Advertisement

ನೇತ್ರಾವತಿ-ಕುಮಾರಧಾರಾ ಸಂಗಮ ಕ್ಷೇತ್ರ ಮಲಿನ

10:19 AM Dec 07, 2018 | |

ಉಪ್ಪಿನಂಗಡಿ: ಉಪ್ಪಿನಂಗಡಿ ಸಂಗಮ ಕ್ಷೇತ್ರ ಹೆಸರಿಗೆ ಮಾತ್ರ ಉಳಿದುಕೊಳ್ಳುವ ಅಪಾಯ ಒದಗಿದೆ. ಗಯಾಪದ ಕ್ಷೇತ್ರವೆಂದು ಪ್ರಸಿದ್ಧಿಯಾದ ಇಲ್ಲಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ಹರಿಯುತ್ತಿದ್ದು ಸಂಗಮ ಕ್ಷೇತ್ರವಾಗಿದ್ದು ಪಿಂಡ ಪ್ರದಾನ ಪಾವಿತ್ರ್ಯ ಹೊಂದಿದ್ದರೂ ಆಸುಪಾಸಿನ ಕೆಲ ಉದ್ಯಮಗಳು ಕೊಳಚೆ ನೀರನ್ನು ನದಿಗೆ ಹರಿಯಬಿಟ್ಟು ಮಲಿನಗೊಳಿಸುತ್ತಿವೆ.

Advertisement

ಪಟ್ಟಣದ ಸರಕಾರಿ ಆಸ್ಪತ್ರೆಯ ಕೂಗಳತೆಯ ದೂರದಲ್ಲಿ ಈ ಕೊಳಚೆ ನೀರು ಶೇಖರಣೆಯಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಪ್ರತಿ ಬಾರಿ ಮಳೆಗಾಲ ಬಂದಾಗ ಡೆಂಗ್ಯೂ, ಚಿಕೂನ್‌ ಗುನ್ಯಾ ರೋಗಗಳು ಕಂಡಾಗ ಮಲೇರಿಯಾ ಮಾಸಾಚರಣೆ ಸಭೆ ನಡೆಸುತ್ತಾರೆ. ಮಾಹಿತಿ ನೀಡಿ ಹೀಗೆ ಮಾಡಬೇಡಿ ಎನ್ನುತ್ತಾರೆ. ರೋಗದ ಸಂಶಯ ಕಂಡುಬಂದಾಗ ಜಿಲ್ಲಾ, ತಾಲೂಕು ಆರೋಗ್ಯಾಧಿಕಾರಿಗಳ ದಂಡೇ ಬಂದು ಅಲ್ಲಲ್ಲಿ ಚರಂಡಿ ನೀರು ನಿಂತ ಸಮೀಪದ ವಸತಿ ಸಮುಚ್ಚಯದವರಿಗೆ ಎಚ್ಚರಿಕೆ ನೀಡಿ, ಸ್ವಚ್ಚತೆಗೆ ಆದ್ಯತೆ ನೀಡಿ ಎಂದು ಸೂಚಿಸುತ್ತಾರೆ. ಇಲ್ಲಿ ನದಿಗೆ ಮಲಿನ ನೀರು ಬರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೂ ಆರೋಗ್ಯಾಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.

ಶುಚಿತ್ವಕ್ಕೆ ಆದ್ಯತೆ ನೀಡಿಲ್ಲ
ವಾಣಿಜ್ಯನಗರಿಯಾಗಿ ಬೆಳೆಯುತ್ತಿರುವ ಉಪ್ಪಿನಂಗಡಿ – ನೆಕ್ಕಿಲಾಡಿ ಗ್ರಾಮಗಳ ನದಿ ಬದಿ ವಸತಿ ಸಮುಚ್ಚಯ, ವಾಣಿಜ್ಯ ಸಂಕೀರ್ಣ ಮತ್ತು ಕಲ್ಯಾಣ ಮಂಟಪಗಳನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ತಮ್ಮ ವ್ಯವಹಾರವನ್ನು ವೃದ್ಧಿಸಿದ್ದಾರೆ. ಹೊರತು ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ. ಅದರಲ್ಲೂ ನದಿ ಬದಿ ನಿವೇಶನ ಕಂಡರೆ ಸಾಕು, ಜಮೀನಿನಲ್ಲಿ ಒಂದಿಷ್ಟು ಜಾಗ ಬಿಡದೆ ವಸತಿ ಸಮುಚ್ಚಯ, ಕಲ್ಯಾಣ ಮಂಟಪ ನಿರ್ಮಿಸುತ್ತಾರೆ. ಬಳಿಕ ತ್ಯಾಜ್ಯ ನೀರಿನ ನಿರ್ವಹಣೆಯ ಗೋಜಿಗೆ ಹೋಗದೆ ನೇತ್ರಾವತಿಗೆ ಹರಿಯಬಿಡುತ್ತಾರೆ.

