Advertisement

ಅರಣ್ಯದಂಚಿನ ಮಾಳದಹಾಡಿ ಮಂದಿಗೆ ಹೊಸ ಸೂರು

08:51 PM Feb 16, 2020 | Team Udayavani |

ಎಚ್‌.ಡಿ.ಕೋಟೆ: ಬಹು ವರ್ಷಗಳಿಂದ ಅರಣ್ಯದಂಚಿನಲ್ಲೇ ವಾಸವಾಗಿದ್ದರೂ ಸ್ವಂತ ಸೂರು ನಿರ್ಮಿಸಿಕೊಳ್ಳಲು ಅರಣ್ಯ ಕಾಯ್ದೆಯಡಿ ಅವಕಾಶ ವಂಚಿತರಾಗಿದ್ದ ತಾಲೂಕಿನ ಮಾಳದಹಾಡಿಯಲ್ಲಿ ನೂತನ 16 ಮನೆಗಳು ಮತ್ತು 1 ಅಂಗನವಾಡಿ ಕಟ್ಟಡದ ಕಾಮಗಾರಿಗೆ ಶಾಸಕ ಅನಿಲ್‌ ಚಿಕ್ಕಮಾದು ಚಾಲನೆ ನೀಡಿದರು.

Advertisement

ಶಾಸಕ ಅನಿಲ್‌ ಚಿಕ್ಕಮಾದು ಸರ್ಕಾರದ ಯೋಜನೆ ಜಾರಿಗೊಳಿಸಿ ಅರಣ್ಯದಂಚಿನಲ್ಲಿ ಅಂಗನವಾಡಿ ಮತ್ತು ನಿರ್ಮಾಣಕ್ಕೆ ಸಹಕಾರ ನೀಡಿದ್ದಕ್ಕೆ ಹರ್ಷಿತರಾದ ಹಾಡಿಯ ಮಂದಿ ಆರಂಭದಲ್ಲಿಯೇ ಶಾಸಕರಿಗೆ ಆರತಿ ಬೆಳಗೆ ಹಾಡಿಗೆ ಸ್ವಾಗತಿಸಿದರು.

ಏನದು ಕಾರ್ಯಕ್ರಮ?: ಸರ್ಕಾರದ ಯೋಜನೆಗಳು ಗ್ರಾಮೀಣ ಪ್ರದೇಶಗಳ ಜನರಿಗೆ ದಕ್ಕುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳ ಜನರು ಸವಲತ್ತು ವಂಚಿತರಾಗಿ ಮೂಲಭೂತ ಸೌಕರ್ಯಗಳಾದ ವಿದ್ಯುತ್‌, ಶಾಲೆ, ರಸ್ತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಲ್ಲದೆ ವಿಧವಾ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿ, ಹೆಲ್ತ್‌ಕಾರ್ಡ್‌ ವಿತರಣೆ, ಆಧಾರ್‌ ಕಾರ್ಡ್‌ ನೋಂದಣಿ ಸೇರಿದಂತೆ ಇನ್ನಿತರ ನೋಂದಣಿ ಸೇರಿದಂತೆ ಇನ್ನಿತರ ಸರ್ಕಾರಿ ಸವಲತ್ತುಗಳಿಗಾಗಿ ಆ ಭಾಗದ ಜನರು ತಾಲೂಕು ಕೇಂದ್ರ ಸ್ಥಾನಕ್ಕೆ ಆಗಮಿಸಬೇಕು.

ಈ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸುವ ನಿಟ್ಟಿನಲ್ಲಿ ತಾಲೂಕಿನ ಎನ್‌.ಬೆಳತ್ತೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶಾಸಕ ಅನಿಲ್‌ ಚಿಕ್ಕಮಾದು, ಮುಂಜಾನೆಯೇ ಮಾಳದ ಹಾಡಿಯಲ್ಲಿ ನೂತನ ಅಂಗನವಾಡಿ ಕಟ್ಟಡ ಮತ್ತು ಆರಂಭದಲ್ಲಿ 7 ಮನೆಗಳ ನಿರ್ಮಾಣ ಸೇರಿದಂತೆ ಹಾಡಿಯ ರಸ್ತೆ ಕಾಮಗಾರಿ ಸೇರಿ 50 ಲಕ್ಷ ಅಂದಾಜು ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಮಾನವೀಯತೆ ಮೆರೆದ ಶಾಸಕ: ಹಾಡಿಯಲ್ಲಿ ಹಲವು ದಿನಗಳಿಂದ ನಿತ್ರಾಣಗೊಂಡು ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ 108ಗೆ ಕರೆ ಮಾಡಿದರೂ ವಾಹನ ಲಭ್ಯವಾಗಿಲ್ಲ ಎನ್ನುವ ಹಾಡಿ ಮಹಿಳೆಯರ ಆರೋಪ ಆಲಿಸಿದ ಶಾಸಕರು ರೋಗಿ ಬಳಿ ಧಾವಿಸಿ, ಆತನ ಆರೋಗ್ಯ ವಿಚಾರಿಸಿ ಸ್ಥಳದಲ್ಲಿಯೇ ಆರೋಗ್ಯ ಇಲಾಖೆಗೆ ಕರೆ ಮಾಡಿ ರೋಗಿಯನ್ನು ಈ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

Advertisement

ಇದೇ ಸಂದರ್ಭದಲ್ಲಿ ಹಾಡಿಯ ಶುದ್ಧ ನೀರಿನ ಘಟಕ ನಿರ್ಮಾಣಗೊಂಡಾಗಿನಿಂದ ಕಾರ್ಯನಿರ್ವಹಿಸುತ್ತಿಲ್ಲ. ಕಲುಷಿತ ನೀರಿನ್ನೇ ಸೇವಿಸಬೇಕು ಅನ್ನುವ ಹಾಡಿ ಮಂದಿ ಆರೋಪ ಆಲಿಸಿ, ಕೂಡಲೇ ನೀರಿನ ಘಟಕ ದುರಸ್ತಿಗೊಳಿಸುವಂತೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿ ಶಾಸಕ ಮಾನವೀಯತೆ ಮರೆದರು.

