Advertisement

ಕನ್ನಡ ಸಾಹಿತ್ಯ ಲೋಕಕ್ಕೆ ಬೇವು-ಬೆಲ್ಲದ ಸಮ್ಮಿಲನ

11:07 PM Dec 30, 2019 | Lakshmi GovindaRaj |

ಬೆಂಗಳೂರು: ಕನ್ನಡ ಸಾಹಿತ್ಯ ಲೋಕ 2019 ರಲ್ಲಿ “ಬೇವು-ಬೆಲ್ಲ’ ಎರಡನ್ನೂ ಸವಿದಿದೆ. “ಶರಣರ ನಾಡು’ ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಎಚ್‌.ಎಸ್‌.ವೆಂಕಟೇಶಮೂರ್ತಿ ಅವರು ಆಯ್ಕೆಯಾದರು. ನಾಟಕಕಾರ ಗಿರೀಶ್‌ ಕರ್ನಾಡ , ಹಿರಿಯ ವಿಮರ್ಶಕ ಪ್ರೊ.ಎಲ್‌.ಎಸ್‌.ಶೇಷಗಿರಿರಾವ್‌ ಸೇರಿ ಹಲವು ಸಾಹಿತಿಗಳು ನಿಧನರಾದರು.

Advertisement

ಜಾನಪದ ಅಕಾಡೆಮಿಗೆ ಮಂಗಳ ಮುಖಿ ಮಂಜಮ್ಮ ಜೋಗತಿ ಅಧ್ಯಕ್ಷರಾಗಿ ನೇಮಕ, ಸಚಿವ ಸಿ.ಟಿ.ರವಿ ಅವರ “ಮನೆ ಹಾಳರು’ ಕುರಿತ ವಿವಾದದ ಹೇಳಿಕೆ, ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರು, ಸದಸ್ಯರು ಅಧಿಕಾರ ಪೂರೈಸದೇ ನಿರ್ಗಮಿಸಿ ರುವುದು 2019ನೇ ಸಾಲಿನ ಹಿನ್ನೋಟದ ಪ್ರಮುಖ ಹೈಲೆಟ್ಸ್‌.

ಮನೆಹಾಳರು ಹೇಳಿಕೆ ಕಿಡಿ: ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ಆಯ್ಕೆಯಲ್ಲಿ ಈ ಬಾರಿ ಮನೆಹಾಳು ಜನರಿಗೆ ಅವಕಾಶ ನೀಡಿಲ್ಲ. ಅವರನ್ನು ದೂರ ಇಟ್ಟಿದ್ದೇನೆಂಬ ಸಚಿವ ಸಿ.ಟಿ.ರವಿ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಹೇಳಿಕೆ ಖಂಡಿಸಿ ಸಾಹಿತಿ, ಕಲಾವಿದರ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದೂರು ಕೂಡ ನೀಡಿತು.

ಅವಧಿ ಮುನ್ನವೇ ನಿರ್ಗಮನ: “ಜೆಡಿಎಸ್‌-ಕಾಂಗ್ರೆಸ್‌’ ಮೈತ್ರಿಕೂಟ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ 3 ಪ್ರಾಧಿಕಾರ ಮತ್ತು 13 ಅಕಾಡೆಮಿ ಅಧ್ಯಕ್ಷರು ಮತ್ತು ಸದಸ್ಯರು ತಮ್ಮ ಅವಧಿ ಪೂರ್ಣಗೊಳ್ಳುವ ಮುನ್ನವೇ ನಿರ್ಗಮಿಸಬೇಕಾಯಿತು.

ಸರ್ಕಾರ ನಿಲುವಿಗೆ ಭೈರಪ್ಪ ಖಂಡನೆ: ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್‌ ಕಲಿಕೆ ಆರಂಭಕ್ಕೆ ಮುಂದಾದ ಸರ್ಕಾರದ ನಿಲುವು ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಯಿತು. ಕಸಾಪ ಅಧ್ಯಕ್ಷ ಮನು ಬಳಿಗಾರ್‌ ನೇತೃತ್ವ ದಲ್ಲಿ ನಡೆದ ಸಾಹಿತಿ, ಕನ್ನಡ ಪರ ಹೋರಾಟಗಾರರ ಸಭೆಯಲ್ಲಿ ಸರ್ಕಾರ ನಿಲುವಿಗೆ ಖಂಡನೆ ವ್ಯಕ್ತವಾಯಿತು. ಹಿರಿಯ ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ ಅವರು ಈ ಸಭೆಯಲ್ಲಿ ಪಾಲ್ಗೊಂಡು ಸರ್ಕಾರ ನಿಲುವನ್ನು ಖಂಡಿಸಿದ್ದು ವಿಶೇಷ.

