Advertisement

ಪರಿಣತರಿಲ್ಲದೆ ನೀರಿಗಿಳಿಯದ ಹೋಮ್‌ಗಾರ್ಡ್ಸ್‌ ಬೋಟ್‌ಗಳು!

06:00 AM May 22, 2018 | Team Udayavani |

ಮಂಗಳೂರು: ಮಳೆಗಾಲದಲ್ಲಿ ನದಿಗಳು ಉಕ್ಕಿ ಹರಿದಾಗ, ಕೃತಕ ನೆರೆ ಉಂಟಾದಾಗ ಪರಿಹಾರ ಕಾರ್ಯಾಚರಣೆಗೆಂದು ಜಿಲ್ಲಾ ಗೃಹ ರಕ್ಷಕ ದಳಕ್ಕೆ ಎರಡು ದೊಡ್ಡ ಯಾಂತ್ರೀ ಕೃತ ಬೋಟ್‌ಗಳನ್ನು ನೀಡಿದ್ದರೂ ಚಲಾಯಿಸುವುದಕ್ಕೆ ಪರಿಣತರು ಇಲ್ಲದೆ ಅವು ನಿಷ್ಪ್ರಯೋಜಕವಾಗಿವೆ! ಎರಡು ವಾರದೊಳಗೆ ಮಳೆಗಾಲ ಶುರುವಾಗಲಿದೆ, ಈ ಬಾರಿಯಾದರೂ ಈ ಎರಡು ಜೀವರಕ್ಷಕ ದೋಣಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂಬುದು ಪರಿಣತರವಾದ. ಒಂದು ದೋಣಿ ಸದ್ಯ ಮೇರಿಹಿಲ್‌ ಬಳಿ ಇರುವ ಹೋಮ್‌ ಗಾರ್ಡ್‌ ಕಚೇರಿಯಲ್ಲಿ ಪಾಳು ಬಿದ್ದಿದ್ದರೆ, ಮತ್ತೂಂದು ಉಪ್ಪಿನಂಗಡಿಯ ನೇತ್ರಾವತಿ, ಕುಮಾರಧಾರಾ ನದಿಗಳ ಸಂಗಮ ಪ್ರದೇಶದಲ್ಲಿದೆ. ಹೋಮ್‌ಗಾರ್ಡ್‌ ಕಚೇರಿಯಲ್ಲಿರುವ ದೋಣಿ ಯಂತೂ ಕಳೆದ ಆರು ವರ್ಷಗಳಿಂದ ಉಪಯೋಗಿಸದೆ ಉಳಿದಿದೆ, ಉಪ್ಪಿ ನಂಗಡಿಯಲ್ಲಿರುವುದು ಅಪರೂಪಕ್ಕೆ ಉಪಯೋಗವಾಗಿ ಬರುತ್ತಿದೆ. ಇವನ್ನು ನಡೆಸಲು ಅಗತ್ಯ ಪರಿಣತಿ ಹೊಂದಿರುವವರು ಸದ್ಯ ಗೃಹರಕ್ಷಕ ದಳದಲ್ಲಿಲ್ಲ. ಎಲ್ಲಕ್ಕೂ ಮಿಗಿಲಾಗಿ, ಮಳೆ ಗಾಲದ ಪ್ರವಾಹ, ತಗ್ಗು ಸ್ಥಳಕ್ಕೆ ನೀರು ನುಗ್ಗುವಂಥ ತುರ್ತು ಸಂದರ್ಭಗಳಲ್ಲಿ ಬೇಕಾಗುವುದು ಸಣ್ಣ ಫೈಬರ್‌ ದೋಣಿಗಳೇ ವಿನಾ ಈಗಿರುವಂಥ ದೊಡ್ಡ ಯಾಂತ್ರೀಕೃತ ಬೋಟುಗಳಲ್ಲ. 