ಆರೋಗ್ಯಾಧಿಕಾರಿಗಳು ಪರಿಶೀಲಿಸಿಲ್ಲ
ನೀರು ಮಲಿನಗೊಂಡಾಗ ಪಂಚಾಯತ್‌ ಮೇಲೆ ಗೂಬೆ ಕೂರಿಸುವುದು ಸಹಜ. ಆದರೆ ಯಾವುದೇ ವಾಣಿಜ್ಯ ವ್ಯವಹಾರಗಳಿಗೆ ಪಂಚಾಯತ್‌ ವ್ಯಾಪಾರ ಪರವಾನಿಗೆ ನೀಡುವ ಮುನ್ನ ತಾಲೂಕು ಆರೋಗ್ಯಾಧಿಕಾರಿ ನಿರಾಕ್ಷೇಪಣ ಪತ್ರ ನೀಡಬೇಕು. ಅನಂತರವೇ ಪಂಚಾಯತ್‌ ವ್ಯಾಪಾರ ಪರವಾನಿಗೆ ನೀಡುವುದು ನಿಯಮ. ಆರೋಗ್ಯಾಧಿಕಾರಿಗಳು ನಿರಾಕ್ಷೇಪಣ ಪತ್ರ ನೀಡುವ ಮುನ್ನ ಸ್ಥಳದಲ್ಲಿ ವ್ಯಾಪಾರ, ವ್ಯವಹಾರ ಹೇಗಿದೆ ಎಂದು ಪರಿಶೀಲಿಸಬೇಕು. ಆದರೂ ಕ್ರಮ ಕೈಗೊಂಡಿಲ್ಲ. ನಿಯಮ ಪಾಲಿಸದೆ ಕಚೇರಿಯಲ್ಲಿ ಕುಳಿತು ನಿರಾಕ್ಷೇಪಣ ಪತ್ರ ನೀಡುತ್ತಿದ್ದಾರೆ.

ಜಿಲ್ಲಾಡಳಿತ ಮಧ್ಯ ಪ್ರವೇಶಿಸಲಿ
ಈ ಸಮಸ್ಯೆಯ ಪರಿಹಾರಕ್ಕಾಗಿ ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕಾದ ಅಗತ್ಯತೆ ಇದೆ. ಈ ಮೂಲಕ ನದಿಗಳ ಪರಿಶುದ್ಧತೆಯತ್ತ ಗಮನ ಹರಿಸುವುದು ಒಳಿತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವ ಮಾತಾಗಿದೆ.

Advertisement

ಪರಿಹಾರಕ್ಕೆ ಯತ್ನ
ನೇತ್ರಾವತಿ ನದಿಗೆ ತ್ಯಾಜ್ಯ ನೀರು ಬಿಡುವ ವಿಚಾರ ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಮತ್ತೆ ಮರುಕಳಿಸಿದರೆ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
 - ಅಬ್ದುಲ್ಲ ಆಸಫ್, ಗ್ರಾ.ಪಂ. ಪಿಡಿಒ

ಎಚ್ಚರಿಕೆ ನೀಡಿದ್ದೆವು
ಸಾರ್ವಜನಿಕರಿಂದ ದೂರು ಬಂದಾಗ ಹಲವು ಬಾರಿ ಸ್ಥಳ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದೇನೆ. ಎಚ್ಚರಿಕೆ ನೀಡಿದ ಕೆಲ ದಿನಗಳು ಮಾತ್ರ ಪಾಲಿಸುತ್ತಾರೆ. ಮತ್ತೆ ಅದೇ ಹಿಂದಿನ ಚಾಳಿ ಮುಂದುವರಿಸುತ್ತಾರೆ. ಅಧಿಕಾರಿ ವರ್ಗ ನಿಭಾಯಿಸಬೇಕಾದ ಕೆಲಸವನ್ನು ಗ್ರಾಮದ ಹಿತದೃಷ್ಟಿಯಲ್ಲಿ ನಾನು ತೆರಳಿ ಎಚ್ಚರಿಸಿದ್ದೇನೆ. ಇನ್ನು ಹಲವರು ಅದಕ್ಕೆ ಬದಲಿ ಅರ್ಥ ಕಲ್ಪಿಸುತ್ತಾರೆ. ಆದ್ದರಿಂದ ಇನ್ನು ಮುಂದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮ ಜರಗಿಸಲಿ.
– ಕೆ. ಅಬ್ದುಲ್‌ ರಹಿಮಾನ್‌, ಗ್ರಾ.ಪಂ. ಅಧ್ಯಕ್ಷರು

ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next