Advertisement

ಇತಿಹಾಸ ಸೃಷ್ಟಿಸಿದ ಮಂಗಳ ಮುಖಿ: ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಹಿರಿಯ ರಂಗ ಕಲಾವಿದೆ ಮಂಗಳಮುಖಿ ಮಂಜಮ್ಮ ಜೋಗತಿ ಅವರು ನೇಮಕವಾಗುವ ಮೂಲಕ ಇತಿಹಾಸದ ಪುಟ ಸೇರಿದರು. ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿಯ ಅಧಿಕಾರ ವಿಸ್ತರಣೆ ವಿಚಾರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಹಾಲಿ ಅಧ್ಯಕ್ಷ ಮನು ಬಳಿಗಾರ್‌ ನೇತೃತ್ವದ ಕಾರ್ಯಕಾರಿ ಸಮಿತಿಯ ಸದಸ್ಯರ ಮುಂದುವರಿಕೆ ವಿಚಾರ ಕೋರ್ಟ್‌ ಮೆಟ್ಟಿಲೇರಿದ್ದು ಸಾಹಿತ್ಯ ಲೋಕದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

ಕಣವಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2019ನೇ ಸಾಲಿನ “ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಕವಿ ಚನ್ನವೀರ ಕಣವಿ ಭಾಜನರಾದರು. ಪ್ರಶಸ್ತಿ 7 ಲಕ್ಷದ 1 ರೂ. ನಗದು ಮತ್ತು ಸ್ಮರಣಿಕೆ ಒಳ ಗೊಂಡಿತ್ತು. ಯುವ ಕಾದಂಬರಿ ಕಾರ ಶ್ರೀಧರ ಬನವಾಸಿ ಅವರ ‘ಬೇರು’ ಕಾದಂಬರಿ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ “ಯುವ ಪುರಸ್ಕಾರ’ಕ್ಕೆ ಭಾಜನವಾಯಿತು. ಹಾಗೆಯೇ ಚಂದ್ರಕಾಂತ ಕರದಳ್ಳಿ ಅವರ “ಕಾಡು ಕನಸಿನ ಬೀದಿಗೆ’ ಕೃತಿಗೆ “ಬಾಲಸಾಹಿತ್ಯ ಪುರಸ್ಕಾರ’ ಆಯ್ಕೆಯಾಗಿತ್ತು.

“ಕುದಿ ಎಸರು’ ಕೃತಿಗೆ ಪ್ರಶಸ್ತಿ: ವರ್ಷದ ಕೊನೆಯಲ್ಲಿ ಹಿರಿಯ ಪತ್ರಕರ್ತೆ ಡಾ.ವಿಜಯಾ ಅವರ ಆತ್ಮಕತೆ “ಕುದಿ ಎಸರು’ ಕೃತಿ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಯಿತು. ಪ್ರಶಸ್ತಿ 1 ಲಕ್ಷ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

ಕವಿ, ನಾಟಕಕಾರರ ನಿಧನ: ನಾಟಕಕಾರ ಗಿರೀಶ್‌ ಕಾರ್ನಾಡ್‌, ಹಿರಿಯ ವಿಮರ್ಶಕ ಪ್ರೊ.ಎಲ್‌.ಎಸ್‌. ಶೇಷಗಿರಿ ರಾವ್‌, ಕವಿ ಕೆ.ಬಿ.ಸಿದ್ದಯ್ಯ, ಡಾ. ಚನ್ನಣ್ಣ ವಾಲೀಕಾರ, ಬಿ.ಎ.ಸನದಿ ಅವರ ನಿಧನ 2019ರ ಕಹಿ ನೆನಪುಗಳ ಪುಟ ಸೇರಿತು.

Advertisement

Udayavani is now on Telegram. Click here to join our channel and stay updated with the latest news.

Next