Advertisement

ಮುನ್ನೆಚ್ಚರಿಕೆ ಕ್ರಮ
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಉಂಟಾದಾಗ ಹೇಗೆ ಎದುರಿಸ ಬೇಕೆಂದು ಜಿಲ್ಲಾಡಳಿತ ಅಧಿಕಾರಿಗಳ ಸಭೆ ನಡೆಸಿದೆ. ಗೃಹರಕ್ಷಕ ದಳದವರು ಜಾಗೃತರಾಗಿ ಸ್ಪಂದಿಸಬೇಕೆಂದು ನಿರ್ದೇಶನವನ್ನೂ ನೀಡಿದೆ. ಆದರೆ ಈ ಯಾಂತ್ರೀಕೃತ ದೋಣಿಗಳನ್ನು ಸಾಗಿಸಬೇಕಾದರೆ ದೊಡ್ಡ ಲಾರಿಯೇ ಬೇಕು. ಸುಮಾರು ಆರು ವರ್ಷಗಳಿಂದ ಉಪಯೋಗಿಸದೆ, ನಿರ್ವಹಣೆಯೂ ಇಲ್ಲದಿರುವ ಈ ದೋಣಿಗಳು ಈಗ ಎಷ್ಟರಮಟ್ಟಿಗೆ ಸುಸ್ಥಿತಿಯಲ್ಲಿವೆ ಎನ್ನುವುದು ಪ್ರಶ್ನೆ.  

ಈ ದೋಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಸಣ್ಣ ಫೈಬರ್‌ ದೋಣಿ ಗಳನ್ನು ನೀಡಬೇಕೆಂದು ಇಲಾಖೆಯ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರತಿ ಸ್ಪಂದನೆ ಸಿಕ್ಕಿಲ್ಲ. ರಕ್ಷಣೆಯ ಹೊಣೆ ಹೊತ್ತವರಿಗೆ ಆಶ್ರಯ ಇಲ್ಲ ಬೀಚ್‌ಗಳಲ್ಲಿ ರಕ್ಷಣೆಯ ಹೊಣೆ ಹೊತ್ತ ಗೃಹರಕ್ಷಕ ಸಿಬಂದಿಗೆ ತಾತ್ಕಾಲಿಕ ಆಶ್ರಯ ಇಲ್ಲದ ಕಾರಣ ಜಡಿ ಮಳೆ, ರಣಬಿಸಿಲಿನಂತಹ ಸಂದರ್ಭದಲ್ಲಿ ಸಮುದ್ರ ಬದಿಯೇ ನಿಂತು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕರ್ತವ್ಯ ಕ್ಕೆಂದು ಬಂದಾಗ ಸಮವಸ್ತ್ರ ತೊಟ್ಟು ಕೊಳ್ಳಲಾದರೂ ತಾತ್ಕಾಲಿಕ ಆಶ್ರಯ ಬೇಕು. ಅದರೆ ಅದೂ ಇಲ್ಲದೆ ಗೃಹ ರಕ್ಷಕರು ಪರದಾಡಬೇಕಾಗಿದೆ. 2016 ರಲ್ಲಿ 12ಕ್ಕೂ ಹೆಚ್ಚು ಪ್ರವಾಸಿಗರು ಸಮುದ್ರ ಪಾಲಾಗಿದ್ದರು. ಪಣಂ ಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ, ಸುರತ್ಕಲ್‌, ಸಸಿಹಿತ್ಲು ಬೀಚ್‌ಗಳಲ್ಲಿ ಪ್ರತೀ ಮೂರು ಕಿ.ಮೀ.ಗೆ ಒಬ್ಬರಂತೆ ಗೃಹರಕ್ಷಕರು ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು. ಹೀಗಾಗಿ 2017ರಲ್ಲಿ ಸಮುದ್ರ ಪಾಲಾದವರ ಸಂಖ್ಯೆ 3ಕ್ಕಿಳಿದಿತ್ತು. ಹಾಗಿದ್ದರೂ ರಕ್ಷಕ ಸಿಬಂದಿಗೆ ತಾತ್ಕಾಲಿಕ ಆಶ್ರಯವೂ ಇಲ್ಲ. ಕಳೆದ ಮಳೆಗಾಲದ ಸಂದರ್ಭದಲ್ಲೇ ತಾತ್ಕಾಲಿಕ ಅಶ್ರಯ ಕಲ್ಪಿಸಿಕೊಡುವ ಜಿಲ್ಲಾಡಳಿತದ ಭರವಸೆ ಇನ್ನೂ ಈಡೇರಿಕೆಯಾಗಿಲ್ಲ ಎನ್ನುತ್ತಾರೆ ಗೃಹರಕ್ಷಕ ಸಿಬಂದಿ. 

