇಂದ್ರ ಸರಕಾರದ ಸ್ವಚ್ಛ ಭಾರತ ಪರಿಕಲ್ಪನೆಯಡಿ ಎರಡು ಇಂಗುಗುಂಡಿ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ವಿಶ್ವ ಶೌಚಾಲಯ ದಿನಾಚರಣೆಯಂದು ಹೊಸ ಮಾದರಿ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಶೌಚಾಲಯ ನಿರ್ಮಿಸುವವರು ಹೊಸ ಮಾದರಿ ಬಳಸಲು ಪ್ರೋತ್ಸಾಹ ನೀಡಲಾಗುವುದು.
– ಭವಾನಿಶಂಕರ ಎನ್‌, ಸಹಾಯಕ ನಿರ್ದೇಶಕ, ಗ್ರಾಮೀಣ ಉದ್ಯೋಗ, ತಾ.ಪಂ. ಸುಳ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next