Advertisement

ನೆಹರು ತಾರಾಲಯದಲ್ಲಿ ನಭೋಮಂಡಲ ದರ್ಶನ

12:09 PM Jan 18, 2017 | |

ಬೆಂಗಳೂರು: ರಾತ್ರಿಯಾಗುತ್ತಿದ್ದಂತೆ ಪ್ರತ್ಯಕ್ಷವಾಗುವ ನಕ್ಷತ್ರಗಳ ಸಂಚಾರ ಹೇಗಿರು ತ್ತದೆ? ಉಪಗ್ರಹದಿಂದ ನೋಡಿದರೆ ಸೂರ್ಯ ಹೇಗೆ ಕಾಣಿಸುತ್ತಾನೆ?  ಕಪ್ಪುರಂಧ್ರ ಸೃಷ್ಟಿಯಾಗಿದ್ದಾದರೂ ಹೇಗೆ? ಆಕಾಶಕಾಯಗಳು ಪರಸ್ಪರ ಡಿಕ್ಕಿ ಹೊಡೆದಾಗ ನಭದಲ್ಲಾಗುವ ಸಂಚಲನ ಎಂತಹದ್ದು? ಶನಿಗ್ರಹದ ಉಂಗುರಗಳನ್ನು ಕಾಣಬಹುದೇ? ನಭೋ ಮಂಡಲದ ಇಂತಹ ನೂರಾರು ಪ್ರಶ್ನೆಗಳಿಗೆ ಪಠ್ಯದಲ್ಲಿ ಉತ್ತರ ಸಿಕ್ಕಿರಬಹುದು.

Advertisement

ಇಂಟರ್‌ನೆಟ್‌ನಲ್ಲಿ ಫೋಟೋಗ ಳನ್ನೂ ನೋಡಿರಬಹುದು. ಆದರೆ, ಆ ವಿಸ್ಮಯ ಲೋಕದಲ್ಲೇ ನೀವು ಸಂಚರಿಸಿ ದರೆ ಹೇಗಿರುತ್ತದೆ? ಕಲ್ಪನೆಯೇ ರೋಮಾಂಚಕಾರಿಯಾಗಿದೆ ಅಲ್ಲವೇ? ಆ ಸ್ವ-ಅನುಭವ ನೀಡಲು ಜವಾಹರ ಲಾಲ್‌ ನೆಹರು ತಾರಾಲಯ ಸಜ್ಜಾಗಿದೆ. ಭೂಮಿಯ ಮೇಲೆ ಕಾಣಲು ಸಾಧ್ಯವೇ ಆಗದ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ತಾರಾಲಯದಲ್ಲಿ ಕಾಲ್ಪನಿಕ “ಗಗನ ಯಾತ್ರೆ’ ವ್ಯವಸ್ಥೆ ಕಲ್ಪಿಸಲಾಗಿದೆ. ಅಷ್ಟೇ ಯಾಕೆ, ಭೂಮಿಯಿಂದ ಹೊರಗೆ ನಿಂತು ತಿರುಗಿ ನೋಡಿದಾಗ ಕಾಣುವ ಅಪೂರ್ವ ನೋಟವೂ ಅಲ್ಲಿದೆ. 

ಹೌದು, ನೆಹರು ತಾರಾಲಯ ಆಪ್ಟೋ ಮೆಕಾನಿಕಲ್‌ ಪ್ರೊಜೆಕ್ಷನ್‌ನಿಂದ ಹೈಬ್ರಿಡ್‌ ಪ್ರೊಜೆಕ್ಷನ್‌ಗೆ ಪರಿವರ್ತನೆಗೊಂಡಿದೆ. ಈ ಡಿಜಿಟಲ್‌ ತಂತ್ರಜ್ಞಾನದಿಂದ ಪರದೆ ಮೇಲೆ ಮೂಡುವ ನೈಜ ಚಿತ್ರಗಳು ಅಕ್ಷರಶಃ ಪ್ರೇಕ್ಷಕರರು ಬಾಹ್ಯಾಕಾಶದಲ್ಲಿ ತೇಲುವಂತೆ ಮಾಡುತ್ತವೆ. ಕಳೆದ ಹಲವು ದಶಕಗಳಲ್ಲಿ ಬಾಹ್ಯಾಕಾಶ ಯಾನಗಳು ಒದಗಿಸಿರುವ ದೃಶ್ಯಗಳನ್ನು ಆಧರಿಸಿ ನಭದಲ್ಲಿ ನಡೆಯುವ ವಿಸ್ಮಯಗಳನ್ನು ಈ ಹೈಬ್ರಿಡ್‌ ಪ್ರೊಜೆಕ್ಷನ್‌ ವ್ಯವಸ್ಥೆಯಲ್ಲಿ 35 ನಿಮಿಷದ ಪ್ರದರ್ಶನದಲ್ಲಿ ಕಾಣಬಹುದು.

