Advertisement

ಉಪ ಚುನಾವಣೆಗೆ ಹೊಸ ಜಿಲ್ಲೆ ಪ್ರಸ್ತಾಪದ ಅಸ್ತ್ರ?

09:06 PM Oct 14, 2019 | Lakshmi GovindaRaju |

ಮೈಸೂರು: ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಹಿರಿಮೆ ಹೊಂದಿರುವ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ಜಿಲ್ಲೆಯನ್ನು ಮತ್ತೂಮ್ಮೆ ವಿಭಜಿಸುವಂತೆ ಒತ್ತಾಯ ಕೇಳಿಬಂದಿರುವುದರ ಹಿಂದೆ ರಾಜಕೀಯ ವಾಸನೆ ಹೊಡೆಯುತ್ತಿದೆ.

Advertisement

ಸುವರ್ಣ ಸ್ವಾತಂತ್ರ್ಯೋತ್ಸವದ ಉಡುಗೊರೆಯಾಗಿ 1997ರ ಆ. 15ರಂದು ಮೈಸೂರು ಜಿಲ್ಲೆಯನ್ನು ವಿಭಜಿಸಿ, ಚಾಮರಾಜ ನಗರವನ್ನು ಕೇಂದ್ರವಾಗಿಟ್ಟುಕೊಂಡು ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳನ್ನು ಸೇರಿಸಿ ಚಾಮರಾಜನಗರ ಜಿಲ್ಲೆಯನ್ನು ರಚಿಸಲಾಗಿದ್ದು, ಕಳೆದ ವರ್ಷ ಹನೂರು ಪಟ್ಟಣವನ್ನು ಹೊಸ ತಾಲೂಕಾಗಿ ಘೋಷಣೆಮಾಡಿರುವುದರಿಂದ ಚಾಮರಾಜ ನಗರ ಜಿಲ್ಲೆ ಐದು ತಾಲೂಕುಗಳನ್ನು ಒಳಗೊಂಡಂತಾಗಿದೆ.

ಅವಿಭಜಿತ ಮೈಸೂರು ಜಿಲ್ಲೆಯನ್ನು ವಿಭಜಿಸಿ ಚಾಮರಾಜ ನಗರ ಜಿಲ್ಲೆ ರಚಿಸಿದ ಬಳಿಕ ಮೈಸೂರು, ತಿ.ನರಸೀಪುರ, ನಂಜನಗೂಡು, ಕೆ.ಆರ್‌.ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್‌.ಡಿ.ಕೋಟೆ ತಾಲೂಕುಗಳು ಮೈಸೂರು ಜಿಲ್ಲೆಯಲ್ಲಿ ಉಳಿದಿದ್ದವು. ಹಿಂದಿನ ಸಿದ್ದರಾಮಯ್ಯ ಸರ್ಕಾರ ಎಚ್‌.ಡಿ.ಕೋಟೆ ತಾಲೂಕನ್ನು ವಿಭಜಿಸಿ ಹೊಸದಾಗಿ ಸರಗೂರು ತಾಲೂಕು ರಚನೆ ಮಾಡಿದರೆ, ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೆ.ಆರ್‌.ನಗರ ತಾಲೂಕನ್ನು ವಿಭಜಿಸಿ ಸಾಲಿಗ್ರಾಮ ತಾಲೂಕು ರಚನೆಯನ್ನು ಘೋಷಣೆ ಮಾಡಲಾಗಿದೆ.

ಹೊಸ ತಾಲೂಕುಗಳಾದ ಸರಗೂರು, ಸಾಲಿಗ್ರಾಮಗಳನ್ನು ಸೇರಿಸಿ ಆರು ತಾಲೂಕುಗಳನ್ನು ಮೈಸೂರು ಜಿಲ್ಲೆಯಿಂದ ವಿಭಜಿಸಿ ಹುಣಸೂರು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಿ, ಅದಕ್ಕೆ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಜಿಲ್ಲೆ ಎಂದು ನಾಮಕರಣ ಮಾಡುವಂತೆ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಸೋಮವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ರಾಜಕೀಯ ಉದ್ದೇಶವಿದೆಯೇ?: ಡಿ.ದೇವರಾಜ ಅರಸು ಅವರ ಗರಡಿಯಲ್ಲಿ ಬೆಳೆದ ಎಚ್‌.ವಿಶ್ವನಾಥ್‌ ಅವರು ಕಾಂಗ್ರೆಸ್‌ನಿಂದ ಹೊರಬಂದ ನಂತರ ಜೆಡಿಎಸ್‌ ಸೇರಿ ತಮ್ಮ ಕಾರ್ಯಕ್ಷೇತ್ರವನ್ನು ಹುಣಸೂರಿಗೆ ಬದಲಾಯಿಸಿಕೊಂಡು 2018ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾರೂಢ ಪಕ್ಷದ ರಾಜ್ಯಾಧ್ಯಕ್ಷರಾಗಿ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಬಂಡಾಯವೆದ್ದು,

