Advertisement

ಹೊಸ ಜಿಲ್ಲೆ: ಕೈ-ದಳ ತಳಮಳ

09:57 AM Nov 29, 2019 | Team Udayavani |

ಮೈಸೂರು: ಜೆಡಿಎಸ್‌ ಶಾಸಕ ಅಡಗೂರು ಎಚ್‌.ವಿಶ್ವನಾಥ್‌ ಅವರ ರಾಜೀನಾಮೆಯಿಂದ ತೆರವಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರಕ್ಕೆ ಡಿ.5ರಂದು ನಡೆಯಲಿರುವ ಉಪ ಚುನಾವಣೆಯ ಕಣ ರಂಗೇರಿದೆ. 2018ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಮತ್ತೆ ಕಣಕ್ಕಿಳಿದಿದ್ದರೆ, ಜೆಡಿಎಸ್‌ನಿಂದ ಹೊಸ ಮುಖ, ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಕಣದಲ್ಲಿದ್ದಾರೆ.

Advertisement

ಸಿದ್ದರಾಮಯ್ಯ ಅವರ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್‌ನಿಂದ ಹೊರ ಬಂದು ಜೆಡಿಎಸ್‌ ಸೇರಿ, ಪಕ್ಕದ ಕೆ.ಆರ್‌.ನಗರ ಕ್ಷೇತ್ರದಿಂದ ಹುಣಸೂರಿಗೆ ವಲಸೆ ಬಂದ ಹಳ್ಳಿಹಕ್ಕಿ ಎಚ್‌.ವಿಶ್ವನಾಥ್‌, ಸಿದ್ದರಾಮಯ್ಯ ಶಿಷ್ಯ ಎಚ್‌. ಪಿ.ಮಂಜುನಾಥ್‌ ವಿರುದ್ಧ 8,575 ಮತಗಳ ಅಂತರ ದಿಂದ ಗೆಲುವಿನ ನಗೆ ಬೀರಿದ್ದರು. ಆ ಮೂಲಕ 2008, 2013ರ ಚುನಾವಣೆಗಳಲ್ಲಿ ಸತತವಾಗಿ ಗೆದ್ದು 2018ರ ಚುನಾವಣೆಯಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಎಚ್‌.ಪಿ.ಮಂಜುನಾಥ್‌ಗೆ ನಿರಾಸೆ ಮೂಡಿಸಿದ್ದರು.

ಜೆಡಿಎಸ್‌ ರಾಜ್ಯಾಧ್ಯಕ್ಷರಾಗಿದ್ದರೂ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯಿಂದ ಅಸಮಾಧಾನಗೊಂಡು ಕಾಂಗ್ರೆಸ್‌ನ ಅತೃಪ್ತ ಶಾಸಕರ ಜತೆ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 14 ತಿಂಗಳಿಗೇ ದೋಸ್ತಿ ಸರ್ಕಾರವನ್ನು ಬೀಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಶ್ವನಾಥ್‌, ನಿರೀಕ್ಷೆಯಂತೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ದೋಸ್ತಿ ಸರ್ಕಾರ ಪತನವಾಗಿ ರಾಜ್ಯದಲ್ಲಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾದವರನ್ನು ಮಂತ್ರಿ ಮಾಡುವುದಾಗಿ ಹೇಳಲಾಗಿತ್ತು.

ಹೀಗಾಗಿ, ಎಚ್‌.ವಿಶ್ವನಾಥ್‌ ಉಪ ಚುನಾ ವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿಸಿ ಮಂತ್ರಿ ಮಾಡಲಾಗುತ್ತದೆ ಎಂದು ಹೇಳ ಲಾಗಿತ್ತಾದರೂ ಸುಪ್ರೀಂಕೋರ್ಟ್‌ ವಿಧಾನಸಭೆ ಸ್ಪೀಕರ್‌ ನೀಡಿದ್ದ ಅನರ್ಹತೆ ರೂಲಿಂಗ್‌ನ್ನು ಎತ್ತಿ ಹಿಡಿದು ನೇರ ಚುನಾವಣೆಯಲ್ಲಿ ಗೆದ್ದು ಬಂದ ನಂತರವೇ ಮಂತ್ರಿಯಾ ಗಬೇಕು ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ ಅಂತಿಮ ವಾಗಿ ಎಚ್‌.ವಿಶ್ವನಾಥ್‌ ಕಣಕ್ಕಿಳಿಯುವಂತಾಗಿದೆ.