ಈ ಪ್ರದರ್ಶನ ಉಪಗ್ರಹದಲ್ಲಿ ಸೆರೆಹಿಡಿದ ಸೂರ್ಯನ ಒಳಭಾಗ, ಶನಿಯ ಉಂಗುರಗಳ ಸಮೀಪದ ದರ್ಶನ, ಅತಿ ದೊಡ್ಡದಾದ ಗುರುಗ್ರಹ, ಉಪಗ್ರಹದ ಯಾನ, ಕಪ್ಪುರಂಧ್ರದ ಸೃಷ್ಟಿ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ. 4ಕೆ ರೆಸುÂಲೂಷನ್‌ವುಳ್ಳ ದೃಶ್ಯಗಳು ಮತ್ತು ಅದ್ಭುತ ಧ್ವನಿ ವ್ಯವಸ್ಥೆಯು ಆಕಾಶ ಮಂದಿರದ ವಿಶಿಷ್ಟ ಅನುಭವ ಮೂಡಿಸುತ್ತವೆ. ಸುಮಾರು 12 ಕೋಟಿ ವೆಚ್ಚದಲ್ಲಿ ತಾರಾಲಯದ ನವೀಕರಣ ಯೋಜನೆಯಲ್ಲಿ ಹೈಬ್ರಿಡ್‌ ಪ್ರೊಜೆಕ್ಷನ್‌ ಅನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದೆ. ಒಟ್ಟಾರೆ ಆರು ವೆಲ್ವೆಟ್‌ ಪ್ರಾಜೆಕ್ಟರ್‌ಗಳಲ್ಲಿ ವಿಡಿಯೊಗಳು ಮೂಡಿಬರುತ್ತವೆ. 

ನೂತನ ವ್ಯವಸ್ಥೆ ಕುರಿತು ಸುದ್ದಿಗಾರ ರೊಂದಿಗೆ ಮಾತನಾಡಿದ ಬೆಂಗಳೂರು ಅಸೋಸಿಯೇಷನ್‌ ಫಾರ್‌ ಸೈನ್ಸ್‌ ಎಜುಕೇಷನ್‌ (ಬೇಸ್‌) ನಿರ್ದೇಶಕಿ ಡಾ.ಬಿ. ಎಸ್‌. ಶೈಲಜಾ, “ಆಪ್ಟೋ ಮೆಕಾನಿಕಲ್‌ ಪ್ರೊಜೆಕ್ಷನ್‌ನಿಂದ ಹೈಬ್ರಿಡ್‌ ಪ್ರೊಜೆಕ್ಷನ್‌ಗೆ ಶಿಫ್ಟ್ ಆಗಿದ್ದೇವೆ. ಅಂದರೆ ಕ್ಯಾಲ್ಕುéಲೇಟ ರ್‌ನಿಂದ ಕಂಪ್ಯೂಟರ್‌ಗೆ ಪರಿವರ್ತನೆ ಹೊಂದಿದ್ದೇವೆ. ದೇಶದಲ್ಲಿ ಈ ಡಿಜಿಟಲ್‌ ವ್ಯವಸ್ಥೆ ಇರುವುದು ತಿರುವನಂತಪುರ ಹೊರತುಪಡಿಸಿದರೆ, ಬೆಂಗಳೂರಿನಲ್ಲಿ ಮಾತ್ರ. ವಿಜ್ಞಾನದ ಬಗ್ಗೆ ಅದ್ಭುತ ಅನುಭವ ನೀಡುವ ವ್ಯವಸ್ಥೆ ಇದಾಗಿದೆ’ ಎಂದರು.

