Advertisement

ದೇಶಾದ್ಯಂತ ಸಿಎ ಹೊಸ ಪಠ್ಯಕ್ರಮ ಜಾರಿ: ಶ್ರೀನಿವಾಸ

12:41 PM Aug 14, 2017 | Team Udayavani |

ಹುಬ್ಬಳ್ಳಿ: ದೇಶಾದ್ಯಂತ ಜುಲೈ 1ರಿಂದ ಜಾರಿಗೊಂಡಿರುವ ಲೆಕ್ಕ ಪರಿಶೋಧಕರ (ಸಿಎ) ಹೊಸ ಪಠ್ಯಕ್ರಮ ಅಂತಾರಾಷ್ಟ್ರೀಯ ಮಟ್ಟದಾಗಿದ್ದು, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ತಗಲುವುಷ್ಟು ವೆಚ್ಚದಲ್ಲೇ ಮೂರು ವರ್ಷದ ಈ ಕೋರ್ಸ್‌ ಅನ್ನು ಪೂರ್ಣಗೊಳಿಸಬಹುದೆಂದು ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಪರಿಷತ್‌ (ಎಸ್‌ಐಆರ್‌ಸಿ-ಸಿರ್ಕ್‌) ಚೇರನ್‌ ಸಿ.ಎಸ್‌. ಶ್ರೀನಿವಾಸ ತಿಳಿಸಿದರು. 

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹೊಸ ಪಠ್ಯಕ್ರಮದಿಂದ ಲೆಕ್ಕ  ಪರಿಶೋಧಕರು ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಕಾರ್ಯನಿರ್ವಹಿಸಲು ಅನುಕೂಲವಾಗಲಿದೆ. ನಗರ ಪ್ರದೇಶದ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ವರ್ಷಕ್ಕೆ ಕನಿಷ್ಠ 75,000 ರೂ.ದಿಂದ 1 ಲಕ್ಷ ರೂ. ಶುಲ್ಕ ಪಾವತಿಸಬೇಕು.

ಆದರೆ ಮೂರು ವರ್ಷಗಳ ಸಿಎ ಕೋರ್ಸ್‌ಗೆ 75-85 ಸಾವಿರ ರೂ. ವೆಚ್ಚವಾಗಲಿದೆ. ಇನ್ನುಳಿದ ಶಿಕ್ಷಣಕ್ಕೆ ಹೋಲಿಸಿದರೆ ಸಿಎ ಕೋರ್ಸ್‌ ತುಂಬಾ ಕಡಿಮೆ ಖರ್ಚಿನದ್ದಾಗಿದೆ ಎಂದರು. ಪ್ರತಿ 10-12 ವರ್ಷಕ್ಕೊಮ್ಮೆ ಪಠ್ಯಕ್ರಮ ಬದಲಾಗುವುದು ಸಾಮಾನ್ಯ ಪ್ರಕ್ರಿಯೆ. ನೂತನ ಪಠ್ಯಕ್ರಮದಲ್ಲಿ ಸಿಪಿಟಿ ಸೇರಿದಂತೆ ಫೌಂಡೇಶನ್‌, ಇಂಟರ್‌ಮಿಡಿಯಟ್‌, ಫೈನಾನ್ಸ್‌ ಕೋರ್ಸ್‌ ಪರಿಚಯಿಸಲಾಗಿದೆ.

ನಾಲ್ಕು ಗ್ರುಪ್‌ ಮಾಡಲಾಗಿದೆ. ವಿದ್ಯಾರ್ಥಿಗಳು ತೇರ್ಗಡೆಗೊಳ್ಳಲು ಒಂದು ಗ್ರುಪ್‌ನ ನಾಲ್ಕು ವಿಷಯಗಳಲ್ಲಿ ಕನಿಷ್ಠ 40 ಅಂಕ ಪಡೆಯಬೇಕು. ಅಗ್ರೀಗೇಟ್‌ ಶೇ.50 ಮಾಡಬೇಕು. ಈ ವರ್ಷ ಎಕನಾಮಿಕ್ಸ್‌ ಫೈನಾನ್‌ವೆಂಬ ಹೊಸ ವಿಷಯ ಪರಿಚಯಿಸಿರುವುದು ವಿಶೇಷವಾಗಿದೆ. ಮೂರು ವರ್ಷಗಳ ವ್ಯಾಸಂಗದ ಬಳಿಕ ವಿದ್ಯಾರ್ಥಿಗಳು ಲೆಕ್ಕ ಪರಿಶೋಧಕರ ಬಳಿ ಅಭ್ಯಸಿಸಬೇಕಾಗುತ್ತದೆ (ಪ್ರಾಕ್ಟಿಸ್‌). 