 ಪ್ರವಾಹದಂತಹ ಪ್ರಾಕೃತಿಕ ವಿಕೋಪ ಗಳಾದಾಗ ಬೇಕಾಗಿರುವುದು ಸಣ್ಣ ಫೈಬರ್‌ ದೋಣಿಗಳು. ಯಾಂತ್ರೀಕೃತ ದೋಣಿ ಚಲಾಯಿಸುವ ಪರಿಣತರು ಗೃಹರಕ್ಷಕ ದಳದಲ್ಲಿ ಇಲ್ಲ. ಹೀಗಾಗಿ ಈಗಿರುವ ಬೋಟ್‌ಗಳು ಪ್ರಯೋಜನಕ್ಕೆ ಬರುತ್ತಿಲ್ಲ. ಸಣ್ಣ ಬೋಟ್‌ಗಳನ್ನು ಪೂರೈಸಬೇಕೆಂದು ಮನವಿ ಸಲ್ಲಿಸಿದರೂ ಈಡೇರಿಲ್ಲ. ಈಗ ಮತ್ತೆ ಮನವಿ ಸಲ್ಲಿಸಿದ ಮೇರೆಗೆ ಕೊಟೇಶನ್‌ ಕೊಡಲು ತಿಳಿಸಿದ್ದಾರೆ.
ಡಾ| ಮುರಳಿ ಮೋಹನ್‌ ಚೂಂತಾರು, ಗೃಹರಕ್ಷಕ ಜಿಲ್ಲಾ ಕಮಾಂಡೆಂಟ್‌

 ಉಪಯೋಗಿಸದೆ ಇರುವ ದೋಣಿ ಇರಿಸಿಕೊಳ್ಳುವುದು ಸರಿಯಲ್ಲ. ಅವುಗಳನ್ನು ಬೋಟ್‌ಯಾರ್ಡ್‌ ಅಥವಾ ಶಿಪ್‌ಯಾರ್ಡ್‌ಗೆ ಸ್ಥಳಾಂತರಿಸಿ ಸದ್ಬಳಕೆ ಮಾಡುವ ಯೋಚನೆ ಇದೆ. ಸಣ್ಣ ದೋಣಿ ಒದಗಿಸಲು ಸದ್ಯದಲ್ಲೇ ವ್ಯವಸ್ಥೆ ಮಾಡಲಾಗುವುದು. ಗೃಹರಕ್ಷಕ ಸಿಬಂದಿಗೆ ಬೀಚ್‌ಗಳಲ್ಲಿ ಆಶ್ರಯದ ಆವಶ್ಯಕತೆ ಇದೆಯಾದರೂ ಶಾಶ್ವತ ಆಶ್ರಯ ಒದಗಿಸಲು ಸಾಧ್ಯವಿಲ್ಲ. ಆದರೂ ಹೆಚ್ಚು ಸುಭದ್ರತೆಯ ತಾತ್ಕಾಲಿಕ ಟೆಂಟ್‌ ನಿರ್ಮಿಸಲಾಗುವುದು.
 ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

Advertisement

ಗಣೇಶ್‌ ಮಾವಂಜಿ 

Advertisement

Udayavani is now on Telegram. Click here to join our channel and stay updated with the latest news.

Next