ಕಲಿಕೆಗೆ ಆದ್ಯತೆ ನೀಡಿ: ಸರ್ಕಾರ ಆದಿವಾಸಿಗರ ಅಭಿವೃದ್ಧಿಗೆ ಅನುದಾನದ ಹೊಳೆಯನ್ನೇ ಹರಿಸುತ್ತಿದೆ. ಆದಿವಾಸಿಗರು ಯೋಜನೆಯ ಉಪಯೋಗ ಪಡೆದುಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಕಲಿಕೆಗೆ ಆದ್ಯತೆ ನೀಡಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಪೋಷಕರಿಗೆ ಕಿವಿ ಮಾತು ಹೇಳಿದ ಶಾಸಕರು, ಮಕ್ಕಳ ಬಗ್ಗೆ ಎಚ್ಚರವಹಿಸುವಂತೆ ಹಾಡಿ ಮಂದಿಯಲ್ಲಿ ಮನವಿ ಮಾಡಿಕೊಂಡಿದ್ದೇ, ಅಲ್ಲದೆ ಗಿರಿಜನ ಅಭಿವೃದ್ಧಿ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಮಸ್ಯೆಗಳ ಸಂದರ್ಭದಲ್ಲಿ ಹಾಡಿಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದಾರೆಯೇ ಎಂದು ಸಮಗ್ರ ಮಾಹಿತಿ ಪಡೆದುಕೊಂಡರು.

ಹೆಚ್ಚಿನ ಅನುದಾನ ಮಂಜೂರು: ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ಎಚ್‌.ಡಿ.ಕೋಟೆ ತೀರ ಹಿಂದುಳಿದ ತಾಲೂಕು ಅನ್ನುವ ಹಣೆಪಟ್ಟಿ ಕಳಚುವ ಸಲುವಾಗಿ ನನ್ನ ಅಧಿಕಾರವಧಿಯಲ್ಲಿ ಜನಪರ ಅಭಿವೃದ್ಧಿ ಕೆಲಸಗಳನ್ನು ನೆರವೇರಿಸಲು ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರು ಮಾಡಿಸುತ್ತಿದ್ದೇನೆ ಎಂದರು.

2 ದಿನ ಸವಲತ್ತು ವಿತರಣೆ: ಅದೇ ರೀತಿ ಗ್ರಾಮೀಣ ಭಾಗದ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ತಾಲೂಕಿನಲ್ಲಿ 3ನೇ ಗ್ರಾಮವಾಸ್ತವ್ಯ ಹೂಡಲು ಸಿದ್ಧತೆ ನಡೆದಿದ್ದು, ತಾಲೂಕಿನ ಜನರ ಮೂಲಭೂತ ಸಮಸ್ಯೆ ಪರಿಹರಿಸುವುದೇ ವಾಸ್ತವ್ಯದ ಉದ್ದೇಶ. ಎನ್‌.ಬೆಳತ್ತೂರು ಭಾಗದ ಉದೂರು ಗಿರಿಜನ ಆಶ್ರಯ ಶಾಲೆಯಲ್ಲಿ ವಾಸ್ತವ್ಯ ಹೂಡುವುದೇ ಅಲ್ಲದೆ ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಿಸುವ ಸಲುವಾಗಿ ಎನ್‌.ಬೆಳತ್ತೂರು ಗ್ರಾಮದಲ್ಲಿ 2 ದಿನಗಳ ಕಾಲ ಸರ್ಕಾರಿ ಸವಲತ್ತುಗಳ ವಿತರಣೆ ಮತ್ತು ನೋಂದಣಿ ಮಾಡಿಸುವುದಾಗಿ ತಿಳಿಸಿದರು.

ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ, ತಹಶೀಲ್ದಾರ್‌ ಆರ್‌.ಮಂಜುನಾಥ್‌, ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ, ನಿಂಗೇಗೌಡ, ಇಬ್ರಾಹಿಂ, ಸರ್ಕಲ್‌ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ ಸೇರಿದಂತೆ ಗ್ರಾಪಂ, ತಾಪಂ ಸದಸ್ಯರು ಪಾಲ್ಗೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಅಭಿಮಾನಿಗಳು ಗ್ರಾಮಸ್ಥರು ಹಾಜರಿದ್ದರು. ಎನ್‌.ಬೆಳತ್ತೂರು ಆಸುಪಾಸಿನ ಹಲವು ಗ್ರಾಮಗಳ ನೂರಾರು ಮಂದಿ ಸರ್ಕಾರಿ ಸವಲತ್ತುಗಳ ಮಂಜೂರಾತಿಗೆ ನೋಂದಣಿ ಮಾಡಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next