Advertisement

ಪಂಚತಂತ್ರ ಹುಡುಗನ ಹೊಸ ಚಿತ್ರ

10:30 AM Dec 11, 2019 | Lakshmi GovindaRaj |

ಯೋಗರಾಜ್‌ ಭಟ್‌ ಅವರ “ಪಂಚತಂತ್ರ’ ಚಿತ್ರದ ಬಳಿಕ ವಿಹಾನ್‌ ಗೌಡ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಚಿತ್ರಕ್ಕೆ ವಿಹಾನ್‌ ಗೌಡ ಹೀರೋ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಈ ಸಿನಿಮಾ ಮೂಲಕ ಎಂ.ಸುಭಾಶ್‌ ಚಂದ್ರ ನಿರ್ದೇಶಕರಾಗುತ್ತಿದ್ದಾರೆ. ಗ್ರೇಟ್‌ ಬ್ರೋಸ್‌ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು.

Advertisement

ಅಂದಹಾಗೆ, ನಿರ್ದೇಶಕ ಸುಭಾಶ್‌ಚಂದ್ರ ಅವರು ಈ ಹಿಂದೆ “ಕುರುಕ್ಷೇತ್ರ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅದಷ್ಟೇ ಅಲ್ಲ, ದರ್ಶನ್‌ ಅವರ ಅಫಿಷಿಯಲ್‌ ಫ್ಯಾನ್‌ಪೇಜ್‌ ಡಿಕಂಪನಿಯ ಅಡ್ಮಿನ್‌ ಆಗಿಯೂ ಕಳೆದ ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಸುಭಾಶ್‌ ಅವರ ಆಸಕ್ತಿ ನೋಡಿ ಸ್ವತಃ ದರ್ಶನ್‌ ಅವರೇ “ಕುರುಕ್ಷೇತ್ರ’ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದರು.

ಗ್ರೇಟ್‌ ಬ್ರೋಸ್‌ ಪಿಕ್ಚರ್ಸ್‌ ಸಂಸ್ಥೆಯನ್ನು ಸುಭಾಷ್‌ ಅವರೇ ಹುಟ್ಟುಹಾಕಿದ್ದಾರೆ. ಮಂಜುನಾಥ್‌ ಹಾಗು ರಾಜೇಂದ್ರ ಎಂ. ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಜನವರಿಯಲ್ಲಿ ಮುಹೂರ್ತ ನಡೆಯಲಿದೆ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ, ಹಾಗೂ ರಾಮನಗರದ ಸುತ್ತಮುತ್ತ ಚಿತ್ರೀಕರಣ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ.

ಇದೊಂದು 1990 ರಿಂದ 2019ರವರೆಗೆ ನಡೆಯುವ ಬರಹಗಾರನೊಬ್ಬನ ಜೀವನ ಹಾಗೂ ಆತನ ಮುಂದಿನ ಪೀಳಿಗೆ ಸಮಾಜವನ್ನು ಹೇಗೆ ಎದುರಿಸುತ್ತದೆ ಎಂಬ ವಿಷಯವನ್ನು ಆ್ಯಕ್ಷನ್‌ ಕಮ್‌ ಥ್ರಿಲ್ಲರ್‌ ಮೂಲಕ ಕಥೆ ಹೇಳಲಿದ್ದಾರಂತೆ ನಿರ್ದೇಶಕರು. ಪ್ರೀತಿಯ ಜೊತೆ ತಂದೆ-ಮಗನ ಸೆಂಟಿಮೆಂಟ್‌ ಕಥೆ ಕೂಡ ಈ ಚಿತ್ರದಲ್ಲಿದೆ. ಸದ್ಯಕ್ಕೆ ವಿಹಾನ್‌ಗೌಡ ಚಿತ್ರದ ಹೀರೋ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಸುರೇಶ್‌ ರಾಜ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next