ನುಂಗಲಾರದ ತುತ್ತು: ಉಪ ಚುನಾವಣೆಯ ಹೊಸ್ತಿಲಲ್ಲೇ ಎಚ್‌.ವಿಶ್ವನಾಥ್‌ ಅವರು ಹುಣಸೂರು ಉಪ ವಿಭಾಗವನ್ನು ಹೊಸ ಜಿಲ್ಲೆ ಮಾಡಿಸಿ, ಡಿ.ದೇವರಾಜ ಅರಸು ಜಿಲ್ಲೆ ಎಂದು ನಾಮಕರಣ ಮಾಡಿಸುವುದಾಗಿ ನೀಡಿದ ಹೇಳಿಕೆ ಕಾಂಗ್ರೆಸ್‌-ಜೆಡಿಎಸ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೊಸ ಜಿಲ್ಲೆ ಪ್ರಸ್ತಾಪವನ್ನು ಬೆಂಬಲಿಸುವಂತೆಯೂ ಇಲ್ಲ, ಅಲ್ಲಗಳೆಯಲೂ ಆಗದಂತಾಗಿದೆ. ಎಚ್‌.ವಿಶ್ವನಾಥ್‌ ಹೊಸ ಜಿಲ್ಲೆ ಕನಸು ಬಿತ್ತುತ್ತಿದ್ದರೆ, ಕಾಂಗ್ರೆಸ್‌-ಜೆಡಿಎಸ್‌ ಅಭ್ಯರ್ಥಿಗಳು ಮತ್ತು ಆ ಪಕ್ಷದ ನಾಯಕರು ಇನ್ನೂ ಅನರ್ಹತೆ, ಪಕ್ಷಾಂತರ ವಿಷಯವನ್ನೇ ಜನರ ಮುಂದಿಡುತ್ತಿದ್ದಾರೆ.

Advertisement

ಎಚ್‌.ವಿಶ್ವನಾಥ್‌ ಅವರು ಕಾರ್ಯತಂತ್ರದ ಜತೆಗೆ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ಕ್ಷೇತ್ರದಲ್ಲಿ ಬೂತ್‌ಮಟ್ಟದ ಶಕ್ತಿ ಕೇಂದ್ರಗಳ ಮೂಲಕ ತಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ.ಮಂಜುನಾಥ್‌ ಸಹ ಜಾತಿವಾರು ಮತಬೇಟೆಯಲ್ಲಿ ತೊಡಗಿದ್ದರೆ, ಜೆಡಿಎಸ್‌ ಅಭ್ಯರ್ಥಿ ದೇವರಹಳ್ಳಿ ಸೋಮಶೇಖರ್‌, ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಂತೆ ಕಂಡರೂ ಕಾಂಗ್ರೆಸ್‌-ಬಿಜೆಪಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಒಕ್ಕಲಿಗ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದಂತೂ ಸತ್ಯ.

ಕಣದಲ್ಲಿದ್ದಾರೆ 10 ಅಭ್ಯರ್ಥಿಗಳು: ಕಣದಲ್ಲಿರುವ ಹತ್ತು ಅಭ್ಯರ್ಥಿಗಳಲ್ಲಿ ಮೂರು ಪ್ರಮುಖ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ಪೈಕಿ, ಕಳೆದ ಬಾರಿ ಎದುರಾಳಿಗಳಾಗಿದ್ದ ಅಡಗೂರು ಎಚ್‌.ವಿಶ್ವನಾಥ್‌ ಮತ್ತು ಎಚ್‌.ಪಿ.ಮಂಜುನಾಥ್‌ ಮತ್ತೆ ಎದುರಾಳಿಗಳಾಗಿದ್ದಾರೆ. ಆದರೆ, ಕಳೆದ ಬಾರಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಅಡಗೂರು ಎಚ್‌.ವಿಶ್ವನಾಥ್‌ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಜೆಡಿಎಸ್‌ನಿಂದ ಹೊಸ ಮುಖ, ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಎಂಬುವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌ ಅವರನ್ನೇ ಕಣಕ್ಕಿಳಿಸಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್‌.ಪಿ.ಮಂಜುನಾಥ್‌ ಮತ್ತು ಜೆಡಿಎಸ್‌ನ ಅಡಗೂರು ಎಚ್‌.ವಿಶ್ವನಾಥ್‌ ನಡುವೆ ಸ್ಪರ್ಧೆ ನಡೆದು, 8,575 ಮತಗಳ ಅಂತರದಿಂದ ಎಚ್‌.ವಿಶ್ವನಾಥ್‌ ಜಯ ಸಾಧಿಸಿದ್ದರು.