Advertisement

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿ, ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್‌ ತಮ್ಮನ್ನು ಅನರ್ಹಗೊಳಿಸಿದ್ದರ ವಿರುದ್ಧ ಕಾನೂನು ಹೋರಾಟ ನಡೆಸುತ್ತಿರುವಾಗಲೇ, ಎದುರಾಗಿರುವ ಉಪ ಚುನಾವಣೆ ವೇಳೆ ಸದ್ಯ ಉಪ ವಿಭಾಗ ಕೇಂದ್ರವಾಗಿರುವ ಹುಣಸೂರನ್ನು ಹೊಸ ಜಿಲ್ಲೆಯಾಗಿ ಘೋಷಣೆ ಮಾಡುವಂತೆ ಮನವಿ ಮಾಡಿರುವುದು ಕುತೂಹಲ ಮೂಡಿಸಿದೆ.

ಅರಸು ಹೆಸರಿನ ಹೊಸ ದಾಳ: ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಲೇ ತಮ್ಮ ಕಾರ್ಯಕ್ಷೇತ್ರ ಹುಣಸೂರನ್ನು ಜಿಲ್ಲಾ ಕೇಂದ್ರವಾಗಿಸಲು ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೆಲ ಗ್ರಾಮಗಳು, ಕೊಡಗು ಜಿಲ್ಲೆ ಕುಶಾಲನಗರ ಭಾಗದ ಕೆಲ ಹಳ್ಳಿಗಳನ್ನು ಸೇರ್ಪಡೆ ಮಾಡಲು ಉದ್ದೇಶಿಸಿದ್ದರು ಎನ್ನಲಾಗಿದೆ. ಆದರೆ, ಕೊಡಗು ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತವಾದ್ದರಿಂದ ಅರಸರು ತಮ್ಮ ಪ್ರಯತ್ನ ಕೈಬಿಟ್ಟಿದ್ದರು ಎನ್ನಲಾಗುತ್ತಿದೆ. ಅಲ್ಲಿಂದೀಚೆಗೆ ಹುಣಸೂರು ಜಿಲ್ಲೆ ರಚನೆಗೆ ದೊಡ್ಡಮಟ್ಟದಲ್ಲಿ ಕೂಗು ಕೇಳಿಬಂದಿಲ್ಲ.

ಜತೆಗೆ ಎಚ್‌.ವಿಶ್ವನಾಥ್‌ 14 ತಿಂಗಳು ಇದೇ ಕ್ಷೇತ್ರದ ಶಾಸಕರಾಗಿ, ತಮ್ಮದೇ ಪಕ್ಷ ಅಧಿಕಾರದಲ್ಲಿದ್ದಾಗ, ಆಡಳಿತಾರೂಢ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಹೊಸ ಜಿಲ್ಲೆಯ ಪ್ರಸ್ತಾಪ ಮಾಡದವರು ಈಗ ಜನಾಭಿಪ್ರಾಯ ಕೇಳದೆ ಏಕಾಏಕಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವುದರ ಹಿಂದೆ ರಾಜಕೀಯ ಕಾರಣಗಳಿದೆ. ಮುಂಬರುವ ಉಪ ಚುನಾವಣೆಗೆ ದೇವರಾಜ ಅರಸರ ಹೆಸರು ಬಳಸಿಕೊಳ್ಳಲು ಈ ದಾಳ ಉರುಳಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಹೊಸ ಜಿಲ್ಲೆಯಾದರೆ ಇರುವ ಅವಕಾಶ: ರಾಜಕೀಯ ಆರೋಪಗಳನ್ನು ಬದಿಗಿಟ್ಟು ನೋಡುವುದಾದರೆ ಈಗಾಗಲೇ ಈ ಆರು ತಾಲೂಕುಗಳಿಗೆ ಉಪ ವಿಭಾಗದ ಕೇಂದ್ರ ಸ್ಥಾನವಾಗಿರುವ ಹುಣಸೂರಿಗೆ ಹೊಸ ಜಿಲ್ಲೆಯಾಗುವ ಅವಕಾಶಗಳು ಹೆಚ್ಚಿವೆ. ಅರೆ ಮಲೆನಾಡು ಪ್ರದೇಶವಾದ ಹುಣಸೂರು ತಾಲೂಕಿನಲ್ಲಿ ಟಿಬೇಟಿಯನ್ನರು, ಆದಿವಾಸಿ ಜನಾಂಗ ಸೇರಿದಂತೆ ಎಲ್ಲ ತರದ ಜನರು ವಾಸಿಸುತ್ತಿದ್ದು, ತೇಗ (ಹುಣಸೂರು ಟೀಕ್‌)ಕ್ಕೆ ಹೆಸರುವಾಸಿಯಾದ ಹುಣಸೂರು ಪ್ರವಾಸೋದ್ಯಮಕ್ಕೂ ಹೇಳಿ ಮಾಡಿಸಿದ ತಾಣ, ಕೊಡಗು ಜಿಲ್ಲೆ,

ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳುವವರು ಹುಣಸೂರು ಮೂಲಕವೇ ಹಾದು ಹೋಗಬೇಕು. ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಕಬಿನಿ ಜಲಾಶಯವಿದ್ದರೆ, ಹುಣಸೂರು ತಾಲೂಕಿಗೆ ಹೊಂದಿಕೊಂಡಂತಿರುವ ಕೆಆರ್‌ಎಸ್‌ ಹಿನ್ನೀರು ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜತೆಗೆ ಹೊಸ ಜಿಲ್ಲೆಗೆ ಉದ್ದೇಶಿತ ಎಲ್ಲ ತಾಲೂಕುಗಳು ಸಹ 25 ರಿಂದ 30 ಕಿ.ಮೀ ಅಂತರದಲ್ಲಿರುವುದರಿಂದ ಆಡಳಿತಾತ್ಮಕವಾಗಿಯೂ ಅನುಕೂಲವಾಗುತ್ತದೆ. ಆದರೆ, ವಿಶ್ವನಾಥ್‌ ಅವರ ಮನವಿ ರಾಜಕೀಕರಣಗೊಳ್ಳದೆ ಉದ್ದೇಶ ಸಫ‌ಲವಾಗುತ್ತದೆಯೇ ನೋಡಬೇಕು.

ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರನ್ನು ಜಿಲ್ಲೆ ಮಾಡುವ ಅವಶ್ಯಕತೆ ಇಲ್ಲ. 30 ಕಿ.ಮೀ. ಗೊಂದು ಹೊಸ ಜಿಲ್ಲೆ ಮಾಡೋಕಾಗುತ್ತಾ? ಮೈಸೂರು ಜಿಲ್ಲೆ ಈಗ ಆರು ತಾಲೂಕುಗಳನ್ನು ಒಳಗೊಂಡಿದೆ. ಮುಂದೆ ಮೂರು ತಾಲೂಕಿಗೊಂದು ಜಿಲ್ಲೆ ಮಾಡಲಾಗುತ್ತಾ? ವೈಜ್ಞಾನಿಕವಾಗಿಯೂ ಇದು ಸರಿಯಲ್ಲ. ರಾಜಕೀಯ ಉದ್ದೇಶಕ್ಕಾಗಿ ಕೆಲವರು ಹುಣಸೂರನ್ನು ಜಿಲ್ಲೆ ಮಾಡಿ ಎಂದು ಕೇಳಿರಬಹುದು.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕರು

ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಹೊಸ ಜಿಲ್ಲೆಯನ್ನಾಗಿ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಮನವಿ ಮಾಡಿದ್ದೇನೆ. 6 ತಾಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆಯನ್ನಾಗಿಸಿ,ಅದಕ್ಕೆ ದಿ.ಡಿ. ದೇವರಾಜ ಅರಸು ಅವರ ಹೆಸರಿಡಬೇಕು. ಪ್ರತ್ಯೇಕ ಜಿಲ್ಲೆ ಸಂಬಂಧ ಶೀಘ್ರದಲ್ಲೇ ಜನಪ್ರತಿನಿಧಿಗಳು, ಸಾರ್ವಜನಿಕರು , ಸಂಘಸಂಸ್ಥೆಗಳವರ ಸಭೆ ಕರೆದು ಚರ್ಚಿಸಿ ತೀರ್ಮಾನಿಸಲಾಗುವುದು.
-ಎಚ್‌.ವಿಶ್ವನಾಥ್‌, ಮಾಜಿ ಸಚಿವರು