ಈ ವೇಳೆ ವಿದ್ಯಾರ್ಥಿಗಳಿಗೆ ಕಲಿಕಾ ವಸ್ತು ಹಾಗೂ ಮೂರು ವರ್ಷ ಅಂದಾಜು 45-40 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತದೆ. ಸಿಎ ಕೋರ್ಸ್‌ವೆಂದರೆ ತುಂಬಾಕಷ್ಟಕರವೆಂಬ ಭಾವನೆ ಬಹಳಷ್ಟು ಜನರಲ್ಲಿದ್ದರೂ ಅದು ಅಸಾಧ್ಯವೆನಲ್ಲ. ಶ್ರಮವಹಿಸಿ ಅಧ್ಯಯನ ಮಾಡಿದರೆ ಯಶಸ್ಸು ಖಚಿತ. ಸಿಎ ಕೋರ್ಸ್‌ ಶ್ರೀಮಂತರಿಗೆ ಮಾತ್ರವಲ್ಲ, ಬಡವರಿಗೂ ಸಹಕಾರಿ ಆಗಲಿದೆ.

Advertisement

ಬಡತನದಿಂದ ಬಂದವರು ಕಷ್ಟಪಟ್ಟು ಓದಿ ಉತ್ತೀರ್ಣವಾದ ಉದಾಹರಣೆಗಳು ಸಾಕಷ್ಟಿವೆ. ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಎಲ್ಲ ಸಹಕಾರ ನೀಡಲಾಗುತ್ತದೆ ಎಂದರು. ದೇಶದಲ್ಲಿ ಪ್ರಸ್ತುತ 2.70 ಲಕ್ಷ ಲೆಕ್ಕ ಪರಿಶೋಧಕರಿದ್ದು, ಅದರಲ್ಲಿ ದಕ್ಷಿಣ ಪ್ರಾಂತ್ಯದಲ್ಲಿ 53 ಸಾವಿರ ಇದ್ದಾರೆ.

8 ಲಕ್ಷ ವಿದ್ಯಾರ್ಥಿಗಳು ಸಿಎ ಕಲಿಯುತ್ತಿದ್ದಾರೆ. ದೇಶಾದ್ಯಂತ ಐಸಿಎಐನ 163 ಶಾಖೆಗಳಿದ್ದು, ದಕ್ಷಿಣ ಪ್ರಾಂತ್ಯದಲ್ಲಿ 45 ಶಾಖೆಗಳಿವೆ. ಸದ್ಯ ಸಿಎಗಳ ಕೊರತೆಯಿಲ್ಲದಿದ್ದರೂ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಿದ್ದಂತೆ ಸಿಎಗಳ ಸಂಖ್ಯೆಯೂ ವೃದ್ಧಿಯಾಗಬೇಕಾಗುತ್ತದೆ. ಈಗ ದೇಶದಲ್ಲಿ ಜಿಎಸ್‌ಟಿ ಜಾರಿಯಾಗಿದ್ದು, ಇದರಿಂದಾಗಿ ಸಿಎಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳೇ ಹೆಚ್ಚು ಎಂದರು.

ಐಸಿಎಐದ ಕೇಂದ್ರ ಕೌನ್ಸಿಲ್‌ನ ಸದಸ್ಯ ಬಾಬು ಅಬ್ರಾಹಂ ಕಲ್ಲಿವಯಲಿಲ್‌, ಸಿರ್ಕ್‌ ಹುಬ್ಬಳ್ಳಿ ಶಾಖೆಯ ಮಾಜಿ ಅಧ್ಯಕ್ಷ ಚಂದ್ರಶೇಖರ ಢವಳಗಿ, ನಂದರಾಜ ಖಟಾವಕರ, ಕೆ.ವಿ. ದೇಶಪಾಂಡೆ, ಪೊನ್ನಾರಾಜ, ಮಧುಸೂದನ ಪಿಸೆ, ರಾಘವೇಂದ್ರ ಜೋಶಿ, ವೈ.ಎಂ. ಖಟಾವಕರ ಸುದ್ದಿಗೋಷ್ಠಿಯಲ್ಲಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next