ಒಕ್ಕಲಿಗರು, ವೀರಶೈವ-ಲಿಂಗಾಯಿತರ ಮತಗಳು ನಿರ್ಣಾಯಕ: ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯ ತನ್ನ ಸಾಂಪ್ರದಾಯಿಕ ಮತಬ್ಯಾಂಕ್‌ ಎಂದು ಕಾಂಗ್ರೆಸ್‌ ಪಕ್ಷ ಹೇಳಿಕೊಂಡರೂ ಇತ್ತೀಚಿನ ಚುನಾವಣೆಗಳಲ್ಲಿ ಈ ವರ್ಗದ ಮತಗಳು ಮೂರು ಪಕ್ಷಗಳಿಗೂ ಹಂಚಿಕೆಯಾಗುತ್ತಿವೆ. ಹೀಗಾಗಿ, ಒಕ್ಕಲಿಗರು ಮತ್ತು ವೀರಶೈವ-ಲಿಂಗಾಯಿತರ ಮತಗಳು ಯಾವುದೇ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

ಕ್ಷೇತ್ರದ ಇತಿಹಾಸ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡ ಹುಣಸೂರು ತೇಗದ ನಾಡು ಎಂದೇ ಪ್ರಸಿದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ರೈತರ ಪ್ರಮುಖ ವಾಣಿಜ್ಯ ಬೆಳೆ ತಂಬಾಕು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಸಾಮಾಜಿಕ ಅಭಿವೃದ್ಧಿಯ ಹರಿಕಾರ ಎಂದೇ ಗುರುತಾಗಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕರ್ಮಭೂಮಿ ಹುಣಸೂರು. ಸ್ವಾತಂತ್ರ್ಯ ನಂತರ 1952ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿಧಾನಸಭೆ ಪ್ರವೇಶಿದ ಡಿ.ದೇವರಾಜ ಅರಸು ಅವರು, 1957, 1962, 1967ರಲ್ಲಿ ಸತತವಾಗಿ ಆಯ್ಕೆಯಾಗಿದ್ದರು. 1972ರ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ, 1977ರವರೆಗೆ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಪೂರ್ಣಾವಧಿ ಕಾರ್ಯ ನಿರ್ವಹಿಸಿದ್ದರು. 1978ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರೂ ಪಕ್ಷದಲ್ಲಿನ ಆಂತರಿಕ ಕಲಹದಿಂದ ಎರಡೇ ವರ್ಷಕ್ಕೆ 1980ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.

ಪ್ರಮುಖ ವಿಷಯ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ನಾಯಕರು ಶಾಸಕರ ಅನರ್ಹತೆ, ಪಕ್ಷಾಂತರ ವಿಷಯವನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆ ಎದುರಿಸುತ್ತಿರುವ ಅಡಗೂರು ಎಚ್‌.ವಿಶ್ವನಾಥ್‌, ಚುನಾವಣಾ ಪ್ರಚಾರದಲ್ಲಿ ವಿರೋಧಿಗಳ ಟೀಕೆಗಳಿಗೆ ಸಾಂದರ್ಭಿಕವಾಗಿ ತಿರುಗೇಟು ನೀಡಿದರೂ, ಅಭಿವೃದ್ಧಿ ವಿಚಾರದ ಪ್ರಸ್ತಾಪಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿದ್ದಾರೆ.

ಜಾತೀವಾರು ಲೆಕ್ಕಾಚಾರ
ಪರಿಶಿಷ್ಟ ಜಾತಿ-55,000
ಪರಿಶಿಷ್ಟ ಪಂಗಡ-40,000
ಒಕ್ಕಲಿಗರು-44,000
ಕುರುಬರು-35,000
ವೀರಶೈವ-ಲಿಂಗಾಯಿತರು-20,000
ಅಲ್ಪಸಂಖ್ಯಾತರು-20000
ಇತರರು-22,000
ಒಟ್ಟು-2,27,974

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next