Advertisement

ಕೇಂದ್ರ ಯೋಜನೆಗಳ ಸದ್ಬಳಕೆ ಅಗತ್ಯ

12:31 PM May 05, 2018 | Team Udayavani |

ತಿ.ನರಸೀಪುರ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಕೇಂದ್ರ ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದು ಅಭ್ಯರ್ಥಿ ಎಸ್‌.ಶಂಕರ್‌ ಮನವಿ ಮಾಡಿದರು.

Advertisement

ತಾಲೂಕಿನ ಶಂಭುದೇವನಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ರೋಡ್‌ ಶೋ ನಡೆಸಿ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳನ್ನು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತರಲು ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ. ಹೈಮಾಂಡ್‌ ಕೂಡ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಣೆ ಮಾಡಿದ್ದು, ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕೆಂದರು.

ಸಚಿವ ಡಾ.ಹೆಚ್‌.ಸಿ.ಮಹದೇವಪ್ಪ ಅಧಿಕಾರ ಕೊಟ್ಟ ಜನರನ್ನು ಮರೆತು ಅಭಿವೃದ್ಧಿ ಕಡೆಗಣಿಸಿರುವುದರಿಂದ ಈಗಾಗಲೇ ಕ್ಷೇತ್ರದ ಜನರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೆಲ ದಿನಗಳ ಕಾಲ ಕಷ್ಟಪಟ್ಟು ದುಡಿದರೆ ಬಿಜೆಪಿಗೆ ಗೆಲುವು ಸುಲಭವಾಗಲಿದೆ. ಬಳಿಕ ಬಡವರ, ರೈತರ ಹಾಗೂ ಸಾಮಾನ್ಯ ಜನರಿಗೆ ಬಿಜೆಪಿ ಸರ್ಕಾರ ಅನುಕೂಲಕರ ಯೋಜನೆಗಳನ್ನು ರೂಪಿಸಲಿದೆ ಎಂದು ತಿಳಿಸಿದರು.

ಬಿಜೆಪಿ ಆರ್ಥಿಕ ಪ್ರಕೋಷ್ಠ ಜಿಲ್ಲಾ ಸಂಚಾಲಕ ಎಸ್‌.ಬಿ.ಸುರೇಶ್‌ ಮಾತನಾಡಿ, ಸಮಾಜ ಸೇವೆ ಮೂಲಕ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿರುವ ಶಂಕರ್‌ ಅವಕಾಶಗಳಿಂದ ವಂಚಿತರಾಗಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಿಂದಲೂ ಅನ್ಯಾಯವಾಗಿದೆ. ಆದ್ದರಿಂದ ಕ್ಷೇತ್ರದ ಜನರು ಈ ಬಾರಿಯಾದರೂ ಅವರಿಗೆ ರಾಜಕೀಯ ಅಧಿಕಾರ ನೀಡಬೇಕೆಂದು ತಿಳಿಸಿದರು.

ಮಾಜಿ ಶಾಸಕ ಕೆ.ಎಂ.ಚಿಕ್ಕಮಾದನಾಯಕ, ಜಿಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್‌, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಆಯುಕ್ತ ಹೆಳವರಹುಂಡಿ ಸಿದ್ಧಪ್ಪ, ವಕೀಲ ತೊಟ್ಟವಾಡಿ ಮಹದೇವಸ್ವಾಮಿ, ವಾಟಾಳು ಗ್ರಾಪಂ ಅಧ್ಯಕ್ಷ ಎಸ್‌.ಬಿ.ಮರಿನಂಜಪ್ಪ, ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಮೂಗೂರು ಸಿದ್ದರಾಜು, ಟೌನ್‌ ಅಧ್ಯಕ್ಷ ಬಿ.ವೀರಭದ್ರಪ್ಪ,

Advertisement

ಸೋಸಲೆ ಪಿಎಸಿಸಿಎಸ್‌ ಅಧ್ಯಕ್ಷ ಎಂ.ಶಿವಮೂರ್ತಿ, ವೀರಶೈವ ಮಹಾಸಭಾ ಯುವ ಘಟಕ ಅಧ್ಯಕ್ಷ ಆರ್‌.ಶಿವಕುಮಾರ್‌, ಎಪಿಎಂಸಿ ಸದಸ್ಯ ಸಾಲೂರುಸ್ವಾಮಿ, ಮುಖಂಡರಾದ ಮಣಿಕಂಠರಾಜ್‌ಗೌಡ, ಸಿದ್ದರಾಜು, ದಯಾನಂದ ಪಾಟೀಲ್‌ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next