Advertisement

ನೀರು ಪೂರೈಸುವ ಯೋಜನೆ 2 ವರ್ಷಗಳಲ್ಲಿ ಪೂರ್ಣ

12:33 PM Jun 29, 2019 | Team Udayavani |

ನಾಯಕನಹಟ್ಟಿ: ಮೊಳಕಾಲ್ಮೂರು ಕ್ಷೇತ್ರದ ಎಲ್ಲ ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಇನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

Advertisement

ಶುಕ್ರವಾರ ಪಟ್ಟಣದ ತೇರು ಬೀದಿಯಲ್ಲಿ ಪಿಡಬ್ಲ್ಯೂ ಡಿಯಿಂದ ಏರ್ಪಡಿಸಿದ್ದ 5 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ತುಂಗಭದ್ರಾ ಡ್ಯಾಂ ಹಿನ್ನೀರಿನಿಂದ ಮೀಸಲು ವಿಧಾನಸಭಾ ಕ್ಷೇತ್ರಗಳ ಜನರ ಕುಡಿಯುವ ನೀರಿನ ಪೂರೈಕೆ ಯೋಜನೆ ಅನುಮೋದನೆಯಾಗಿದೆ. ಹೀಗಾಗಿ ಮೊಳಕಾಲ್ಮೂರು ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.

ಹೊಸಪೇಟೆ ಸಮೀಪದ ತುಂಗಭದ್ರಾ ಹಿನ್ನೀರಿನಿಂದ ಪಾವಗಡ, ಕೂಡ್ಲಿಗೆ, ಚಳ್ಳಕೆರೆ, ಜಗಳೂರು, ಮೊಳಕಾಲ್ಮೂರು ತಾಲೂಕುಗಳಿಗೆ ಕುಡಿಯುವ ನೀರು ಪೂರೈಸಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದ ಜನರು ಫ್ಲೋರೈಡ್‌ನಿಂದ ಪರಿಹಾರ ಪಡೆಯಲಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ನೆರವೇರಲಿದೆ. ಈ ಯೋಜನೆಗೆ ಎಲ್ಲ ಸಹಕಾರ ದೊರೆತಿದೆ. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 800 ಕೋಟಿ ರೂಗಳನ್ನು ನೀಡಲಾಗಿದೆ. ಈ ಬೃಹತ್‌ ಕಾಮಗಾರಿ ನನ್ನ ಒಬ್ಬನ ಕಾರ್ಯವಲ್ಲ. ಇದಕ್ಕೆ ಹಲವಾರು ಜನಪ್ರತಿನಿಧಿಗಳ ಶ್ರಮವಿದೆ ಎಂದು ಹೇಳಿದರು.

ಕೇಂದ್ರ ಸರಕಾರದ ವತಿಯಿಂದ ಹಿರಿಯೂರು-ಬಳ್ಳಾರಿ ಚತುಷ್ಪಥ ರಸ್ತೆ ಈಗಾಗಲೇ ಆರಂಭಗೊಂಡಿದೆ. ಒಂದು ವರ್ಷದ ಅವಧಿಯಲ್ಲಿ ಇದು ಪೂರ್ಣಗೊಳ್ಳಲಿದೆ. ಈ ರಸ್ತೆಯು ಕರ್ನಾಟಕದ ಉತ್ತರ ಹಾಗೂ ದಕ್ಷಿಣಗಳನ್ನು ಜೋಡಿಸಲಿದೆ. ಬೀದರ್‌ನಿಂದ ಚಾಮರಾಜನಗರವನ್ನು ಸಂಪರ್ಕಿಸಲಿದೆ ಎಂದು ಹೇಳಿದರು.

Advertisement

ಇಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆಯ ಜತೆಗೆ ಕೃಷಿಗೆ ಅಗತ್ಯವಾದ ನೀರಿನ ಸಮಸ್ಯೆಯಿದೆ. ಕ್ಷೇತ್ರದ ಜನರಿಗೆ ಭದ್ರಾ ಮೇಲ್ದಂಡೆ ಯೋಜನೆಯ ಬಗ್ಗೆ ಕನಸನ್ನು ಹೊಂದಿದ್ದಾರೆ. ಇದಕ್ಕಾಗಿ ನಿರಂತರ ಹೋರಾಟ ಅಗತ್ಯ ಎಂದರು.

ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಮಾತನಾಡಿ, ಸಮ್ಮಿಶ್ರ ಸರಕಾರದ ವತಿಯಿಂದ ಹಲವಾರು ಕಾಮಗಾರಿಗಳನ್ನು ಆರಂಭಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಒಳಮಠದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್‌ ಶೌಚಾಲಯ ಸಂಕೀರ್ಣ ನಿರ್ಮಾಣಕ್ಕೆ ಸರಕಾರ ಒಪ್ಪಿಗೆ ನೀಡಿದೆ. ಪ್ರವಾಸಿ ಸ್ಥಳ ಹಾಗೂ ಧಾರ್ಮಿಕ ಸ್ಥಳವಾಗಿರುವುದರಿಂದ ಪಟ್ಟಣದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ತಿಪ್ಪೇರುದ್ರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್‌ ಮಾತನಾಡಿ, ಐದು ಕೋಟಿ ರೂಗಳನ್ನು ಬಿಡುಗಡೆಗೆ ಪಿಡಬ್ಲು ್ಯಡಿ ಇಲಾಖೆಯ ಕಾರ್ಯದರ್ಶಿಯಾಗಿರುವ ಕೃಷ್ಣಾ ರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ವಿಶೇಷ ಆಸಕ್ತಿಯ ಮೇರೆಗೆ ಇಲ್ಲಿನ ದೇವಾಲಯ ಹಾಗೂ ರಸ್ತೆ ಅಭಿವೃದ್ಧಿಗೆ ಐದು ಕೋಟಿ ರೂ. ಬಿಡುಗಡೆ ಮಾಡಿದ್ದಾರೆ ಎಂದರು.

ನಮ್ಮ ಜಿಲ್ಲೆಯ ಅಭಿಮಾನ ಹಾಗೂ ಇಲ್ಲಿನ ದೇವಾಲಯದ ಭಕ್ತರಾಗಿರುವುದರಿಂದ ಇಲ್ಲಿನ ಪ್ರಗತಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಪಟ್ಟಣದ ಅಭಿವೃದ್ಧಿ ಹಾಗೂ ದೇವಾಲಯದ ಮೂಲ ಸೌಕರ್ಯಕ್ಕೆ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಐದು ಕೋಟಿ ಅನುದಾನ ಒದಗಿಸುವ ಭರವಸೆಯನ್ನು ಅವರು ನೀಡಿದ್ದಾರೆ. ಇದರಿಂದ ಇಡೀ ಪಟ್ಟಣದ ಸ್ವರೂಪ ಬದಲಾಗಲಿದೆ. ಜತೆಗೆ ಭಕ್ತಾದಿಗಳಿಗೆ ಉತ್ತಮ ಸೌಕರ್ಯಗಳು ದೊರೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಿಡಬ್ಲ್ಯೂ ಡಿ ಇಇ ಸತೀಶ್‌ ಬಾಬು ಮಾತನಾಡಿ, ಐದು ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ತೇರು ಬೀದಿಯನ್ನು ಅಭಿವೃದ್ಧಿಪಡಿಸಲಾಗುವುದು. ತೇರು ಬೀದಿಯಲ್ಲಿ 13 ಮೀಟರ್‌ ಹಾಗೂ ಪಾದಗಟ್ಟೆ ರಸ್ತೆಯನ್ನು 14 ಮೀಟರ್‌ಗೆ ಅಗಲೀಕರಣಗೊಳಿಸಿ ಸುಸಜ್ಜಿತ ಚರಂಡಿ ಹಾಗೂ ಫುಟ್ಪಾತ್‌ ನಿರ್ಮಿಸಲಾಗುವುದು. ಪಟ್ಟಣದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 45 ನ್ನು ಅಭಿವೃದ್ಧಿಪಡಿಸಲಾಗುವುದು. ಪಟ್ಟನದಲ್ಲಿನ ಎರಡು ಕಿ.ಮೀ ರಸ್ತೆಯನ್ನು 14 ಮೀಟರ್‌ಗೆ ಅಗಲೀಕರಣಗೊಳಿಸಿ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದರು.

ಜೆಡಿಎಸ್‌ ಮುಖಂಡ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, ಇಲ್ಲಿನ ರಸ್ತೆಗಳು ಕಿರಿದಾಗಿದ್ದು, ಜಾತ್ರೆಯ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ಒತ್ತುವರಿ ತೆರವುಗೊಳಿಸಿ ಉತ್ತಮ ರಸ್ತೆ ನಿರ್ಮಿಸಬೇಕು. ಇದಕ್ಕಾಗಿ ಪಕ್ಷದ ಮುಖಂಡರಾದ ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣನವರನ್ನು ಭೇಟಿ ಮಾಡಿ ಹೆಚ್ಚಿನ ಅನುದಾನಕ್ಕೆ ಒತ್ತಾಯಿಸಲಾಗಿದೆ. ಇದಕ್ಕೆ ಶಾಸಕ ಬಿ. ಶ್ರೀರಾಮುಲು ಅವರು ಸಹಕಾರ ನೀಡಬೇಕು ಎಂದರು.

ಜಿಪಂ ಸದಸ್ಯರಾದ ಓ. ಮಂಜುನಾಥ್‌, ಓಬಳೇಶ್‌, ಬಿಜೆಪಿ ಮಂಡಲ್ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ, ಪಿ. ಶಿವಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ, ಪಿಡಬ್ಲು ್ಯಡಿ ಎಇಇ ಸತ್ಯಪ್ಪ, ಸೆಕ್ಷನ್‌ ಇಂಜಿನಿಯರ್‌ ಹಕೀಂ. ಕೌನ್ಸೆಲರ್‌ಗಳಾದ ಮಹಾಂತೇಶ್‌, ವೈ. ಗಿರಿಜಮ್ಮ, ಮನ್ಸೂರ್‌, ಬಸಣ್ಣ, ನಾಗರಾಜ್‌, ಬೋರಮ್ಮ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next