14 ತಿಂಗಳು ಹುಣಸೂರು ಕ್ಷೇತ್ರದ ಶಾಸಕರಾಗಿದ್ದಾಗ ಈ ಬಗ್ಗೆ ಧ್ವನಿ ಎತ್ತದೆ, ಮುಂಬೈಗೆ ಹಾರಿ ಹೋಗಿದ್ದಾಗ ಹೊಸ ಜಿಲ್ಲೆ ಮಾಡಬೇಕೆನ್ನುವುದು ನೆನಪಿಗೆ ಬರಲಿಲ್ಲವೇ? ಹುಣಸೂರು ಕೇಂದ್ರವಾಗಿಟ್ಟುಕೊಂಡು ಹೊಸ ಜಿಲ್ಲೆ ಮಾಡುವ ಪ್ರಸ್ತಾಪ ಮುಂದಿಟ್ಟರೆ ಚುನಾವಣೆ ಗೆಲ್ಲಬಹುದು ಎಂಬುದು ಅವರ ಪ್ಲ್ರಾನ್‌. ಸಿಎಂ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಈ ರೀತಿಯ ರಾಜಕೀಯ ಗಿಮಿಕ್‌ ಮಾಡಿದ್ದಾರೆ.
-ಸಾ.ರಾ.ಮಹೇಶ್‌, ಮಾಜಿ ಸಚಿವರು

ಹುಣಸೂರನ್ನು ಜಿಲ್ಲೆ ಮಾಡುವುದಕ್ಕೆ ಆಕ್ಷೇಪಣೆ ಇಲ್ಲ. ಹೊಸ ಜಿಲ್ಲೆಗೆ ದೇವರಾಜ ಅರಸರ ಹೆಸರಿಡುವುದು ಕೂಡ ಸೂಕ್ತ. ಆದರೆ, ಈ ಹಿಂದಿನ ಸರ್ಕಾರಗಳು ಘೋಷಣೆ ಮಾಡಿರುವ ಸರಗೂರು, ಸಾಲಿಗ್ರಾಮ ಹೊಸ ತಾಲೂಕುಗಳಿಗೆ ಅನುದಾನಕೊಟ್ಟು, ಮೂಲಭೂತ ಸೌಕರ್ಯಕಲ್ಪಿಸಿ, ಅಭಿವೃದ್ಧಿಪಡಿಸಿದ ನಂತರ ಜಿಲ್ಲೆ ಮಾಡಿದರೆ ಅನುಕೂಲ.
-ಅನಿಲ್‌ ಚಿಕ್ಕಮಾದು, ಶಾಸಕರು, ಎಚ್‌.ಡಿ.ಕೋಟೆ

ಮೈಸೂರಿಗೆ ಒಂದು ಹಿನ್ನೆಲೆ ಇದೆ. ಮೈಸೂರಿಗರು ಎಂದು ಹೇಳಿಕೊಳ್ಳುವುದೇ ಹೆಮ್ಮೆ. ಇಂತಹ ಮೈಸೂರು ಜಿಲ್ಲೆ ವಿಭಜಿಸಿ ಹುಣಸೂರು ಜಿಲ್ಲೆ ಮಾಡುವಂತೆ ಜನರ ಒತ್ತಾಯವೂ ಕೇಳಿಬಂದಿಲ್ಲ. ಜನಾಭಿಪ್ರಾಯವನ್ನೇ ಕೇಳದೆ, ಇವರ ಅಭಿಪ್ರಾಯವನ್ನು ಜನರ ಮೇಲೆ ಹೇರುವುದು ಸರಿಯಲ್ಲ. ಸಂಘಸಂಸ್ಥೆಗಳ ಜತೆ ಚರ್ಚಿಸಿ ಮುಂದುವರಿಯಬೇಕಿತ್ತು.
-ಡಾ.ವೈ.ಡಿ.ರಾಜಣ್ಣ, ಅಧ್ಯಕ್ಷರು, ಜಿಲ್ಲಾ ಕಸಾಪ

ಇದು ಹಳೆಯ ಬೇಡಿಕೆ. ಉಪ ವಿಭಾಗದ ಅಭಿವೃದ್ಧಿ ದೃಷ್ಟಿಯಿಂದ ಹುಣಸೂರು ಜಿಲ್ಲೆಯಾಗುವುದು ಸೂಕ್ತ. ಹೊಸ ಜಿಲ್ಲೆಗೆ ದೇವರಾಜ ಅರಸರ ಹೆಸರಿಡುವುದರಿಂದ ವಿಶ್ವನಾಥ್‌ ಅವರು ತಮ್ಮ ರಾಜಕೀಯ ಗುರುಗಳನ್ನೂ ನೆನಸಿಕೊಂಡಂತಾಗುತ್ತದೆ. ಆದರೆ, ಈ ವಿಷಯ ಉಪ ಚುನಾವಣೆಯ ಗಿಮಿಕ್‌ ಆಗಬಾರದು. ಮುಖ್ಯಮಂತ್ರಿಯವರ ಮೇಲೆ ಒತ್ತಡ ಹೇರಿ ಕೆಲಸ ಮಾಡಿಸಬೇಕು.
-ಡಾ.ಎಸ್‌.ಶ್ರೀಕಾಂತ್‌, ನಿರ್ದೇಶಕರು, ಡೀಡ್‌ ಸಂಸ್ಥೆ, ಹುಣಸೂರು

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next