Advertisement

ಆಶ್ರಯ ನಿವೇಶನ ನೀಡುವಲ್ಲಿ ನಿರ್ಲಕ್ಷ್ಯ: ಪ್ರತಿಭಟನೆ

12:24 PM May 24, 2017 | |

ದೊಡ್ಡಬಳ್ಳಾಪುರ: ಆಶ್ರಯ ಫ‌ಲಾನುಭವಿಗಳಿಗೆ ನಿವೇಶನ ನೀಡುವಂತೆ ಮೇಲಧಿಕಾರಿಗಳಿಂದ ಆದೇಶವಾಗಿದ್ದರೂ, ಆಶ್ರಯ ಸಮಿತಿ ಹಾಗೂ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ಆಶ್ರಯ ಸಮಿತಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಜನಪರ ಹೋರಾಟಗಳ ಒಕ್ಕೂಟ ಮತ್ತು ಕರ್ನಾಟಕ ಜನಪರ ಸೇವಾ ಸಮಿತಿ ನೇತೃತ್ವದಲ್ಲಿ ನಗರಸಭೆ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಯಿತು.

Advertisement

ಈ ವೇಳೆ ಮಾತನಾಡಿದ ಒಕ್ಕೂಟದ ಜನಪರ ಹೋರಾಟಗಳ ಅಧ್ಯಕ್ಷ ಜಿ. ನಂಜುಂಡಯ್ಯ, ಬಡವರಿಗೆ ಬಹುಮಹಡಿ ಕಟ್ಟಡಗಳು ಬೇಡ. ಆಶ್ರಯ ಫ‌ಲಾನುಭವಿಗಳಿಗೆ ಪ್ರತ್ಯೇಕ ನಿವೇಶನಗಳನ್ನು ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಘಟನೆಯ ಪದಾಧಿಕಾರಿಗಳು 2007ರಿಂದ ವಿವಿಧ ಹಂತಗಳಲ್ಲಿ ಹೋರಾಟಗಳನ್ನು ರೂಪಿಸಿ 1292 ಜನ ವಸತಿ ರಹಿತರ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.

ಉಪಾಧ್ಯಕ್ಷ ಇಬ್ರಾಹಿಂ ಮಾತನಾಡಿ, ಸರ್ಕಾರ ಕಸಬಾ ಹೋಬಳಿಯ ರೋಜಿಪುರ ಸರ್ವೆ ನಂ. 27ರಲ್ಲಿ 3 ಎಕರೆ ಜಮೀನು ಮಂಜೂರು ಮಾಡಿದ್ದು, ಈಗ ಅಧಿಕಾರಿಗಳು ಮೂರು ಅಂತಸ್ತು ಕಟ್ಟಿ ಅದನ್ನು ಫ‌ಲಾನುಭವಿಗಳಿಗೆ ಹಂಚುತ್ತೇವೆ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮಗೆ ಬಹುಮಹಡಿ ಕಟ್ಟಡಗಳುಬೇಡ. ಪ್ರತಿ ಫ‌ಲಾನುಭವಿಗೆ ನಿವೇಶನಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಸಿ.ಆರ್‌.ಚೌಡಪ್ಪ ಮಾತನಾಡಿ, ವಸತಿ ಸಂಕೀರ್ಣಗಳನ್ನು ಕಟ್ಟಿ ಯಾರೊಬ್ಬರಿಗೂ ಭೂಮಿಯ ಒಡೆತನ ನೀಡದಂತೆ ಮಾಡುವ ಬಂಡವಾಳಶಾಹಿ ಧೋರಣೆಯನ್ನು ಆಶ್ರಯ ಸಮಿತಿ ಮತ್ತು ಸರ್ಕಾರ ಕೈಬಿಡಬೇಕು ಎಂದರು. ಆಶ್ರಯ ಫ‌ಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅನೇಕ ಗೊಂದಲಗಳಿವೆ. ಸ್ವಹಿತಾಸಕ್ತಿ ಮತ್ತು ರಾಜಕಾರಣ ಇಲ್ಲಿ ಕೆಲಸ ಮಾಡುತ್ತಿದ್ದು, ನೈಜ ಬಡವರನ್ನು ಗುರುತಿಸುವ ಕೆಲಸ ಆಗುತ್ತಿಲ್ಲ. ಪೌರಾಯುಕ್ತ ಸಹ ಸರ್ಕಾರದ ಆದೇಶವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ನಗರಸಭೆ ಆಯುಕ್ತ ಡಾ.ಪಿ.ಬಿಳಿಕೆಂಚಪ್ಪ ಮತ್ತು ಅಧ್ಯಕ್ಷ ಕೆ.ಬಿ.ಮುದ್ದಪ್ಪಆಗಮಿಸಿ ಸಂಧಾನಸಭೆ ನಡೆಸಿದಾಗ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯಕ್ತ ಡಾ.ಪಿ.ಬಿಳಿಕೆಂಚಪ್ಪ, ಸರ್ಕಾರಿ ಆದೇಶದಂತೆ ಪ್ರತ್ಯೇಕ ನಿವೇಶನಗಳನ್ನು ಹಂಚುವಂತಿಲ್ಲ,

Advertisement

1:3 ಅನುಕ್ರಮದಂತೆ ಮೂರು ಅಂತಸ್ತಿನ ಮನೆಗಳನ್ನು ಕಟ್ಟಿಕೊಡಬೇಕು ಎಂಬ ಆದೇಶವಿದೆ. ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು. ಸರ್ಕಾರದ ಆದೇಶ ಬಂದ ನಂತರ ಮುಂದಿನ ಆದೇಶದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಒಕ್ಕೂಟದ ಪದಾಧಿಕಾರಿಗಳು, ಆಶ್ರಯ ಫ‌ಲಾನುಭವಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next