Advertisement

ಜಾತಕಗಳಲ್ಲಿ ಗ್ರಹಗಳು ಕುಳಿತಿವೆ: ಸಿಎಂ ಬೇಸರ
ಬೆಂಗಳೂರು:
“ಗ್ರಹಗಳ ಮೇಲೆ ಪಾದಾರ್ಪಣೆ ಮಾಡಿದ್ದರೂ, ಜಾತಕಗಳಲ್ಲಿ ಮಾತ್ರ ಗ್ರಹಗಳು ಹಾಗೇ ಕುಳಿತಿವೆ. ಗ್ರಹಣಗಳ ಕಾಟವೂ ತಪ್ಪಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಜವಾಹರಲಾಲ್‌ ನೆಹರು ತಾರಾಲಯದ ಹೈಬ್ರಿಡ್‌ ಪ್ರೊಜೆಕ್ಷನ್‌ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು.

ಇಂದು ವಿಜ್ಞಾನ ಸಾಕಷ್ಟು ಮುಂದುವರಿದಿದೆ. ಆಕಾಶದಲ್ಲಿರುವ ಗ್ರಹಗಳಲ್ಲಿ ಏನಿದೆ ಎಂಬುದನ್ನು ಖುದ್ದು ನಮ್ಮ ವಿಜ್ಞಾನಿಗಳು ಹೋಗಿ ತಿಳಿದುಕೊಂಡು ಬಂದಿದ್ದಾರೆ. ಆದರೂ, ನಮ್ಮ ಜಾತಕಗಳಲ್ಲಿ ಶನಿ, ಗುರು ಮತ್ತಿತರ ಗ್ರಹಗಳು ಬಂದು ಕುಳಿತುಕೊಳ್ಳುತ್ತವೆ. ಸೂರ್ಯ ಮತ್ತು ಚಂದ್ರಗ್ರಹಣಗಳ ಕಾಟ ತಪ್ಪಿಲ್ಲ. ಗ್ರಹಣದ ಸಂದರ್ಭದಲ್ಲೂ ಕೂಲಿ ಕೆಲಸ ಮಾಡುವ ಕಾರ್ಮಿಕರಿದ್ದಾರೆ. ಆದರೆ, ಸುಶಿಕ್ಷತರು ಈ ಕಂದಾಚಾರ ಗಳನ್ನು ಅನುಸರಿಸುತ್ತಿದ್ದಾರೆ. ಇದರಿಂದ ನಾವಿನ್ನೂ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಕಂದಾಚಾರಗಳು ಇರಬೇಕು ಎಂದು ಬಯಸುವ ವರ್ಗವೂ ಒಂದಿದೆ. ಆ ಮೂಲಕ ಜನರ ಶೋಷಣೆ ನಡೆಸುವುದು ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ. ಆದರೆ, ವಿಜ್ಞಾನದ ಜತೆ ನಾವು ಹೆಜ್ಜೆ ಹಾಕದಿದ್ದರೆ, ಅಭಿವೃದ್ಧಿ ಸಾಧ್ಯವಿಲ್ಲ ಎಂದ ಅವರು, ಮೂಲವಿಜ್ಞಾನ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಮೂಲ ವಿಜ್ಞಾನಕ್ಕೆ ಪ್ರೋತ್ಸಾಹ ಕೊಡುವ ಕೆಲಸ ಹೆಚ್ಚಾಗಬೇಕು ಎಂದರು. 

ಬೇಸ್‌ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಯು.ಆರ್‌.ರಾವ್‌, ಸುಮಾರು 12.5 ಕೋಟಿ ವೆಚ್ಚದಲ್ಲಿ ನೆಹರು ತಾರಾಲಯವನ್ನು ನವೀಕರಿಸಲಾಗಿದ್ದು, ಈ ಮೂಲಕ 25 ವರ್ಷಗಳ ಹಿಂದಿನ ತಂತ್ರಜ್ಞಾನಗಳು ಈಗ ಬದಲಾಯಿಸಲಾಗಿದೆ. ವರ್ಷಕ್ಕೆ 3 ಲಕ್ಷ ಜನ ಇಲ್ಲಿಗೆ ಭೇಟಿ ನೀಡುತ್ತಾರೆ ಎಂದು ಮಾಹಿತಿ ನೀಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌. ಸೀತಾರಾಂ. ಬೇಸ್‌ ಆಡಳಿತ ಮಂಡಳಿ ನಿರ್ದೇಶಕಿ ಡಾ.ಬಿ.ಎಸ್‌. ಶೈಲಜಾ, ಜರ್ಮನಿಯ ಕಾರ್ಲ್ ಝೈಸ್‌ ಕಂಪೆನಿಯ ಡಾ.ಮಾರ್ಟಿನ್‌ ವಿಮನ್‌ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next